Site icon Vistara News

Mohammed Shami: ಅರ್ಜುನ ಪ್ರಶಸ್ತಿಗೆ ಶಮಿ, ಖೇಲ್ ರತ್ನಕ್ಕೆ ಚಿರಾಗ್-ಸಾತ್ವಿಕ್ ಹೆಸರು ಶಿಫಾರಸು!

Mohammed Shami

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್‌ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ದೇಶದ ಶತಕೋಟಿ ಜನರ ಮನಗೆದ್ದಿದ್ದ ಮೊಹಮ್ಮದ್‌ ಶಮಿ(Mohammed Shami) ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಹಾಗೂ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಚಿರಾಗ್ ಶೆಟ್ಟಿ(Chirag Shetty) ಮತ್ತು ಸಾತ್ವಿಕ್ ಸಾಯಿರಾಜ್(Satwiksairaj) ಹೆಸರನ್ನು ಶಿಫಾರಸು ಮಾಡಲಾಗಿದೆ.

ಸಚಿವಾಲಯದ ಮೂಲಗಳ ಪ್ರಕಾರ, ಮೊಹಮ್ಮದ್​ ಶಮಿ ಅವರ ಹೆಸರನ್ನು ಸೇರಿಸಲು ಬಿಸಿಸಿಐ ಕ್ರೀಡಾ ಸಚಿವಾಲಯಕ್ಕೆ ವಿಶೇಷ ವಿನಂತಿಯನ್ನು ಮಾಡಿದೆ. ಏಕೆಂದರೆ ಅವರು ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವದ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಬಿಸಿಸಿಐ ವಿಶೇಷ ಮನವಿ ಸಲ್ಲಿಸಿ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.

ಅಮೋಘ ಸಾಧನೆ

ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ಕೇವಲ 7 ಪಂದ್ಯಗಳನ್ನು ಆಡಿ 24 ವಿಕೆಟ್‌ಗಳನ್ನು ಕಬಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ ಎನಿಸಿಕೊಂಡಿದ್ದರು. ಎರಡು ಬಾರಿ ಐದು ವಿಕೆಟ್‌ಗಳು ಮತ್ತು ಒಂದು ಬಾರಿ ಏಳು ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು. ಶಮಿಯ ಘಾತಕ ಬೌಲಿಂಗ್​ ಮುಂದೆ ಎದುರಾಳಿ ತಂಡದ ಬ್ಯಾಟರ್​ಗಳು ರನ್​ ಗಳಿಸಲು ಪರದಾಟ ನಡೆಸಿದ್ದರು.​

ಶಮಿಯ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ವಿಶ್ವಕಪ್​ ಫೈನಲ್​ ಪಂದ್ಯದ ಬಳಿಕ ಡ್ರೆಸ್ಸಿಂಗ್​ ರೂಮ್​ಗೆ ಬಂದಿದ್ದ ಮೋದಿ, ಶಮಿಯನ್ನು ವಿಶೇಷವಾಗಿ ಅಭಿನಂದಿಸಿದ್ದರು. ಅವರನ್ನು ಅಪ್ಪಿಕೊಂಡು ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ

ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (ಬ್ಯಾಡ್ಮಿಂಟನ್).

ಅರ್ಜುನ ಪ್ರಶಸ್ತಿಯ ಪಟ್ಟಿ

ಮೊಹಮ್ಮದ್ ಶಮಿ (ಕ್ರಿಕೆಟ್), ಅಜಯ್ ರೆಡ್ಡಿ (ಅಂಧ ಕ್ರಿಕೆಟ್) ಓಜಸ್ ಪ್ರವೀಣ್ ಡಿಯೋಟಾಲೆ, ಅದಿತಿ ಗೋಪಿಚಂದ್ ಸ್ವಾಮಿ (ಆರ್ಚರಿ), ಶೀತಲ್ ದೇವಿ (ಪ್ಯಾರಾ ಆರ್ಚರಿ), ಪಾರುಲ್ ಚೌಧರಿ ಮತ್ತು ಎಂ ಶ್ರೀಶಂಕರ್ (ಅಥ್ಲೆಟಿಕ್ಸ್), ಮೊಹಮ್ಮದ್ ಹುಸಾಮುದ್ದೀನ್ (ಬಾಕ್ಸಿಂಗ್), ಆರ್ ವೈಶಾಲಿ (ಚೆಸ್), ದಿವ್ಯಾಕೃತಿ ಸಿಂಗ್ ಮತ್ತು ಅನುಷ್ ಅಗರ್ವಾಲಾ (ಈಕ್ವೆಸ್ಟ್ರಿಯನ್), ದೀಕ್ಷಾ ದಾಗರ್ (ಗಾಲ್ಫ್), ಕ್ರಿಶನ್ ಬಹದ್ದೂರ್ ಪಾಠಕ್ ಮತ್ತು ಸುಶೀಲಾ ಚಾನು (ಹಾಕಿ), ಪಿಂಕಿ (ಲಾನ್ ಬಾಲ್), ಐಶ್ವರಿ ಪ್ರತಾಪ್ ಸಿಂಗ್ ತೋಮರ್ (ಶೂಟಿಂಗ್), ಆಂಟಿಮ್ ಪಂಘಲ್ (ಕುಸ್ತಿ), ಐಹಿಕಾ ಮುಖರ್ಜಿ (ಟೇಬಲ್ ಟೆನ್ನಿಸ್).

ಇದನ್ನೂ ಓದಿ IND vs SA 3rd T20: ನಾಳೆ ನಡೆಯುವ ಅಂತಿಮ ಟಿ20 ಪಂದ್ಯದ ಹವಾಮಾನ ವರದಿ ಹೇಗಿದೆ?

ಧ್ಯಾನ್ ಚಂದ್ ಜೀವಮಾನ ಪ್ರಶಸ್ತಿ

ಕವಿತಾ (ಕಬಡ್ಡಿ), ಮಂಜುಷಾ ಕನ್ವರ್ (ಬ್ಯಾಡ್ಮಿಂಟನ್) ವಿನೀತ್ ಕುಮಾರ್ ಶರ್ಮಾ (ಹಾಕಿ).

ದ್ರೋಣಾಚಾರ್ಯ ಪ್ರಶಸ್ತಿ

ಗಣೇಶ್ ಪ್ರಭಾಕರನ್ (ಮಲ್ಲಖಾಂಬ್), ಮಹಾವೀರ್ ಸೈನಿ (ಪ್ಯಾರಾ ಅಥ್ಲೆಟಿಕ್ಸ್), ಲಲಿತ್ ಕುಮಾರ್ (ಕುಸ್ತಿ), ಆರ್ ಬಿ ರಮೇಶ್ (ಚೆಸ್), ಶಿವೇಂದ್ರ ಸಿಂಗ್ (ಹಾಕಿ).

Exit mobile version