Site icon Vistara News

IPL 2023 : ಡೆಲ್ಲಿ ಕ್ಯಾಪಿಟಲ್ಸ್​ ಆಟಗಾರರೆಲ್ಲರ ಕ್ಯಾಪ್​ನಲ್ಲಿ ರಿಷಭ್​ ಪಂತ್​​ ಜೆರ್ಸಿ ನಂಬರ್​ 17 ಪ್ರಿಂಟ್​

Rishabh Pant jersey number 17 print on cap of all Delhi Capitals players

#image_title

ನವ ದೆಹಲಿ: ಭೀಕರ ಕಾರು ಅಪಘಾತಕ್ಕೆ ಒಳಗಾಗಿ ಗಾಯಗೊಂಡಿರುವ ರಿಷಭ್​ ಪಂತ್​ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಅವರು ಸುಧಾರಣೆಯ ಹಂತದಲ್ಲಿದ್ದು ಮೈದಾನಕ್ಕೆ ಇಳಿದು ಆಡಲು ವರ್ಷವೇ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಅವರು 2023ನೇ ಆವೃತ್ತಿಯ ಐಪಿಎಲ್​ನಲ್ಲಿ ಆಡುವುದಿಲ್ಲ. ರಿಷಭ್​ ಪಂತ್​ ಅಲಭ್ಯತೆ ಡೆಲ್ಲಿ ತಂಡಕ್ಕೆ ದೊಡ್ಡ ಹಿನ್ನಡೆ ಉಂಟು ಮಾಡಿದೆ. ತಂಡದ ನಾಯಕರಾಗಿದ್ದ ಜತೆಗೆ ವಿಕೆಟ್​ಕೀಪಿಂಗ್​ ಜವಾಬ್ದಾರಿಯನ್ನೂ ಅವರು ನಿರ್ವಹಿಸಿದ್ದ ಕಾರಣ ಅವರ ಸ್ಥಾನಕ್ಕೆ ಪರ್ಯಾಯ ಆಟಗಾರನನ್ನು ಹುಡುಕುವ ಸಮಸ್ಯೆ ಎದುರಾಗಿದೆ.. ಹರಾಜು ಪ್ರಕ್ರಿಯೆಯಲ್ಲಿ ಡೇವಿಡ್​ ವಾರ್ನರ್ ಅವರನ್ನು ತಂಡಕ್ಕೆ ತನ್ನ ತೆಕ್ಕೆಗೆ ತೆಗೆದುಕೊಂಡು ನಾಯಕತ್ವ ಪಟ್ಟ ನೀಡಿದೆ. ಆದರೆ ವಿಕೆಟ್​ ಕೀಪಿಂಗ್​ಗೆ ಉತ್ತಮ ಆಯ್ಕೆ ಕಷ್ಟ.

ಮಾರ್ಚ್​ 24ರಂದು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕ್ಯಾಂಪ್​ನಲ್ಲಿ ನಡೆದ ಸಭೆಯಲ್ಲಿ ಕೋಚ್​ ರಿಕಿ ಪಾಂಟಿಂಗ್ ವಿಕೆಟ್​ಕೀಪರ್​ ಬ್ಯಾಟರ್​ ರಿಷಭ್​ ಪಂತ್​ ಅಗತ್ಯವನ್ನು ಸ್ಮರಿಸಿಕೊಂಡಿದ್ದರು. ಇದೇ ವೇಳೆ ಪಂತ್​ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುವಂತೆಯೂ ಮನವಿ ಮಾಡಿದ್ದರು. ಅದಕ್ಕಿಂತ ಹೆಚ್ಚಾಗಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಆಟಗಾರರು ಧರಿಸುವ ಜೆರ್ಸಿ ಅಥವಾ ಕ್ಯಾಪ್​ನಲ್ಲಿ ರಿಷಭ್​ ಪಂತ್​ ಜೆರ್ಸಿ ಸಂಖ್ಯೆ 17 ಪ್ರಿಂಟ್​ ಮಾಡಲು ಮುಂದಾಗಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ರಿಷಭ್ ಪಂತ್​ಗೆ ವಿಶ್ವಾಸ ತುಂಬಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ರಿಷಭ್​ ಪಂತ್​ ಅಲಭ್ಯತೆಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್​ ಡೇವಿಡ್​ ವಾರ್ನರ್​ಗೆ ನಾಯಕತ್ವ ನೀಡಲಾಗಿದೆ. ಮಿನಿ ಹರಾಜಿನಲ್ಲಿ 6.5 ಕೋಟಿ ರೂಪಾಯಿಗೆ ತನ್ನ ತೆಕ್ಕೆಗೆ ತೆಗೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್​ ಅವರಿಗೆ ತಂಡವನ್ನು ಮುನ್ನಡೆಸುವ ಹೊಣೆಗಾರಿಕೆ ನೀಡಿದೆ. ಅದೇ ರೀತಿ ಆಲ್​ರೌಂಡರ್​ ಅಕ್ಷರ್ ಪಟೇಲ್​ಗೆ ಉಪನಾಯಕನ ಪಟ್ಟವನ್ನು ಕಟ್ಟಿದೆ.

ಇದನ್ನೂ ಓದಿ : Rishabh Pant: ರಿಷಭ್​ ಪಂತ್​ ಭೇಟಿಯಾದ ಟೀಮ್​ ಇಂಡಿಯಾದ ಮಾಜಿ ಆಟಗಾರ ಯುವರಾಜ್​ ಸಿಂಗ್​

ಡೆಲ್ಲಿ ಕ್ಯಾಪಿಟಲ್ಸ್ ತಂಡ ಇನ್ನೂ ಐಪಿಎಲ್​ ಟ್ರೋಫಿ ಎತ್ತಿ ಹಿಡಿಯಲು ಸಫಲವಾಗಿಲ್ಲ. ಹೀಗಾಗಿ ವಾರ್ನರ್​ ನಾಯಕತ್ವದಲ್ಲಿ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವುದಕ್ಕೆ ಸಜ್ಜಾಗಿದೆ. ಕಳೆದ ವರ್ಷ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಐದನೇ ತಂಡವಾಗಿ ಐಪಿಎಲ್​ ಮುಗಿಸಿದ್ದ ಕಾರಣ ಪ್ಲೇಆಫ್ ಹಂತಕ್ಕೂ ಹೋಗಿರಲಿಲ್ಲ. ಏಪ್ರಿಲ್​ 1ರಂದು ನಡೆಯುವ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಲಖನೌ ಸೂಪರ್​ ಜಯಂಟ್ಸ್​ ತಂಡಕ್ಕೆ ಎದುರಾಗಲಿದೆ.

ಸುಧಾರಣೆಯ ಹಾದಿಯಲ್ಲಿ ಪಂತ್​

ಡೆಲ್ಲಿಯಿಂದ ಡೆಹ್ರಾಡೂನ್​ಗೆ ಹೋಗುವ ಹಾದಿಯಲ್ಲಿ ರಿಷಭ್​ ಪಂತ್​ ಚಲಾಯಿಸುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಕಾರು ಬೆಂಕಿ ಹೊತ್ತಿಕೊಂಡು ಸಂಪೂರ್ಣ ಭಸ್ಮವಾಗಿತ್ತು. ಪವಾಡಸದೃಶ ರಿಷಭ್​ ಪಂತ್​ ಪಾರಾಗಿದ್ದರು. ಮೊದಲಿಗೆ ಡೆಹ್ರಾಡೂನ್​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಬಳಿಕ ಮಂಡಿಯ ಗಾಯಕ್ಕಾಗಿ ಮುಂಬಯಿಯ ಕೋಕಿಲಾ ಬೆನ್​ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.

ಎಡಗೈ ಬ್ಯಾಟರ್​ ಪ್ರಸ್ತುತ ಮನೆಯಲ್ಲಿಯೇ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ. ಕಳೆದ ಕೆಲವೊಂದು ದಿನಗಳಿಂದ ಅವರು ತಾವು ಊರುಗೋಲಿನ ಸಮೇತ ನಡೆದುಕೊಂಡು ಹೋಗುವ ವಿಡಿಯೊವನ್ನು ಶೇರ್​ ಮಾಡಿಕೊಂಡಿದ್ದರು. ಅಲ್ಲದೇ ಗುಣಮುಖರಾಗುವ ವಿಶ್ವಾಸ ವ್ಯಕ್ತಪಡಿಸಿದ್ದರು.

Exit mobile version