Site icon Vistara News

Rishabh Pant | ಕಾರು ಅಪಘಾತದ ಬಳಿಕ ಮೊದಲ ಬಾರಿಗೆ ಸಂದೇಶ ಕಳುಹಿಸಿದ ರಿಷಭ್​; ಏನಂದರು ಅವರು?

Rishabh pant

ಮುಂಬಯಿ: ಭಾರತ ತಂಡದ ವಿಕೆಟ್​ಕೀಪರ್​ ಬ್ಯಾಟ್ಸ್​ಮನ್​ ರಿಷಭ್​ ಪಂತ್ (Rishabh Pant)​ ಭೀಕರ ಕಾರು ಅಪಘಾತಕ್ಕೆ ಸಿಲುಕಿ ಆಸ್ಟತ್ರೆ ಸೇರಿದ ಬಳಿಕ ಮೊದಲ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಹಾಗೂ ಟ್ವಿಟರ್​ ಖಾತೆಯ ಮೂಲಕ ಆರೋಗ್ಯ ಸುಧಾರಣೆಯ ಶುಭ ಸಂದೇಶವನ್ನು ಅವರು ಕಳುಹಿಸಿದ್ದಾರೆ.

ನಿಮ್ಮೆಲ್ಲರ ಹಾರೈಕೆ ಹಾಗೂ ಬೆಂಬಲಕ್ಕೆ ನಾನು ಋಣಿಯಾಗಿದ್ದೇನೆ. ನಾನು ಒಳಪಟ್ಟಿರುವ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದೆ. ಈಗಾಗಲೇ ಗುಣಮುಖನಾಗುತ್ತಿದ್ದು, ಮುಂದಿನ ಸವಾಲುಗಳನ್ನು ಸ್ವೀಕರಿಸಲು ಆದಷ್ಟು ಬೇಗ ಸಿದ್ಧಗೊಳ್ಳುವೆ. ಬಿಸಿಸಿಐ ಕಾರ್ಯದರ್ಶಿ ಜಯ್​ಶಾ, ಬಿಸಿಸಿಐ ಹಾಗೂ ಸರಕಾರದ ಪ್ರಾಧಿಕಾರಗಳು ನೀಡಿದ ಬೆಂಬಲಕ್ಕೆ ನನ್ನ ಹೃದಯ ತುಂಬಿದ ಧನ್ಯವಾದಗಳು. ನನ್ನ ಬೆಂಬಲಿಗರು, ಸಹ ಆಟಗಾರರು, ವೈದ್ಯರ ತಂಡ ನೀಡಿದ ಬೆಂಬಲ ಹಾಗೂ ಧೈರ್ಯಕ್ಕೆ ಧನ್ಯವಾದಗಳು. ನಿಮ್ಮೆಲ್ಲರನ್ನೂ ಕ್ರಿಕೆಟ್ ಮೈದಾನದಲ್ಲಿ ನೋಡುವಾಸೆ ಎಂದು ರಿಷಭ್​ ಪಂತ್​ ಅವರು ಟ್ವೀಟ್​ ಮಾಡಿದ್ದಾರೆ.

ಇವೆಲ್ಲದ ನಡುವೆ ರಿಷಭ್​ ಪಂತ್​ ಮುಂದಿನ ಹಲವಾರು ಸ್ಪರ್ಧಾತ್ಮಕ ಟೂರ್ನಿಗಳಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಸಿಸಿಐ ನೀಡಿರುವ ಪಂತ್ ವೈದ್ಯಕೀಯ ವರದಿ ಪ್ರಕಾರ ಐಪಿಎಲ್​, ಮುಂದಿನ ಏಕ ದಿನ ವಿಶ್ವ ಕಪ್​ ಸೇರಿದಂತೆ ಎಲ್ಲ ಟೂರ್ನಿಗಳಿಂದ ಅವರು ಹೊರಕ್ಕೆ ಉಳಿಯಲಿದ್ದಾರೆ. ಕ್ರಿಕ್ ಇನ್ಫೋ ಪ್ರಕಾರ ರಿಷಭ್ ಪಂತ್​ ಅವರಿಗೆ ಮೊಣಕಾಲಿನ ಶಸ್ತ್ರ ಚಿಕಿತ್ಸೆ ನಡೆದಿದೆ. ಇನ್ನು ಮುಂದೆ ಅವರಿಗೆ ಹಣೆ ಹಾಗೂ ಸುಟ್ಟು ಹೋಗಿರುವ ಬೆನ್ನಿಗೆ ಪ್ಲಾಸ್ಟಿಕ್​ ಸರ್ಜರಿ ನಡೆಯಬೇಕಾಗಿದೆ. ಅದಕ್ಕಾಗಿ ದೀರ್ಘ ಅವಧಿಯ ತನಕ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ.

ರಿಷಭ್​ ಪಂತ್​ ಅವರು ಕಳೆದ ತಿಂಗಳು 30ರಂದು ದೆಹಲಿಯಿಂದ ತಮ್ಮೂರು ಉತ್ತರಾಖಂಡದ ರೂರ್ಕಿಗೆ ಹೋಗುವಾಗ ಕಾರು ಅವಘಡಕ್ಕೆ ಒಳಗಾಗಿದ್ದರು. ಅವರು ಚಲಾಯಿಸುತ್ತಿದ್ದ ಬೆಂಜ್​ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು. ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಅವರನ್ನು ಬಸ್​ ಚಾಲಕರೊಬ್ಬರು ಉಪಚರಿಸಿದ್ದರು. ಬಳಿಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಡೆಹ್ರಾಡೂನ್​ನ ಮ್ಯಾಕ್ಸ್​ ಅಸ್ಪತ್ರೆಯಲ್ಲಿ ಆರಂಭಿಕ ಹಂತದ ಚಿಕಿತ್ಸೆ ಪಡೆದಿದ್ದರು. ಅಲ್ಲಿಂದ ಅವರನ್ನು ಮುಂಬಯಿಯ ಕೋಕಿಲಾ ಬೆನ್​ ಆಸ್ಪತ್ರೆಗೆ ಏರ್​ಲಿಫ್ಟ್​​ ಮಾಡಲಾಗಿತ್ತು. ಅಲ್ಲಿ ಅವರು ಮಂಡಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಇದನ್ನೂ ಓದಿ | Rishabh Pant | ಹೊತ್ತಿ ಉರಿಯುತ್ತಿದ್ದ ಕಾರಿನ ಬಳಿಯಿಂದ ರಿಷಭ್ ಪಂತ್​ ಪ್ರಾಣ ಉಳಿಸಿದ್ದು ಬಸ್‌ ಡ್ರೈವರ್‌!

Exit mobile version