Site icon Vistara News

Pro Kabaddi: ಬೆಂಗಳೂರು ಬುಲ್ಸ್​ ಪಂದ್ಯಕ್ಕೆ ಕ್ಷಣಗಣನೆ; ಕಿಚ್ಚ ಸುದೀಪ್​ ಸಾಥ್​​

Bengaluru Bulls

ಬೆಂಗಳೂರು: ಮೂರು ವರ್ಷಗಳ ಬಳಿಕ ಸಂಪೂರ್ಣ ಕ್ಯಾರವಾನ್ ಮಾದರಿಯಲ್ಲಿ ಮರಳಿರುವ ಪ್ರೊ ಕಬಡ್ಡಿ(Pro Kabaddi) ಲೀಗ್‌ನ 10ನೇ ಆವೃತ್ತಿಯ 2ನೇ ಚರಣದ ಪಂದ್ಯಗಳ ಆತಿಥ್ಯಕ್ಕೆ ಗಾರ್ಡನ್ ಸಿಟಿಯ ಕಂಠೀರವ ಒಳಾಂಗಣ ಕ್ರೀಡಾಂಗಣ ಸಜ್ಜಾಗಿ ನಿಂತಿದೆ. ಇಂದು ನಡೆಯುವ ಮೊದಲ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್(Bengaluru Bulls)​ ತಂಡ ದಬಾಂಗ್ ಡೆಲ್ಲಿ(bengaluru bulls vs dabang delhi) ವಿರುದ್ಧ ಸೆಣಸಾಟ ನಡೆಸಲಿವೆ. ಬುಲ್ಸ್​ಗೆ ಫುಲ್​ ಚಾರ್ಜ್​ ಮಾಡಲು ನಟ ಕಿಚ್ಚ ಸುದೀಪ್​(kiccha sudeep) ಕೂಡ ಹಾಜರಾಗಲಿದ್ದಾರೆ.

ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಬುಲ್ಸ್​

ಬೆಂಗಳೂರು ಬುಲ್ಸ್​ ಆಡಿದ ಎರಡು ಪಂದ್ಯಗಳಲ್ಲಿಯೂ ಸೋಲು ಕಂಡಿತ್ತು. ಇದೀಗ ತಮ್ಮ ಗೆಲುವಿನ ಖಾತೆಯನ್ನು ತವರಿನ ಅಭಿಮಾನಿಗಳ ಮುಂದೆಯೇ ತೆರೆಯುವ ವಿಶ್ವಾಸದಲ್ಲಿದೆ. 2018ರ ಚಾಂಪಿಯನ್ ಆಗಿರುವ ಬುಲ್ಸ್ ಕಳೆದ ಬಾರಿ ಉಪಾಂತ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ಎದುರು ನಿರಾಸೆ ಅನುಭವಿಸಿತ್ತು. ಹಾಲಿ ಆವೃತ್ತಿಯಲ್ಲಿ ಯುವ ಹಾಗೂ ಅನುಭವಿ ಆಟಗಾರರ ಪಡೆಯೇ ಇದ್ದರೂ, ಇನ್ನು ಕಮಾಲ್​ ಆಡಲು ಸಾಧ್ಯವಾಗಿಲ್ಲ. ಆದರೆ ಇಂದು ತವರಿನಲ್ಲಿ ಗೆದ್ದು ಬೀಗುವ ವಿಶ್ವಾಸವನ್ನು ಕೋಚ್​ ಮತ್ತು ರೈಡರ್ ವಿಕಾಸ್ ಕಂಡೋಲಾ ವ್ಯಕ್ತಪಡಿಸಿದ್ದಾರೆ.

ಸ್ಟಾರ್​ ಸ್ಪೋರ್ಟ್ಸ್​ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಕೋಚ್​ ರಣಧೀರ್ ಶೆರಾವತ್ ಮತ್ತು ಆಟಗಾರ ವಿಕಾಸ್ ಕಂಡೋಲಾ ತವರಿನ ಅಭಿಮಾನಿಗಳ ಮುಂದೆ ಆಡುವುದೇ ಒಂದು ಖುಷಿ. ಜತೆಗೆ ಹಚ್ಚಿನ ಜೋಶ್​ ಕೂಡ ಸಿಗಲಿದೆ. ಹಿಂದಿನ ಪಂದ್ಯದ ವೈಲ್ಯಗಳನ್ನು ತಿದ್ದಿ ನಾವು ಇಂದು ಡೆಲ್ಲಿಯನ್ನು ಮಣಿಸಲಿದ್ದೇವೆ ಎಂದು ಹೇಳಿದ್ದಾರೆ. ರೈಡರ್ ರಕ್ಷಿತ್ ತಂಡದಲ್ಲಿರುವ ಏಕೈಕ ರಾಜ್ಯದ ಆಟಗಾರ. ಇಂದು ಅವರು ಕಣಕ್ಕಿಳಿಯುವ ಸಾಧ್ಯತೆಯೂ ಇದೆ. ಡೆಲ್ಲಿ ಕೂಡ ಬಲಿಷ್ಠ ಪಡೆಯಾಗಿದೆ. ಎಕ್ಸ್​ಪ್ರೆಸ್​ ಖ್ಯಾತಿಯ ನವೀನ್​ ಕುಮಾರ್​, ವಿಶಾಲ್​ ಭಾರದ್ವಾಜ್​, ಅಶು ಮಲಿಕ್​ ಇವರನ್ನೆಲ್ಲ ಕಟ್ಟಿಹಾಕಬೇಕು.

ಇದನ್ನೂ ಓದಿ Pro Kabaddi: ಗುಜರಾತ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಪಾಟ್ನಾ

ಸುದೀಪ್ ಹಾಜರ್​

ಈ ಪಂದ್ಯಕ್ಕೆ ನಟ, ರಾಯಭಾರಿ ಸುದೀಪ್ ಹಾಜರಿರಲಿದ್ದು, ಆತಿಥೇಯ ತಂಡವನ್ನು ಚಿಯರ್​ ಅಪ್​ ಮಾಡಲಿದ್ದಾರೆ. ಗುರುವಾರವೇ ಸ್ಟಾರ್​ ಸ್ಪೋರ್ಟ್ಸ್​ ಕನ್ನಡ ಸುದೀಪ್​ ಅವರು ಈ ಪಂದ್ಯಕ್ಕೆ ಬರುವ ವಿಚಾರವನ್ನು ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿತ್ತು. ‘ಅಖಾಡಕ್ಕೆ ಕಿಚ್ಚೇರಿಸಲು ಖುದ್ದು ಕಿಚ್ಚನೇ ಬರಲಿದ್ದಾರೆ.’ ಎಂದು ಬರೆದುಕೊಂಡಿತ್ತು.

ಕನ್ನಡಿಗರ ಪ್ರತಿ ಉಸಿರಲ್ಲೂ ಕಬಡ್ಡಿ ಜೀವಂತ

“ಕಬಡ್ಡಿಯಲ್ಲಿನ ಶಕ್ತಿ, ಧೈರ್ಯ, ದೃಢತೆ ಮತ್ತು ಸಂಪೂರ್ಣ ಉತ್ಸಾಹದ ಸಂಯೋಜನೆಯು ನನ್ನೊಂದಿಗೆ ಆಳವಾಗಿ ಅನುರಣಿಸುತ್ತದೆ. ನಮ್ಮ ರಾಷ್ಟ್ರದ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಶಕ್ತಿ ಮತ್ತು ದೃಢತೆಗೆ ಸಮಾನಾರ್ಥಕವಾದ ಗೂಳಿಗಳ ಸದ್ಗುಣಗಳಿಂದ ಸ್ಫೂರ್ತಿಯನ್ನು ಪಡೆಯುತ್ತಿದ್ದೇನೆ, ನಾನು ‘ಕನ್ನಡಿಗರ ಪ್ರತಿ ಉಸಿರಲ್ಲೂ ಕಬಡ್ಡಿ’ಯನ್ನು ಜೀವಂತವಾಗಿಸುವಲ್ಲಿ ಉತ್ಸುಕನಾಗಿದ್ದೇನೆ. ಈ ಭಾವನೆಯು ಕರ್ನಾಟಕದ ಚೈತನ್ಯವನ್ನು ಪ್ರತಿಬಿಂಬಿಸುವುದಲ್ಲದೆ, ಕನ್ನಡಿಗರ ಸಮುದಾಯದ ಅಚಲ ಬೆಂಬಲ ಮತ್ತು ಅದಮ್ಯ ಚೇತನಕ್ಕೆ ಗೌರವ ಸಲ್ಲಿಸುತ್ತದೆ. ನಮ್ಮ ಗೂಳಿಗಳ ಬೆಂಬಲಕ್ಕೆ ಕನ್ನಡಿಗರು ಕೈಜೋಡಿಸಿ ಎಂದು ಟೂರ್ನಿ ಆರಂಭಕ್ಕೂ ಮುನ್ನ ಕಿಚ್ಚ ಹೇಳಿದ್ದರು.

Exit mobile version