Site icon Vistara News

IPL 2023 : ಐಪಿಎಲ್​ನಿಂದ ಶ್ರೇಯಸ್​ ಅಯ್ಯರ್​ ಔಟ್​, ಡಬ್ಲ್ಯುಟಿಸಿ ಫೈನಲ್​ ಪಂದ್ಯಕ್ಕೂ ಅಲಭ್ಯ

shreyas-iyer-out-of-ipl-unavailable-for-wtc-final

ನವ ದೆಹಲಿ: ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ ಶ್ರೇಯಸ್​ ಅಯ್ಯರ್​ ಬೆನ್ನು ನೋವಿನ ಸಮಸ್ಯೆಯಿಂದ ಇನ್ನೂ ಗುಣಮುಖರಾಗಿಲ್ಲ. ಹೀಗಾಗಿ ಅವರು ಸರ್ಜರಿಗೆ ಒಳಗಾಗುವುದು ಅನಿವಾರ್ಯವಾಗಿದೆ. ಇದರಿಂದಾಗಿ ಅವರು ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ (IPL 2023) ಆಡುವುದು ಸಾಧ್ಯವಿಲ್ಲ. ಇದರಿಂದಾಗಿ ಕೋಲ್ಕೊತಾ ನೈಟ್​ ರೈಡರ್ಸ್​ ತಂಡಕ್ಕೆ ದೊಡ್ಡ ಮಟ್ಟದ ಹಿನ್ನಡೆ ಉಂಟಾಗಿದೆ. ಶ್ರೇಯಸ್ ಅಯ್ಯರ್​ ಕೋಲ್ಕೊತಾ ತಂಡದ ನಾಯಕರಾಗಿದ್ದರು. ಆರಂಭದಲ್ಲಿ ಅವರು ಅಲಭ್ಯರಾಗುತ್ತಿದ್ದಾರೆ ಎಂದು ತಿಳಿದ ತಕ್ಷಣ ನಿತೀಶ್​ ರಾಣಾಗೆ ನಾಯಕತ್ವ ನೀಡಲಾಗಿತ್ತು. ಇದೀಗ ನಿತೀಶ್​ ಅವರನ್ನು ಮುಂದುವರಿಸುವ ಅಥವಾ ಬೇರೆ ನಾಯಕರನ್ನು ನೇಮಕ ಮಾಡುವ ಅನಿವಾರ್ಯತೆ ಆ ಫ್ರಾಂಚೈಸಿಗೆ ಎದುರಾಗಿದೆ. ಇದೇ ವೇಳೆ ಶ್ರೇಯಸ್​ ಜೂನ್​ 7ರಿಂದ ಇಂಗ್ಲೆಂಡ್​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಫೈನಲ್​ ಪಂದ್ಯದಲ್ಲೂ ಪಾಲ್ಗೊಳ್ಳುವುದಿಲ್ಲ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಭಾರತ ತಂಡಕ್ಕೂ ಹಿನ್ನಡೆ ಉಂಟಾಗಿದೆ.

ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್​ ಸರಣಿಯ ನಾಲ್ಕನೇ ಪಂದ್ಯದ ವೇಳೆ ಶ್ರೇಯಸ್​ ಅಯ್ಯರ್ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಿದ್ದರು. ಆದರೂ ಸುಧಾರಿಸಿಕೊಳ್ಳದ ಕಾರಣ ಶಸ್ತ್ರ ಚಿಕಿತ್ಸೆ ಮೊರೆ ಹೋಗಲು ನಿರ್ಧರಿಸಿದ್ದಾರೆ. ಅದರಿಂದ ಸುಧಾರಿಸಿಕೊಳ್ಳುವುದಕ್ಕೆ ಅವರಿಗೆ ಮೂರು ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಅವರು ಐಪಿಎಲ್​ನಲ್ಲಿ ಅಡದೇ ಇರಲು ನಿರ್ಧರಿಸಿದ್ದಾರೆ. ಮೂರು ತಿಂಗಳ ಒಳಗೆ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ನಡೆಯಲಿರುವ ಕಾರಣ ಅದರಲ್ಲೂ ಪಾಲ್ಗೊಳ್ಳುವುದು ಸಾಧ್ಯವಿಲ್ಲ.

ಶ್ರೇಯಸ್ ಅಯ್ಯರ್​ ಅವರ ಬೆನ್ನಿನ ಕೆಳಭಾಗದಲ್ಲಿ ಊತ ಕಾಣಿಸಿಕೊಂಡಿತ್ತು. ಹೀಗಾಗಿ ಪುನಶ್ಚೇತನಕ್ಕೆ ಒಳಗಾಗಿದ್ದರು. ಆದರೆ, ಐಪಿಎಲ್​ ಅರಂಭವಾಗುವ ತನಕ ಸರ್ಜರಿಯ ನಿರ್ಧಾರದಿಂದ ದೂರ ಸರಿದಿದ್ದರು. ಒಂದು ವೇಳೆ ಸಮಸ್ಯೆಯಿಂದ ಮುಕ್ತಿ ಸಿಕ್ಕಿದರೆ ಐಪಿಎಲ್​ ಆಡುವುದು ಅವರ ಉದ್ದೇಶವಾಗಿತ್ತು. ಆದರೆ, ಇನ್ನೂ ಊತ ಹಾಗೂ ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಸರ್ಜರಿಗೆ ಒಳಗಾಗಲು ನಿರ್ಧರಿಸಿದ್ದಾರೆ ಎಂದು ಕ್ರಿಕ್​ ಇನ್ಫೋ ವರದಿ ಮಾಡಿದೆ.

ಆರ್​ಸಿಬಿಯಿಂದ ರಜತ್​ ಪಾಟೀದಾರ್ ಔಟ್​

ಇದಕ್ಕಿಂದ ಮೊದಲು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಶಾಕಿಂಗ್​ ನ್ಯೂಸ್​ ಒಂದು ಎದುರಾಗಿತ್ತು. ತಂಡದ ಪ್ರಮುಖ ಬ್ಯಾಟರ್​ ಹಾಗೂ ಕಳೆದ ಆವೃತ್ತಿಯಲ್ಲಿ ಶತಕ ಬಾರಿಸಿ ಮಿಂಚಿದ್ದ ರಜತ್​ ಪಾಟೀದಾರ್​ ಗಾಯದ ಸಮಸ್ಯೆಯಿಂದ ಗುಣಮುಖರಾಗದ ಕಾರಣ ಐಪಿಎಲ್​ ಟೂರ್ನಿಯಿಂದ (IPL 2023) ಸಂಪೂರ್ಣವಾಗಿ ಹೊರಕ್ಕೆ ನಡೆದಿದ್ದಾರೆ. ಈ ಮೂಲಕ ಆರ್​ಸಿಬಿಯ ಗಾಯದ ಪಟ್ಟಿಗೆ ಇನ್ನೊಬ್ಬ ಆಟಗಾರ ಸೇರ್ಪಡೆಗೊಂಡಿದ್ದಾರೆ.

ರಜತ್​ ಪಾಟೀದಾರ್​ ಆರ್​ಸಿಬಿಯ ಮಧ್ಯಮ ಕ್ರಮಾಂಕದ ಬ್ಯಾಟ್ ಬಲ ಎನಿಸಿಕೊಂಡಿದ್ದರು. ಆದರೆ, ಟೂರ್ನಿ ಆರಂಭಕ್ಕೆ ಮೊದಲೇ ಪಾದದ ನೋವಿಗೆ ಒಳಗಾಗಿದ್ದ ಅವರು ಆರಂಭಿಕ ಪಂದ್ಯದಲ್ಲಿ ಪಾಲ್ಗೊಂಡಿರಲಿಲ್ಲ. ಇದೀಗ ಪೂರ್ತಿ ಟೂರ್ನಿಯಿಂದ ಹೊರಕ್ಕೆ ನಡೆಯುವಂತಾಗಿದೆ. ಆರ್​ಸಿಬಿ ಫ್ರಾಂಚೈಸಿ ಮಂಗಳವಾರ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಆದರೆ, ಅವರ ಜಾಗಕ್ಕೆ ಯಾವ ಆಟಗಾರ ಆಯ್ಕೆಯಾಗುತ್ತಾರೆ ಎಂಬುದನ್ನು ತಿಳಿಸಿಲ್ಲ.

ದುರದೃಷ್ಟವಶಾತ್​ ರಜತ್​ಪಾಟೀದಾದ್​ ಐಪಿಎಲ್​ 2023ನೇ ಆವೃತ್ತಿಯಿಂದ ಹೊರಕ್ಕೆ ಉಳಿದಿದ್ದಾರೆ. ಅವರಿಗೆ ಆಗಿರುವ ಪಾದದ ನೋವು ಇನ್ನೂ ಕಡಿಮೆಯಾಗಿಲ್ಲ. ಅವರು ವೇಗವಾಗಿ ಗುಣಮುಖರಾಗಲಿ ಎಂದು ನಾನು ಬಯಸುತ್ತೇವೆ ಹಾಗೂ ಈ ಪ್ರಕ್ರಿಯೆಯಲ್ಲಿ ನಮ್ಮ ಬೆಂಬಲ ಅವರಿಗೆ ಇದೆ. ಕೋಚ್​ಗಳು ಹಾಗೂ ಮ್ಯಾನೇಜ್ಮೆಂಟ್​ ಅವರ ಜಾಗಕ್ಕೆ ಇನ್ನೊಬ್ಬ ಆಟಗಾರನ್ನು ಹೆಸರಿಸದೇ ಇರಲು ನಿರ್ಧರಿಸಿದ್ದೇವೆ, ಎಂದು ಆರ್​ಸಿಬಿ ಹೇಳಿಕೆ ಪ್ರಕಟಿಸಿದೆ.

ಈ ಹಿಂದೆ ರಜತ್​ಪಾಟೀದಾರ್​ ಐಪಿಎಲ್​ನ ಅರ್ಧ ಪಂದ್ಯಗಳು ಮುಕ್ತಾಯಗೊಂಡ ಬಳಿಕ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅವರು ಸಂಪೂರ್ಣ ಟೂರ್ನಿಯಿಂದ ಹೊರಕ್ಕುಳಿದ ಸುದ್ದಿ ಬಂದಿದೆ. ರಜತ್​ ಪಾಟೀದಾರ್​ ಕಳೆದ ಆವೃತ್ತಿಯ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಆರ್​ಸಿಬಿ ಫ್ರಾಂಚೈಸಿ ಅವರನ್ನು ಈ ಬಾರಿಯೂ ಉಳಿಸಿಕೊಂಡಿತ್ತು.

ಮಧ್ಯಪ್ರದೇಶದ 29 ವರ್ಷದ ಆಟಗಾರ 2021ರಲ್ಲಿ ಚೆನ್ನೈನಲ್ಲಿ ನಡೆದ ಮುಂಬಯಿ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದರು. ಒಟ್ಟು 12 ಪಂದ್ಯಗಳಲ್ಲಿ ಪಾಳ್ಗೊಂಡಿರುವ ಸರಾಸರಿ 40ರಂತೆ 404 ರನ್​ ಬಾರಿಸಿದ್ದಾರೆ.

Exit mobile version