Site icon Vistara News

Bomb threat : ಏರ್​ಪೋರ್ಟ್​​ ಬ್ಯಾಗ್ ಚೆಕಿಂಗ್​ ವೇಳೆ ತಮಾಷೆಗೆ ‘ಬಾಂಬ್​ ಇದೆ’ ಅಂದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು!

Bomb threat

ಬೆಂಗಳೂರು : ಏರ್​ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕಾಗಿದ್ದ ವ್ಯಕ್ತಿಯೊಬ್ಬರು ಬ್ಯಾಗೇಜ್ ಚೆಕಿಂಗ್ ವೇಳೆ ತಮಾಷೆಗಾಗಿ ತಮ್ಮ ಬ್ಯಾಗ್​ನಲ್ಲಿ ಬಾಂಬ್​ ಇದೆ (Bomb threat) ಎಂದು ಹೇಳಿ ಜೈಲು ಸೇರುವಂತಾಗಿದೆ. ಕೇರಳದ ಕೊಚ್ಚಿನ್​ ಏರ್​ಪೋರ್ಟ್​​ನಲ್ಲಿ ಈ ಪ್ರಸಂಗ ನಡೆದಿದೆ. ಸೆಕ್ಯುರಿಟಿ ಚೆಕ್​ಇನ್ ಅಧಿಕಾರಿಗಳು ತಮ್ಮ ಬ್ಯಾಗ್ ತಪಾಸಣೆ ಮಾಡುತ್ತಿದ್ದ ವೇಳೆ, ತನ್ನ ಬ್ಯಾಗ್​ನಲ್ಲಿ ಏನೂ ಬಾಂಬ್ ಇಲ್ವಲ್ಲಾ, ಎಂದು ಹೇಳುವ ಮೂಲಕ ತಾನೇ ಅನಾಹುತ ಸೃಷ್ಟಿಸಿಕೊಂಡಿದ್ದಾನೆ.

ಆಗಸ್ಟ್ 11 ರಂದು ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಹೇಳಿಕೆ ನೀಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ. 42 ವರ್ಷದ ಮನೋಜ್ ಕುಮಾರ್ ಕೊಚ್ಚಿಯಿಂದ ಮುಂಬೈಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಅವರ ಹೇಳಿಕೆ ಕಳವಳಕ್ಕೆ ಕಾರಣವಾಯಿತು. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (ಬಿಡಿಡಿಎಸ್) ಅವರ ಕ್ಯಾಬಿನ್ ಮತ್ತು ಸಾಮಾನುಗಳನ್ನು ಸಂಪೂರ್ಣವಾಗಿ ಶೋಧಿಸಿತು. ಅನುಮಾನಾಸ್ಪದವಾಗಿ ಏನೂ ಪತ್ತೆಯಾಗದಿದ್ದರೂ, ಕುಮಾರ್ ಅವರನ್ನು ವಿಮಾನದಿಂದ ಇಳಿಸಿ ಕರೆದೊಯ್ದು ವಿಚಾರಣೆಗಾಗಿ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಮಾನ ಹೊರಟರೂ ಅವರಿಗೆ ಪ್ರಯಾಣ ಮಾಡಲು ಅವಕಾಶ ಕೊಡಲಿಲ್ಲ.!

ಹೆಚ್ಚು ಭದ್ರತೆಗೆ ಒಳಪಡುವ ಪ್ರದೇಶದಲ್ಲಿ ಬಾಂಬ್ ನಂತಹ ಅಪಾಯಕಾರಿ ವಿಷಯದ ಬಗ್ಗೆ ಮಾತನಾಡಬಾರದು ಎಂಬುದಕ್ಕೆ ಇದೊಂದು ಉದಾಹರಣೆ. ಇಂಥ ಮಾತುಗಳನ್ನು ಹೇಳುವುದು ಕಾನೂನುಬಾಹಿರ ಮತ್ತು ಗಂಭೀರ ಅಪರಾಧ. ಭಾರತದಲ್ಲಿ ವಿಮಾನ ಭದ್ರತಾ ಮಾನದಂಡಗಳನ್ನು ನಿಗದಿಪಡಿಸುವ ಜವಾಬ್ದಾರಿಯನ್ನು ಹೊಂದಿರುವ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಇಂಥವುಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ. ತಮಾಷೆಯೂ ಗಮನಾರ್ಹ ವಿಳಂಬಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ಅಂಥವರನ್ನು ತಕ್ಷಣವೇ ಬಂಧಿಸುತ್ತಾರೆ.

ಪ್ರಯಾಣ ಮಾಡುವಾಗ ಜತೆಗಿರುವ ಮಗು ಆ ರೀತಿ ಹೇಳಿದರೂ, ಅದು ಇಡೀ ವಿಮಾನ ಹಾರಾಟವನ್ನು ವಿಳಂಬವನ್ನು ಉಂಟುಮಾಡಬಹುದು. ಪ್ರಮುಖವಾಗಿ ವಿಮಾನ ನಿಲ್ದಾಣಗಳಲ್ಲಿ “ಬಾಂಬ್” ಅಥವಾ “ಹೈಜಾಕ್” ನಂತಹ ಪದಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತದೆ.

ಸಿಎಸ್ಎಂಟಿಗೆ ಬಾಂಬ್ ಬೆದರಿಕೆ

ಆಗಸ್ಟ್ 9 ರಂದು ಮುಂಬೈ ಪೊಲೀಸರಿಗೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ) ನಲ್ಲಿ ಬಾಂಬ್​ಗಳನ್ನು ಇರಿಸಲಾಗಿದೆ ಎಂದು ಬೆದರಿಕೆ ಕರೆ ಬಂದಿತ್ತು. ಈ ಪ್ರದೇಶವನ್ನು ತ್ವರಿತವಾಗಿ ಶೋಧಿಸಿದ ನಂತರ ಅಧಿಕಾರಿಗಳು ಯಾವುದೇ ಸ್ಫೋಟಕಗಳನ್ನು ಪತ್ತೆ ಮಾಡಿಲರಿಲ್ಲ. ಪೊಲೀಸರು ಕರೆ ಮಾಡಿದವರನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: veg vs non veg : ಮಕ್ಕಳ ಬಾಕ್ಸ್​​ನಲ್ಲಿ ಮಾಂಸಾಹಾರ ಕಳುಹಿಸಬಾರದು; ವಿವಾದ ಸೃಷ್ಟಿಸಿದ ಶಾಲೆಯ ನೋಟಿಸ್​​

“ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್​ನಲ್ಲಿ (ಸಿಎಸ್ಎಂಟಿ) ಆರ್ಡಿಎಕ್ಸ್ ಇರಿಸಿರುವ ಬಗ್ಗೆ ಜಿಆರ್​​ಪಿ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ. ಸಿಎಸ್ಎಂಟಿಯಲ್ಲಿ ಆರ್​ಡಿಎಕ್ಸ್​ ಇರಿಸಲಾಗಿದೆ ಎಂದು ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿದ್ದಾರೆ ಎಂದು ಮುಂಬೈ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಕರೆ ಸ್ವೀಕರಿಸಿದ ನಂತರ ರೈಲ್ವೆ ಪೊಲೀಸರು ಸ್ಥಳೀಯ ಪೊಲೀಸರು ಮತ್ತು ಬಾಂಬ್ ಸ್ಕಾಡ್​ಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.

Exit mobile version