Site icon Vistara News

Team India: ತವರಿಗೆ ಬಂದ ಖಷಿಯಲ್ಲಿ ಕುಣಿದು ಕುಪ್ಪಳಿಸಿದ ನಾಯಕ ರೋಹಿತ್​, ಹಾರ್ದಿಕ್​, ಪಂತ್; ವಿಡಿಯೊ ವೈರಲ್​​

Team India

Team India : Rohit Sharma, Rishabh Pant, Hardik Pandya dance after Indian cricket team reaches Delhi hotel

ನವದೆಹಲಿ: 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದು ಚುಟುಕು ಕ್ರಿಕೆಟ್‌ನಲ್ಲಿ 2ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿರುವ ಭಾರತ(Team India) ಕ್ರಿಕೆಟ್‌ ತಂಡ ಇಂದು (ಗುರುವಾರ) ಬೆಳಗ್ಗೆ ತವರಿಗೆ ಮರಳಲಿದೆ. ತಾಯ್ನಾಡಿಗೆ ಕಾಲಿಡುತ್ತಿದ್ದಂತೆ ವಿಮಾನ ನಿಲ್ದಾಣದ ಬಳಿ ನೆರೆದಿದ್ದ ಜನಸ್ತೋಮ ರೋಹಿತ್​ ಪಡೆಗೆ ಜೈಕಾರ, ಡೊಳ್ಳು, ತಮಟೆ ಬಾರಿಸುವ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು. ತಮಟೆ ಮತ್ತು ಡೊಳ್ಳಿನ ಸದ್ದಿಗೆ ರೋಹಿತ್​ ಶರ್ಮ(Rohit Sharma), ಹಾರ್ದಿಕ್​ ಪಾಂಡ್ಯ(Hardik Pandya), ರಿಷಭ್​ ಪಂತ್(Rishabh Pant)​ ವಿಶ್ವಕಪ್​ ಟ್ರೋಫಿಯನ್ನು ಕೈಯಲ್ಲಿ ಹಿಡಿದ ಮಸ್ತ್​ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೊ ವೈರಲ್(viral video)​ ಆಗಿದೆ.

ತಾಯ್ನಾಡಿಗೆ ಕಾಲಿಡುತ್ತಿದ್ದಂತೆ ರೋಹಿತ್​ ಶರ್ಮ ವಿಶ್ವಕಪ್​ ಮೇಲೆತ್ತಿ ಪ್ರದರ್ಶಿಸಿದರು. ತಮಟೆ ಬಡಿಯುತ್ತಾ ಸ್ವಾಗತ ಕೋರುತ್ತಿದ್ದವ ಜತೆ ಒಂದೆಡರು ಹೆಜ್ಜೆ ಹಾಕಿ ಸಂಭ್ರಮಿಸಿದರು. ತಮಡೆ ಬಡಿಯುತ್ತಿರುವವರು ಕೂಡ ರೋಹಿತ್​ಗೆ ಸಾಥ್​ ನೀಡಿದರು. ನಾಯಕ ನೃತ್ಯ ಮಾಡುವುದನ್ನು ಕಂಡ ಉಪನಾಯಕ ಹಾರ್ದಿಕ್​ ಪಾಂಡ್ಯ, ವಿಕೆಟ್​ ಕೀಪರ್​ ರಿಷಭ್ ಪಂತ್​ ಕೂಡ ತಾವೇನು ಕಮ್ಮಿ ಇಲ್ಲ ಎನ್ನುವಂತೆ ಕುಣಿದು ಕುಪ್ಪಳಿಸಿದರು.

ಸುಮಾರು 18 ಗಂಟೆಗಳ ಸುದೀರ್ಘ ಪ್ರಯಾಣದ ನಂತರ, ತಂಡವು ಅಂತಿಮವಾಗಿ ಭಾರತಕ್ಕೆ ಬಂದಿಳಿದೆ. ವಿಮಾನ ನಿಲ್ದಾಣಕ್ಕೆ ತಂಡ ಆಗಮಿಸುತ್ತಿದ್ದಂತೆ ವಿಶ್ವಕಪ್​ ಟ್ರೋಫಿಯ ಆಕೃತಿಯ ಕೇಕ್​ ಕತ್ತರಿಸಲಾಯಿತು. ಇದೇ ವೇಳೆ ಕೊಹ್ಲಿಯ ಕುಟುಂಬಸ್ಥರು ಕೂಡ ಹಾಜರಾಗಿದ್ದರು.

ಭಾರತ ತಂಡದ ಆಟಗಾರರು 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಬೆಳಗ್ಗಿನ ತಿಂಡಿ ಸವಿಯಲಿದ್ದಾರೆ. ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿಯೇ ಭಾರತ ಕ್ರಿಕೆಟ್‌ ತಂಡದ ಆಟಗಾರರನ್ನು ಭೇಟಿಯಾಗಿ, ಅವರ ಜತೆ ತಿಂಡಿ ತಿನ್ನಲಿದ್ದಾರೆ. ಇದೇ ವೇಳೆ ಆಟಗಾರರಿಗೆ ಮೋದಿ ಅವರು ಅಭಿನಂದನೆ ಸಲ್ಲಿಸಲಿದ್ದಾರೆ.

ಮೋದಿ ಭೇಟಿಯ ಬಳಿಕ ನವದೆಹಲಿಯಿಂದ ವಿಶೇಷ ವಿಮಾನ ಮೂಲಕ ಆಟಗಾರರು ಮುಂಬೈಗೆ ಆಗಮಿಸಿ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಯಕ ರೋಹಿತ್‌ ಶರ್ಮಾ ಗೆದ್ದಿರುವ ವಿಶ್ವಕಪ್‌ ಟ್ರೋಫಿಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾಗೆ ಹಸ್ತಾಂತರಿಸಲಿದ್ದಾರೆ. ಬಳಿಕ ತೆರೆದ ವಾಹನದಲ್ಲಿ ರೋಡ್‌ ಶೋ ನಡೆಯಲಿದೆ.

ಇದನ್ನೂ ಓದಿ Suryakumar Yadav: ದಿಲ್ಲಿಯಲ್ಲಿ ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಸೂರ್ಯಕುಮಾರ್​ ಯಾದವ್​; ವಿಡಿಯೊ ವೈರಲ್​

ಸಹಾಯಕ ಸಿಬ್ಬಂದಿ, ಆಟಗಾರರ ಕುಟುಂಬ ಸದಸ್ಯರು, ಕ್ರಿಕೆಟ್‌ ಮಂಡಳಿಯ ಅಧಿಕಾರಿಗಳು ಮತ್ತು ಪತ್ರಕರ್ತರೊಂದಿಗೆ ಭಾರತೀಯ ತಂಡದ ಆಟಗಾರರು ಗ್ರಾಂಟ್ಲಿ ಆಡಮ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬುಧವಾರ ವಿಶೇಷ ಚಾರ್ಟರ್ ವಿಮಾನ ಏರಿದ್ದರು. ಏರ್ ಇಂಡಿಯಾ ಚಾಂಪಿಯನ್ಸ್ 24 ವರ್ಲ್ಡ್‌ ಕಪ್‌ (Air India Champions 24 World Cup) ಎನ್ನುವ ಹೆಸರಿನ ವಿಮಾನವು ಬೆಳಿಗ್ಗೆ 6:20ರ ಸುಮಾರಿಗೆ ದೆಹಲಿಯ ಇಂದಿರಾ ಗಾಂಧಿ ಇಂಟರ್​ನ್ಯಾಷನ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಬೆರಿಲ್ ಚಂಡಮಾರುತದಿಂದ ಉಂಟಾದ ವಿಳಂಬದಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶೇಷ ಚಾರ್ಟರ್ ವಿಮಾನದ ವ್ಯವಸ್ಥೆ ಮಾಡಿತ್ತು.

ಜೂನ್‌ 29ರಂದು ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆದಿದ್ದ ಟಿ20 ವಿಶ್ವಕಪ್​ 2024ರ ಫೈನಲ್​ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು 7 ರನ್​ಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ಆ ಮೂಲಕ ಸುಮಾರು 17 ವರ್ಷಗಳ ಬಳಿಕ ಟಿ-20 ವಿಶ್ವಕಪ್‌ ಮುಡಿಗೇರಿಸಿಕೊಂಡಿತ್ತು.

Exit mobile version