Site icon Vistara News

IPL 2023 : ವೈಯಕ್ತಿಕ ದಾಳಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಮೊಹಮ್ಮದ್ ಸಿರಾಜ್

#image_title

ಬೆಂಗಳೂರು: ಒಂದು ಅತ್ಯುತ್ತಮ ಪ್ರದರ್ಶನದ ಮೂಲಕ ಸ್ಟಾರ್ ಎನಿಸಿಕೊಂಡ ಕ್ರಿಕೆಟಿಗ ಇನ್ನೊಂದೆರಡು ದಿನಗಳಲ್ಲಿ ಖಳನಾಯಕನಾಗಬಲ್ಲ. ಮುಂದಿನ ಪಂದ್ಯದಲ್ಲಿ ಅದೇ ಮಾದರಿಯ ಪ್ರದರ್ಶನ ನೀಡದಿದ್ದರೆ ಅಥವಾ ತಂಡ ಸೋತರೆ ಅವರ ವಿರುದ್ಧ ದಾಳಿ ನಿರಂತರ. ಅದರಲ್ಲೂ ಈಗಿನ ಸೋಶಿಯಲ್​ ಮೀಡಿಯಾ ಜಮಾನದಲ್ಲಿ ಕ್ರಿಕೆಟಿಗರು ಜನಪ್ರಿಯತೆ ಪಡೆದುಕೊಂಡಷ್ಟೇ ವೇಗದಲ್ಲಿ ಅಪಖ್ಯಾತಿಗೂ ಒಳಗಾಗುತ್ತಾರೆ. ಹೀಗಾಗಿ ಭಾರತ ತಂಡದ ಅಥವಾ ಐಪಿಎಲ್​ನಲ್ಲಿ ಆಡುವ ಆಟಗಾರರು ಮಾನಸಿಕ ಸ್ಥಿತಿಯನ್ನು ಗಟ್ಟಿಯಾಗಿಟ್ಟುಕೊಳ್ಳಬೇಕಾಗಿದೆ. ಭಾರತ ತಂಡದಲ್ಲಿ ಇಂಥ ಪರಿಸ್ಥಿತಿಯನ್ನು ಅತಿ ಹೆಚ್ಚು ಎದುರಿಸುವುದು ವೇಗದ ಬೌಲರ್​ ಮೊಹಮ್ಮದ್ ಸಿರಾಜ್. ಆರ್​ಸಿಬಿಯ ಪಾಡ್​ಕಾಸ್ಟ್​​ನಲ್ಲಿ ಅವರು ತಾವೆದುರಿಸಿದ ನಿಂದನೆಗಳ ಕುರಿತು ಮಾಹಿತಿ ನೀಡಿದ್ದಾರೆ.

2022ರ ಆವೃತ್ತಿಯಲ್ಲಿ ಆರ್​ಸಿಬಿ ತಂಡ ಪ್ಲೇಆಫ್​ ಹಂತದಲ್ಲಿ ನಿರ್ಗಮಿಸಿತ್ತು. ರಾಜಸ್ಥಾನ್​ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಎಂಟು ವಿಕೆಟ್​ಗಳ ಹೀನಾಯ ಸೋಲಿಗೆ ಒಳಗಾಗಿತ್ತು. ಆದರೆ, ಪಂದ್ಯದ ಸೋಲಿಗೆ ಹೆಚ್ಚು ಹೊಣೆ ಮಾಡಿದ್ದು ಮೊಹಮ್ಮದ್​ ಸಿರಾಜ್​. ಈ ಕುರಿತು ಪಾಡ್​ಕಾಸ್ಟ್​ನಲ್ಲಿ ಮಾತನಾಡಿದ ಮೊಹಮ್ಮದ್ ಸಿರಾಜ್​, ಯಾವುದೇ ವ್ಯಕ್ತಿಯನ್ನು ಟೀಕೆ ಮಾಡುವುದು ಸುಲಭ. ಆದರೆ, ಆಟಗಾರನೊಬ್ಬನ ಹೋರಾಟ ಯಾರಿಗೂ ಗೊತ್ತಾಗುವುದಿಲ್ಲ| ಕೆಲವೊಂದು ಟೀಕೆಗಳನ್ನು ಸಹಿಸಲು ಕೂಡ ಸಾಧ್ಯವಿಲ್ಲ. ಆಟಗಾರನ ಉತ್ಸಾಹವೇ ಬತ್ತಿ ಹೋಗುವಂತಿರುತ್ತದೆ. ಯಾವುದೇ ಕಾರಣವಿಲ್ಲದ ಆಟಗಾರನೊಬ್ಬ ಟೀಕೆಗೆ ಒಳಗಾಗುವುದಕ್ಕೆ ಅರ್ಥವೇ ಇರುವುದಿಲ್ಲ. ಮುಂದೆ ಏನೆಂಬುದೇ ಗೊತ್ತಿರುವುದಿಲ್ಲ ಎಂದು ಅವರು ಸಿರಾಜ್​ ಹೇಳಿಕೊಂಡಿದ್ದಾರೆ.

ಆಟೋ ಓಡಿಸು ಎಂದಿದ್ದರು

ಮೊಹಮ್ಮದ್​ ಸಿರಾಜ್ ಅವರ ತಂದೆ ಆಟೋ ಚಾಲಕರಾಗಿದ್ದರು. ಪುತ್ರನಿಗಾಗಿ ಅವರಿಗೆ ಸಾಕಷ್ಟು ತ್ಯಾಗ ಮಾಡಿದ್ದರು. ಪ್ರತಿ ಪಂದ್ಯದಲ್ಲಿ ಆರ್​ಸಿಬಿ ಅಥವಾ ಭಾರತ ತಂಡ ಸೋಲು ಕಂಡಾಗ ಸಿರಾಜ್​ ವಿರುದ್ಧ ಈ ವಿಷಯವನ್ನೇ ಹಿಡಿದುಕೊಂಡು ಟೀಕೆ ಮಾಡುತ್ತಿದ್ದರು. ಕ್ರಿಕೆಟ್​ ಬಿಟ್ಟು ಆಟೋ ಓಡಿಸು ಎಂದು ಬರೆಯುತ್ತಾರೆ.

ಒಂದು ದಿನ ನೀವು ಭಾರತ ತಂಡದ ಭವಿಷ್ಯದ ಆಟಗಾರ ಎಂದು ಹೊಗಳುತ್ತಾರೆ. ಮರು ದಿನವೇ ಆಟೋ ಓಡಿಸು ಎಂದು ತೆಗಳುತ್ತಾರೆ ಎಂಬುದಾಗಿ ಸಿರಾಜ್​ ನೋವು ತೋಡಿಕೊಂಡಿದ್ದಾರೆ.

ಇದೇ ವೇಳೆ ಸಿರಾಜ್​ ತಮಗೆ ಬೆಂಬಲ ಕೊಟ್ಟ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ನಿಮ್ಮ ಬೆಂಬಲಕ್ಕೆ ನಾನು ಋಣಿ. ಪ್ರತಿಯೊಂದು ಕ್ಷೇತ್ರದಲ್ಲೂ ಸೋಲು, ಗೆಲುವು ಎಂಬುದು ಇರುತ್ತದೆ. ಆದರೆ, ಸೋತವನ ಮೇಲೆ ಕಲ್ಲು ಎಸೆಯಬಾರದು ಎಂದು ಅವರು ಮನವಿ ಮಾಡಿದ್ದಾರೆ.

Exit mobile version