Site icon Vistara News

Rohit Sharma: ಕೂಲ್​ ಕ್ಯಾಪ್ಟನ್​ ಧೋನಿಯ ದಾಖಲೆ ಸರಿಗಟ್ಟಿದ ಹಿಟ್​ ಮ್ಯಾನ್​ ರೋಹಿತ್​

Rohit Sharma and Dean Elgar pose with the Freedom Trophy

ಕೇಪ್​ ಟೌನ್​: ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಹಾಗೂ ಅಂತಿಮ ಟಸ್ಟ್​ ಪಂದ್ಯವನ್ನು ಗೆದ್ದು ಸರಣಿಯನ್ನು 1-1 ಸಮಬಲದೊಂದಿಗೆ ಡ್ರಾ ಗೊಳಿಸಿದ ನಾಯಕ ರೋಹಿತ್​ ಶರ್ಮಾ ಅವರು ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಯ(MS Dhoni) ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ಭಾರತ ತಂಡ ದಕ್ಷಿಣ ಆಫ್ರಿಕಾದಲ್ಲಿ ಈ ಹಿಂದೆ ಆಡಿದ್ದ 8 ಟೆಸ್ಟ್​ ಸರಣಿಗಳಲ್ಲಿ 7ರಲ್ಲಿ ಸೋತಿತ್ತು. 2010-11 ರಲ್ಲಿ ಏಕೈಕ ಬಾರಿ ಮಹೇಂದ್ರ ಸಿಂಗ್​​ ಧೋನಿ ಸಾರಥ್ಯದಲ್ಲಿ ಆಡಿದ್ದ ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲದ ಗೌರವ ಕಂಡಿತ್ತು. ಇದೀಗ ಆ ಸಾಧನೆಯನ್ನು ರೋಹಿತ್​ ಶರ್ಮ ಸರಿಗಟ್ಟಿದ್ದಾರೆ. ಈ ಮೂಲಕ ರೋಹಿತ್​ ಟೆಸ್ಟ್​ ಸರಣಿ ಸೋಲಿಲ್ಲದೆ ದಕ್ಷಿಣ ಆಫ್ರಿಕಾದಿಂದ ನಿರ್ಗಮಿಸಿದ ಭಾರತದ 2ನೇ ನಾಯಕ ಎನಿಸಿದ್ದಾರೆ. 9ನೇ ಸರಣಿಯಲ್ಲಿ ಭಾರತ ಸಮಬಲ ಸಾಧಿಸಿದ್ದು ನಿಜಕ್ಕೂ ದೊಡ್ಡ ಸಾಹಸ. ಅದು ಕೂಡ ಗೆಲುವು ಕಾಣದ ಕೇಪ್​ ಟೌನ್​ ಮೈದಾನದಲ್ಲಿ ಸಾಧಿಸಿದ ಈ ಗೆಲುವು ಭಾರತದ ತಂಡದ ಸ್ಮರಣೀಯ ನೆನಪುಗಳ ಇತಿಹಾಸದ ಪುಟ ಸೇರಲಿದೆ.

ಕೇಪ್​ ಟೌನ್​ನಲ್ಲಿ ಮೊದಲ ಗೆಲುವು


ಪಂದ್ಯದಲ್ಲಿ 7 ವಿಕೆಟ್​ಗಳ ಗೆಲುವು ಸಾಧಿಸಿದ ಭಾರತ ತಂಡ ನೂತನ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದಿದೆ. ಕೇಪ್​ ಟೌನ್​ನಲ್ಲಿ ಟೆಸ್ಟ್​ ಪಂದ್ಯ ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹಿರಿಮೆಗೆ ಪಾತ್ರವಾಗಿದೆ. ಕೇಪ್​ ಟೌನ್​ನಲ್ಲಿ ಭಾರತವನ್ನು ಗೆಲ್ಲಿಸಿದ ಮೊದಲ ನಾಯಕ ಎನ್ನುವ ಕೀರ್ತಿಯೂ ರೋಹಿತ್​ ಪಾಲಾಗಿದೆ.

ಇಲ್ಲಿನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಬುಧವಾರ ಆರಂಭಗೊಂಡ ಈ ಟೆಸ್ಟ್​ ಪಂದ್ಯ ಕೇವಲ ಎರಡನೇ ದಿನಕ್ಕೆ ಮುಕ್ತಾಯ ಕಂಡಿತು. ಗುರುವಾರ ಮೂರು ವಿಕೆಟ್ ನಷ್ಟಕ್ಕೆ 62 ರನ್ ಮತ್ತು 36 ಹಿನ್ನಡೆಯೊಂದಿಗೆ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ಐಡೆನ್​ ಮಾರ್ಕ್ರಮ್​ ಅವರ ಶತಕದ ಸಾಹಸದಿಂದ 176 ರನ್​ಗೆ ಆಲೌಟ್​ ಆಯಿತು. 79 ರನ್ ಗೆಲುವಿನ ಗುರಿ ಪಡೆದ ಭಾರತ 3 ವಿಕೆಟ್​ ನಷ್ಟಕ್ಕೆ 80 ರನ್​ ಬಾರಿಸಿ 7 ವಿಕೆಟ್​ ಗೆಲುವು ಸಾಧಿಸಿತು. ಈ ಮೂಲಕ ಸರಣಿಯನ್ನು ಡ್ರಾದೊಂದಿಗೆ ಮುಕ್ತಾಯಗೊಳಿಸಿತು. ಮೊದಲ ಪಂದ್ಯದಲ್ಲಿ ಇನಿಂಗ್ಸ್​ ಸೋಲಿಗೆ ತುತ್ತಾಗಿತ್ತು.

ಇದನ್ನೂ ಓದಿ IND vs SA 2nd Test: ಪಂದ್ಯ ಗೆದ್ದು ನೂತನ ದಾಖಲೆ ಬರೆದ ಭಾರತ ತಂಡ

79 ರನ್​ ಚೇಸಿಂಗ್​ ವೇಳೆ ಭಾರತ ಪರ ಯಶಸ್ವಿ ಜೈಸ್ವಾಲ್​ ಬಿರುಸಿನ ಬ್ಯಾಟಿಂಗ್ ನಡೆಸಿ 6 ಬೌಂಡರಿ ನೆರವಿನಿಂದ 28 ರನ್​ ಬಾರಿಸಿದರು. ಶುಭಮನ್​ ಗಿಲ್​ 10, ವಿರಾಟ್​ ಕೊಹ್ಲಿ 12 ರನ್​ಗೆ ವಿಕೆಟ್​ ಕೈಚೆಲ್ಲಿದರು. 75 ರನ್​ಗೆ ಮೂರು ವಿಕೆಟ್​ ಬಿದ್ದು ಗೆಲುವಿಗೆ ಕೇವಲ 4 ರನ್​ ಬೇಕಿದ್ದರೂ ಒಂದು ಕ್ಷಣ ಭಾರತೀಯ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಯಿತು. ಏಕೆಂದರೆ ಮೊದಲ ಇನಿಂಗ್ಸ್​ನಲ್ಲಿ ಭಾರತ 153 ರನ್​ಗೆ 4 ವಿಕೆಟ್​ ಬಿದ್ದ ಬಳಿಕ ಒಂದೂ ರನ್​ ಮಾಡದೆ 6 ವಿಕೆಟ್​ ಕಳೆದುಕೊಂಡು ಆಲೌಟ್​ ಆಗಿತ್ತು. ಹೀಗಾಗಿ ಅಭಿಮಾನಿಗಳಿಗೆ ಆತಂಕ ಉಂಟಾಗಿತ್ತು. ಆದರೆ ನಾಲ್ಕನೇ ವಿಕೆಟ್​ಗೆ ಬಂದ ಶ್ರೇಯಸ್​ ಅಯ್ಯರ್​ ಬೌಂಡರಿ ಬಾರಿಸಿ ಭಾರತದ ಗೆಲುವನ್ನು ಸಾರಿದರು. ನಾಯಕ ರೋಹಿತ್​ 17 ರನ್​ ಬಾರಿಸಿ ಅಜೇಯಾಗಿ ಉಳಿದರು.

ಭಾರತದ ಪರ ಬಿಗು ದಾಳಿ ಸಂಘಟಿಸಿದ ಜಸ್​ಪ್ರೀತ್​ ಬುಮ್ರಾ 6, ಮುಖೇಶ್ ಕುಮಾರ್ 2, ಸಿರಾಜ್ ಮತ್ತು ಪ್ರಸಿದ್ಧ್​ ಕೃಷ್ಣ ತಲಾ ಒಂದು ವಿಕೆಟ್ ಪಡೆದರು. ಸಿರಾಜ್​ ಮೊದಲ ಇನಿಂಗ್ಸ್​ನಲ್ಲಿ 15 ರನ್​ಗೆ 6 ವಿಕೆಟ್​ ಕಿತ್ತು ಮಿಂಚಿದ್ದರು.

Exit mobile version