Site icon Vistara News

WTC Final 2023: ಆಡುವ ಬಳಗದಿಂದ ಅಶ್ವಿನ್​ ಕೈ ಬಿಡಲು ಕಾರಣ ಇದಂತೆ

ICC World Test Championship Final 2023

ಲಂಡನ್​: ಆಸ್ಟ್ರೇಲಿಯಾ ವಿರುದ್ಧ ಆರಂಭಗೊಂಡ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಆರ್​. ಅಶ್ವಿನ್​ಗೆ ಆಡುವ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಇದೇ ವಿಚಾರವಾಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಭಾರತ ತಂಡ ಮಾಡಿದ ದೊಡ್ಡ ತಪ್ಪು ಇದಾಗಿದೆ ಎಂದು ಹೇಳಿದ್ದಾರೆ. ಆದರೆ ತಂಡದ ನಾಯಕ ರೋಹಿತ್​ ಶರ್ಮ ಅವರು ಅಶ್ವಿನ್​ ಅವರನ್ನು ಕೈಬಿಟ್ಟ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದಾರೆ.

ಲಂಡನ್​ನ ಓವಲ್​ ಮೈದಾನದಲ್ಲಿ ಬುಧವಾರ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್​ ವೇಳೆ ಪ್ರಕಟಗೊಂಡ ಭಾರತ ತಂಡದಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶ್ವದ ನಂ.1 ಬೌಲರ್ ಆಗಿರುವ ಆಫ್‌ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ಅವರನ್ನು ಆಡುವ 11ರ ಬಳಗದಿಂದ ಕೈಬಿಟ್ಟು ಅಚ್ಚರಿ ಮೂಡಿಸಿತು. ಇದೇ ವೇಳೆ ನೆಟ್ಟಿಗರು ಟೀಮ್​ ಮ್ಯಾನೆಜ್​ಮೆಂಟ್​ ವಿರುದ್ಧ ಟ್ವಿಟರ್​ನಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ.

ಅಶ್ವಿನ್​ ಬದಲು ಮಧ್ಯಮ ವೇಗಿ ಹಾಗೂ ಆಲ್​ರೌಂಡರ್​ ಆಗಿರುವ ಶಾರ್ದೂಲ್​ ಠಾಕೂರ್​ ಅವರನ್ನು ಟೀಮ್ ಇಂಡಿಯಾ ಹೆಚ್ಚುವರಿ ವೇಗಿಯನ್ನಾಗಿ ಆಯ್ಕೆ ಮಾಡಿಕೊಂಡಿತು. ಇದೇ ವಿಚಾರವಾಗಿ ಮಾತನಾಡಿದ ರೋಹಿತ್​ ಅವರು “ಇಲ್ಲಿನ ಪರಿಸ್ಥಿತಿಗಳು ಬೌಲಿಂಗ್‌ಗೆ ಉತ್ತಮವಾಗಿದೆ. ಹೀಗಾಗಿ ನಾವು ಮೊದಲು ಬೌಲಿಂಗ್‌ ಮಾಡಲಿದ್ದೇವೆ. ಮೋಡ ಕವಿದ ವಾತಾವರಣವೂ ಇದೆ. ಈ ಪಿಚ್‌ನಲ್ಲಿ ಸ್ಪಿನ್​ ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಕಡಿಮೆ. ಹೀಗಾಗಿ ನಾವು 4 ವೇಗಿಗಳು ಮತ್ತು ಒಬ್ಬ ಸ್ಪಿನ್ನರ್‌ನ ಆಯ್ಕೆ ಮಾಡಿಕೊಂಡಿದ್ದೇವೆ. ಜಡೇಜಾ ಅವರನ್ನು ಏಕೈಕ ಸ್ಪಿನ್ನರ್‌ ಆಗಿ ಆಯ್ಕೆ ಮಾಡಿಕೊಂಡಿದ್ದೇವೆ. ಅಶ್ವಿನ್ ಅವರನ್ನು ಹೊರಗಿಡುವುದು ಕಠಿಣ ನಿರ್ಧಾರವಾಗಿದೆ. ಆದರೂ ತಂಡದ ಹಿತದೃಷ್ಟಿಯಿಂದ ಅವರನ್ನು ಅನಿವಾರ್ಯವಾಗಿ ಕೈಬಿಡಬೇಕಾಯಿತು” ಎಂದರು.

ಇದನ್ನೂ ಓದಿ WTC Final 2023: ಭಾರತ, ಆಸ್ಟ್ರೇಲಿಯಾ​ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಿದ್ದರ ಹಿಂದಿದೆ ಭಾವುಕ ಕಾರಣ

ಸದ್ಯ ಬ್ಯಾಟಿಂಗ್​ ನಡೆಸುತ್ತಿರುವ ಆಸ್ಟ್ರೇಲಿಯಾ ತಂಡ ಮೂರು ವಿಕೆಟ್​ ಕಳೆದುಕೊಂಡು 85 ರನ್​ ಗಳಿಸಿದೆ. ಉತ್ತಮ ರನ್​ ಕಲೆ ಹಾಕುತ್ತಿದ್ದ ಡೇವಿಡ್​ ವಾರ್ನರ್​ ಅವರನ್ನು ಔಟ್​ ಮಾಡುವ ಮೂಲಕ ಶಾರ್ದೂಲ್​ ಅವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

Exit mobile version