Site icon Vistara News

Gautam Gambhir: ʼಯಾಕೋ ಗುರಾಯಿಸ್ತೀಯಾ?ʼ ಕ್ರೀಡಾಂಗಣದಲ್ಲಿ ಶ್ರೀಶಾಂತ್-‌ ಗಂಭೀರ್ ಕಿರಿಕ್‌

sreesanth gautam gambhir

ಸೂರತ್:‌ ಭಾರತದ ಮಾಜಿ ಬ್ಯಾಟರ್ ಗೌತಮ್ ಗಂಭೀರ್ (Gautam Gambhir) ಮತ್ತು ಬೌಲರ್‌ ಶ್ರೀಶಾಂತ್‌ (Sreesanth) ನಡುವೆ ಕ್ರಿಕೆಟ್‌ ಕ್ರೀಸ್‌ನಲ್ಲಿ ಸಣ್ಣದೊಂದು ಘರ್ಷಣೆ ನಡೆದಿದೆ.

ಸೂರತ್‌ನಲ್ಲಿ ಬುಧವಾರ ರಾತ್ರಿ ನಡೆದ ಇಂಡಿಯಾ ಗುಜರಾತ್ ಜೈಂಟ್ಸ್ ಮತ್ತು ಇಂಡಿಯಾ ಕ್ಯಾಪಿಟಲ್ಸ್ ನಡುವಿನ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ (LLC 2023- ಎಲ್‌ಎಲ್‌ಸಿ 2023) ಎಲಿಮಿನೇಟರ್ ಘರ್ಷಣೆಯಲ್ಲಿ ಇದು ನಡೆಯಿತು. ಮಾಜಿ ಸಹ ಆಟಗಾರರಾದ ಶ್ರೀಶಾಂತ್ ಮತ್ತು ಗೌತಮ್‌ ಗಂಭೀರ್ ನಡುವೆ ಜಗಳ ನಡೆದಿದೆ.

ಶ್ರೀಶಾಂತ್ ಜೈಂಟ್ಸ್ ಪರ ಆಡಿದ್ದರೆ, ಗಂಭೀರ್ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದಾರೆ. ಗಂಭೀರ್ ಅವರ ನಡವಳಿಕೆಯಿಂದ ಶ್ರೀಶಾಂತ್ ಕೋಪಗೊಂಡಿದ್ದೇನೆ ಎಂದು ಹೇಳಿಕೊಂಡಿದ್ದು, ಈ ಕುರಿತು ಟೀಕಿಸಿದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇಬ್ಬರ ನಡುವಿನ ತಿಕ್ಕಾಟದ ವಿಡಿಯೋ ಕೂಡ ವೈರಲ್‌ ಆಗಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಕ್ಯಾಪಿಟಲ್ಸ್ ನಾಯಕ ಗಂಭೀರ್, ಶ್ರೀಶಾಂತ್ ಅವರ ಬಾಲ್‌ಗಳಿಗೆ ಸಿಕ್ಸರ್‌ ಹಾಗೂ ಬೌಂಡರಿಗಳ ಮೂಲಕ ಉತ್ತರಿಸಿದರು. ಇದರಿಂದ ಹತಾಶೆಗೀಡಾದ ಶ್ರೀಶಾಂತ್ ಗಂಭೀರ್‌ ಕಡೆಗೆ ತೀಕ್ಷ್ಣವಾಗಿ ನೋಡುತ್ತಾ ಸ್ಲೆಡ್ಜಿಂಗ್‌ ಮಾಡಿದ್ದಾರೆ. ಪ್ರತಿಯಾಗಿ ಗಂಭೀರ್ ಕೂಡ ಏನನ್ನೋ ಗೊಣಗುತ್ತಾ ಶ್ರೀಶಾಂತ್‌ ಅನ್ನು ಗುರಾಯಿಸಿದರು. ವಿರಾಮದ ಸಮಯದಲ್ಲಿ ಕೂಡ ಅವರಿಬ್ಬರೂ ಬೈಗುಳ ವಿನಿಮಯ ಮಾಡಿಕೊಂಡರು ಎಂದು ಗೊತ್ತಾಗಿದೆ.

ಪಂದ್ಯ ಮುಗಿದ ನಂತರ ಶ್ರೀಶಾಂತ್ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಒಂದು ವೀಡಿಯೊವನ್ನು ಹಾಕಿ, ಗಂಭೀರ್ ತಮ್ಮತ್ತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದರು. “ಯಾವುದೇ ಕಾರಣವಿಲ್ಲದೆ ತನ್ನ ಎಲ್ಲಾ ಸಹೋದ್ಯೋಗಿಗಳೊಂದಿಗೆ ಜಗಳವಾಡುವ ʼಮಿಸ್ಟರ್ ಫೈಟರ್‌ʼನೊಂದಿಗೆ ಏನಾಯಿತು ಎಂಬುದರ ಕುರಿತು ನಾನು ಸ್ವಲ್ಪ ಹೇಳಲು ಬಯಸುತ್ತೇನೆ. ಅವರು ವೀರೂ ಭಾಯಿ (ವೀರೇಂದ್ರ ಸೆಹ್ವಾಗ್) ಮತ್ತಿತರರನ್ನೂ ಕೂಡ, ತಮ್ಮದೇ ಹಿರಿಯ ಆಟಗಾರರನ್ನು ಸಹ ಗೌರವಿಸುವುದಿಲ್ಲ. ಯಾವುದೇ ಪ್ರಚೋದನೆಯಿಲ್ಲದೆ ಅವರು ನನ್ನನ್ನು ತುಂಬಾ ಅಸಭ್ಯವಾಗಿ ಕರೆದರು. ಗೌತಮ್ ಗಂಭೀರ್ ಹಾಗೆ ಎಂದಿಗೂ ಹೇಳಬಾರದಿತ್ತು” ಎಂದು ಶ್ರೀಶಾಂತ್ ಹೇಳಿದ್ದಾರೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್ ಎಲಿಮಿನೇಟರ್ ಪಂದ್ಯದ ವೇಳೆ, ಗೌತಮ್ ಗಂಭೀರ್ ಅವರು ಗುಜರಾತ್ ಜೈಂಟ್ಸ್ ವಿರುದ್ಧ 30 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 51 ರನ್ ಗಳಿಸಿದರು. ಇಂಡಿಯಾ ಕ್ಯಾಪಿಟಲ್ಸ್ ಈ ಪಂದ್ಯವನ್ನು ಗೆಲ್ಲುವಲ್ಲಿ ಅವರ ಇನ್ನಿಂಗ್ಸ್ ನಿರ್ಣಾಯಕವಾಗಿತ್ತು. ಲೆಜೆಂಡ್ಸ್‌ ಲೀಗ್‌, ಮಾಜಿ ಆಟಗಾರರು ಒಳಗೊಂಡಿರುವ ತಂಡಗಳಿರುವ T20 ಸರಣಿಯಾಗಿದೆ.

ಭಾರತ ತಂಡದ ಮಾಜಿ ವೇಗಿ ಶ್ರೀಶಾಂತ್‌, ಐಪಿಎಲ್ ಪಂದ್ಯದ ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪಕ್ಕೆ ಗುರಿಯಾದ ಬಳಿಕ ಅಂತಾರಾಷ್ಟ್ರೀಯ, ರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿದ್ದರು. ಕೆಲವು ವರ್ಷಗಳ ಹಿಂದೆ ನ್ಯಾಯಾಲಯ ಈ ನಿಷೇಧವನ್ನು ತೆಗೆದುಹಾಕಿದ್ದು, ಶ್ರೀಶಾಂತ್ ನಂತರ ವಿವಿಧ ಲೀಗ್‌ಗಳನ್ನು ಆಡುತ್ತಿದ್ದಾರೆ. ಪಂದ್ಯದ ವೇಳೆ ಗಂಭೀರ್ ತನಗೆ ನಿಖರವಾಗಿ ಏನು ಹೇಳಿದರು ಎಂಬುದನ್ನು ಬಹಿರಂಗಪಡಿಸುವುದಾಗಿ ಶ್ರೀಶಾಂತ್‌ ಹೇಳಿದ್ದು, ಈ ಮಾತುಗಳು ತನಗೆ ಮತ್ತು ತನ್ನ ಕುಟುಂಬಕ್ಕೆ ನೋವುಂಟು ಮಾಡಿದೆ ಎಂದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮುಂಬರುವ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ (ಕೆಕೆಆರ್) ತಂಡದ ಮೆಂಟರ್‌ ಆಗಿ ಗೌತಮ್ ಗಂಭೀರ್ ಮರಳುತ್ತಿದ್ದಾರೆ. ಗಂಭೀರ್ ಎರಡು ವರ್ಷಗಳ ಕಾಲ ಲಕ್ನೋ ಸೂಪರ್ ಜೈಂಟ್ಸ್ (LSG) ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದರು. ಈ ಸಮಯದಲ್ಲಿ ಫ್ರಾಂಚೈಸ್ ಎರಡೂ ಋತುಗಳಲ್ಲಿ ಮೂರನೇ ಸ್ಥಾನ ಗಳಿಸಿತು.

ಇದನ್ನೂ ಓದಿ: Gautam Gambhir: ಕೊಹ್ಲಿಯ ದಾಖಲೆಯ ಶತಕದ ಬಳಿಕ ಭಾವುಕ ಪೋಸ್ಟ್​ ಮಾಡಿದ ಗಂಭೀರ್​!

Exit mobile version