Site icon Vistara News

Narendra Modi : ಕರ್ನಾಟಕವೂ ನಂದೇ, ಡೆಲ್ಲಿಯೂ ನನ್ನದೇ, ಕಾಂಗ್ರೆಸ್​ ಧರಣಿಗೆ ಮೋದಿ ಟಾಂಗ್​

Narendra Modi at Rajya sabah

ಬೆಂಗಳೂರು: ನಾನು ದೆಹಲಿಗೆ ಮಾತ್ರ ಪಿಎಂ ಅಲ್ಲ. ಕರ್ನಾಟಕದ ಬೆಂಗಳೂರಿಗೂ ನಾನು ಪಿಎಂ. ನನಗೆ ಡೆಲ್ಲಿ ಮಾತ್ರ ದೇಶವಲ್ಲ. ಕರ್ನಾಟಕವೂ ದೇಶ ಎಂಬುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಹೇಳಿದ್ದಾರೆ. ಈ ಮೂಲಕ ಅವರು, ಕರ್ನಾಟಕಕ್ಕೆ ತೆರಿಗೆ ಪಾಲು ನೀಡದೇ ಕೇಂದ್ರ ಸರ್ಕಾರ ಮೋಸ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ನವ ದೆಹಲಿಯ ಜಂತರ್​ಮಂತರ್​ನಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಮೋದಿ ಪರೋಕ್ಷವಾಗಿ ಟೀಕೆ ಮಾಡಿದರು.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರ ನೀಡಿದ ಪ್ರಧಾನಿ ಮೋದಿ ಅವರು ಪ್ರತಿಪಕ್ಷಗಳ ಪ್ರತಿಭಟನೆಯನ್ನು ಟೀಕಿಸಿದರು. ನನ್ನ ದೇಶದಲ್ಲಿ ತೆರಿಗೆ ಪಾಳು ನೀಡುವುದರಲ್ಲಿ ಎಲ್ಲರಿಗೂ ಒಂದೇ ನ್ಯಾಯ ಎಂಬುದಾಗಿ ಅವರು ಇದೇ ವೇಳೆ ಹೇಳಿದರು. ನನ್ನ ತೆರಿಗೆ, ನನ್ನ ಹಕ್ಕು ಎಂದು ಹೇಳುತ್ತಿರುವ ಕಾಂಗ್ರೆಸ್ ಜನರ ದಾರಿ ತಪ್ಪಿಸುತ್ತಿದೆ ಎಂದು ಹೇಳಿದರು.

ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ (DK Suresh) ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿ ಪರೋಕ್ಷವಾಗಿ ತಿರುಗೇಟು ನೀಡಿದರು. “ಕಾಂಗ್ರೆಸ್‌ ಬ್ರಿಟಿಷರಿಂದ ಪ್ರಭಾವಿತಗೊಂಡಿದೆ. ಹಾಗಾಗಿಯೇ, ಕಾಂಗ್ರೆಸ್‌ ನಾಯಕರು ಬ್ರಿಟಿಷರ ಮನಸ್ಥಿತಿಯಿಂದ, ಒಡೆದು ಆಳುವ ನೀತಿಯಿಂದ ಹೊರಬಂದಿಲ್ಲ. ಇದೇ ಕಾರಣಕ್ಕಾಗಿ, ಕಾಂಗ್ರೆಸ್‌ ಈಗಲೂ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎಂಬುದಾಗಿ ದೇಶವನ್ನು ಒಡೆಯಲು ಯತ್ನಿಸುತ್ತಿದೆ” ಎಂದು ಟೀಕಿಸಿದರು.

ಇದನ್ನೂ ಓದಿ : ಅಂಬೇಡ್ಕರ್‌ಗೆ ಭಾರತರತ್ನ ಕೊಡದೆ ನಮಗೆ ತಾವೇ ಪ್ರಶಸ್ತಿ ಕೊಟ್ಟುಕೊಂಡರು! ಕಾಂಗ್ರೆಸ್‌ಗೆ ಮೋದಿ ಚಾಟಿ

“ದೇಶವು ಏಕತೆಯಿಂದ ಕೂಡಿದೆ. ಇಂದು ಭಾರತವು ಒಗ್ಗೂಡಿ ಏಳಿಗೆಯತ್ತ ಸಾಗುತ್ತಿದೆ. ಭಾರತವು ಯಶಸ್ವಿಯಾಗಿ ಜಿ-20 ಸಭೆಯನ್ನು ಆಯೋಜಿಸುವ ಮೂಲಕ ವಿಶ್ವದಲ್ಲೇ ಗುರುತಿಸಿಕೊಂಡಿದೆ. ನನ್ನ ದೇಶವು ಚೆನ್ನೈನಲ್ಲೂ ಇದೆ, ಬೆಂಗಳೂರಿನಲ್ಲೂ ಇದೆ, ಕೋಲ್ಕೊತಾದಲ್ಲೂ ಇದೆ. ನನ್ನ ದೇಶದ ಒಗ್ಗಟ್ಟಿನಿಂದ ಕೂಡಿದೆ. ಭಾರತವು ಒಂದು ದೇಹ ಇದ್ದಂತೆ. ಕಾಲಿಗೆ ನೋವಾದರೆ, ಇಡೀ ದೇಹಕ್ಕೆ ನೋವುಂಟಾಗುತ್ತದೆ. ನಾನು ಒಂದು ಭಾಗದ ಪ್ರಧಾನಿಯಲ್ಲ, ದೇಶಕ್ಕೆ ಪ್ರಧಾನಿ” ಎಂದು ಹೇಳಿದರು.

ಇದನ್ನೂ ಓದಿ : ಅಂಬೇಡ್ಕರ್‌ಗೆ ಭಾರತರತ್ನ ಕೊಡದೆ ನಮಗೆ ತಾವೇ ಪ್ರಶಸ್ತಿ ಕೊಟ್ಟುಕೊಂಡರು! ಕಾಂಗ್ರೆಸ್‌ಗೆ ಮೋದಿ ಚಾಟಿ

ಆದರೆ, ಕಾಂಗ್ರೆಸ್‌ ಈಗ ದೇಶವನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದೆ. ರಾಜಕೀಯ ಲಾಭಕ್ಕಾಗಿ ಇಂತಹ ಕೃತ್ಯ ಎಸಗುತ್ತಿದೆ. ಜಾರ್ಖಂಡ್‌ನ ಒಬ್ಬ ಆದಿವಾಸಿ ಹುಡುಗನೊಬ್ಬ ಚಿನ್ನ ಗೆದ್ದುಕೊಂಡು ಬಂದರೆ, ನಮಗೆ ಬರೀ ಜಾರ್ಖಂಡ್‌ ಬಾಲಕ ಎನಿಸುವುದಿಲ್ಲ. ಆತ ಭಾರತದ ಹುಡುಗನಾಗುತ್ತಾನೆ. ನಾವು ಇಂತಹ ಮನಸ್ಥಿತಿ ಹೊಂದಿರಬೇಕು. ಎಲ್ಲರೂ ಒಂದು, ಎಲ್ಲ ಪ್ರದೇಶಗಳ ಏಕತೆಯಿಂದ ಮುಂದಡಿ ಇಡಬೇಕೇ ಹೊರತು, ರಾಜಕೀಯಕ್ಕಾಗಿ ದೇಶವನ್ನು ವಿಭಜಿಸಲು ಯತ್ನಿಸಬಾರದು” ಎಂದರು.

“ದೇಶವನ್ನು, ದೇಶದ ಜನರನ್ನು ದಾರಿತಪ್ಪಿಸುವುದೇ ಕಾಂಗ್ರೆಸ್‌ ಗುರಿಯಾಗಿದೆ. 2019ರಲ್ಲಿ ಎಚ್‌ಎಎಲ್‌ ಗೇಟ್‌ಗೆ ತೆರಳಿದ ಕಾಂಗ್ರೆಸ್ಸಿಗರು, ಎಚ್‌ಎಎಲ್‌ಅನ್ನು ಕೇಂದ್ರ ಸರ್ಕಾರ ಮಾರಾಟ ಮಾಡುತ್ತಿದೆ ಎಂದು ಹಸಿ ಸುಳ್ಳುಗಳನ್ನು ಹಬ್ಬಿಸಿತು. ಆದರೆ, ಎಚ್‌ಎಎಲ್‌, ಬಿಎಸ್‌ಎನ್‌ಎಲ್‌, ಏರ್‌ ಇಂಡಿಯಾವನ್ನು ಹಾಳು ಮಾಡಿದ್ದೇ ಕಾಂಗ್ರೆಸ್.‌ ಆದರೆ, ಎನ್‌ಡಿಎ ಸರ್ಕಾರವು ಎಚ್‌ಎಎಲ್‌ಗೆ ಅತಿ ಹೆಚ್ಚು ಅನುದಾನ ನೀಡಿದೆ. ಎಲ್‌ಐಸಿಯ ಷೇರುಗಳ ಮೌಲ್ಯವು ಗಣನೀಯವಾಗಿ ಜಾಸ್ತಿಯಾಗಿದೆ. ನಾವು ದಾಖಲೆ ಪ್ರಮಾಣದಲ್ಲಿ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದೇವೆ” ಎಂದು ತಿಳಿಸಿದರು.

Exit mobile version