Site icon Vistara News

Virat kohli : ಸೋತ ಪಾಕ್​ ತಂಡದ ನಾಯಕನಿಗೆ ವಿಶೇಷ ರೀತಿಯಲ್ಲಿ ಸಮಾಧಾನ ಮಾಡಿದ ಕೊಹ್ಲಿ

Virat Kohli

ನವದೆಹಲಿ: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದ ನಂತರ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಅವರಿಗೆ ಆಟೋಗ್ರಾಫ್​ ಹಾಕಿದ ಜೆರ್ಸಿ ನೀಡುವ ಮೂಲಕ ಅನೇಕರ ಹೃದಯ ಗೆದ್ದಿದ್ದಾರೆ. ಮೆನ್ ಇನ್ ಗ್ರೀನ್ ವಿರುದ್ಧ ಭಾರತ 7 ವಿಕೆಟ್​ಗಳ ಜಯ ಸಾಧಿಸಿದ ನಂತರ ಕೊಹ್ಲಿ ತಮ್ಮ ಜೆರ್ಸಿಯಲ್ಲಿ ಸಹಿ ಮಾಡಿ ಬಾಬರ್​ಗೆ ಕೊಟ್ಟರು. ಆ ಕ್ಷಣದ ವಿಡಿಯೊ ವೈರಲ್​ ಆಗಿದೆ.

ವೈರಲ್ ಆಗಿರುವ ವೀಡಿಯೊದಲ್ಲಿ, ಬಾಬರ್ ಅಜಮ್ ಮತ್ತು ವಿರಾಟ್ ಕೊಹ್ಲಿ ಗ್ರೌಂಡ್​ ನ ಒಳಗೆ ನಿಂತಿರುವುದನ್ನು ಕಾಣಬಹುದು. ಕೊಹ್ಲಿ ಬಾಬರ್​ಗೆ ಎರಡು ಜರ್ಸಿಗಳನ್ನು ನೀಡುವುದನ್ನು ಕಾಣಬಹುದು. ನಂತರ ಅವರಿಬ್ಬರ ಮಾತುಕತೆ ನಡದು ಪಾಕಿಸ್ತಾನದ ಸಹಾಯಕ ಸಿಬ್ಬಂದಿಯೊಬ್ಬರು ಸೇರಿಕೊಂಡಿದ್ದಾರೆ.

ರಾಜಕೀಯ ಉದ್ವಿಗ್ನತೆಯನ್ನು ಲೆಕ್ಕಿಸದೆ ಭಾರತೀಯ ಮತ್ತು ಪಾಕಿಸ್ತಾನಿ ಕ್ರಿಕೆಟಿಗರು ಯಾವಾಗಲೂ ಆರೋಗ್ಯಕರ ಸಂಬಂಧಗಳನ್ನು ಹಂಚಿಕೊಳ್ಳುತ್ತಾರೆ. ಅಂತೆಯೇ ಬಾಬರ್ ಅಜಮ್ ಮತ್ತು ವಿರಾಟ್ ಕೊಹ್ಲಿ ಪರಸ್ಪರ ಸಂವಹನ ನಡೆಸಿದರು. ಕೊಹ್ಲಿ ಜೆರ್ಸಿ ನೀಡುತ್ತಿದ್ದಂತೆ ಸೋಲಿನ ನಿರಾಸೆಯಲ್ಲಿದ್ದ ಬಾಬರ್​​ ಮುಖದಲ್ಲಿ ಮಂದಹಾಸ ಮೂಡಿತು.

ಇದು ಮೊದಲಲ್ಲ

ವಿಶೇಷವೆಂದರೆ, 34 ವರ್ಷದ ಆಟಗಾರ ಪಾಕಿಸ್ತಾನಿ ಆಟಗಾರನಿಗೆ ಸಹಿ ಮಾಡಿದ ಜರ್ಸಿಯನ್ನು ಉಡುಗೊರೆಯಾಗಿ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಏಷ್ಯಾಕಪ್ 2022 ರ ಪಂದ್ಯದ ನಂತರ ಕೊಹ್ಲಿ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಅವರಿಗಾಗಿ ಇದೇ ರೀತಿ ಜೆರ್ಸಿ ನೀಡಿದ್ದರು. ಪಾಕಿಸ್ತಾನ ವಿರುದ್ಧ ಭಾರತ ಐದು ವಿಕೆಟ್​ಗಳ ಜಯ ಸಾಧಿಸಿದ ನಂತರ ಕೊಹ್ಲಿ ರವೂಪ್​​ಗೆ ಸಹಿ ಮಾಡಿದ ಜರ್ಸಿಯನ್ನು ಉಡುಗೊರೆಯಾಗಿ ನೀಡಿದ್ದರು.

ಬ್ಯಾಟಿಂಗ್ ವೈಫಲ್ಯಕ್ಕೆ ಬಾಬರ್ ಬೇಸರ

ಪಂದ್ಯದ ನಂತರ ಮಾತನಾಡಿದ ಬಾಬರ್​, ಬ್ಯಾಟಿಂಗ್ ಕುಸಿತದಿಂದಾಗಿ ಪಾಕಿಸ್ತಾನವು ಪಂದ್ಯವನ್ನು ಕಳೆದುಕೊಂಡಿತು ಎಂದು ಒಪ್ಪಿಕೊಂಡರು. ಬಾಬರ್ ಮತ್ತು ಮೊಹಮ್ಮದ್ ರಿಜ್ವಾನ್ 2ನೇ ವಿಕೆಟ್ ಜೊತೆಯಾಟದಲ್ಲಿ 81 ರನ್​ಗಳು ಬಂದರೂ ಬಳಿಕ ಏಕಾಏಕಿ ಕುಸಿಯಿತು.

ಇದನ್ನೂ ಓದಿ : Ind vs Pak : ಶ್ರೇಯಸ್​ ಕಡೆಗೆ ಚೆಂಡು ಎಸೆದು ಪ್ರೇಕ್ಷಕರಿಂದ ಲೇವಡಿಗೆ ಒಳಗಾದ ಪಾಕ್ ವೇಗಿ

“ನಾವು ಉತ್ತಮ ಜೊತೆಯಾಟವನ್ನು ನೀಡಿದ್ದೇವೆ. ನಾವು ಸಾಮಾನ್ಯ ಕ್ರಿಕೆಟ್ ಆಡಲು ಮತ್ತು ಪಾಲುದಾರಿಕೆಯನ್ನು ನಿರ್ಮಿಸಲು ಯೋಜಿಸಿದ್ದೆವು. ಆದೆರ, ಇದ್ದಕ್ಕಿದ್ದಂತೆ, ಬ್ಯಾಟಿಂಗ್​ ಕುಸಿತ ಎದುರಿಸಿದೆವು. ನಮ್ಮ ಗುರಿ 280-290 ಆಗಿತ್ತು, ಒಟ್ಟು ಮೊತ್ತ ಉತ್ತಮವಾಗಿರಲಿಲ್ಲ. ಹೊಸ ಚೆಂಡಿನೊಂದಿಗೆ ನಾವು ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎಂದು ಬಾಬರ್ ಹೇಳಿದ್ದಾರೆ.

ಪಂದ್ಯದಲ್ಲಿ ಏನಾಯಿತು?

ಬೌಲರ್​ಗಳ ಸಂಘಟಿತ ಹೋರಾಟ ನಾಯಕ ರೋಹಿತ್​ ಶರ್ಮಾ (86) ಅವರ ಅಬ್ಬರದ ಅರ್ಧ ಶತಕದ ನೆರವು ಪಡೆದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (Ind vs Pak) ವಿರುದ್ಧದ ವಿಶ್ವ ಕಪ್​ (ICC World Cup 2023) ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತವರೂರು ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಹೀನಾಯವಾಗಿ ಸೋಲಿಸಿತು. ಪಂದ್ಯ ನಡೆದ ಸ್ಟೇಡಿಯಮ್​ ಕೂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿರುವ ಕಾರಣ ಚರ್ಚೆ ಯೂ ಜೋರಾಗಿತ್ತು. ಆದರೆ ಭಾರತ ಬಳಗ ಪಾಕ್​ ತಂಡವನ್ನು ಕ್ಯಾರೇ ಎನ್ನದೇ ಗೆಲುವು ಸಾಧಿಸಿತು.

ಇದರೊಂದಿಗೆ ಹಾಲಿ ವಿಶ್ವ ಕಪ್​ನಲ್ಲಿ ಭಾರತ ತಂಡ ಅತ್ಯುತ್ತಮ ಆರಂಭ ಪಡೆದಿದ್ದು ಹ್ಯಾಟ್ರಿಕ್​ ಜಯ ಭಾರತದ ಪಾಲಾಗಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿದ್ದ ಭಾರತ ತಂಡ ನಂತರದ ಪಂದ್ಯದಲ್ಲಿ ಅಪಘಾನಿಸ್ತಾನ ತಂಡದ ವಿರುದ್ಧ ಸವಾರಿ ಮಾಡಿತ್ತು. ಇದೀಗ ಪಾಕ್ ವಿರುದ್ಧವೂ ನಿರಾಯಾಸ ಗೆಲುವು ತನ್ನದಾಗಿಸಿಕೊಂಡಿದೆ. ಈ ವಿಜಯದೊಂದಿಗೆ ಪಾಕ್​ ವಿರುದ್ಧ ವಿಶ್ವ ಕಪ್​ ಇತಿಹಾಸದಲ್ಲಿನ ತನ್ನ ಮುನ್ನಡೆಯನ್ನು 8-0 ಅಂತರಕ್ಕೆ ಮುಂದುವರಿಸಿಕೊಂಡಿತು ಟೀಮ್ ಇಂಡಿಯಾ.

ಇದನ್ನೂ ಓದಿ : Ganesha Chathurthi : ಕೊಹ್ಲಿ ಮತ್ತು ರೋಹಿತ್​ ಶರ್ಮಾ ಗಣೇಶ ಚತುರ್ಥಿ ಹೇಗೆ ಆಚರಿಸಿದ್ರು ಗೊತ್ತಾ?

ಜಸ್​ಪ್ರಿತ್​ ಬುಮ್ರಾ, ಮೊಹಮ್ಮದ್ ಸಿರಾಜ್​, ಹಾರ್ದಿಕ್ ಪಾಂಡ್ಯ, ಕುಲ್ದೀಪ್​ ಯಾದವ್​, ರವೀಂದ್ರ ಜಡೇಜಾ ತಲಾ 2 ವಿಕೆಟ್​ ಪಡೆಯುವ ಮೂಲಕ ಭಾರತ ತಂಡಕ್ಕೆ ಮುನ್ನಡೆಗೆ ಕಾರಣರಾದರು. ಪಾಕ್​ ವಿರುದ್ಧದ ಗೆಲುವಿನಲ್ಲಿ ಬೌಲರ್​ಗಳ ಪಾಲು ದೊಡ್ಡದಿದೆ. ಪ್ರಮುಖ ಬ್ಯಾಟರ್​ಗಳನ್ನು ಔಟ್​ ಮಾಡುವ ಮೂಲಕ ಸಣ್ಣ ಮೊತ್ತದ ಸವಾಲು ಎದುರಾಗುವಂತೆ ನೋಡಿಕೊಂಡರು. ಇನಿಂಗ್ಸ್​​ ಉದ್ದಕ್ಕೂ ಭಾರತದ ಬೌಲರ್​ಗಳು ಹಾಗೂ ಫೀಲ್ಡರ್​ಗಳು ಮೆರೆದಾಡಿದರು. ಪಾಕ್​ ಬ್ಯಾಟರ್​ಗಳು ಅಕ್ಷರಶಃ ಪರದಾಡಿದರು.

ಇದು ಭಾರತ ತಂಡಕ್ಕೆ ಪಾಕಿಸ್ತಾನ ವಿರುದ್ಧ ಏಕ ದಿನ ಮಾದರಿಯಲ್ಲಿ ಸಿಗುತ್ತಿರುವ ಸತತ ಎರಡನೇ ವಿಜಯ. ಸೆಪ್ಟೆಂಬರ್​ 4ರಂದು ನಡೆದಿದ್ದ ಏಷ್ಯಾ ಕಪ್​ ಸೂಪರ್ ಸಿಕ್ಸ್ ಹಣಾಹಣಿಯಲ್ಲಿ ಪಾಕ್ ವಿರುದ್ಧ​ 228 ರನ್​ಗಳ ಬೃಹತ್ ಅಂತರದ ಗೆಲುವು ದಾಖಲಿಸಿತ್ತು ಭಾರತ.

Exit mobile version