Site icon Vistara News

Viral Video : ಕರೀನಾ ಕಪೂರ್‌ ವರ್ತನೆ ಬಗ್ಗೆ ನಾರಾಯಣಮೂರ್ತಿ ಗರಂ; ನಟಿ ಪರ ನಿಂತ ಸುಧಾ ಮೂರ್ತಿ!

#image_title

ಬೆಂಗಳೂರು: ಇನ್ಫೋಸಿಸ್‌ ಸಂಸ್ಥಾಪಕರಾದ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಯ ಸಾಧನೆಗಳ ಬಗ್ಗೆ ನಿಮಗೆ ತಿಳಿದಿರುತ್ತದೆ. ಈ ಸಾಧಕ ದಂಪತಿ ಹಲವು ಸಂದರ್ಶನ, ಕಾರ್ಯಕ್ರಮಗಳನ್ನು ಕೊಡುತ್ತಿರುತ್ತಾರೆ. ಅದೇ ರೀತಿ ಕೊಟ್ಟ ಕಾರ್ಯಕ್ರಮವೊಂದರಲ್ಲಿ ನಾರಾಯಣ ಮೂರ್ತಿ ಅವರು ಬಾಲಿವುಡ್‌ ನಟಿ ಕರೀನಾ ಕಪೂರ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಸುಧಾಮೂರ್ತಿ ಅವರು ನಟಿ ಪರವಾಗಿ (Viral Video) ನಿಂತಿದ್ದು ಭಾರಿ ಸುದ್ದಿಗೆ ಕಾರಣವಾಗಿದೆ.

ಸುಧಾಮೂರ್ತಿ ಮತ್ತು ನಾರಾಯಣಮೂರ್ತಿ ಅವರು ಐಐಟಿ ಕಾನ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆಗ ಈ ಜೋಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದೆ. ಅದರಲ್ಲಿ ಅನೇಕ ವಿದ್ಯಾರ್ಥಿಗಳು ಅವರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಅವರು ಉತ್ತರಿಸಿದ್ದಾರೆ. ಅದೇ ರೀತಿಯಲ್ಲಿ ನಾರಾಯಣ ಮೂರ್ತಿ ಅವರು ಅನುಭವವೊಂದನ್ನು ಹಂಚಿಕೊಳ್ಳುವಾಗ ನಟಿ ಕರೀನಾ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: Sudha Murthy : ಸುಧಾಮೂರ್ತಿಯವರ ಯುಕೆ ವಿಳಾಸವನ್ನು ಜೋಕ್‌ ಎಂದು ಬ್ರಿಟಿಷ್‌ ಅಧಿಕಾರಿ ಹೇಳಿದ್ದೇಕೆ?
“ಒಮ್ಮೆ ನಾನು ಲಂಡನ್‌ನಿಂದ ಬರುವಾಗ ಕರೀನಾ ಅವರು ನನ್ನ ಪಕ್ಕದ ಸೀಟಿನಲ್ಲೇ ಕುಳಿತಿದ್ದರು. ಆಗ ಕರೀನಾ ಅವರನ್ನು ಕಂಡ ಕೆಲವು ಅಭಿಮಾನಿಗಳು ಅವರ ಬಳಿ ಬಂದು ಹಲೋ ಎಂದು ಮಾತನಾಡಿಸಲು ಯತ್ನಿಸಿದರು. ಆದರೆ ಕರೀನಾ ಅವರು ಅವರ್ಯಾರಿಗೂ ಪ್ರತಿಕ್ರಿಯಿಸಲೇ ಇಲ್ಲ. ಕೆಲವರು ನನ್ನ ಬಳಿಯೂ ಬಂದರು. ಆಗ ನಾನು ಎದ್ದು ನಿಂತು ಅವರೊಂದಿಗೆ ಅರ್ಧ-ಒಂದು ನಿಮಿಷ ಮಾತನಾಡಿದೆ. ಇದನ್ನೇ ಅಲ್ಲವೇ ಸಾರ್ವಜನಿಕರು ಬಯಸುವುದು” ಎಂದು ನಾರಾಯಣಮೂರ್ತಿ ಹೇಳಿದ್ದರು.

ಹೀಗೆ ಹೇಳುತ್ತಿದ್ದಂತೆಯೇ ಸುಧಾ ಮೂರ್ತಿ ಅವರು ಕರೀನಾ ಪರವಾಗಿ ಮಾತನ್ನೆತ್ತಿದ್ದಾರೆ. “ಕರೀನಾ ಅವರು ಸಿನಿಮಾ ನಟಿ. ಅವರಿಗೆ ಲಕ್ಷಾಂತರ ಮಂದಿ ಅಭಿಮಾನಿಗಳು ಇರುತ್ತಾರೆ. ಅವರು ಸುಸ್ತಾಗಿರಬಹುದು. ಮೂರ್ತಿ ಅವರು ಸಾಫ್ಟ್‌ವೇರ್‌ ಕಂಪನಿ ಸಂಸ್ಥಾಪಕರು, ಸಾಫ್ಟ್‌ವೇರ್‌ ವ್ಯಕ್ತಿ. ಅವರಿಗೆ ಹೆಚ್ಚೆಂದರೆ 10,000 ಅಭಿಮಾನಿಗಳು ಇರಬಹುದು” ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ಮಾತನಾಡಿದ ನಾರಾಯಣ ಮೂರ್ತಿ ಅವರು, “ಅದು ವಿಷಯವಲ್ಲ. ಸಮಸ್ಯೆಯೆಂದರೆ, ಯಾರಾದರೂ ಪ್ರೀತಿಯನ್ನು ತೋರಿಸಿದಾಗ, ನೀವು ಅದನ್ನು ವಾಪಸು ನೀಡಬೇಕು. ಇದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಇವೆಲ್ಲವೂ ನಿಮ್ಮ ಅಹಂಕಾರವನ್ನು ಕಡಿಮೆ ಮಾಡುವ ಮಾರ್ಗಗಳು, ಅಷ್ಟೆ” ಎಂದು ವಿವರಿಸಿದ್ದಾರೆ.

ಈ ದಂಪತಿಯ ಈ ಮಾತುಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್‌ ಆಗುತ್ತಿದೆ.

Exit mobile version