Site icon Vistara News

Viral Video: ಪ್ರೀತಿಯಿಂದ ಬಳಿ ಬಂದ ಯುವತಿಗೆ ಆನೆಯ ಉಗ್ರ ಪ್ರತಿಕ್ರಿಯೆ! ಶಾಕಿಂಗ್ ವಿಡಿಯೊ ಇಲ್ಲಿದೆ

viral video

viral video

ಬೆಂಗಳೂರು: ಸಾಮಾನ್ಯವಾಗಿ ಸಾಕಾನೆಗಳು ಶಾಂತ ಸ್ವಾಭಾವ ಹೊಂದಿರುತ್ತವೆ. ಮಾವುತನ ಮಾತು ಕೇಳಿಕೊಂಡು ತಮ್ಮಷ್ಟಕ್ಕೆ ತಾವಿರುತ್ತವೆ. ಆದರೆ ಕೆಲವೊಮ್ಮೆ ತಾಳ್ಮೆ ಕಳೆದುಕೊಂಡರೆ ಮಾತ್ರ ಅವನ್ನು ಎದುರಿಸಲು ಸಾಧ್ಯವೇ ಇಲ್ಲ. ಕೆಣಕಿದವರು ಕಥೆ ಮುಗಿಯಿತು ಅಂತನೇ ಅರ್ಥ. ಈ ರೀತಿಯ ಅನೇಕ ವಿಡಿಯೊಗಳು ಈ ಹಿಂದೆ ಇಂಟರ್‌ನೆಟ್‌ನಲ್ಲಿ ಸದ್ದು ಮಾಡಿವೆ. ಇದೀಗ ಮಹಿಳೆಯೊಬ್ಬರನ್ನು ಆನೆ ತಳ್ಳುತ್ತಿರುವ ದೃಶ್ಯ ವೈರಲ್‌ ಆಗಿದೆ (Viral Video). ಅದೃಷ್ಟವಶಾತ್‌ ಆಕೆಗೆ ಹೆಚ್ಚಿನ ಗಾಯಗಳಾಗಿಲ್ಲ. ತನ್ನ ಪಾಡಿಗೆ ಆಹಾರ ಸೇವಿಸುತ್ತಿದ್ದ ಆನೆಯೊಂದರ ಬಳಿಗೆ ಈ ಮಹಿಳೆ ತೆರಳಿದ್ದು, ಕೋಪದಿಂದ ಅದು ತಳ್ಳಿದೆ.

ವಿಡಿಯೊದಲ್ಲೇನಿದೆ?

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ʼʼಹುಡುಗಿ ಆನೆಯೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಾಳೆʼʼ ಎನ್ನುವ ಕ್ಯಾಪ್ಶನ್‌ನೊಂದಿಗೆ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಈಗಾಗಲೇ ಈ ವಿಡಿಯೊವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ವಿಡಿಯೊದಲ್ಲಿ ಮಹಿಳೆ ಆನೆಯೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿರುವುದು ಕಾಣಬಹುದು. ಆಹಾರ ಸೇವಿಸುತ್ತಿರುವ ಆನೆಯ ಬಳಿಗೆ ನಡೆಯುತ್ತಾಳೆ. ಕೆಲವು ಕ್ಷಣಗಳ ನಂತರ ಕೋಪಗೊಂಡ ಆನೆ ಸೊಂಡಿಲಿನಿಂದ ತಳ್ಳುತ್ತದೆ. ಈ ರಭಸಕ್ಕೆ ಆಕೆ ನೆಲದ ಮೇಲೆ ಬೀಳುತ್ತಾಳೆ. ಬಳಿಕ ಆನೆಯ ಸಹವಾಸವೇ ಬೇಡ ಎನ್ನುವಂತೆ ಎದ್ದನೋ ಬಿದ್ದನೋ ಎಂದು ಸ್ಥಳದಿಂದ ಓಡಿ ಹೋಗುತ್ತಾಳೆ.

ನೆಟ್ಟಿಗರು ಏನಂದ್ರು?

ಈ ವಿಡಿಯೊ ನೋಡಿದ ಅನೇಕರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಆನೆ ಮೊದಲೇ ತನ್ನ ಬಳಿ ಬರಬೇಡ ಎಂದು ತಲೆ ಅಲ್ಲಾಡಿಸಿ ಸೂಚನೆ ನೀಡಿತ್ತು. ಹಾಗಿದ್ದೂ ಅದರ ಬಳಿಗೆ ಹೋಗಿದ್ದು ಆಕೆಯ ತಪ್ಪು ಎಂದು ಕೆಲವರು ಹೇಳಿದ್ದಾರೆ. ಪ್ರಾಣಿಗಳು ಆಹಾರ ಸೇವಿಸುವಾಗ ಅವುಗಳ ಬಳಿಗೆ ಹೋಗಲೇ ಬಾರದು. ಬೇಕಿದ್ದರೆ ಬೆಕ್ಕು, ನಾಯಿಯನ್ನೇ ನೋಡಿ. ಅವು ಏನನ್ನಾದರೂ ತಿನ್ನುವಾಗ ನಾವು ಬಳಿ ತೆರಳಿದರೆ ಅವು ಕೆರಳುತ್ತವೆ ಎಂದು ಇನ್ನು ಹಲವರು ಉಪದೇಶ ನೀಡಿದ್ದಾರೆ. ಇನ್ನು ಕೆಲವರಂತೂ ಆನೆಯ ವರ್ತನೆಗೆ ನೋಡಿ ಶಾಕ್‌ಗೆ ಒಳಗಾಗಿದ್ದಾರೆ.

ʼʼಕಾಡು ಪ್ರಾಣಿಗಳನ್ನು ಅವುಗಳ ಪಾಡಿಗೆ ಬಿಟ್ಟು ಬಿಡಿʼʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. “ಜೋರಾಗಿ ಬಾಲ ಅಲ್ಲಾಡಿಸುತ್ತಿರುವ ಆನೆಯ ಹತ್ತಿರ ಹೋಗಲೇಬೇಡಿ. ಇದು ಆಕ್ರಮಣಕಾರಿ ಮನೋಭಾವದ ಸೂಚನೆ” ಎಂದು ಇನ್ನೊಬ್ಬರು ತಿಳಿಸಿದ್ದಾರೆ. ʼʼಆನೆ ಅಂತಲ್ಲ ಯಾವುದೇ ಕಾಡು ಪ್ರಾಣಿಗಳ ಜತೆ ಹುಡುಗಾಟ ಮಾಡಬೇಡಿʼʼ ಎಂದು ಮತ್ತೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಆನೆಗೆ ದಾರಿ ಬಿಟ್ಟು ಕೊಟ್ಟ ಬಸ್‌ ಡ್ರೈವರ್‌; ನೆಟ್ಟಿಗರ ಮನಗೆದ್ದ ವಿಡಿಯೊ ಇಲ್ಲಿದೆ

ಪ್ರವಾಸಿಗರನ್ನು ಅಟ್ಟಿಸಿಕೊಂಡು ಬಂದಿದ್ದ ಆನೆ

ಕೆಲವು ದಿನಗಳ ಹಿಂದೆ ಬಂಡಿಪುರ ಹುಲಿ ಅಭಯಾರಣ್ಯದಲ್ಲಿ ಫೋಟೋ ತೆಗೆಯಲು ಕಾರಿನಿಂದ ಇಳಿದ ಇಬ್ಬರು ಪ್ರವಾಸಿಗರನ್ನು ಕಾಡಾನೆ ಅಟ್ಟಿಸುತ್ತಿರುವ ವಿಡಿಯೊ ಇತ್ತೀಚೆಗೆ ಇಂಟರ್‌ ನೆಟ್‌ನಲ್ಲಿ ಭಾರೀ ಸದ್ದು ಮಾಡಿತ್ತು. ರಸ್ತೆ ಮಧ್ಯೆ ವಾಹನ ನಿಲ್ಲಿಸಬಾರದು ಎನ್ನುವ ನಿಯಮ ಮೀರಿ ಯುವಕರ ಗುಂಪೊಂದು ದುಸ್ಸಾಹಸಕ್ಕೆ ಕೈ ಹಾಕಿತ್ತು. ಕೆರಳಿದ್ದ ಕಾಡಾನೆಯೊಂದು ಅವರನ್ನು ಅಟ್ಟಿಕೊಂಡು ಬಂದಿತ್ತು. ಕೂದಲೆಳೆ ಅಂತರದಲ್ಲಿ ಅವರು ಅಂದು ಪಾರಾಗಿದ್ದರು. ವಿಡಿಯೊ ವೈರಲ್‌ ಆದ ಬಳಿಕ ಈ ಯುವಕರ ಗುಂಪನ್ನು ಅನೇಕರು ಟೀಕಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version