Site icon Vistara News

IPL 2023 : ಟೋಪ್ಲೆ ಹೋದ್ರು, ಪಾರ್ನೆಲ್​ ಬಂದ್ರು; ಆರ್​ಸಿಬಿ ಬಳಗ ಸೇರಿಕೊಂಡ ದಕ್ಷಿಣ ಆಫ್ರಿಕಾ ವೇಗಿ

South African pacer Wayne Parnell joined the RCB team

#image_title

ಬೆಂಗಳೂರು: ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕೊತಾ ನೈಟ್​ ರೈಡರ್ಸ್​ ವಿರುದ್ಧದ ಐಪಿಎಲ್​ (IPL 2023) ಪಂದ್ಯದಲ್ಲಿ ಹೀನಾಯ ಸೋಲಿಗೆ ಒಳಗಾಗುವ ಜತೆಗೆ ಬೇಸರ ಸುದ್ದಿಯನ್ನೂ ಪಡೆದುಕೊಂಡಿತ್ತು. ಕಳೆದ ಹರಾಜಿನಲ್ಲಿ 1.9 ಕೋಟಿ ರೂಪಾಯಿ ಪಡೆದುಕೊಂಡು ಆರ್​ಸಿಬಿ ಬೌಲಿಂಗ್ ವಿಭಾಗ ಸೇರಿಕೊಂಡಿದ್ದ ಇಂಗ್ಲೆಂಡ್​ನ ವೇಗಿ ರೀಸ್ ಟೋಪ್ಲೆ ಗಾಯದ ಸಮಸ್ಯೆಯಿಂದ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಿರುವುದು. ಮುಂಬಯಿ ಇಂಡಿಯನ್ಸ್​ ವಿರುದ್ಧದ ಮೊದಲ ಪಂದ್ಯದಲ್ಲಿ ಆಡುವ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಟೋಪ್ಲೆ ಆಯ ತಪ್ಪಿ ನೆಲಕ್ಕೆ ಬಿದ್ದಿದ್ದರು. ಈ ವೇಳೆ ಅವರ ಬಲಗೈ ಭುಜದ ಮೂಳೆ ಕಳಚಿಕೊಂಡಿತ್ತು. ವೈದ್ಯಕೀಯ ತಂಡ ಅವರಿಗೆ ಚಿಕಿತ್ಸೆ ನೀಡಿದರೂ ಟೂರ್ನಿಯಲ್ಲಿ ಆಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಇಂಗ್ಲೆಂಡ್​ಗೆ ವಾಪಸಾಗಿದ್ದಾರೆ.

ಕೋಲ್ಕೊತಾ ನೈಟ್​ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ ಆರ್​​ಸಿಬಿಯ ಬೌಲಿಂಗ್​ ದೌರ್ಬಲ್ಯ ಅನಾವಣಗೊಂಡಿತ್ತು. ಡೆತ್​ ಓವರ್​ಗಳಲ್ಲಿ ರನ್​ ನಿಯಂತ್ರಣ ಮಾಡಲು ಸಾಧ್ಯವಾಗದೇ ಎದುರಾಳಿ ತಂಡಕ್ಕೆ ಕನಿಷ್ಠ 30 ಹೆಚ್ಚುವರಿ ರನ್​ಗಳನ್ನು ನೀಡಿದ್ದರು. ಇದೇ ಸಂದರ್ಭದಲ್ಲಿ ಟೋಪ್ಲೆ ಗಾಯದ ಸಮಸ್ಯೆಯಿಂದ ಮರಳಿದ ಸುದ್ದಿಯೂ ಬಂದಿತ್ತು. ಹೀಗಾಗಿ ಆರ್​ಸಿಬಿ ಅಭಿಮಾನಿಗಳ ಚಿಂತೆ ಹಚ್ಚಾಗಿತ್ತು. ಆದರೆ ಈ ಕೊರಗು ನೀಗಿಸುವ ಸುದ್ದಿಯೊಂದು ಇದೀಗ ಬಂದಿದ್ದು ದಕ್ಷಿಣ ಆಫ್ರಿಕಾದ ವೇಗದ ಬೌಲರ್​ ವೇಯ್ಸ್​ ಪಾರ್ನೆಲ್​ ಆರ್​​ಸಿಬಿ ಬಳಗ ಸೇರಿಕೊಂಡಿದ್ದಾರೆ.

ಟೋಪ್ಲೆ ಜಾಗವನ್ನು ತುಂಬಲಿರುವ ಎಡಗೈ ವೇಗಿ ವೇಯ್ನ್​ ಪಾರ್ನೆಲ್​ ಈ ಹಿಂದೆಯೂ ಐಪಿಎಲ್​ ಆಡಿದ್ದರು. ಆದರೆ, ಹಾಲಿ ಆವೃತ್ತಿಯ ಐಪಿಎಲ್​ನ ಹರಾಜಿನಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಟೋಪ್ಲೆ ಜಾಗವನ್ನು ಭರ್ತಿ ಮಾಡುವ ಅವಕಾಶ ದೊರಕಿದೆ. ಪುಣೆ ವಾರಿಯರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಐಪಿಎಲ್​ನಲ್ಲಿ ಆಡಿದ್ದ ವೇಯ್ನ್​ ಪಾರ್ನೆಲ್​ ಅವರು 26 ಪಂದ್ಯಗಳಲ್ಲಿ 26 ವಿಕೆಟ್​ಗಳನ್ನು ಕಿತ್ತಿದ್ದಾರೆ. 27 ರನ್​ಗಳ ವೆಚ್ಚದಲ್ಲಿ 3 ವಿಕೆಟ್​ ಪಡೆದಿರುವುದು ಐಪಿಎಲ್​ನ ಅತ್ಯುತ್ತಮ ಸಾಧನೆಯಾಗಿದೆ.

ವೇಯ್ನ್​ ಪಾರ್ನೆಲ್​ ದಕ್ಷಿಣ ಆಫ್ರಿಕಾ ಕ್ರಿಕೆಟ್​ ತಂಡದ ಪರವಾಗಿ ಒಟ್ಟು 56 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅಷ್ಟು ಇನಿಂಗ್ಸ್​ಗಳಲ್ಲಿ ಅವರು 59 ವಿಕೆಟ್​ ಕಬಳಿಸಿದ್ದಾರೆ. ಈ ಮೂಲಕ ಚುಟುಕ ಕ್ರಿಕೆಟ್​ಗೆ ಸೂಕ್ತ ಬೌಲರ್ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ.

ಇದೇ ವೇಳೆ ಕರ್ನಾಟಕ ರಣಜಿ ತಂಡದ ವೇಗದ ಬೌಳರ್ ವೈಶಾಕ್​ ವಿಜಯ್​ ಕುಮಾರ್​ ಕೂಡ ಆರ್​ಸಿಬಿ ತಂಡ ಸೇರಿಕೊಂಡಿದ್ದಾರೆ. ಅವರು ಗಾಯಗೊಂಡಿರುವ ರಜತ್ ಬದಲಿಗೆ ಸ್ಥಾನ ಪಡೆದುಕೊಂಡಿದ್ದಾರೆ.

ಆರ್​ಸಿಬಿ ತಂಡ ಟೂರ್ನಿ ಆರಂಭಕ್ಕೆ ಮೊದಲು ಆಲ್​ರೌಂಡರ್​ ವಿಲ್​ ಜಾಕ್ಸ್ ಅವರ ಸೇವೆ ಕಳೆದುಕೊಂಡಿದ್ದರು. ಸರ್ಜರಿಗೆ ಒಳಗಾಗಿರುವ ಅವರ ಬದಲಿಗೆ ಮೈಕೆಲ್ ಬ್ರೇಸ್​ವೆಲ್​ ತಂಡ ಸೇರಿಕೊಂಡಿದ್ದಾರೆ. ಅವರ ಬಳಿಕ ರಜತ್​ ಪಾಟೀದಾರ್​ ಟೂರ್ನಿಯಲ್ಲಿ ಆಡುವ ಅವಕಾಶ ಕಳೆದುಕೊಂಡರು. ಅವರು ಪಾದದ ನೋವಿನಿಂದ ಸುಧಾರಿಸಿಕೊಂಡಿಲ್ಲ.

ಪಾಟೀದಾರ್​ ಯಾಕೆ ಆಡುತ್ತಿಲ್ಲ?

ತಂಡದ ಪ್ರಮುಖ ಬ್ಯಾಟರ್​ ಹಾಗೂ ಕಳೆದ ಆವೃತ್ತಿಯಲ್ಲಿ ಶತಕ ಬಾರಿಸಿ ಮಿಂಚಿದ್ದ ರಜತ್​ ಪಾಟೀದಾರ್​ ಗಾಯದ ಸಮಸ್ಯೆಯಿಂದ ಗುಣಮುಖರಾಗದ ಕಾರಣ ಐಪಿಎಲ್​ ಟೂರ್ನಿಯಿಂದ (IPL 2023) ಸಂಪೂರ್ಣವಾಗಿ ಹೊರಕ್ಕೆ ನಡೆದಿದ್ದಾರೆ. ಈ ಮೂಲಕ ಆರ್​ಸಿಬಿಯ ಗಾಯದ ಪಟ್ಟಿಗೆ ಇನ್ನೊಬ್ಬ ಆಟಗಾರ ಸೇರ್ಪಡೆಗೊಂಡಿದ್ದಾರೆ.

ರಜತ್​ ಪಾಟೀದಾರ್​ ಆರ್​ಸಿಬಿಯ ಮಧ್ಯಮ ಕ್ರಮಾಂಕದ ಬ್ಯಾಟ್ ಬಲ ಎನಿಸಿಕೊಂಡಿದ್ದರು. ಆದರೆ, ಟೂರ್ನಿ ಆರಂಭಕ್ಕೆ ಮೊದಲೇ ಪಾದದ ನೋವಿಗೆ ಒಳಗಾಗಿದ್ದ ಅವರು ಆರಂಭಿಕ ಪಂದ್ಯದಲ್ಲಿ ಪಾಲ್ಗೊಂಡಿರಲಿಲ್ಲ. ಇದೀಗ ಪೂರ್ತಿ ಟೂರ್ನಿಯಿಂದ ಹೊರಕ್ಕೆ ನಡೆಯುವಂತಾಗಿದೆ. ಆರ್​ಸಿಬಿ ಫ್ರಾಂಚೈಸಿ ಮಂಗಳವಾರ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಆದರೆ, ಅವರ ಜಾಗಕ್ಕೆ ಯಾವ ಆಟಗಾರ ಆಯ್ಕೆಯಾಗುತ್ತಾರೆ ಎಂಬುದನ್ನು ತಿಳಿಸಿಲ್ಲ.

ದುರದೃಷ್ಟವಶಾತ್​ ರಜತ್​ಪಾಟೀದಾದ್​ ಐಪಿಎಲ್​ 2023ನೇ ಆವೃತ್ತಿಯಿಂದ ಹೊರಕ್ಕೆ ಉಳಿದಿದ್ದಾರೆ. ಅವರಿಗೆ ಆಗಿರುವ ಪಾದದ ನೋವು ಇನ್ನೂ ಕಡಿಮೆಯಾಗಿಲ್ಲ. ಅವರು ವೇಗವಾಗಿ ಗುಣಮುಖರಾಗಲಿ ಎಂದು ನಾನು ಬಯಸುತ್ತೇವೆ ಹಾಗೂ ಈ ಪ್ರಕ್ರಿಯೆಯಲ್ಲಿ ನಮ್ಮ ಬೆಂಬಲ ಅವರಿಗೆ ಇದೆ. ಕೋಚ್​ಗಳು ಹಾಗೂ ಮ್ಯಾನೇಜ್ಮೆಂಟ್​ ಅವರ ಜಾಗಕ್ಕೆ ಇನ್ನೊಬ್ಬ ಆಟಗಾರನ್ನು ಹೆಸರಿಸದೇ ಇರಲು ನಿರ್ಧರಿಸಿದ್ದೇವೆ, ಎಂದು ಆರ್​ಸಿಬಿ ಹೇಳಿಕೆ ಪ್ರಕಟಿಸಿದೆ.

ಈ ಹಿಂದೆ ರಜತ್​ಪಾಟೀದಾರ್​ ಐಪಿಎಲ್​ನ ಅರ್ಧ ಪಂದ್ಯಗಳು ಮುಕ್ತಾಯಗೊಂಡ ಬಳಿಕ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅವರು ಸಂಪೂರ್ಣ ಟೂರ್ನಿಯಿಂದ ಹೊರಕ್ಕುಳಿದ ಸುದ್ದಿ ಬಂದಿದೆ. ರಜತ್​ ಪಾಟೀದಾರ್​ ಕಳೆದ ಆವೃತ್ತಿಯ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಆರ್​ಸಿಬಿ ಫ್ರಾಂಚೈಸಿ ಅವರನ್ನು ಈ ಬಾರಿಯೂ ಉಳಿಸಿಕೊಂಡಿತ್ತು.

ಮಧ್ಯಪ್ರದೇಶದ 29 ವರ್ಷದ ಆಟಗಾರ 2021ರಲ್ಲಿ ಚೆನ್ನೈನಲ್ಲಿ ನಡೆದ ಮುಂಬಯಿ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದರು. ಒಟ್ಟು 12 ಪಂದ್ಯಗಳಲ್ಲಿ ಪಾಳ್ಗೊಂಡಿರುವ ಸರಾಸರಿ 40ರಂತೆ 404 ರನ್​ ಬಾರಿಸಿದ್ದಾರೆ.

Exit mobile version