Site icon Vistara News

ಸಚಿನ್ ಪ್ರತಿಮೆ ಲೋಕಾರ್ಪಣೆ; ಸ್ಟ್ರೋಕ್‌ ಮಾಡುವ ಭಂಗಿಯೇ ಮನಮೋಹಕ

sachin tendulkar statue

ಮುಂಬಯಿ: ಕ್ರಿಕೆಟ್​ ದೇವರು, ಮಾಸ್ಟರ್‌ ಬ್ಲಾಸ್ಟರ್‌ ಹೀಗೆ ಹಲವು ಹೆಸರಿನಿಂದ ಕರೆಸಿಕೊಳ್ಳುವ ಟೀಮ್​ ಇಂಡಿಯಾದ ಮಾಜಿ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್(sachin tendulkar)​ ಅವರ ಪ್ರತಿಮೆ ಇಂದು ಅವರ ತವರಿನ ವಾಂಖೆಡೆ ಸ್ಟೇಡಿಯಂನಲ್ಲಿ ಲೋಕಾರ್ಪಣೆ(sachin tendulkar statue) ಮಾಡಲಾಯಿತು. ಸ್ಟ್ರೋಕ್‌ ಮಾಡುವ ಭಂಗಿಯಲ್ಲಿರುವ ಈ ಪ್ರತಿಮೆ ನೋಡುಗರ ಮನಕ್ಕೆ ಮುದ ನೀಡುವಂತಿದೆ.

ಪ್ರತಿಮೆ ಲೋಕಾರ್ಪಣಾ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್‌ ಸೇರಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ಶರದ್‌ ಪವಾರ್‌, ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ, ಖಜಾಂಚಿ ಆಶಿಶ್ ಶೆಲಾರ್, ಮುಂಬೈ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅಮೋಲ್ ಕಾಳೆ, ಕಾರ್ಯದರ್ಶಿ ಅಜಿಂಕ್ಯ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು. ದಕ್ಷಿಣ ಆಫ್ರಿಕಾ ಮತ್ತು ಕಿವೀಸ್​ ನಡುವಣ ಪಂದ್ಯದ ಮೊದಲ ಇನಿಂಗ್ಸ್ ಮುಕ್ತಾಯಗೊಂಡ ತಕ್ಷಣ ಪ್ರತಿಮೆ ಲೋಕಾರ್ಪಣೆ ಸಮಾರಂಭ ಮಾಡಲಾಯಿತು.

10 ವರ್ಷಗಳ ಹಿಂದೆ ಕೊನೆಯ ಪಂದ್ಯ ಆಡಿದ್ದ ಸಚಿನ್​

2013ರ ನವೆಂಬರ್‌ನಲ್ಲಿ ವಿಂಡೀಸ್​ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಸಚಿನ್‌ ಅವರು ತವರಿನ ವಾಂಖೆಡೆ ಸ್ಟೇಡಿಯಂನಲ್ಲಿ ಕೊನೆಯ ಬಾರಿ ಪಂದ್ಯಗಳನ್ನು ಆಡಿದ್ದರು. ಇದೀಗ 10 ವರ್ಷದ ಬಳಿಕ ಅವರ ಪ್ರತಿಮೆ ಇದೇ ಸ್ಟೇಡಿಯಂನಲ್ಲಿ ನಿರ್ಮಾಣವಾಗಿದೆ. ಅಹಮದ್‌ ನಗರದ ಕಲಾವಿದ ಪ್ರಮೋದ್‌ ಕಾಂಬ್ಳೆ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ IND vs SL: ಭಾರತ-ಲಂಕಾ ನಡುವಣ ವಿಶ್ವಕಪ್​ ದಾಖಲೆಯೇ ಅತ್ಯಂತ ರೋಚಕ

ಫೆಬ್ರವರಿಯಲ್ಲಿ ಸಚಿನ್​ ತೆಂಡೂಲ್ಕರ್​ ಪ್ರತಿಮೆ ನಿರ್ಮಾಣದ ಬಗ್ಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ಅಧ್ಯಕ್ಷ ಅಮೋಲ್ ಕಾಳೆ ಅಧಿಕೃತ ಮಾಹಿತಿ ನೀಡಿದ್ದರು. “ಟೀಮ್​ ಇಂಡಿಯಾ ಮತ್ತು ಮುಂಬೈ ಕ್ರಿಕೆಟ್‌ಗೆ ಸಚಿನ್ ತೆಂಡೂಲ್ಕರ್ ಅವರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ತೆಂಡೂಲ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಿಲಾಗಿದೆ. ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಭಾರತದ ಆತಿಥ್ಯದಲ್ಲಿ ನಡೆಯುವ ವಿಶ್ವಕಪ್​ ಟೂರ್ನಿಯ ಸಮಯದಲ್ಲಿ ಸಚಿನ್​ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಗುತ್ತದೆ” ಎಂದು ಹೇಳಿದ್ದರು. ಅದರಂತೆ ನವೆಂಬರ್​ 1 ರಂದು ಪ್ರತಿಮೆ ಅನಾವರಣಗೊಂಡಿದೆ.

ಹೆಚ್ಚಿನ ನೆನಪುಗಳು ಈ ಕ್ರೀಡಾಂಗಣದಲ್ಲಿದೆ

ಅಂದು ತಮ್ಮ ಪ್ರತಿಮೆ ಸ್ಥಾಪನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಚಿನ್​ ತೆಂಡೂಲ್ಕರ್​ ಅವರು, “ನನ್ನ ವೃತ್ತಿ ಜೀವನ ಈ ಮೈದಾನದಿಂದ ಪ್ರಾರಂಭವಾಗಿತ್ತು. ನನ್ನ ಜೀವನದ ಅತಿದೊಡ್ಡ ಕ್ರಿಕೆಟ್ ಕ್ಷಣವೆಂದರೆ 2011ರಲ್ಲಿ ನಾವು ವಿಶ್ವ ಕಪ್ ನಲ್ಲಿ ಗೆಲುವು ಸಾಧಿಸಿದ್ದು. ಹೆಚ್ಚಿನ ನನ್ನ ನೆನಪುಗಳು ಈ ಕ್ರೀಡಾಂಗಣದಲ್ಲಿದೆ” ಎಂದಿದ್ದರು. 2012ರಲ್ಲಿ ಅವರು ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಸಾರಸ್ಯವೆಂದರೆ ಸಚಿನ್​ ತಮ್ಮ ಏಕದಿನ ಕ್ರಿಕೆಟ್​ ಪದಾರ್ಪಣೆ ಮಾಡಿದ್ದು ಮತ್ತು ವಿದಾಯ ಹೇಳಿದ್ದು ಪಾಕಿಸ್ತಾನ ತಂಡದ ವಿರುದ್ಧ.

ಕ್ರಿಕೆಟ್​ ಆಟಗಾರರಿಗೆ ಸ್ಫೂರ್ತಿ

24 ವರ್ಷಗಳ ಕ್ರಿಕೆಟ್‌ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್‌, 201 ವಿಕೆಟ್‌, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್​ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್​ ಎಲ್ಲ ಕ್ರಿಕೆಟ್​ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.

Exit mobile version