Site icon Vistara News

Virat Kohli: ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ರಾರಾಜಿಸಿದ ಕಿಂಗ್​ ಕೊಹ್ಲಿ ಕಟೌಟ್

Kohli cutout around Chinnaswamy Stadium

ಬೆಂಗಳೂರು: ಭಾರತ ತಂಡ ವಿಶ್ವಕಪ್​ನ ಕೊನೆಯ ಲೀಗ್​ ಪಂದ್ಯವನ್ನು ಇಂದು ನೆದರ್ಲೆಂಡ್ಸ್​ ವಿರುದ್ಧ ಆಡಲಿದೆ. ಈ ಪಂದ್ಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಕ್ಕಿಂತ ಸ್ಟೇಡಿಯಂನ ಹೊರ ಭಾಗದಲ್ಲಿ ರಾರಾಜಿಸುತ್ತಿರುವ ವಿರಾಟ್ ಕೊಹ್ಲಿ(Virat Kohli) ಅವರ ಕಟೌಟ್​ ಪ್ರಮುಖ ಆಕರ್ಷಣೆಯಾಗಿದೆ. ಕೊಹ್ಲಿ ಸಿಡಿಸಿರುವ ಕೆಲ ಶತಕದ ಸಂಭ್ರಮಾಚರಣೆಯ ಕಟೌಟ್​ ಇದಾಗಿದೆ. ಇದರ ವಿಡಿಯೊ ಎಲ್ಲಡೆ ವೈರಲ್(viral video) ಆಗಿದೆ.

ಸ್ಟೇಡಿಯಂ ಹೊರಭಾಗದಲ್ಲಿ ವಿರಾಟ್ ಕೊಹ್ಲಿ ಅವರು ಇದುವರೆಗೆ ಏಕದಿನ ಮತ್ತು ಟಿ20ಯಲ್ಲಿ ಸಿಡಿಸಿರುವ ಕೆಲ ಶತಕದ ಸಂಭ್ರಮಾಚರಣೆಯ ಕಟೌಟ್​ಗಳನ್ನು ನಿಲ್ಲಿಸಲಾಗಿದೆ. ಅಲ್ಲದೆ ತಮ್ಮ 50ನೇ ಶತಕವನ್ನು ಇಂದು ಬಾರಿಸಲಿ ಎಂದು ಶುಭ ಹಾರೈಸಿದ್ದಾರೆ. ಅಭಿಮಾನಿಗಳು ಈ ಕಟೌಟ್​ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಆರ್​ಸಿಬಿ ಫ್ರಾಂಚೈಸಿ ಕಟೌಟ್​ನ ವಿಡಿಯೊವನ್ನು ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡು”ನಮ್ಮ ವಿರಾಟ ರಾಜ” ಎಂದು ಬರೆದುಕೊಂಡಿದೆ.

ಈಗಾಗಲೇ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜಮಾಯಿಸಲು ಆರಂಭಿಸಿರುವುದರಿಂದ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಸಂಪೂರ್ಣ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ವಹಿಸಿದ್ದಾರೆ. ವಿರಾಟ್​ ಅವರು ಆರ್​ಸಿಬಿ ಪರ ಆಡುವ ಕಾರಣ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಅಭಿಮಾನಿಗಳಿದ್ದಾರೆ. ಒಟ್ಟಾರೆ ಇಂದಿನ ಪಂದ್ಯದುದ್ದಕ್ಕೂ ಕೊಹ್ಲಿಯ ಹೆಸರೇ ಕೇಳಿಬರುವುದರಲ್ಲಿ ಅನುಮಾನವೇ ಇಲ್ಲ.

ಬೆಂಗಳೂರು ನನಗೆ ಎರಡನೇ ತವರು ಎಂದ ಕೊಹ್ಲಿ

ವಿರಾಟ್​ ಕೊಹ್ಲಿ(virat kohli) ಅವರು ಬೆಂಗಳೂರು (Bangalore) ಮತ್ತು ಇಲ್ಲಿನ ಜನರ ಪ್ರೀತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಭಾರತ ತಂಡ ತನ್ನ ವಿಶ್ವಕಪ್​ನ ಕೊನೆಯ ಪಂದ್ಯವನ್ನು ಭಾನುವಾರ ನೆದರ್ಲೆಂಡ್ಸ್​ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(m chinnaswamy stadium) ಆಡಲಿದೆ. ಈ ಪಂದ್ಯಕ್ಕೂ ಮುನ್ನ ನಡೆದ ಸ್ಟಾರ್​ ಸ್ಪೋರ್ಟ್ಸ್​ ಸಂದರ್ಶನದಲ್ಲಿ ಕೊಹ್ಲಿ ಅವರು ಬೆಂಗಳೂರಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕೊಹ್ಲಿ ಮತ್ತು ಬೆಂಗಳೂರಿಗೂ ಇರುವ ಸ್ಪೆಷಲ್ ಕನೆಕ್ಷನ್ ಏನೆಂದರೆ ಅದು ಐಪಿಎಲ್​ ಟೂರ್ನಿ. ಕೊಹ್ಲಿ ಅವರು ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು(Royal Challengers Bangalore) ತಂಡದ ಆಟಗಾರನಾಗಿದ್ದಾರೆ. ಹೀಗಾಗಿ ಅವರಿಗೆ ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಹೀಗಾಗಿ ಕೊಹ್ಲಿಗೆ ಬೆಂಗಳೂರು ಮತ್ತು ಇಲ್ಲಿನ ಜನರೆಂದರೆ ಅಚ್ಚುಮೆಚ್ಚು.

ಇದನ್ನೂ ಓದಿ Virat Kohli : ಲೀಗ್ ಹಂತದ ಕೊನೇ ಪಂದ್ಯದಲ್ಲಿ ಸಚಿನ್​ ದಾಖಲೆ ಮುರಿಯುವರೇ ಕೊಹ್ಲಿ?

2ನೇ ತವರು ಮನೆ

ಅಂಡರ್​​​-19 ವಿಶ್ವಕಪ್​​​​​​​​​​ನಿಂದಲೇ ಬೆಂಗಳೂರಿಗೂ ನನಗೂ ವಿಶೇಷ ಬಾಂಧವ್ಯ ಆರಂಭವಾಯಿತು. 2008 ರ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ಮೊದಲು ನನ್ನನ್ನ ಬಿಡ್ ಮಾಡಿತ್ತು. ಬಳಿಕ ನನ್ನನ್ನು ಕೈ ಬಿಟ್ಟು ಪ್ರದೀಪ್​ ಸಾಂಗ್ವಾರನ್ನು ಖರೀದಿಸಿತು. ಆರ್​ಸಿಬಿ ಎರಡನೇ ತಂಡವಾಗಿ ನನ್ನನ್ನು ಬಿಡ್​ ಮಾಡಿತು. ಕೊನೆಗೆ ಆರ್​ಸಿಬಿ ಪಾಲಾದೆ. ಅಲ್ಲಿಂದ ಇಲ್ಲಿ ತನಕ ನಾನು ಆರ್​ಸಿಬಿ ತಂಡದ ಪರವೇ ಆಡುತ್ತಿದ್ದೇನೆ. ಇಂತಹ ಫ್ರಾಂಚೈಸಿಯನ್ನ ನಾನು ಇದುವರೆಗೆ ನೋಡಿಲ್ಲ. ಹಲವು ವರ್ಷಗಳಿಂದ ಫ್ಯಾನ್ಸ್ ಸಾಕಷ್ಟು ಪ್ರೀತಿ, ಸಹಕಾರ ನೀಡುತ್ತಿದ್ದಾರೆ. ಇಂತಹ ಪ್ರೀತಿ ಪಡೆದಿರುವ ನಾನು ನಿಜಕ್ಕೂ ಧನ್ಯ. ಬೆಂಗಳೂರಿನ ಸಿಟಿ ಎಂದರೆ ನನಗೆ ತುಂಬಾ ಇಷ್ಟ ಇಲ್ಲಿನ ಜನರೂ ಕೂಡ ಅಷ್ಟೇ ಪ್ರೀತಿ ಪಾತ್ರರು ಎಂದು ಹೇಳಿದರು.

ನಾನು ಹೆದಲಿಯಲ್ಲಿ ಜನಿಸಿದರೂ ಬೆಂಗಳೂರಿನಲ್ಲಿ ವಿಶೇಷ ಬಾಂಧವ್ಯ ಹೊಂದಿದ್ದೇನೆ. ನನಗೆ ಇಲ್ಲಿ ತವರಿನ ಅನುಭವ ನೀಡುತ್ತದೆ. ಹೀಗಾಗಿ ಬೆಂಗಳೂರು ನನ್ನ ಎರಡನೇ ತವರು ಕೂಡ ಆಗಿದೆ. ಬೆಂಗಳೂರಿಗರ ಪ್ರೀತಿ, ಬೆಂಬಲ ನಿಜಕ್ಕೂ ಅದ್ಭುತ. ಪ್ರತಿ ಐಪಿಎಲ್​ ಸೀಸನ್ ವೇಳೆ ಅದನ್ನು ನಾನು ನೋಡುತ್ತಿದ್ದೇನೆ. ನನಗೆ ಎಲ್ಲವನ್ನು ನೀಡಿದ ಆರ್​ಸಿಬಿ ಮತ್ತು ಕನ್ನಡಿಗರನ್ನು ಎಷ್ಟೇ ಹೊಗಳಿದರು ಸಾಲದು. ಕಡೆಯ ವರೆಗೂ ಆರ್​ಸಿಬಿ ಪರ ಆಡುವೆ ಎಂದು ಕೊಹ್ಲಿ ಮನದಾಳದ ಮಾತುಗಳನ್ನಾಡಿದರು. ಈ ವಿಡಿಯೊವನ್ನು ಆರ್​ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

Exit mobile version