Site icon Vistara News

WPL 2023 : ಸೇಡು ತೀರಿಸಿಕೊಂಡ ಡೆಲ್ಲಿ ಪಡೆ, ಮುಂಬಯಿ ವಿರುದ್ಧ 9 ವಿಕೆಟ್​ ಸುಲಭ ಜಯ

Mumbai Indians win over Delhi Capitles

#image_title

ಮುಂಬಯಿ: ಸಂಘಟಿತ ಬೌಲಿಂಗ್ ಹಾಗ ಅಬ್ಬರದ ಬ್ಯಾಟಿಂಗ್​ ನೆರವಿನಿಂದ ಮಿಂಚಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಡಬ್ಲ್ಯುಪಿಎಲ್​ನ (WPL 2023) 18ನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ 9 ವಿಕೆಟ್​ ಸುಲಭ ವಿಜಯ ದಾಖಲಿಸಿತು. ಈ ಮೂಲಕ ಲೀಗ್​ ಹಂತದ ಈ ಹಿಂದಿನ ಪಂದ್ಯದ ಸೋಲಿಗೆ ತಿರುಗೇಟು ಕೊಟ್ಟಿತು. ಈ ಪಂದ್ಯದ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್​ ಬಳಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಎರಡೂ ತಂಡಗಳಿಗೆ ತಲಾ ಒಂದು ಪಂದ್ಯ ಬಾಕಿ ಇವೆ. ಅದರಲ್ಲೂ ಜಯಿಸುವ ಮೂಲಕ ಅಗ್ರ ಸ್ಥಾನ ಕಾಪಾಡಿಕೊಂಡು ನೇರವಾಗಿ ಫೈನಲ್​ಗೇರುವುದು ಇತ್ತಂಡಗಳ ನಾಯಕಿಯರ ಉದ್ದೇಶ.

ಇಲ್ಲಿನ ಡಿವೈ ಪಾಟೀಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಸೋಮವಾರ ನಡೆದ ಡಬಲ್​ ಹೆಡರ್​ನ ಎರಡನೇ ಪಂದ್ಯದಲ್ಲಿ ಟಾಸ್​ ಗೆದ್ದ ಡೆಲ್ಲಿ ತಂಡದ ನಾಯಕಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಮುಂಬಯಿ ಇಂಡಿಯನ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 109 ರನ್​ ಪೇರಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 9 ಓವರ್​ಗಳಲ್ಲಿ ಒಂದು ವಿಕೆಟ್​ ನಷ್ಟ ಮಾಡಿಕೊಂಡು 110 ರನ್​ ಬಾರಿಸಿ ವಿಜಯೋತ್ಸವ ಆಚರಿಸಿತು.

ಡೆಲ್ಲಿ ಬ್ಯಾಟಿಂಗ್ ಅಬ್ಬರದ ವಿಡಿಯೊ ಇಲ್ಲಿದೆ

ಮುಂಬಯಿ ನೀಡಿದ್ದ ಸವಾಲಿಗೆ ಕ್ಯಾರೆ ಎನ್ನದ ಡೆಲ್ಲಿ ತಂಡ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಆರಂಭಿಕ ಬ್ಯಾಟರ್​ ಶಫಾಲಿ ವರ್ಮಾ 15 ಎಸೆಗಳಲ್ಲಿ 33 ರನ್​ ಬಾರಿಸಿದರೆ ನಾಯಕಿ ಮೆಗ್​ ಲ್ಯಾನಿಂಗ್​ 4 ಫೋಲ್​ ಹಾಗೂ 1 ಸಿಕ್ಸರ್​ ಮೂಲಕ 32 ರನ್​ ಗಳಿಸಿದರು. ಅಲೀಸ್​ ಕಾಪ್ಸಿ 5 ಸಿಕ್ಸರ್ ಹಾಗೂ 1 ಫೋರ್ ನೆರವಿನಿಂದ 17 ಎಸೆತಗಳಲ್ಲಿ 38 ರನ್​ ಬಾರಿಸಿದರು. ಈ ಮೂವರ ಅಬ್ಬರದ ಬ್ಯಾಟಿಂಗ್​ನಿಂದಾಗಿ ಕೇವಲ 54 ಎಸೆತಗಳಲ್ಲಿ ಡೆಲ್ಲಿ ತಂಡ ಗುರಿ ಮುಟ್ಟಿತು.

ಮುಂಬಯಿ ಬ್ಯಾಟಿಂಗ್​ ವೈಫಲ್ಯ

ಅದಕ್ಕಿಂತ ಮೊದಲು ಬ್ಯಾಟ್​ ಮಾಡಿದ ಮುಂಬಯಿ ತಂಡ ಸಂಪೂರ್ಣ ವೈಫಲ್ಯ ಎದುರಿಸಿತು. 10 ರನ್​ಗಳಾಗುವಷ್ಟರಲ್ಲಿ ಮೂರು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಡೆಲ್ಲಿ ತಂಡದ ಮಾರಕ ಬೌಲಿಂಗ್​ ಹಾಗೂ ಉತ್ತಮ ಕ್ಷೇತ್ರ ರಕ್ಷಣೆ ಮುಂದೆ ಮುಂಬಯಿ ಬ್ಯಾಟರ್​ಗಳು ಮಂಕಾದರು. ಹರ್ಮನ್​ಪ್ರೀತ್​ಕೌರ್​ (23), ಪೂಜಾ ವಸ್ತಕಾರ್​ (26), ಇಸ್ಸಿ ವಾಂಗ್​ (23), ಅಮನ್​ಜೋತ್​ ಕೌರ್​ (19) ಅಲ್ಪ, ಸ್ವಲ್ಪ ಹೋರಾಟ ಸಂಘಟಿಸಿದರೂ ಡೆಲ್ಲಿ ತಂಡಕ್ಕೆ ದೊಡ್ಡ ಮೊತ್ತದ ಸವಾಲೊಡ್ಡಲು ಸಾಧ್ಯವಾಗಲಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ವಿಭಾಗದಲ್ಲಿ ಮರಿಜನ್​ ಕಪ್​, ಶಿಖಾ ಪಾಂಡೆ, ಜೆಸ್​ ಜೊನಾಸೆನ್​ ತಲಾ ಎರಡು ವಿಕೆಟ್ ಕಬಳಿಸಿದರೆ ಅರುಂಧತಿ ರೆಡ್ಡಿ 1 ವಿಕೆಟ್ ತಮ್ಮದಾಗಿಸಿಕೊಂಡರು.

ಟಾಸ್​ ಗೆದ್ದ ಮೆಗ್​ಲ್ಯಾನಿಂಗ್ ಮಾತನಾಡಿ, ಫೀಲ್ಡಿಂಗ್ ಆಯ್ಕೆಗೆ ಯಾವುದೇ ಕಾರಣಗಳು ಇಲ್ಲ. ಆದರೆ, ಪರಿಸ್ಥಿತಿಯನ್ನು ನೋಡಿದರೆ ಚೇಸ್​ ಮಾಡಿ ಗೆಲ್ಲುವುದೇ ಉತ್ತಮ ಎಂದು ಅನಿಸುತ್ತದೆ. ನಮ್ಮ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಹೇಳಿದ್ದರು. ತಮ್ಮ ಮಾತನ್ನು ಅವರು ಉಳಿಸಿಕೊಂಡರು.

ಇದನ್ನೂ ಓದಿ : WPL 2023 : ಗುಜರಾತ್ ಜಯಂಟ್ಸ್​ ವಿರುದ್ಧ 3 ವಿಕೆಟ್​ ವಿಜಯ ಸಾಧಿಸಿದ ಯುಪಿ ವಾರಿಯರ್ಸ್​​

ಮುಂಬಯಿ ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್​ ಮಾತನಾಡಿ, ಬ್ಯಾಟಿಂಗ್​ನಲ್ಲಿ ನಾವು ಹೆಚ್ಚಿನ ಜವಾಬ್ದಾರಿ ಪ್ರದರ್ಶಿಸಲು ಇಚ್ಛೆಪಡುತ್ತಿದ್ದೇವೆ ಎಂದು ಭರವಸೆ ನೀಡಿದ್ದರು. ಆದರೆ, ಅವರಿಗೆ ಅದು ಸಾಧ್ಯವಾಗಲಿಲ್ಲ.

Exit mobile version