Site icon Vistara News

Rishabh Pant: ಕ್ರಿಕೆಟ್​ ಪಂದ್ಯ ಆಡಿದ ರಿಷಭ್​ ಪಂತ್​; ವಿಶ್ವಕಪ್​ಗೆ ಖಚಿತ!

rishabh pant batting

ಬೆಂಗಳೂರು: ಕಳೆದ ವರ್ಷ ಡಿಸೆಂಬರ್​ ಅಂತ್ಯದಲ್ಲಿ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಟೀಮ್​ ಇಂಡಿಯಾದ ಆಟಗಾರ ರಿಷಭ್​ ಪಂತ್(Rishabh Pant)​ ಅವರು ಶೀಘ್ರದಲ್ಲೇ ಕ್ರಿಕೆಟ್​ಗೆ ಮರಳುವ ಸೂಚನೆಯೊಂದು ಲಭ್ಯವಾಗಿದೆ. ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪಂತ್​ ಮೈದಾನಕ್ಕಿಳಿದು ಬ್ಯಾಟಿಂಗ್ ಅಭ್ಯಾಸ​ ನಡೆಸಿದ್ದಾರೆ. ಈ ಮೂಲಕ ತಮ್ಮ ಪುನರಾಗಮನದ ಸುಳಿವು ನೀಡಿದ್ದಾರೆ.

ಬುಧವಾರ ಕರ್ನಾಟಕದ JSW ವಿಜಯನಗರದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಪಂತ್​ ಬ್ಯಾಟಿಂಗ್​ ನಡೆಸಿದ್ದಾರೆ. ಅವರು ಬ್ಯಾಟಿಂಗ್​ ನಡೆಸಲು ಮೈದಾನಕ್ಕೆ ಬರುವ ವೇಳೆ ಪಂದ್ಯ ನೋಡಲು ಬಂದ ಪ್ರೇಕ್ಷಕರು ಪಂತ್​ ಹೆಸರನ್ನು ಜೋರಾಗಿ ಕೂಗುವ ಮೂಲಕ ಸಂಭ್ರಮಿಸಿದ್ದಾರೆ. ಅಚ್ಚರಿ ಎಂದರೆ ಪಂತ್​ ಈ ಪಂದ್ಯದಲ್ಲಿ ತಮ್ಮ ಹಿಂದಿನ ಬ್ಯಾಟಿಂಗ್​ ಶೈಲಿಯಲ್ಲಿಯೇ ಬೌಂಡರಿ ಕೂಡ ಬಾರಿಸಿದರು.

ವಿಶ್ವಕಪ್​ ಆಡುವ ಸಾಧ್ಯತೆ

ಪಂತ್​ ಅವರ ಗಂಭೀರ ಗಾಯವನ್ನು ಕಂಡ ಅನೇಕರು ಪಂತ್​ ಕ್ರಿಕೆಟ್​ ಬಾಳ್ವೆ ಇನ್ನು ಮಂದೆ ಕಷ್ಟ, ಒಂದೊಮ್ಮೆ ಅವರು ಕ್ರಿಕೆಟ್​ಗೆ ಮರಳಬೇಕಾದರೂ ಹಲವು ವರ್ಷ ಬೇಕಾದಿತು ಹೀಗೆ ಹಲವು ಅಭಿಪ್ರಯಾಗಳನ್ನು ವ್ಯಕ್ತಪಡಿಸಿದ್ದರು. ಆದರೆ ಪಂತ್​ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶಸ್ತ್ರಚಿಕಿತ್ಸೆ ನಡೆದ ಒಂದೆರಡು ದಿನಗಳಿಂದಲೇ ಕಠಿಣ ವ್ಯಾಯಾಮ ನಡೆಸಲು ಆರಂಭಿಸಿದ್ದರು. ಇದೀಗ ಅವರು ಕೀಪಿಂಗ್​ ಮತ್ತು ಬ್ಯಾಟಿಂಗ್​​ ಅಭ್ಯಾಸವನ್ನು ನಡೆಸಿ ಶೀಘ್ರದಲ್ಲೇ ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡುವ ಸೂಚನೆ ನೀಡಿದ್ದಾರೆ. ಅವರ ಈ ಕ್ಷಿಪ್ರ ಪ್ರಗತಿಯ ಚೇತರಿಕೆ(rishabh pant recovery) ಕಂಡು ಅನೇಕರು ಅಚ್ಚರಿಗೊಳಗಾಗಿದ್ದಾರೆ. ಇನ್ನು ಕೆಲವರು ಅಕ್ಟೋಬರ್​ನಲ್ಲಿ ನಡೆಯುವ ವಿಶ್ವಕಪ್​ನಲ್ಲಿ(icc world cup 2023) ಆಡುವ ಸಾಧ್ಯತೆ ಇದೆ ಎಂದು ಹೇಳಲಾರಂಭಿಸಿದ್ದಾರೆ.

ಡಿವೈಡರ್​ಗೆ ಡಿಕ್ಕಿ ಹೊಡೆದಿದ್ದ ಕಾರು

ಸಾಧಿಸುವ ದೃಢ ಛಲವೊಂದಿದ್ದರೆ ಯಾವುದೇ ಕಷ್ಟವನ್ನು ಎದುರಿಸಿ ಮತ್ತೆ ಎದ್ದು ನಿಲ್ಲಬಹುದು ಎಂಬುದಕ್ಕೆ ಪಂತ್​ ಅವರ ಈ ಚೇತರಿಕೆಯ ಪರಿಶ್ರಮವೇ ಉತ್ತಮ ನಿದರ್ಶನ. ಕಳೆದ ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್​ ಪಂತ್​ ಪಾರಾಗಿದ್ದರು. ಡೆಹ್ರಾಡೂನ್​ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

ಇದನ್ನೂ ಓದಿ Rishabh Pant : ಭಾರತೀಯ ಕ್ರಿಕೆಟ್ ತಂಡಕ್ಕೆ ಗುಡ್​ ನ್ಯೂಸ್​ ಕೊಟ್ಟ ರಿಷಭ್ ಪಂತ್​

ಬೆಂಗಳೂರಿನಲ್ಲಿ ತರಬೇತಿ

ಶಸ್ತ್ರಚಿಕಿತ್ಸೆ ಬಳಿಕ ಪಂತ್​ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದರು. ಊರುಗೋಲಿನ ಸಹಾಯದಿಂದ ನಡೆದಾಡುತ್ತಿದ್ದ ಅವರು ಹಂತ ಹಂತವಾಗಿ ಚೇತರಿಕೆ ಕಂಡು ವೇಟ್​ಲಿಫ್ಟಿಂಗ್​ ಮಾಡುವ ತನಕ ಬಂದು ಮುಟ್ಟಿದ್ದರು. ಇದೀಗ ಪ್ಯಾಡ್​ ಮತ್ತು ಗ್ಲೌಸ್​ ತೊಟ್ಟು ಕೀಪಿಂಗ್​ ಮತ್ತು ಬ್ಯಾಟಿಂಗ್​ ಅಭ್ಯಾಸ ನಡೆಸಲು ಆರಂಭಿಸಿದ್ದಾರೆ. ಬಿಸಿಸಿಐ ಅಧಿಕಾರಿಯೊಬ್ಬರು ಪಂತ್​ ಅವರ ಚೇತರಿಕೆ ಕಂಡು ಇಂದು ಅಥವಾ ನಾಳೆಯೇ ಪಂತ್​​ ಕ್ರಿಕೆಟ್​ಗೆ ಮರಳುವಂತೆ ಭಾಸವಾಗುತ್ತಿದೆ ಎಂದಿದ್ದಾರೆ.

Exit mobile version