Site icon Vistara News

IPL 2023 : ಆರ್​ಸಿಬಿಗೆ ಆಘಾತ, ತಂಡದ ಸ್ಟಾರ್​ ಬ್ಯಾಟರ್​ ಟೂರ್ನಿಯಿಂದ ಔಟ್​

https://twitter.com/RCBTweets/status/1643193490476785665?s=20

#image_title

ಬೆಂಗಳೂರು: ಮುಂಬಯಿ ಇಂಡಿಯನ್ಸ್​ ವಿರುದ್ಧ 8 ವಿಕೆಟ್​ ಭರ್ಜರಿ ವಿಜಯ ಸಾಧಿಸಿದ ಹುಮ್ಮಸ್ಸಿನಲ್ಲಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಶಾಕಿಂಗ್​ ನ್ಯೂಸ್​ ಒಂದು ಎದುರಾಗಿದೆ. ತಂಡದ ಪ್ರಮುಖ ಬ್ಯಾಟರ್​ ಹಾಗೂ ಕಳೆದ ಆವೃತ್ತಿಯಲ್ಲಿ ಶತಕ ಬಾರಿಸಿ ಮಿಂಚಿದ್ದ ರಜತ್​ ಪಾಟೀದಾರ್​ ಗಾಯದ ಸಮಸ್ಯೆಯಿಂದ ಗುಣಮುಖರಾಗದ ಕಾರಣ ಐಪಿಎಲ್​ ಟೂರ್ನಿಯಿಂದ (IPL 2023) ಸಂಪೂರ್ಣವಾಗಿ ಹೊರಕ್ಕೆ ನಡೆದಿದ್ದಾರೆ. ಈ ಮೂಲಕ ಆರ್​ಸಿಬಿಯ ಗಾಯದ ಪಟ್ಟಿಗೆ ಇನ್ನೊಬ್ಬ ಆಟಗಾರ ಸೇರ್ಪಡೆಗೊಂಡಿದ್ದಾರೆ.

ರಜತ್​ ಪಾಟೀದಾರ್​ ಆರ್​ಸಿಬಿಯ ಮಧ್ಯಮ ಕ್ರಮಾಂಕದ ಬ್ಯಾಟ್ ಬಲ ಎನಿಸಿಕೊಂಡಿದ್ದರು. ಆದರೆ, ಟೂರ್ನಿ ಆರಂಭಕ್ಕೆ ಮೊದಲೇ ಪಾದದ ನೋವಿಗೆ ಒಳಗಾಗಿದ್ದ ಅವರು ಆರಂಭಿಕ ಪಂದ್ಯದಲ್ಲಿ ಪಾಲ್ಗೊಂಡಿರಲಿಲ್ಲ. ಇದೀಗ ಪೂರ್ತಿ ಟೂರ್ನಿಯಿಂದ ಹೊರಕ್ಕೆ ನಡೆಯುವಂತಾಗಿದೆ. ಆರ್​ಸಿಬಿ ಫ್ರಾಂಚೈಸಿ ಮಂಗಳವಾರ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಆದರೆ, ಅವರ ಜಾಗಕ್ಕೆ ಯಾವ ಆಟಗಾರ ಆಯ್ಕೆಯಾಗುತ್ತಾರೆ ಎಂಬುದನ್ನು ತಿಳಿಸಿಲ್ಲ.

ದುರದೃಷ್ಟವಶಾತ್​ ರಜತ್​ಪಾಟೀದಾದ್​ ಐಪಿಎಲ್​ 2023ನೇ ಆವೃತ್ತಿಯಿಂದ ಹೊರಕ್ಕೆ ಉಳಿದಿದ್ದಾರೆ. ಅವರಿಗೆ ಆಗಿರುವ ಪಾದದ ನೋವು ಇನ್ನೂ ಕಡಿಮೆಯಾಗಿಲ್ಲ. ಅವರು ವೇಗವಾಗಿ ಗುಣಮುಖರಾಗಲಿ ಎಂದು ನಾನು ಬಯಸುತ್ತೇವೆ ಹಾಗೂ ಈ ಪ್ರಕ್ರಿಯೆಯಲ್ಲಿ ನಮ್ಮ ಬೆಂಬಲ ಅವರಿಗೆ ಇದೆ. ಕೋಚ್​ಗಳು ಹಾಗೂ ಮ್ಯಾನೇಜ್ಮೆಂಟ್​ ಅವರ ಜಾಗಕ್ಕೆ ಇನ್ನೊಬ್ಬ ಆಟಗಾರನ್ನು ಹೆಸರಿಸದೇ ಇರಲು ನಿರ್ಧರಿಸಿದ್ದೇವೆ, ಎಂದು ಆರ್​ಸಿಬಿ ಹೇಳಿಕೆ ಪ್ರಕಟಿಸಿದೆ.

ಈ ಹಿಂದೆ ರಜತ್​ಪಾಟೀದಾರ್​ ಐಪಿಎಲ್​ನ ಅರ್ಧ ಪಂದ್ಯಗಳು ಮುಕ್ತಾಯಗೊಂಡ ಬಳಿಕ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅವರು ಸಂಪೂರ್ಣ ಟೂರ್ನಿಯಿಂದ ಹೊರಕ್ಕುಳಿದ ಸುದ್ದಿ ಬಂದಿದೆ. ರಜತ್​ ಪಾಟೀದಾರ್​ ಕಳೆದ ಆವೃತ್ತಿಯ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಆರ್​ಸಿಬಿ ಫ್ರಾಂಚೈಸಿ ಅವರನ್ನು ಈ ಬಾರಿಯೂ ಉಳಿಸಿಕೊಂಡಿತ್ತು.

ಮಧ್ಯಪ್ರದೇಶದ 29 ವರ್ಷದ ಆಟಗಾರ 2021ರಲ್ಲಿ ಚೆನ್ನೈನಲ್ಲಿ ನಡೆದ ಮುಂಬಯಿ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದರು. ಒಟ್ಟು 12 ಪಂದ್ಯಗಳಲ್ಲಿ ಪಾಳ್ಗೊಂಡಿರುವ ಸರಾಸರಿ 40ರಂತೆ 404 ರನ್​ ಬಾರಿಸಿದ್ದಾರೆ.

ರೀಸ್​ ಟೋಪ್ಲೆಯ ಗಾಯದ ಕುರಿತು ಮಾಹಿತಿಯಿಲ್ಲ

ಆರ್​ಸಿಬಿಯ ಮತ್ತೊಬ್ಬ ಪ್ರಮುಖ ಬೌಲರ್​ ಟೂರ್ನಿಯಿಂದ ಹೊರಕ್ಕೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಬೆಂಗಳೂರಿನಲ್ಲಿ ಭಾನುವಾರ ನಡೆದ ಮುಂಬಯಿ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್​ನ ಬೌಲರ್ ರೀಸ್​ ಟೋಪ್ಲೆ ಗಾಯಗೊಂಡಿದ್ದಾರೆ.

ಮುಂಬಯಿ ವಿರುದ್ಧದ ಪಂದ್ಯದಲ್ಲಿ ಟೋಪ್ಲೆ ಫೀಲ್ಡಿಂಗ್ ಮಾಡುವಾಗ ನೆಲಕ್ಕೆ ಬಿದ್ದಿದ್ದರು. ಪರಿಣಾಮ ಅವರ ಭುಜದ ಮೂಳೆ ಕಳಚಿಕೊಂಡಿದೆ. ಹೀಗಾಗಿ ಅವರು ಮುಂದಿನ ಪಂದ್ಯಗಳಿಗೆ ಲಭ್ಯರಾಗುವರೇ ಎಂಬುದು ಗೊತ್ತಿಲ್ಲ. ಆರ್​ಸಿಬಿ ಹೆಡ್​ಕೋಚ್​ ಮೈಕ್​ ಹೆಸ್ಸಾನ್​ ಪ್ರಕಾರ ರೀಸ್ ಟೋಪ್ಲೆ ಅವರು ಸುಧಾರಿಸಿಕೊಂಡಿದ್ದಾರೆ. ಆದರೆ, ಅವರ ಗಾಯದ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ಅವರಿಗಿಲ್ಲ.

ದುರದೃಷ್ಟವಶಾತ್​ ಫೀಲ್ಡಿಂಗ್ ಮಾಡುವಾಗ ರೀಸ್ ಟೋಪ್ಲೆಯ ಮಂಡಿ ನೆಲಕ್ಕೆ ಬಡಿಯಿತು. ಸಮತೋಲನ ತಪ್ಪಿ ಅವರು ನೆಲಕ್ಕೆ ಬಿದ್ದರು. ಹೀಗಾಗಿ ಭುಜದ ಮೂಳೆ ಕಳಚಿಕೊಂಡಿದೆ. ತಕ್ಷಣ ವೈದ್ಯಕೀಯ ತಂಡ ಅವರ ಭುಜದ ಮೂಳೆಯನ್ನು ಸ್ವಸ್ಥಾನದಲ್ಲಿ ನಿಲ್ಲಿಸಿದ್ದಾರೆ ಎಂದು ಹೆಸ್ಸಾನ್ ಅವರು ಆರ್​​ಸಿಬಿಯ ಯೂಟ್ಯೂಬ್​ ಚಾನೆಲ್​ನಲ್ಲಿ ಮಾಹಿತಿ ನೀಡಿದ್ದಾರೆ.

ರೀಸ್ ಟೋಪ್ಲೆ ಅವರನ್ನು ಸ್ಕ್ಯಾನ್​ಗೆ ಒಳಪಡಿಸಲಾಗಿದೆ. ಆರಂಭಿಕ ವರದಿ ಪ್ರಕಾರ ಅವರ ಗಾಯದ ಸಮಸ್ಯೆ ಗಂಭೀರವಾಗಿಲ್ಲ. ಹೀಗಾಗಿ ತಂಡದ ಜತೆಯೇ ಇದ್ದಾರೆ. ಮುಂದಿನ ವರದಿಯು ಯಾವ ರೀತಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಅವರು ಹೇಳಿದ್ದಾರೆ.

Exit mobile version