Site icon Vistara News

Vijay Hazare Trophy: ಸೆಮಿಫೈನಲ್​ ಪ್ರವೇಶಿಸಿದ ಕರ್ನಾಟಕ

mayank agarwal

ರಾಜ್​ಕೋಟ್​: ವಿಜಯ್‌ ಹಜಾರೆ(Vijay Hazare Trophy) ಟೂರ್ನಿಯ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಕರ್ನಾಟಕ (Karnataka) ತಂಡ ವಿದರ್ಭ(Vidarbha vs Karnataka) ವಿರುದ್ಧ 7 ವಿಕೆಟ್​ಗಳ ಗೆಲುವು ಸಾಧಿಸಿ ಸೆಮಿಫೈನಲ್​ ಪ್ರವೇಶಿಸಿದೆ. ಸೆಮಿಯಲ್ಲಿ ರಾಜಸ್ಥಾನ ವಿರುದ್ಧ ಕಣಕಿಳಿಯಲಿದೆ. ಈ ಪಂದ್ಯ ಡಿಸೆಂಬರ್​ 14ರಂದು ನಡೆಯಲಿದೆ.

ರಾಜ್​ಕೋಟ್​ನ ಸನೋಸಾರ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಆಡಲಿಳಿದ ಕರ್ನಾಟಕ ತಂಡ ಟಾಸ್​ ಗದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್​ ಆಹ್ವಾನ ಪಡೆದ ವಿದರ್ಭ ವಿಜಯ್‌ಕುಮಾರ್‌ ವೈಶಾಖ್‌ ಅವರ ಬೌಲಿಂಗ್​ ದಾಳಿಗೆ ತತ್ತರಿಸಿ 44.5 ಓವರ್​ಗಳಲ್ಲಿ ಕೇವಲ 173 ರನ್​ಗಳಿಗೆ ಸರ್ವಪತನ ಕಂಡಿತು. ಜವಾಬಿತ್ತ ಕರ್ನಾಟಕ ಈ ಅಲ್ಪ ಮೊತ್ತವನ್ನು 40.3 ಓವರ್​ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು 177 ರನ್​ ಬಾರಿಸಿ ಜಯ ಸಾಧಿಸಿತು.

ಮಿಂಚಿದ ಸಮರ್ಥ್​-ಅಗರ್ವಾಲ್​

ಚೇಸಿಂಗ್​ ನಡೆಸಿದ ಕರ್ನಾಟಕ ತಂಡಕ್ಕೆ ಆರಂಭಕಾರ ಹಾಗೂ ನಾಯಕ ಮಯಾಂಕ್ ಅಗರ್ವಾಲ್ ಮತ್ತು ರವಿಕುಮಾರ್ ಸಮರ್ಥ್ ಅತ್ಯುತ್ತಮ ಆರಂಭ ಒದಗಿಸಿದ್ದರು. ಈ ಜೋಡಿ ವಿದರ್ಭ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿ ಅರ್ಧಶತಕ ಬಾರಿಸಿ ಮಿಂಚಿದರು. ಮೊದಲ ವಿಕೆಟ್​ಗೆ 82 ರನ್​ಗಳ ಜತೆಯಾಟ ನಡೆಸಿದರು.

ಅರ್ಧಶತಕ ಬಾರಿಸಿದ ಬಳಿಕ ಮಯಾಂಕ್ ಅಗರ್ವಾಲ್ ವಿಕೆಟ್ ಒಪ್ಪಿಸಿದರು. ಅವರು 64 ಎಸೆತ ಎದುರಿಸಿ 6 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 51 ರನ್​ ಬಾರಿಸಿ ಹರ್ಷ್​ ದುಬೆಗೆ ವಿಕೆಟ್​ ಒಪ್ಪಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಬೇರೂರಿ ನಿಂತಿದ್ದ ಸಮರ್ಥ್ ಅವರನ್ನು ಔಟ್​ ಮಾಡಲು ವಿದರ್ಭ ಬೌಲರ್​ಗಳಿಗೆ ಸಾಧ್ಯವಾಗಲೇ ಇಲ್ಲ. ಸಮರ್ಥ್ 7 ಬೌಂಡರಿ ನೆರವಿನಿಂದ ಅಜೇಯ 72 ರನ್​ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ನಿಕಿನ್ ಜೋಸ್ 31 ರನ್​ ಬಾರಿಸಿ ಉಪಯುಕ್ತ ಕೊಡುಗೆ ನೀಡಿದರು.

ಇದನ್ನೂ ಓದಿ Vijay Hazare Trophy: ಅಗರ್ವಾಲ್​,ಸಮರ್ಥ್ ಶತಕ; ಭರ್ಜರಿ ಗೆಲುವು ಸಾಧಿಸಿದ ಕರ್ನಾಟಕ

ಘಾತಕ ಬೌಲಿಂಗ್​ ನಡೆಸಿದ ವೈಶಾಖ್​

16ನೇ ಆವೃತ್ತಿಯಲ್ಲಿ ಆರ್​ಸಿಬಿ ಪರ ಆಡಿದ್ದ ವಿಜಯ್‌ಕುಮಾರ್‌ ವೈಶಾಖ್‌ ಅವರು ಈ ಪಂದ್ಯದಲ್ಲಿ ಘಾತಕ ಬೌಲಿಂಗ್​ ನಡೆಸಿ ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅವರು 8.5 ಓವರ್​ ಎಸೆದು 2 ಮೇಡನ್​ ಸಹಿತ 44 ರನ್​ ವೆಚ್ಚದಲ್ಲಿ ಪ್ರಮುಖ 4 ವಿಕೆಟ್​ ಕಿತ್ತರು. ಉಳಿದಂತೆ ಮನೋಜ್ ಭಾಂಡಗೆ ಮತ್ತು ಜಗದೀಶ್​ ಸುಚಿತ್​ ತಲಾ 2 ವಿಕೆಟ್​ ಪಡೆದರು.

ಮೊದಲು ಬ್ಯಾಟಿಂಗ್​ ನಡೆಸಿದ ವಿದರ್ಭ ಪರ ಯಶ್ ಕಮ್ 72 ಎಸೆತಗಳಲ್ಲಿ 38 ರನ್ ಬಾರಿಸಿದರೆ, ಶುಭಂ ದುಬೆ 59 ಎಸೆತಗಳಲ್ಲಿ 1 ಸಿಕ್ಸ್​ ಹಾಗೂ 4 ಫೋರ್​ಗಳೊಂದಿಗೆ 41 ರನ್ ಬಾರಿಸಿದರು. ಉಭಯ ಆಟಗಾರರನ್ನು ಹೊರತು ಪಡಿಸಿ ಉಳಿದ ಯಾವುದೇ ಬ್ಯಾಟರ್​ಗಳು ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಯಶಸ್ಸು ಕಾಣಲಿಲ್ಲ. ಕರ್ನಾಟಕ ತೊರೆದು ಆಡಿದ ಕರುಣ್​ ನಾಯರ್​ ಕೇವಲ 5 ರನ್​ ಬಾರಿಸಿದರು.

Exit mobile version