Site icon Vistara News

IPL 2023 : ಕೊಹ್ಲಿ, ಪ್ಲೆಸಿಸ್ ಅವರನ್ನೇ ನೆಚ್ಚಿಕೊಂಡಿದ್ದರೆ ನಿಮ್ಮ ತಂಡ ಕಪ್​ ಗೆಲ್ಲುವುದಿಲ್ಲ ಎಂದ ಮಾಜಿ ಕ್ರಿಕೆಟಿಗ

Virendra Sehwag

ಬೆಂಗಳೂರು: ಐಪಿಎಲ್​ 16ನೇ ಆವೃತ್ತಿಯ (IPL 2023) ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ತಂಡ 81 ರನ್​ ಹೀನಾಯ ಸೋಲಿಗೆ ಒಳಗಾಗಿದೆ. ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್​ಸಿಬಿ ತಂಡ ಆರಂಭದಲ್ಲಿ ಹಿಡಿತ ಸಾಧಿಸಿಕೊಂಡಿತ್ತು. 89 ರನ್​ಗಳಿಗೆ ಅಗ್ರ ಐದು ವಿಕೆಟ್​ಗಳನ್ನು ಕಬಳಿಸುವ ಮೂಲಕ ಎದುರಾಳಿ ತಂಡದ ರನ್​ ವೇಗಕ್ಕೆ ನಿಯಂತ್ರಣ ಹಾಕಿತ್ತು. ಆದರೆ, ಡೆತ್ ಓವರ್​ನಲ್ಲಿ ಅತ್ಯಂತ ಕೆಟ್ಟದಾಗಿ ಬೌಲಿಂಗ್ ಮಾಡಿತು. ಶಾರ್ದುಲ್​ ಠಾಕೂರ್​ಗೆ ಸರಿಯಾಗಿ ಬೌಲಿಂಗ್ ಮಾಡಲಾಗದೇ ದಂಡಿಸಿಕೊಂಡಿತು. ಸಿರಾಜ್​ ಹಾಗೂ ಹರ್ಷಲ್​ ಪಟೇಲ್ ಅವರಂಥ ಅನುಭವಿ ಬೌಲರ್​ಗಳು ಬೇಕಾಬಿಟ್ಟಿ ರನ್​ ಬಿಟ್ಟುಕೊಟ್ಟರು. ಪರಿಣಾಮವಾಗಿ ಕೋಲ್ಕೊತಾ ತಂಡ 200ಕ್ಕೂ ಅಧಿಕ ರನ್​ ಪೇರಿಸಿತು.

ಕೆಕೆಆರ್​ ತಂಡ ಕೊನೇ ಎಂಟು ಓವರ್​ಗಳಲ್ಲಿ 110 ರನ್​ ಬಾರಿಸಿರುವುದು ಆರ್​​ಸಿಬಿಯ ಬೌಲಿಂಗ್​ ದೌರ್ಬಲ್ಯಕ್ಕೆ ಸಾಕ್ಷಿ ನೀಡಿತು. ಇದರಿಂದ ಬ್ಯಾಟರ್​ಗಳಿಗೆ ದೊಡ್ಡ ಮೊತ್ತವನ್ನು ಪೇರಿಸುವ ಸವಾಲು ಎದುರಾಯಿತು. ಈಗಿನ ಕ್ರಿಕೆಟ್​ ಪರಿಸ್ಥಿತಿಯಲ್ಲಿ ಅದೇನೂ ದೊಡ್ಡ ಮೊತ್ತವಾಗಿರಲಿಲ್ಲ. ವಿರಾಟ್​ ಕೊಹ್ಲಿ, ಪ್ಲೆಸಿಸ್​, ಮ್ಯಾಕ್ಸ್​ವೆಲ್, ದಿನೇಶ್​ ಕಾರ್ತಿಕ್​, ಬ್ರೇಸ್​ವೆಲ್ ಅವರಂಥ ಬ್ಯಾಟರ್​ಗಳಿರುವ ತಂಡಕ್ಕೆ ದೊಡ್ಡ ಸವಾಲು ಆಗಿರಲಿಲ್ಲ. ಎಲ್ಲರೂ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಕಾರಣ ಸೋಲುಂಟಾಯಿತು. ಈ ಕುರಿತು ಭಾರತ ತಂಡದ ಮಾಜಿ ಸ್ಫೋಟಕ ಬ್ಯಾಟರ್​ ವೀರೇಂದ್ರ ಸೆಹ್ವಾಗ್​ ಬೇಸರ ವ್ಯಕ್ರಪಡಿಸಿದ್ದಾರೆ. ಫಾಫ್​ ಡು ಪ್ಲೆಸಿಸ್ ಹಾಗೂ ವಿರಾಟ್​ ಕೊಹ್ಲಿಯ ಬ್ಯಾಟಿಂಗ್ ಬಲವನ್ನೇ ನೆಚ್ಚಿಕೊಂಡಿದ್ದರೆ ನಿಮ್ಮ ತಂಡ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.

ಆರಂಭಿಕ ಬ್ಯಾಟರ್​​ಗಳಾದ ಫಾಫ್​ ಡು ಪ್ಲೆಸಿಸ್​ ಹಾಗೂ ವಿರಾಟ್​ ಕೊಹ್ಲಿಯನ್ನು ನೆಚ್ಚಿಕೊಂಡಿದ್ದರೆ ತಂಡ ಗೆಲ್ಲುತ್ತದೆ ಉಳಿದ ಆಟಗಾರರು ಅಂದುಕೊಳ್ಳಬಾರದು. ಗ್ಲೆನ್​ ಮ್ಯಾಕ್ಸ್​ವೆಲ್​ ಕೂಡ ರನ್​ ಬಾರಿಸಬೇಕು. ದಿನೇಶ್​ ಕಾರ್ತಿಕ್​ ಕೂಡ ರನ್​ ಪೇರಿಸಬೇಕು. ಉಳಿದವರು ಕೂಡ ತಮ್ಮ ಕೊಡುಗೆಗಳನ್ನು ಕೊಡಬೇಕು. ಇಂಪ್ಯಾಕ್ಟ್​ ಪ್ಲೇಯರ್ ಮೂಲಕ ತಂಡಕ್ಕೆ ಸೇರ್ಪಡೆಗೊಂಡ ಅನುಜ್​ ರಾವತ್​ ಕೂಡ ಸಿಡಿದೇಳಬೇಕು. ಅದೇ ರೀತಿ ಆರ್​ಸಿಬಿ ತಂಡವೂ ತಮಗಿರುವ ಅತ್ಯುತ್ತಮ ಅವಕಾಶಗಳತ್ತ ಕೈ ಚಾಚಬೇಕು ಎಂದು ಸೆಹ್ವಾಗ್ ಹೇಳಿದ್ದಾರೆ.

ರಜತ್​ ಅಲಭ್ಯತೆ ಪ್ರಭಾವ

ರಜತ್​ ಪಾಟೀದಾರ್​ ಅಲಭ್ಯತೆಯೂ ಆರ್​ಸಿಬಿ ತಂಡಕ್ಕೆ ಹಿನ್ನಡೆ ಉಂಟು ಮಾಡಿದೆ ಎಂಬುದಾಗಿ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ. ಕಳೆದ ಆವೃತ್ತಿಯಲ್ಲಿ ರಜತ್ ಅತ್ಯುತ್ತಮವಾಗಿ ಬ್ಯಾಟ್​ ಬೀಸಿದ್ದರು. ಅವರು ಶತಕ ಬಾರಿಸುವ ಜತೆಗೆ ತಂಡದ ಗೆಲುವಿಗೆ ತಮ್ಮ ಕೊಡುಗೆ ಕೊಟ್ಟಿದ್ದರು. ಈ ಬಾರಿ ಗಾಯದ ಸಮಸ್ಯೆಯಿಂದ ಆಡದೇ ಇರುವುದು ತಂಡದ ಹಿನ್ನೆಡೆಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : Virender Sehwag: ನಾಯಕತ್ವ ನೀಡುವುದಾಗಿ ನಂಬಿಕೆ ದ್ರೋಹ; ಸೆಹ್ವಾಗ್​​​ ಸ್ಫೋಟಕ ಹೇಳಿಕೆ

ಇದೇ ವೇಳೆ ಸೆಹ್ವಾಗ್​, ಟೂರ್ನಿಯ ಅರಂಭದಲ್ಲಿ ಕೆಲವೊಂದು ತಂಡಗಳು ಇಂಥ ಪ್ರದರ್ಶನಗಳನ್ನು ಕಾಣುತ್ತವೆ. ತಂಡದ ಸಮತೋಲನ ಉತ್ತಮವಾಗದೇ ಇರುವುದು ಅದಕ್ಕೆ ಕಾರಣ. ಆರ್​ಸಿಬಿಗೆ ತಿರುಗಿ ಬೀಳುವ ಎಲ್ಲ ಅವಕಾಶಗಳಿವೆ ಎಂದು ಅವರು ಹೇಳಿದ್ದಾರೆ.

ಎಲ್ಲ ತಂಡಗಳೂ ಇಂಥ ಪರಿಸ್ಥಿತಿಯನ್ನು ಎದುರಿಸುತ್ತವೆ. ಐಪಿಎಲ್​ ಇತಿಹಾಸದಲ್ಲಿ ಇಂಥ ಹಲವಾರು ಉದಾಹರಣೆಗಳಿವೆ. ಕೆಲವೊಂದು ತಂಡಗಳು ಆರಂಭದಲ್ಲಿ ಇಂಥ ಪರಿಸ್ಥಿತಿಯನ್ನು ಎದುರಿಸಿದರೆ ಕೊನೇ ಹಂತದಲ್ಲಿ ಇನ್ನಲವು ತಂಡಗಳು ಇಂಥ ಪರಿಸ್ಥಿತಿ ಎದುರಿಸುತ್ತವೆ. ಆರ್​ಸಿಬಿಗೆ ಎರಡನೇ ಪಂದ್ಯದಲ್ಲಿ ಈ ಸ್ಥಿತಿ ಎದುರಾಗಲಿದೆ. ಹೀಗಾಗಿ ಅವರಿಗೆ ಮುಂದಿನ ಪಂದ್ಯದಲ್ಲಿ ಸುಧಾರಿಸಿಕೊಳ್ಳುವುದಕ್ಕೆ ಅವಕಾಶವಿದೆ. ಇನ್ನು ಯೋಚನೆ ಮಾಡುವುದಕ್ಕೆ ಯಾವುದೇ ಅವಕಾಶ ಇಲ್ಲ. ತಕ್ಷಣವೇ ಸುಧಾರಿಸಿಕೊಂಡು ಅತ್ಯುತ್ತಮ ಪ್ರದರ್ಶನ ನೀಡುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

Exit mobile version