Site icon Vistara News

Rinku Singh : ರಿಂಕು ಬೆಸ್ಟ್​ ಫಿನಿಶರ್​​ ಆಗುವುದಕ್ಕೆ ಮಾಜಿ ಫಿನಿಶರ್​ ಕಾರಣವಂತೆ

Rinku SIngh

ಬೆಂಗಳೂರು: ಭಾರತ ಕ್ರಿಕೆಟ್​ ತಂಡ ಡೆತ್​ ಓವರ್​ಗಳಲ್ಲಿ ಅಬ್ಬರಿಸುವ ಹೊಸ ಸ್ಟಾರ್​ ಒಬ್ಬರನ್ನು ಕಂಡುಕೊಂಡಿದೆ. ಅವರೇ ರಿಂಕು ಸಿಂಗ್ (Rinku Singh). ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ 20 ಪಂದ್ಯದಲ್ಲಿ ರಿಂಕು ಸಿಂಗ್ ಕೊನೇ ಹಂತದಲ್ಲಿ ಸಿಡಿದಿದ್ದ ಕಾರಣ ಭಾರತ ತಂಡ ಜಯ ಸಾಧಿಸಿತು. ಅವರು ಕೊನೇ ಎಸೆತದಲ್ಲಿ ಒಂದು ರನ್ ಬೇಕಾಗಿದ್ದ ಹೊರತಾಗಿಯೂ ಸಿಕ್ಸರ್ ಎತ್ತುವ ಮೂಲಕ ಗೆಲುವು ಸಾಧಿಸಲು ನೆರವಾಗಿದ್ದರು. ಪಂದ್ಯದ ಬಳಿಕ ಬಿಸಿಸಿಐ ಅಪ್ಲೋಡ್ ಮಾಡಿದ ವೀಡಿಯೊದಲ್ಲಿ ಮಾತನಾಡಿದ ರಿಂಕು, ಅವರು ಉತ್ತಮ ಫಿನಿಶರ್ ಎನಿಸಿಕೊಳ್ಳುವುದಕ್ಕೆ ಮಾಜಿ ಫಿನಿಶರ್​ ಮಹೇಂದ್ರ ಸಿಂಗ್ ಧೋನಿಯೇ ಕಾರಣ ಎಂದು ಹೇಳಿದ್ದಾರೆ.

“ನಾನು ಬ್ಯಾಟಿಂಗ್ ಮಾಡಲು ಹೋದಾಗ ಉತ್ತಮ ಪರಿಸ್ಥಿತಿಯಾಗಿತ್ತು. ನಾನು ಶಾಂತವಾಗಿದ್ದೆ ಮತ್ತು ಈ ರೀತಿಯ ಸಂದರ್ಭಗಳಲ್ಲಿ ನಾನು ಏನು ಮಾಡುತ್ತಿದ್ದೆನೋ ಅದನ್ನು ಪುನರಾವರ್ತಿಸಲು ಪ್ರಯತ್ನಿಸುತ್ತಿದ್ದೆ. ಶಾಂತವಾಗಿರಲು ಯಾವುದೇ ನಿರ್ದಿಷ್ಟ ಕಾರಣವಿಲ್ಲ. ಆದಾಗ್ಯೂ, ನಾನು ಮಹಿ ಭಾಯ್ (ಎಂಎಸ್ ಧೋನಿ) ಅವರೊಂದಿಗೆ ಹಲವಾರು ಬಾರಿ ಮಾತನಾಡಿದ್ದೇನೆ. ಡೆತ್ ಓವರ್​ಗಳಲ್ಲಿ ಸಾಧ್ಯವಾದಷ್ಟು ನೇರವಾಗಿ ಹೊಡೆಯಲು ಪ್ರಯತ್ನಿಸುವಂತೆ ಅವರು ನನಗೆ ಹೇಳಿದ್ದರು”ಎಂದು ರಿಂಕು ಸಿಂಗ್ ಹೇಳಿಕೊಂಡಿದ್ದಾರೆ.

ನೋ ಬಾಲ್ ಬಗ್ಗೆ ಅರ್ಶ್​​ದೀಪ್​ ಹೇಳಿದ್ದರು: ರಿಂಕು

ಅಂತಿಮ ಎಸೆತದಲ್ಲಿ ಭಾರತಕ್ಕೆ 1 ರನ್ ಅಗತ್ಯವಿದ್ದಾಗ, ರಿಂಕು ನೇರ ಸಿಕ್ಸರ್ ಬಾರಿಸಿ ಆತಿಥೇಯರನ್ನು ಗೆಲುವಿನತ್ತ ಮುನ್ನಡೆಸಿದ್ದರು. ಆದಾಗ್ಯೂ, ಸೀನ್ ಅಬಾಟ್ ನೋ-ಬಾಲ್ ಎಸೆದಿದ್ದರಿಂದ ಮತ್ತು ಅಗತ್ಯವಾದ ರನ್ ಅನ್ನು ಅದರಿಂದಲೇ ಸಾಧಿಸಿದ್ದರಿಂದ ಸಿಕ್ಸರ್​​ ರನ್ ಗಳನ್ನು ಪರಿಗಣಿಸಲಾಗಲಿಲ್ಲ.

‘ಅದು ನೋ-ಬಾಲ್ ಎಂದು ನನಗೆ ತಿಳಿದಿರಲಿಲ್ಲ. ನಾನು ಡ್ರೆಸ್ಸಿಂಗ್ ರೂಮ್​​ಗೆ ಹಿಂತಿರುಗಿದಾಗ ಅದು ನೊ ಬಾಲ್​ ಎಂದು ಅರ್ಷ್ದೀಪ್ ಸಿಂಗ್ ನನಗೆ ಹೇಳಿದರು. ಆದಾಗ್ಯೂ, ನಾವು ಗೆದ್ದಿರುವ ಕಾರಣ ರನ್​ ನನಗೆ ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬುದು ಮುಖ್ಯವಲ್ಲ” ಎಂದು ರಿಂಕು ಸಿಂಗ್ ಹೇಳಿಕೊಂಡಿದ್ದಾರೆ.

ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿದೆ. ನವೆಂಬರ್ 26 ರಂದು ಗ್ರೀನ್​ಫೀಲ್ಡ್​​ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಟಿ 20 ಪಂದ್ಯಕ್ಕಾಗಿ ಉಭಯ ತಂಡಗಳು ಈಗ ತಿರುವನಂತಪುರಂಗೆ ಪ್ರಯಾಣಿಸಲಿವೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಪಂದ್ಯದಲ್ಲಿ ರಿಂಕು ಸಿಂಗ್ ಬ್ಯಾಟಿಂಗ್ನಲ್ಲಿ ಉತ್ತಮ ಫಾರ್ಮ್ ಮುಂದುವರಿಸಲು ಎದುರು ನೋಡುತ್ತಿದ್ದಾರೆ.

ಭಾರತ ತಂಡ ಗೆದ್ದದ್ದು ರಿಂಕು ಬಾರಿಸಿದ ಸಿಕ್ಸರ್​ನಿಂದಲ್ಲ; ಮತ್ತೆ ಹೇಗೆ?

ಗುರುವಾರ ರಾತ್ರಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ ಕೊನೆಯ ಎಸೆತದಲ್ಲಿ ರನ್​ಗಳಿಸಿ ಗೆಲುವು ಸಾಧಿಸಿತ್ತು. ಒಂದು ಎಸೆತದಲ್ಲಿ ಒಂದು ರನ್​ ಬೇಕಿದ್ದಾಗ ರಿಂಕು ಸಿಂಗ್​ ಸಿಕ್ಸರ್​ ಬಾರಿಸಿದರು. ಎಲ್ಲರು ಭಾರತ ರಿಂಕು ಬಾರಿಸಿದ ಸಿಕ್ಸರ್​ನಿಂದ ಗೆಲುವು ಸಾಧಿಸಿತ್ತು ಎಂದುಕೊಂಡರು. ಆದರೆ, ಭಾರತ ಗೆಲುವು ಕಂಡಿದ್ದು ಈ ಸಿಕ್ಸರ್​ನಿಂದಲ್ಲ.

ಇದನ್ನೂ ಓದಿ : ಐತಿಹಾಸಿಕ ಕ್ರಿಕೆಟ್​​ ಸ್ಟೇಡಿಯಮ್​ ನೆಲಸಮ ಮಾಡಲಿದೆ ಆಸ್ಟ್ರೇಲಿಯಾ

ಹೌದು, ಭಾರತ ತಂಡದ ಗೆಲುವಿಗೆ ಅಂತಿಮ ಓವರ್​ನ 6 ಎಸೆತದಲ್ಲಿ 7 ರನ್​ ಅಗತ್ಯವಿತ್ತು. ಸೀನ್​ ಅಬೋಟ್​ ಎಸೆತ ಓ ಓವರ್​ನ ಮೊದಲ ಎಸೆತವನ್ನು ರಿಂಕು ಬೌಂಡರಿ ಬಾರಿಸಿದರು. ಮುಂದಿನ ಎಸೆತದಲ್ಲಿ ಒಂದು ರನ್​ ತೆಗೆದರು. ಉಳಿದ 4 ಎಸೆತದಲ್ಲಿ 2 ರನ್​ ಬೇಕಿದ್ದಾಗ ಅಕ್ಷರ್​ ಪಟೇಲ್​ ಔಟ್​ ಆದರು. ಬಳಿಕ ಬಂದ ರವಿ ಬಿಷ್ಣೋಯ್​ ಕೂಡ ರನೌಟ್​ ಆದರು. ಕೊನೆಎಗೆ 2 ಎಸೆತದಲ್ಲಿ 2 ರನ್​ ಬೇಕಿದ್ದಾಗ ಅರ್ಶದೀಪ್​ ಸಿಂಗ್​ ಒಂದು ರನ್​ ತೆಗೆದು ಮತ್ತೊಂದು ರನ್​ಗಾಗಿ ಓಡುವಾಗ ಅವರು ಕೂಡ ರನೌಟ್​ ಆದರು. ಕೊನೆಗೆ ಒಂದು ಎಸೆತದಲ್ಲಿ ಒಂದು ರನ್​ ತೆಗೆಯುವ ಸವಾಲು ಎದುರಾಯಿತು. ಈ ವೇಳೆ ರಿಂಕು ಚೆಂಡನ್ನು ಸಿಕ್ಸರ್​ಗೆ ಬಡಿದಟ್ಟಿದರು. ಭಾರತ ಗೆಲುವು ಸಾಧಿಸಿತು.

ವಾಸ್ತವವಾಗಿ ಭಾರತ ಗೆಲುವು ಸಾಧಿಸಿದ್ದು ರಿಂಕು ಬಾರಿಸಿದ ಸಿಕ್ಸರ್​ನಿಂದಲ್ಲ. ಬದಲಾಗಿ ನೋಬಾಲ್​ನಿಂದ. ಅಬೋಟ್​ ಅವರ ಅಂತಿಮ ಎಸೆತ ನೋಬಾಲ್​ ಆಗಿತ್ತು. ಹೀಗಾಗಿ ರಿಂಕು ಬಾರಿಸಿದ ಸಿಕ್ಸರನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಒಂದೊಮ್ಮೆ ಈ ಸಿಕ್ಸರ್​ ಪರಿಗಣನೆಗೆ ತೆಗೆದುಕೊಳ್ಳುತ್ತಿದ್ದರೆ ಭಾರತದ ಮೊತ್ತ 214 ರನ್​ ಆಗಿರುತ್ತಿತ್ತು. ನೋಬಾಲ್​ ರನ್​ ಗಣನೆಗೆ ತೆಗೆದುಕೊಂಡ ಕಾರಣ ಒಂದು ರನ್ ಮಾತ್ರ ನೀಡಿ 209 ರನ್​ ಗಳಿಸಿತು. ಅಲ್ಲದೆ ರಿಂಕು ಅವರಿಗೂ ಈ ಸಿಕ್ಸರ್​ನ ರನ್​ ಸಿಗಲಿಲ್ಲ.

Exit mobile version