Site icon Vistara News

IPL 2023 : ಐಪಿಎಲ್​ನಿಂದ ಪ್ರಸಿದ್ಧ್​ ಕೃಷ್ಣ ಔಟ್​, ಬದಲಿ ಆಟಗಾರನನ್ನು ಆಯ್ಕೆ ಮಾಡಿದ ರಾಜಸ್ಥಾನ್ ರಾಯಲ್ಸ್​

Parshid Krishna out of IPL, Rajasthan Royals have chosen a replacement player

#image_title

ಮುಂಬಯಿ: ಈ ಬಾರಿಯ ಐಪಿಎಲ್​ ಇಂಜುರಿ ಪ್ರೀಮಿಯರ್ ಲೀಗ್ ಆಗಿ ಪರಿವರ್ತನೆಗೊಂಡಿದೆ. ಗಾಯದ ಕಾರಣಕ್ಕೆ ಹಲವಾರು ಆಟಗಾರರು ಈ ಬಾರಿಯ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಅವರ ಪಟ್ಟಿಗೆ ಕನ್ನಡಿಗ ಹಾಗೂ ವೇಗದ ಬೌಲರ್ ಪ್ರಸಿದ್ಧ್​ ಕೃಷ್ಣ ಅವರೂ ಸೇರಿಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್​ ತಂಡದಲ್ಲಿದ್ದ ಅವರು ಈ ಬಾರಿ ಆಡುವುದಿಲ್ಲ ಎಂದು ಪ್ರಕಟಗೊಂಡ ಹಿನ್ನೆಲೆಯಲ್ಲಿ ವೇಗದ ಬೌಲರ್ ಸಂದೀಪ್​ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಸಂದೀಪ್​ ಶರ್ಮಾ ಅವರು ಹಿರಿಯ ಬೌಲರ್ ಹಾಗೂ 10 ವರ್ಷ ಐಪಿಎಲ್​ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. 104 ಪಂದ್ಯಗಳಲ್ಲಿ 114 ವಿಕೆಟ್​ ಕೂಡ ಉರುಳಿಸಿದ್ದಾರೆ. ಅದರೆ, 2023ರ ಐಪಿಎಲ್​ ಹರಾಜಿನಲ್ಲಿ ಅವರನ್ನು ಯಾವುದೇ ತಂಡ ಖರೀದಿ ಮಾಡಿಲಿಲ್ಲ. ಇದೀಗ ಅವರಿಗೆ ಮತ್ತೆ ಅದೃಷ್ಟ ಖುಲಾಯಿಸಿದೆ. ರಾಜಸ್ಥಾನ್​ ತಂಡ 50 ಲಕ್ಷ ರೂಪಾಯಿ ಮೂಲ ಬೆಲೆಗೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಪ್ರಸಿದ್ದ್​ ಕೃಷ್ಣ ಗಾಯದ ಸಮಸ್ಯೆಯಿಂದ ಕಳೆದ ಹಲವು ದಿನಗಳಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ. ಗಾಯದ ಹಿನ್ನೆಲೆಯಲ್ಲಿ ಅವರು ಭಾರತ ತಂಡಕ್ಕೆ ಆಯ್ಕೆಯಾಗುವ ಹಲವು ಅವಕಾಶಗಳನ್ನು ಕೂಡ ಕಳೆದುಕೊಂಡಿದ್ದರು.

ನಿತೀಶ್​ ರಾಣಾ ಕೆಕೆಆರ್​ ನಾಯಕ

ಮುಂಬಯಿ ಮೂಲದ ಬಲಗೈ ಬ್ಯಾಟರ್​ ಶ್ರೇಯಸ್​ ಅಯ್ಯರ್​ ಅವರ ಗಾಯದ ಸಮಸ್ಯೆ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಅವರು ಯಾವಾಗ ಸಂಪೂರ್ಣ ಫೀಟ್​ ಆಗಿ ಆಡುವರು ಎಂಬುದೂ ಗೊತ್ತಿಲ್ಲ. ಹೀಗಾಗಿ ಮುಂಬರುವ ಐಪಿಎಲ್​ ಟೂರ್ನಿಯಲ್ಲಿ ಎಡಗೈ ಬ್ಯಾಟರ್​​ ನಿತೀಶ್​ ರಾಣಾಗೆ ಕೆಕೆಆರ್​ ತಂಡದ ನಾಯಕತ್ವ ನೀಡಲಾಗಿದೆ. 2022ರಲ್ಲಿ ಶ್ರೇಯಸ್​​ ಅಯ್ಯರ್​ ತಂಡದ ನಾಯಕರಾಗಿದ್ದರು. ಆದರೆ, ಅವರು ಈ ಬಾರಿ ಯಾವಾಗ ತಂಡ ಸೇರಿಕೊಳ್ಳುತ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲದ ಕಾರಣ ತಾತ್ಕಾಲಿಕ ನಾಯಕರಾಗಿ ನಿತೀಶ್​ ರಾಣಾಗೆ ಅವಕಾಶ ನೀಡಲಾಗಿದೆ.

ನಿತೀಶ್​ ರಾಣಾ 2018ರಿಂದ ಕೋಲ್ಕೊತಾ ನೈಟ್​ ರೈಡರ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಎಡಗೈ ಬ್ಯಾಟರ್​ ಪ್ರತಿಯೊಂದು ಆವೃತ್ತಿಯಲ್ಲೂ 300ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಅದೇ ರೀತಿ ಅವರಿಗೆ ದೇಶಿಯ ಕ್ರಿಕೆಟ್​ನಲ್ಲಿ ಡೆಲ್ಲಿ ತಂಡ ನಾಯಕತ್ವ ವಹಿಸಿದ ಅನುಭವವಿದೆ. ಅದೇ ರೀತಿ ಶ್ರೀಲಂಕಾ ವಿರುದ್ಧದ ತವರಿನ ಸರಣಿಯ ವೇಳೆ ನಿತೀಶ್​ ರಾಣಾ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.

ಶ್ರೇಯಸ್​ ಅಯ್ಯರ್ ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯದ ವೇಳೆಗೆ ಬೆನ್ನು ನೋವಿಗೆ ಒಳಗಾಗಿದ್ದರು. ಹೀಗಾಗಿ ಕೋಲ್ಕೊತಾ ನೈಟ್​ ರೈಡರ್ಸ್​ ತಂಡಕ್ಕೆ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗಿರಲಿಲ್ಲ. ವಿದೇಶಿ ಆಟಗಾರರಾದ ಆ್ಯಂಡ್ರೆ ರಸೆಲ್​, ಸುನೀಲ್ ನರೈನ್​ ಹಾಗೂ ನ್ಯೂಜಿಲ್ಯಾಂಡ್​ನ ವೇಗದ ಬೌಲರ್​ ಟಿಮ್​ ಸೌಥಿ ಕೋಲ್ಕೊತಾ ತಂಡದಲ್ಲಿದ್ದಾರೆ. ಆದರೆ ಅವರಿಗೆ ನಾಯಕತ್ವ ನೀಡದೆ ರಾಣಾಗೆ ವಹಿಸಲಾಗಿದೆ.

ಶ್ರೇಯಸ್​ ಅಯ್ಯರ್​ ಸದ್ಯಕ್ಕೆ ಲಭ್ಯವಿಲ್ಲದ ಹೊರತಾಗಿಯೂ ಟೂರ್ನಿಯ ಕೊನೇ ಹಂತದಲ್ಲಿ ಸುಧಾರಿಸಿಕೊಂಡು ತಂಡ ಸೇರಬಹುದು ಎಂಬ ವಿಶ್ವಾಸವನ್ನು ಕೆಕೆಆರ್​ ಮ್ಯಾನೇಜ್ಮೆಂಟ್​ ಹೊಂದಿದೆ. ಹೀಗಾಗಿ ರಾಣಾಗೆ ತಾತ್ಕಾಲಿಕ ನಾಯಕತ್ವ ವಹಿಸಿದೆ. ನಾಯಕತ್ವ ಬದಲಾವಣೆ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಶ್ರೇಯಸ್​ ಬೇಗ ಗುಣಮುಖರಾಗಿ ತಂಡ ಸೇರಿಕೊಳ್ಳುವ ವಿಶ್ವಾಸವಿದೆ. ಅದೇ ರೀತಿ ನಿತೀಶ್​ ರಾಣಾ ಅವರ ನೇತೃತ್ವದಲ್ಲಿ ತಂಡ ಅತ್ಯುತ್ತಮ ಪ್ರದರ್ಶನ ನೀಡಲಿದ ಎಂದು ಹೇಳಿದ್ದಾರೆ.

ಹೆಡ್​ಕೋಚ್ ಚಂದ್ರಕಾಂತ್​ ಪಾಟೀಲ್ ಹಾಗೂ ತಂಡದ ಹಿರಿಯ ತರಬೇತಿ ಸಿಬ್ಬಂದಿಯ ನೆರವಿನಿಂದ ನಿತೀಶ್​ ರಾಣಾ ಉತ್ತಮ ಸಾಧನೆ ಮಾಡುವ ವಿಶ್ವಾಸ ನಮಗಿದೆ ಎಂಬುದಾಗಿ ಪ್ರಕಟಣೆಯಲ್ಲಿ ಬರೆದಿದ್ದಾರೆ. ಕೋಲ್ಕೊತಾ ನೈಟ್​ ರೈಡರ್ಸ್​ ತಂಡ ಏಪ್ರಿಲ್​ 1ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್ ಬಳಗಕ್ಕೆ ಎದುರಾಗಲಿದೆ.

Exit mobile version