Site icon Vistara News

ಮೊಸಳೆಗಳಿಗೂ ಅಂಜದೆ ಈಜಿಕೊಂಡೇ ಭಾರತಕ್ಕೆ ಬಂದು ಪ್ರಿಯತಮನ ತೆಕ್ಕೆ ಸೇರಿದ ಬಾಂಗ್ಲಾ ಯುವತಿ

Bangladeshi Girl

ಕೋಲ್ಕತ್ತ: ಪ್ರೇಮಿಗಳು ತಮ್ಮ ಪ್ರೀತಿಗಾಗಿ ಎಂಥ ಸವಾಲು ಎದುರಿಸಲೂ ಸಿದ್ಧರಾಗಿಬಿಡುತ್ತಾರೆ. ಹಾಗೇ, ಬಾಂಗ್ಲಾದೇಶದ ಯುವತಿಯೊಬ್ಬಳು ಭಾರತದಲ್ಲಿರುವ ತನ್ನ ಪ್ರಿಯಕರನ ತೆಕ್ಕೆ ಸೇರಲು ಸುಮಾರು 1 ತಾಸು ನದಿಯೊಂದರಲ್ಲಿ ಈಜಿಕೊಂಡೇ ಬಂದಿದ್ದಾಳೆ. ಅದರಲ್ಲೂ ಆಕೆ ಈಜಿ ಬಂದ ಹಾದಿ ಅತ್ಯಂತ ಭಯಾನಕವಾಗಿತ್ತು. ಆ ನೀರಿನಲ್ಲಿ ಮೊಸಳೆಗಳಿದ್ದವು, ನದಿ ಹಾದು ಬಂದ ಕಾಡಿನಲ್ಲಿ ಹುಲಿಗಳು ಇದ್ದವು. ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಈಜಿದ ಯುವತಿ ತನ್ನ ಪ್ರೇಮಿಯನ್ನೇನೋ ಸೇರಿಕೊಂಡಳು. ಆದರೆ ಈಗ ಅರೆಸ್ಟ್‌ ಆಗಿದ್ದಾಳೆ.

ಬಾಂಗ್ಲಾದೇಶದಿಂದ ಬಂದ ಯುವತಿಯ ಹೆಸರು ಕೃಷ್ಣಾ ಮಂಡಲ್‌. ಆಕೆಯ ಪ್ರೇಮಿ ಅಭಿಷೇಕ್‌ ಮಂಡಲ್‌ ಇದ್ದಿದ್ದು ಪಶ್ಚಿಮ ಬಂಗಾಳದ ರಾಣಿಯಾ ಎಂಬಲ್ಲಿ. ಇವರಿಬ್ಬರೂ 6ವರ್ಷಗಳ ಹಿಂದೆ ಮೊಟ್ಟ ಮೊದಲಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾದರು. ಬಳಿಕ ಚಾಟ್‌ ಮಾಡತೊಡಗಿದರು. ಬರುಬರುತ್ತ ಸ್ನೇಹ ಪ್ರೀತಿಗೆ ತಿರುಗಿತು. ತಾವಿಬ್ಬರೂ ಮದುವೆಯಾಗಬೇಕು ಎಂದು ಒಂದು ದಿನ ನಿರ್ಧರಿಸಿದರು. ಕೃಷ್ಣಾ ಭಾರತಕ್ಕೆ ಬರಲಾಗಲಿ, ಅಭಿಷೇಕ್‌ ಬಾಂಗ್ಲಾದೇಶಕ್ಕೆ ಹೋಗಲಾಗಲಿ ಇಬ್ಬರ ಬಳಿಯೂ ಪಾಸ್‌ಪೋರ್ಟ್‌-ವೀಸಾ ಏನೂ ಇಲ್ಲ. ಹಾಗಂತ ಪ್ರೀತಿಯನ್ನು ಬಿಡಲೂ ಆಗದು. ಆಗಲೇ ಯುವತಿ ಈ ಪ್ಲ್ಯಾನ್‌ ಮಾಡಿದ್ದಾಳೆ.

ಇದನ್ನೂ ಓದಿ: Video: ʼಮಮ್ಮೀ ಬಾʼ ಎಂದು ಮುದ್ದಾಗಿ ಕೂಗುವ ಕೆಂಪು ಗಿಳಿ; ವಿಡಿಯೋ ನೋಡಿ ನೆಟ್ಟಿಗರು ಖುಷ್‌

ಬಾಂಗ್ಲಾದೇಶದ ಸುಂದರ್ಬನ್‌ ಅರಣ್ಯ ಪ್ರದೇಶದ ಮೂಲಕ ಹಾದು ಹೋಗಿರುವ ನದಿಯಲ್ಲಿ ಈಜಿಕೊಂಡು ಬಂದರೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ತಲುಪಬಹುದು ಎಂದು ಎಣಿಸಿದ ಕೃಷ್ಣಾ ಅದನ್ನು ಕಾರ್ಯ ರೂಪಕ್ಕೂ ತಂದಿದ್ದಾಳೆ. ಆದರೆ ಈಕೆ ಈಜಿದ ಮಾಟ್ಲಾ ನದಿ ಮಾರ್ಗದಲ್ಲಿ ತುಂಬ ಅಪಾಯವಿದೆ. ಕಾಡಿನಲ್ಲೇ ನದಿ ಹಾದುಹೋಗಿದೆ. ಇಲ್ಲಿ ನರಭಕ್ಷಕ ಮೊಸಳೆಗಳಿವೆ. ಆ ಕಾಡಂತೂ ಹುಲಿಗಳಿಗೇ ಹೆಸರುವಾಸಿಯಾದದ್ದು. ಆದರೆ ಪ್ರಿಯಕರನನ್ನು ಸೇರುವ ತವಕದಲ್ಲಿದ್ದ ಯುವತಿಗೆ ಇದ್ಯಾವುದೂ ಲೆಕ್ಕಕ್ಕೇ ಇರಲಿಲ್ಲ.

ಒಂದು ತಾಸು ಈಜಿ ತಲುಪಬೇಕಾದ ಸ್ಥಳ ತಲುಪಿದ ಕೃಷ್ಣಾಳನ್ನು ಆಕೆಯ ಪ್ರಿಯಕರ ಅಭಿಷೇಕ್‌ ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಅವರಿಬ್ಬರೂ ಕಾಳಿಘಾಟ್‌ಗೆ ಹೋಗಿ ಮದುವೆಯಾಗಿದ್ದಾರೆ. ಇವರಿಬ್ಬರ ಲವ್‌ ಸ್ಟೋರಿ ಬಹಳ ಬೇಗನೇ ಸುತ್ತಲಿನ ಸ್ಥಳಗಳಲ್ಲಿ ಹರಡಿದೆ. ಹಾಗೇ ಪೊಲೀಸರ ಕಿವಿಗೂ ಬಿದ್ದು, ಅವರು ಬಂದು ವಿಚಾರಿಸಿದ್ದಾರೆ. ಕೃಷ್ಣಾ ಅಕ್ರಮವಾಗಿ ಭಾರತ ಪ್ರವೇಶಿಸಿದ್ದರಿಂದ ಆಕೆಯನ್ನು ಬಂಧಿಸಿದ್ದಾರೆ. ಆಕೆಯನ್ನು ಇಂದು ಕೋರ್ಟ್‌ಗೂ ಹಾಜರುಪಡಿಸಲಾಗಿದೆ.

ಇದನ್ನೂ ಓದಿ: video viral: ಇದೇ ತರ ಹೊಟ್ಟೆ ಬೆಳೆದ್ರೆ ಏನಾಗ್ತದೆ ನೋಡು.. ಮಮತಾ ಬ್ಯಾನರ್ಜಿ ಹೀಗೂ ಜೋಕ್‌ ಮಾಡ್ತಾರಾ?

Exit mobile version