Site icon Vistara News

Rishabh Pant: ಊರುಗೋಲು ಬದಿಗಿಟ್ಟು ಕೆಜಿಎಫ್​ ರಾಕಿ ಭಾಯ್​ ಶೈಲಿಯಲ್ಲಿ ನಡೆದಾಡಿದ ರಿಷಭ್​ ಪಂತ್​; ವಿಡಿಯೊ ವೈರಲ್​

Rishabh Pant Injury Update

ನವದೆಹಲಿ: ಕಾರು ಅಪಘಾತದಲ್ಲಿ ಪವಾಡ ಸದೃಶ್ಯ ಪಾರಾಗಿ ಸದ್ಯ ಚೇತರಿಕೆ ಕಾಣುತ್ತಿರುವ ರಿಷಭ್​ ಪಂತ್(Rishabh Pant)​ ಅವರು ಇದೀಗ ಊರುಗೋಲಿನ ಸಹಾಯವಿಲ್ಲದೆ ನಡೆದಾಡಲು ಆರಂಭಿಸಿದ್ದಾರೆ. ಪಂತ್​ ಅವರು ಊರುಗೋಲು ಇಲ್ಲದೆ ನಡೆದಾಡಿದ ವಿಡಿಯೊವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇತ್ತೀಚೆಗೆ ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯ‌ ವೀಕ್ಷಿಸಲು ಪಂತ್​ ಅವರು ಅರುಣ್ ಜೇಟ್ಲಿ ಕ್ರೀಡಾಂಗಣಕ್ಕೆ ಊರುಗೋಲು ಸಹಾಯದಿಂದ ಬಂದಿದ್ದರು. ಇದಾದ ಬಳಿಕ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆಯೂ ರಿಷಭ್‌ ಪಂತ್ ಕಾಣಿಸಿಕೊಂಡಿದ್ದರು. ಇದೀಗ ಅವರು ಊರುಗೋಲಿನ ಸಹಾಯವಿಲ್ಲದೆ ನಡೆದಾಡಲು ಆರಂಭಿಸಿದ್ದಾರೆ.

ರಿಷಭ್​ ಪಂತ್​ ಅವರು ರಾಕಿಂಗ್​ ಸ್ಟಾರ್ ಯಶ್​​ ಅಭಿನಯದ ಸೂಪರ್​ ಹಿಟ್​​ ಕೆಜಿಎಫ್ ಸಿನಿಮಾದ ಬಿಜಿಎಮ್​ಗೆ ಊರುಗೋಲಿನ ಸಹಾಯವಿಲ್ಲದೆ ನಡೆದಾಡಿದ ವಿಡಿಯೊವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಯಶ್​ ಅವರು ವಾಕ್​ ಮಾಡಿದ ರೀತಿಯಲ್ಲೇ ಪಂತ್​ ಅವರು ತಮ್ಮ ಕೈಯಲ್ಲಿದ್ದ ಊರುಗೋಲನ್ನು ಎಸೆದು ಅವರ ಶೈಲಿಯಲ್ಲಿಯೇ ನಡೆದಾಡಿದ್ದಾರೆ. ಈ ವಿಡಿಯೊ ಕಂಡ ಅವರ ಅಭಿಮಾನಿಗಳು ಶೀಘ್ರದಲ್ಲೇ ನಿಮ್ಮನ್ನು ಮತ್ತೆ ಮೈದಾನದಲ್ಲಿ ನೋಡುವ ಕಾಲ ಸನ್ನಿಹಿತವಾದಂತೆ ತೋರುತ್ತಿದೆ ಎಂದು ಕಾಮೆಂಟ್​ ಮಾಡಿದ್ದಾರೆ. ​

ಇದಕ್ಕೂ ಮುನ್ನ “ಒಂದು ಹೆಜ್ಜೆ ಮುಂದಕ್ಕೆ, ಒಂದು ಬಲವಾದ ಹೆಜ್ಜೆ, ಒಂದು ಉತ್ತಮ ಹೆಜ್ಜೆ(One step forward, One step stronger, One step better) ಎಂದು ರಿಷಭ್​ ಪಂತ್ ಅವರು ಮೊದಲ ಬಾರಿಗೆ ಊರುಗೋಲಿನ ಸಹಾಯದೊಂದಿಗೆ ನಡೆದಾಡುವ ಫೋಟೊವನ್ನು​ ಟ್ವೀಟ್​ ಮಾಡುವ ಮೂಲಕ ಅಪಘಾತದ ಗಾಯಗಳಿಂದ ಸುಧಾರಿಸಿಕೊಳ್ಳುತ್ತಿರುವುದಾಗಿ ತಮ್ಮ ಹಿತೈಷಿಗಳಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ Rishabh Pant: ಏಷ್ಯಾ ಕಪ್​, ಏಕದಿನ ವಿಶ್ವಕಪ್​ ಟೂರ್ನಿಯಿಂದಲೂ ರಿಷಭ್​ ಪಂತ್​ ಔಟ್​!

2022 ಡಿಸೆಂಬರ್ 30 ರಂದು ಮುಂಜಾನೆ ಪಂತ್​ ಅವರು ದಿಲ್ಲಿಯಿಂದ ಡೆಹ್ರಾಡೂನ್​ಗೆ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರು ಚಲಾಯಿಸುತ್ತಿದ್ದ ಕಾರು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲಾಗಿತ್ತು. ಆದರೆ ರಿಷಭ್‌ ಪಂತ್ ಅವರು ಪವಾಡ ಸದೃಶ್ಯ ಪಾರಾಗಿದ್ದರು.

Exit mobile version