Site icon Vistara News

ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿ ಖೇಲ್ ರತ್ನ, ಅರ್ಜುನ ಪ್ರಶಸ್ತಿ ತೊರೆದ ವಿನೇಶ್ ಫೋಗಟ್

vinesh phogat

ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಪ್ರಧಾನಿ(PM Modi) ನರೇಂದ್ರ ಮೋದಿಗೆ(Narendra Modi) ಪತ್ರ ಬರೆದು ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ವಾಪಸ್​ ಮಾಡುವುದಾಗಿ ಘೋಷಿಸಿದ್ದ ಖ್ಯಾತ ಮಹಿಳಾ ಕುಸ್ತಿಪಟು ವಿನೇಶ್​ ಫೋಗಟ್(Vinesh Phogat)​, ಇಂದು(ಶನಿವಾರ) ತಮ್ಮ ಈ ಪ್ರಶಸ್ತಿಗಳನ್ನು ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದ(Kartavya Path) ಪಾದಚಾರಿ ಮಾರ್ಗದಲ್ಲಿಟ್ಟು ತೊರೆದಿದ್ದಾರೆ.

ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್​ ತಮ್ಮ ಪ್ರಶಸ್ತಿಗಳನ್ನು ಪ್ರಧಾನ ಮಂತ್ರಿ ಕಚೇರಿಯ ಹೊರಗೆ ಬಿಡಲು ಪ್ರಯತ್ನಿಸಿದರು. ಆದರೆ, ಇದಕ್ಕೆ ಅನುಮತಿ ನೀಡಿದ ಪೊಲೀಸರು ಅವರನ್ನು ಕರ್ತವ್ಯ ಪಥದಲ್ಲಿ ತಡೆದರು. ಇದರಿಂದಾಗಿ ಅವರು ತಮ್ಮ ಪ್ರಶಸ್ತಿಗಳನ್ನು ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿ ಬಿಡಲು ನಿರ್ಧರಿಸಿದರು. ಇದಕ್ಕೂ ಮುನ್ನ ಬಜರಂಗ್​ ಪೂನಿಯ ಕೂಡ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಇಲ್ಲೇ ಬಿಟ್ಟು ಹೋಗಿದ್ದರು.

ವಿನೇಶ್ ಅವರಿಗೆ 2020ರಲ್ಲಿ ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನವನ್ನು ನೀಡಲಾಗಿತ್ತು. 2016 ರಲ್ಲಿ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಹೊಸದಾಗಿ ಆಯ್ಕೆಯಾದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾವನ್ನು ಕೇಂದ್ರ ಸರ್ಕಾರ ಅಮಾನತುಗೊಳಿಸಿದ ಹೊರತಾಗಿಯೂ ಕುಸ್ತಿಪಟುಗಳ ಈ ರೀತಿಯ ವರ್ತನೆ ತೋರುತ್ತಿರುವುದು ನಿಜಕ್ಕೂ ವಿಷಾಧನಿಯ ಸಂಗತಿ.

“ನನ್ನನ್ನು ಈ ಪರಿಸ್ಥಿತಿಗೆ ತಂದ ಸರ್ವಶಕ್ತನಿಗೆ ತುಂಬಾ ಧನ್ಯವಾದಗಳು. ದೇಶಕ್ಕೆ ಒಲಿಂಪಿಕ್​ ಪದಕಗಳನ್ನು ಗೆದ್ದ ಆಟಗಾರರು ಇದನೆಲ್ಲ ಯಾಕೆ ಮಾಡುತ್ತಿದ್ದಾರೆ ಎನ್ನುವುದು ಇಡೀ ದೇಶಕ್ಕೆ ತಿಳಿದಿದೆ. ನೀವು ದೇಶದ ಮುಖ್ಯಸ್ಥರು, ಆದ್ದರಿಂದ ಈ ವಿಷಯ ನಿಮಗೆ ತಲುಪಿರಬೇಕು. ನಾನು ನಿಮ್ಮ ಮನೆಯ ಮಗಳು ವಿನೇಶ್ ಫೋಗಟ್, ಕಳೆದ ಒಂದು ವರ್ಷದಿಂದ ನಾನು ಅನುಭವಿಸುತ್ತಿರುವ ನೋವನ್ನು ನಿಮಗೆ ತಿಳಿಸಲು ಈ ಪತ್ರವನ್ನು ಬರೆಯುತ್ತಿದ್ದೇನೆ” ಎಂದು ವಿನೇಶ್ ಅವರು ಮೋದಿಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ WFI Office: ಬ್ರಿಜ್​ ಭೂಷಣ್​ ಮನೆಯಿಂದ ಭಾರತೀಯ ಕುಸ್ತಿ ಒಕ್ಕೂಟದ ಕಚೇರಿ ಸ್ಥಳಾಂತರ

“ನ್ಯಾಯಕ್ಕಾಗಿ ಒಂದು ವರ್ಷದಿಂದ ಬೀದಿಗಿಳಿದಿದ್ದೇವೆ. ಯಾರೂ ನಮ್ಮನ್ನು ನೋಡಿಕೊಳ್ಳುತ್ತಿಲ್ಲ. ನಮ್ಮ ಪದಕಗಳು ಮತ್ತು ಪ್ರಶಸ್ತಿಗಳು ಮೌಲ್ಯದ್ದಾಗಿದೆ ಎಂದು ಹೇಳಲಾಗುತ್ತಿದೆ. ನಾವು ದೇಶಕ್ಕಾಗಿ ಪದಕಗಳನ್ನು ಗೆದ್ದಾಗ ಇಡೀ ದೇಶವೇ ನಮ್ಮನ್ನು ಹೆಮ್ಮೆಯಿಂದ ಪರಿಗಣಿಸಿತ್ತು. ಈಗ ನಾವು ನಮ್ಮ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದೇವೆ, ನಮ್ಮನ್ನು ದೇಶದ್ರೋಹಿ ಎಂದು ಕರೆಯಲಾಗುತ್ತಿದೆ. ಪದಕ ಪಡೆದ ಬಳಿಕ ನಮ್ಮನ್ನು ಕಸದಂತೆ ಕಾಣುತ್ತಿರುವಾಗ ನನಗೆ ಈ ಪದಕ ಇದರೆಷ್ಟು ಬಿಟ್ಟರೆಷ್ಟು, ಎಲ್ಲ ಘಟನೆಗಳನ್ನು ಮರೆಯಲು ಹಲವು ಬಾರಿ ಪ್ರಯತ್ನಿಸಿದ್ದೇನೆ. ಆದರೆ ಅದು ಅಷ್ಟು ಸುಲಭವಲ್ಲ. ನಮ್ಮ ಕಷ್ಟ ನಿಮಗೆ ಇನ್ನೂ ಅರ್ಥವಾಗಿಲ್ಲ” ಎಂದು ವಿನೇಶ್​ ಅವರು ಈ ಪತ್ರದಲ್ಲಿ ಬರೆದಿದ್ದರು.

Exit mobile version