Site icon Vistara News

Muharram 2024: ಏಕತೆಯ ಸಂದೇಶ ಸಾರುವ ಮುಹರ್ರಮ್ ಆಚರಣೆ

Muharram 2024

-ಹಾಶಿಂ ಬನ್ನೂರು
ಮುಹರಮ್ ತಿಂಗಳು (Muharram 2024) ಮುಸ್ಲಿಮರ ಹೊಸ ವರ್ಷದ ಪ್ರಾರಂಭ ತಿಂಗಳು. ಈ ತಿಂಗಳಲ್ಲಿ ವಿಶೇಷವಾದ ಹಬ್ಬಗಳನ್ನು ಬಹಳ ವಿಜ್ರಂಭಣೆ ಭಯ ಭಕ್ತಿಯಿಂದ ಆಚರಿಸುತ್ತಾರೆ. ಮುಹರ್ರಮ್ ತಿಂಗಳ ಮೊದಲ ಹತ್ತು ದಿನಗಳು ವಿಶೇಷತೆಯ ದಿನಗಳಾಗಿವೆ. ಶಿಯಾ ಮುಸ್ಲಿಮರು ಆಚರಿಸುವ ಪ್ರಮುಖ ಹಬ್ಬ ಮುಹರ್ರಮ್ ಆಗಿದೆ. ಅಲ್ಲದೇ ಹಿಂದೂ ಮುಸ್ಲಿಮರು ಭಾವೈಕ್ಯತೆಯಿಂದಲೂ ಈ ಹಬ್ಬದಲ್ಲಿ ಪಾಲ್ಗೊಂಡು ಸೌಹಾರ್ದತೆಯಿಂದ ಆಚರಿಸಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಮುಹರಮ್ ಹಬ್ಬವನ್ನು ಬಾಬಯ್ಯ ಹಬ್ಬ ಎಂದು ಕರೆಯುತ್ತಾರೆ.
ಮುಹರಮ್ ಒಂದು ತಿಂಗಳ ಹೆಸರಾಗಿದ್ದು ಇಸ್ಲಾಮಿಕ್ ಮುಸಲ್ಮಾನರ ಹಿಜರಿ ಕ್ಯಾಲೆಂಡರ್ ಪ್ರಕಾರ ಮೊದಲನೇ ತಿಂಗಳು. ಮುಸ್ಲಿಮರಿಗೆ ಇದು ಹೊಸ ವರ್ಷ ದುಖಃದಿಂದ ಗೌರವದಿಂದ ಮುಹರಮ್ ಹಬ್ಬವನ್ನು ಆಚರಿಸುತ್ತಾರೆ . ಮುಹರಮ್ ಎಂಬುವುದು ಅರೇಬಿಕ್ ಪದವಾಗಿದ್ದು “ನಿಷಿದ್ಧ” ಎಂಬ ಅರ್ಥವನ್ನು ಸೂಚಿಸುತ್ತದೆ. ಈ ತಿಂಗಳಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳು ಮಾಡಲು ಸೂಕ್ತವಾಗಿರುವುದಿಲ್ಲ. ಮುಹರಂ 9 ತಾಸೂಆ ಮತ್ತು 10 ನೇ ಆಶುರಾ ದಿನದಂದು ಉಪವಾಸವಿರುವುದು ಮತ್ತು ಸತ್ಕರ್ಮಗಳನ್ನು ವೃದ್ಧಿಗೊಳಿಸುವುದು ಮನೆ ಹಾಗೂ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಈ ತಿಂಗಳ ವಿಶೇಷತೆ.
ಆದರೆ ಆಚಾರಕ್ಕಿಂತಲೂ ಅನಾಚಾರವು ಮುಹರಮ್ ಹೆಸರಿನಲ್ಲಿ ನಡೆಯುವುದು ಬಹಳ ಖೇದಕರ ಹಾಗೂ ವಿಷಾದನೀಯ ಸಂಗತಿ. ಮುಹರಮ್ ತಿಂಗಳ ಆಚರಣೆಗೆ ಬಹಳ ದುಖಃಕರವಾದ ಸಂಗತಿ ಮತ್ತು ಐತಿಹಾಸಿಕ ಘಟನೆಗಳೂ ಇದೆ. ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫಾ ಸ.ಅ ರವರ ಮಗಳಾದ ಫಾತಿಮಾ ಬೀವಿ ಹಾಗೂ ನಾಲ್ಕನೇ ಖಲೀಫರಾಗಿದ್ದ ಇಮಾಮ್ ಅಲಿ ರ.ಅ ಈ ದಂಪತಿಗಳ ಮಕ್ಕಳಾದ ಇಮಾಮ್ ಹಸನ್ ಮತ್ತು ಹುಸೈನ್ ದರ್ಮ ಪ್ರಚಾರಕ್ಕಾಗಿ ಶತ್ರುವಿನ ಮುಂದೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿ ಕರ್ ಬಲಾ ಮಣ್ಣಿನಲ್ಲಿ ಶಹೀದರಾದ ದಿನವಾಗಿದೆ ಮುಹರಮ್ ಈ ಘಟನೆಯ ನೆನಪು ಮತ್ತು ಸ್ಮರಣೆಯೇ ಈ ಆಚರಣೆಯ ಪ್ರಮುಖ ಉದ್ದೇಶ. ಹಬ್ಬ ಎಂದ ಕೂಡಲೇ ಎಲ್ಲರೂ ಸಂತೋಷ ಮೂಡುತ್ತದೆ. ಆದರೆ ಮೊಹರಂ ಹಬ್ಬದ ಆಚರಣೆ ದುಖಃದ ಪ್ರತೀಕ. ವರ್ಷಗಳ ಹಿಂದೆ ನಡೆದ ಒಂದು ದುರಂತ ಕಥೆಯೇ ಇದಕ್ಕೆ ಕಾರಣ.

ದುಃಖದ ಛಾಯೆ

ಮುಹರಂ ತಿಂಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸುವುದು, ಶೋಕಾಚರಣೆಗಳಲ್ಲಿ ತೊಡಗಿಕೊಳ್ಳೋದು ಮತ್ತು ಸಾರ್ವಜನಿಕ ಆಚರಣೆಗಳನ್ನು ಮಾಡುತ್ತಾರೆ. ಈ ವೇಳೆ ಆಲಾಯಿ ಕುಣಿತ, ಮುಹರಮ್ ಪದಗಳು ಹಾಡುವುದು, ದೇವರ ಕುಣಿತ, ಬೆಂಕಿಯಲ್ಲಿ ನಡೆದಾಡುವುದು ಸೇರಿದಂತೆ ಕೆಲವು ಆಚರಣೆಯನ್ನು ಮಾಡಲಾಗುತ್ತದೆ. ಮುಹರಮ್ ಹೆಸರಿನಲ್ಲಿ ನಡೆಯುವ ಈ ಎಲ್ಲಾ ಆಚರಣೆಗಳು ಸಾಂಪ್ರದಾಯಿಕವಾಗಿ ನಡೆಸಲ್ಪಡುತ್ತಾ ಬಂದಿದೆ ಹೊರತು ಇದಕ್ಕೆ ಯಾವುದೇ ಧಾರ್ಮಿಕವಾದ ಪುರಾವೆಗಳು ಇಲ್ಲ. ನಮ್ಮ ನಾಡಿನ ಹಲವೆಡೆ ಜಾತಿ ಮತ ಧರ್ಮ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ಮುಹರಮ್ ಆಚರಿಸೂದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಒಂದು ಪದ್ಧತಿ ಇದನ್ನು ಶಾಂತಿ ಸೌಹಾರ್ದತೆಯ ಸಂಕೇತ ಎಂದರೂ ತಪ್ಪಾಗಲಾರದು.

ಮುಸ್ಲಿಮೇತರರೂ ಭಾಗಿ

ರಾಯಚೂರು ಜಿಲ್ಲೆಯ ಮುದಗಲ್ಲ ಗ್ರಾಮದಲ್ಲಿ ಮೊಹರಂ ಆಚರಣೆಯಲ್ಲಿ ಮುಸ್ಲಿಮೇತರರೇ ಹೆಚ್ಚಾಗಿ ಭಾಗವಹಿಸುತ್ತಾರೆ. ಹರಕೆ ಹೊತ್ತ ಹಿಂದೂ- ಮುಸ್ಲಿಮರು ಹುಲಿ ವೇಷ, ಅಳ್ಳಳ್ಳಿ ಬಪ್ಪಾ ವೇಷ ಹಾಕಿ ಕುಣಿದು ಕುಪ್ಪಳಿಸುತ್ತಾರೆ. ಕಂದೂರಿ ಮಾಡಿ ಎಡೆ ನೀಡಿ ಮನಸ್ಸಿಗೆ ನೆಮ್ಮದಿ ತಂದುಕೊಳ್ಳುತ್ತಾರೆ. ದೀರ್ಘ ದಂಡ ನಮಸ್ಕಾರ ಹಾಕಿ ಧನ್ಯರಾಗುತ್ತಾರೆ. ಹತ್ತನೆಯ ದಿನ ಹೊರಡುವ ಕಾಸೀಮ ಅಲಂ ಮತ್ತು ಹಸನ ಅಲಂ ಒಂದಕ್ಕೊಂದು ಭೇಟಿಯಾದಾಗ ನೆರೆದ ಜನ ಸಾಮೂಹ ತೇರಿನ ಮೇಲೆ ಹಣ್ಣುಕಾಯಿ ಎಸೆಯುವಂತೆ ಸೂರ ಮಾಡಿ ಭಯ ಭಕ್ತಿಯಿಂದ ಕೈಮುಗಿದು ತೃಪ್ತರಾಗುತ್ತಾರೆ. ಹಿಂದುಗಳ ಜಾತ್ರೆಯ ಸಂಭ್ರಮವನ್ನು ನೆನಪಿಸುವ ಮುದಗಲ್ಲ ಮುಹರಂ ಪ್ರಚಲಿತವಾಗಿದೆ.

ರಾಮುಲಸ್ವಾಮಿ!

ಹೊಸಪೇಟೆಯ ರಾಮುಲಸ್ವಾಮಿ ಇಂದಿಗೂ ಸರ್ವರ ಇಷ್ಟಾರ್ಥಗಳನ್ನು ಪೂರೈಸುವ ಪುಣ್ಯಕ್ಷೇತ್ರೋತ್ಸವವೆಂದೇ ಪ್ರಸಿದ್ಧಿ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಕೂಡಿಸುವ ಮೌಲಾಲಿ ಅಲಮ್ ಗಳಿಗೆ ಹಿಂದೂ ಮುಸ್ಲಿಮರು ರಾಮುಲಸ್ವಾಮಿ ಎಂದೇ ಕರೆಯುತ್ತಾರೆ. ಒಂಬತ್ತನೆಯ ದಿನ ರಾತ್ರಿ ಎಡೆ ಕೊಡುವಾಗ ಉಪ್ಪನ್ನು ಒಯ್ದು ಅಲಾವಿಯಲ್ಲಿ ಚೆಲ್ಲಿ ಹುರುಕು ‘ಕಜ್ಜಿಗಳನ್ನು ವಾಸಿ ಮಾಡಿಕೊಳ್ಳುತ್ತಾರೆ. ಕೋಲಾರ ಜಿಲ್ಲೆಯ ನಾಗಸಂದ್ರದ ಮೊಹರಂ ಬಾಬಯ್ಯನ ಹಬ್ಬವೆಂದೇ ಪ್ರಸಿದ್ಧಿ ಪಡೆದಿದೆ. ಧಾರವಾಡ ಜಿಲ್ಲೆಯ ಯರಗುಪ್ಪಿ ಗ್ರಾಮದ ಮೊಹರಂ ಸುತ್ತ ಹತ್ತು ಹಳ್ಳಿಗಳಲ್ಲಿ ಮುಹರಮ್ ಜಾತ್ರೆಯೆಂದೇ ಹೆಸರಾಗಿದೆ. ಊರಿನ ಹಿಂದೂ-ಮುಸ್ಲಿಮರು ವಿಶೇಷವಾಗಿ ಬ್ರಾಹ್ಮಣರು ತಮ್ಮ ಶಕ್ತಾನುಸಾರ ದೇವರ ಚಾಕರಿ ಮಾಡುತ್ತಾರೆ. ಹರಕೆ ತೀರಿಸುತ್ತಾರೆ.

ಇದನ್ನೂ ಓದಿ: Muharram 2024: ರಾಯಚೂರಿನಲ್ಲಿ ಮೊಹರಂನಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ವ್ಯಕ್ತಿ ಸುಟ್ಟು ಭಸ್ಮ

ಬೆಟಗೇರಿಯಲ್ಲಿ ಹಿಂದೂ-ಮುಸ್ಲಿಂ ಸಡಗರ

ಗದಗ ಬೆಟಗೇರಿಯಲ್ಲಿ ನಡೆಯುವ ಮುಹರಮ್ ಮೆರವಣಿಗೆಯಲ್ಲಿ ಹಿಂದೂ ಮುಸ್ಲಿಂ ಭಕ್ತರು ಪಾಲ್ಗೊಂಡು ಮೈ ತುಂಬಿದ ದೇವರಿಂದ ಮಳೆ ಬೆಳೆ ಕುರಿತು ಹೇಳಿಕೆ- ಕೇಳಿಕೆ ಮಾಡುತ್ತಾರೆ. ಸೊಟಕನ ಹಾಳದ ಡೋಲಿ ಮತ್ತು ಕೈ ದೇವರು ದ್ಯಾಮವ್ವನ ಗುಡಿಗೆ ಭೇಟಿಯಿತ್ತಾಗ ಊರ ಜನ ಇಮಾಮ ಹುಸೇನರು ತಂಗಿ ದ್ಯಾಮವ್ವನ ದರ್ಶನಕ್ಕೆ ಬಂದಿದ್ದಾರೆಂದೇ ತಿಳಿಯುತ್ತಾರೆ. ಹೀಗೆ ರಾಜ್ಯದ ಹಲವು ಗ್ರಾಮ ಪ್ರದೇಶಗಳಲ್ಲಿ ಮತ್ತು ದೇಶ ವಿದೇಶಗಳಲ್ಲಿ ಮುಹರಮ್ ಆಚರಣೆಯು ವಿಜೃಂಭಣೆಯಿಂದ ಆಚರಿಸುತ್ತಾರೆ.ಒಟ್ಟಿನಲ್ಲಿ ಮುಹರಮ್ ಆಚರಣೆಯ ಹೆಸರಿನಲ್ಲಿ ನಡೆಯುವ ಅನಾಚಾರಗಳು ಅನಾಹುತಗಳಿಗೆ ಕಾರಣವಾಗದಿರಲಿ. ಶಾಂತಿ ಸೌಹಾರ್ದತೆ ಸಂತೋಷ ಸಾರುವುದೇ ಎಲ್ಲಾ ಹಬ್ಬದ ಮೂಲ ಉದ್ದೇಶ.

Exit mobile version