Site icon Vistara News

Ranji Trophy: ಫಿಟ್ ಆ್ಯಂಡ್ ಫೈನ್ ಆಗಿ ತಂಡಕ್ಕೆ ಮರಳಿದ ಅಗರ್ವಾಲ್; ಚೆನ್ನೈ ವಿರುದ್ಧ ಕಣಕ್ಕೆ

Mayank Agarwal

ಬೆಂಗಳೂರು: ಅಗರ್ತಲಾದಿಂದ ಸೂರತ್‌ಗೆ ತೆರಳುವ ವಿಮಾನದಲ್ಲಿ ನೀರು ಎಂದು ಭಾವಿಸಿ ರಾಸಾಯನಿಕ ದ್ರಾವಣವೊಂದನ್ನು ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕ್ರಿಕೆಟಿಗ​ ಮಯಾಂಕ್​ ಅಗರ್ವಾಲ್(Mayank Agarwal)​ ಸಂಪೂರ್ಣ ಚೇತರಿಕೆ(mayank agarwal health update) ಕಂಡಿದ್ದು ತಂಡಕ್ಕೆ ವಾಪಸಾಗಿದ್ದಾರೆ. ಚೆನ್ನೈನಲ್ಲಿ ಇದೇ 9ರಿಂದ ತಮಿಳುನಾಡು ವಿರುದ್ಧ ನಡೆಯಲಿರುವ ರಣಜಿ ಕ್ರಿಕೆಟ್(Ranji Trophy) ಪಂದ್ಯದಲ್ಲಿ ಅವರು ಕಣಕ್ಕಿಳಿಯಲಿದ್ದಾರೆ.

ತಮಿಳುನಾಡು ವಿರುದ್ಧದ ಪಂದ್ಯಕ್ಕಾಗಿ ಪ್ರಕಟಿಸಿದ 16 ಮಂದಿ ಆಟಗಾರರ ಕರ್ನಾಟಕ(Karnataka vs Tamil Nadu) ತಂಡದಲ್ಲಿ ಮಯಾಂಕ್ ಅಗರ್ವಾಲ್ ಕೂಡ ಕಾಣಿಸಿಕೊಂಡಿದ್ದು ನಾಯಕತ್ವ ಕೂಡ ವಹಿಸಿದ್ದಾರೆ. “ನಾನು ಫಿಟ್ ಮತ್ತು ಫೈನ್ ಆಗಿದ್ದೇನೆ. ಈಗ ಯಾವುದೇ ಪ್ರಮುಖ ಸಮಸ್ಯೆಗಳಿಲ್ಲ” ಎಂದು ಮಾಯಾಂಕ್​ ಅಗರ್ವಾಲ್​ ಕ್ರಿಕ್​ಇನ್ಫೊಗೆ ತಿಳಿಸಿದ್ದಾರೆ. ಭಾರತ ‘ಎ’ ತಂಡದಲ್ಲಿದ್ದ ಎಡಗೈ ಆಟಗಾರ ದೇವದತ್ತ ಪಡಿಕ್ಕಲ್ ಹಾಗೂ ವೇಗಿ ವಿಧ್ವತ್ ಕಾವೇರಪ್ಪ ಕೂಡ ಕರ್ನಾಟಕ ತಂಡವನ್ನು ಕೂಡಿಕೊಂಡಿದ್ದಾರೆ. ಈ ಮೂವರು ಆಟಗಾರರ ಆಗಮನದಿಂದ ಕರ್ನಾಟಕ ತಂಡ ಬಲಿಷ್ಠವಾಗಿ ಗೋಚರಿಸಿದೆ.

ಕಳೆದ ಮಂಗಳವಾರ(ಜನವರಿ 29) ಅಗರ್ತಲಾದಿಂದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಯಾಂಕ್‌ ಅಗರ್ವಾಲ್‌ ದಿಢೀರ್‌ ಅಸ್ವಸ್ಥರಾಗಿದ್ದರು. ತಮ್ಮ ಸೀಟಿನ ಮುಂಭಾಗದಲ್ಲಿದ್ದ ಬಾಟಲಿಯೊಂದನ್ನು ತೆಗೆದು, ಅದರಲ್ಲಿದ್ದ ಪಾನೀಯವನ್ನು ನೀರು ಎಂದು ಭಾವಿಸಿ ಕುಡಿದಿದ್ದರು. ಅದು ಶೌಚಾಲಯವನ್ನು ಸ್ವತ್ಛಗೊಳಿಸುವ ದ್ರಾವಣವಾಗಿತ್ತು. ವಿಮಾನ ಟೇಕ್‌ ಆಫ್ ಆಗದ ಕಾರಣ ಅಗರ್ವಾಲ್‌ ಅವರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗಿತ್ತು. ಆರಂಭದಲ್ಲಿ ಅಗರ್ವಾಲ್​ಗೆ ವಿಶಪ್ರಾಶನ ಮಾಡಲಾಗಿದೆ ಎಂದು ವರದಿಯಾಗಿತ್ತು. ಬಳಿಕ ಸತ್ಯಾಂಶ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ Ranji Trophy : ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವ ದಾಖಲೆ ಬರೆದ ಹೈದರಾಬಾದ್​ ಆಟಗಾರ

ಘಟನೆಗೆ ಸಂಬಂಧಿಸಿದಂತೆ ಅಗರ್ವಾಲ್‌ ತಮ್ಮ ಮ್ಯಾನೇ ಜರ್‌ ಮೂಲಕ ಎನ್‌ಸಿಸಿಪಿಎಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ನಾವು ತನಿಖೆ ಕೈಗೆತ್ತಿ ಕೊಳ್ಳ ಲಿದ್ದೇವೆ ಎಂದು ಪಶ್ಚಿಮ ತ್ರಿಪುರ ಎಸ್‌ಪಿ ಕಿರಣ್‌ ಕುಮಾರ್‌ ತಿಳಿಸಿದ್ದಾರೆ. ಅಗರ್ವಾಲ್​ ಅನುಪಸ್ಥಿತಿಯಲ್ಲಿ ರೈಲ್ವೇಸ್‌ ವಿರುದ್ಧದ ಪಂದ್ಯದಲ್ಲಿ ಉಪನಾಯಕ ನಿಕಿನ್‌ ಜೋಸ್‌ ತಂಡವನ್ನು ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ಕರ್ನಾಟಕ ಒಂದು ವಿಕೆಟ್‌ ಅಂತರದ ರೋಚಕ ಗೆಲುವು ದಾಖಲಿಸಿತ್ತು. ಗೆಲ್ಲಲು 226 ರನ್‌ ತೆಗೆಯುವ ಸವಾಲು ಪಡೆದ ಕರ್ನಾಟಕ ತಂಡವು ಮೂರನೇ ದಿನ ಪಾಂಡೆ ಅವರ ತಾಳ್ಮೆಯ ಆಟದಿಂದಾಗಿ 9 ವಿಕೆಟಿಗೆ 229 ರನ್‌ ಪೇರಿಸಿ ಜಯಭೇರಿ ಬಾರಿಸಿತ್ತು. 121 ಎಸೆತ ಎದುರಿಸಿದ ಪಾಂಡೆ ಆರು ಬೌಂಡರಿ ಮತ್ತು ಒಂದು ಸಿಕ್ಸರ್‌ ನೆರವಿನಿಂದ 67 ರನ್‌ ಗಳಿಸಿ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಉಭಯ ತಂಡಗಳು


ಕರ್ನಾಟಕ: ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ತ ಪಡಿಕ್ಕಲ್, ರವಿಕುಮಾರ್ ಸಮರ್ಥ್, ನಿಕಿನ್ ಜೋಸ್, ಮನೀಶ್ ಪಾಂಡೆ, ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ಅನೀಶ್ ಕೆವಿ, ವೈಶಾಕ್ ವಿಜಯಕುಮಾರ್, ವಾಸುಕಿ ಕೌಶಿಕ್, ಕೆ ಶಶಿಕುಮಾರ್, ಸುಜಯ್ ಸಾತೇರಿ (ವಿಕೆಟ್ ಕೀಪರ್), ಎಂ ವೆಂಕಟೇಶ್, ವಿಧ್ವತ್ ಕಾವೇರಪ್ಪ , ಕಿಶನ್ ಬೇಡರೆ, ರೋಹಿತ್ ಕುಮಾರ್, ಹಾರ್ದಿಕ್ ರಾಜ್.

ತಮಿಳುನಾಡು: ಸಾಯಿ ಕಿಶೋರ್ (ನಾಯಕ), ಪ್ರದೋಶ್ ರಂಜನ್ ಪೌಲ್ (ಉಪನಾಯಕ), ಸಾಯಿ ಸುದರ್ಶನ್, ಎನ್. ಜಗದೀಸನ್, ಬಾಬಾ ಇಂದ್ರಜಿತ್, ವಿಜಯ್ ಶಂಕರ್, ಎಸ್. ಲೋಕೇಶ್ವರ್, ಎಸ್. ಅಜಿತ್ ರಾಮ್, ಬಿ. ಸಚಿನ್, ಎಂ. ಮುಹಮ್ಮದ್, ಸಂದೀಪ್ ವಾರಿಯರ್ , ಟಿ. ನಟರಾಜನ್, ವಿಮಲ್ ಖುಮಾರ್, ತ್ರಿಲೋಕ್ ನಾಗ್.

Exit mobile version