Site icon Vistara News

IPL 2024 : ಐಪಿಎಲ್​ ಪಂದ್ಯಕ್ಕೆ ನೀರು ಎಲ್ಲಿಂದ? ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನೋಟಿಸ್​

IPL 2024

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ 2024 (IPL 2024) ಪಂದ್ಯಗಳಿಗೆ ಬಳಸಲಾಗುತ್ತಿರುವ ನೀರಿನ ಮೂಲಗಳನ್ನು ತಿಳಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿ) ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಇತರ ಪ್ರಾಧಿಕಾರಗಳಿಂದ ಮಾಹಿತಿ ಕೇಳಿದೆ. ಎಲ್ಲಿಂದ ಬರುತ್ತಿದೆ. ಅದನ್ನು ಯಾವ ರೀತಿ ಬಳಸಲಾಗುತ್ತಿದೆ ಎಂಬ ವಿವರಗಳನ್ನು ನೀಡುವಂತೆ ಅದು ಹೆಳಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತವರು ಮೈದಾನದಲ್ಲಿ ಬಳಸಲಾಗುವ ನೀರಿನ ಪ್ರಮಾಣ ಮತ್ತು ಮೂಲದ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುವಂತೆ ಎನ್​​ಜಿಟಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಗೆ ನಿರ್ದೇಶನ ನೀಡಿದೆ. ಮೇ 2 ರೊಳಗೆ ಎಲ್ಲಾ ಸಂಬಂಧಿತ ವಿವರಗಳನ್ನು ಒದಗಿಸುವಂತೆ ಸೂಚಿಸಿದೆ.

ನಾವು ನೋಟಿಸ್ ಅನ್ನು ಕೊಲಂಕಷವಾಗಿ ಅಧ್ಯಯನ ಮಾಡುತ್ತಿದ್ದೇವೆ ಮತ್ತು ಕ್ರೀಡಾಂಗಣವು ಎಜ್​ಜಿಟಿ ಮಾನದಂಡಗಳನ್ನು ಅನುಸರಿಸುತ್ತದೆ. ಆದ್ದರಿಂದ, ಪಂದ್ಯಗಳನ್ನು ಮುಂದುವರಿಸುವ ವಿಶ್ವಾಸವಿದೆ” ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಸಿಇಒ ಶುಭೇಂದು ಘೋಷ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಸಂಸ್ಕೃರಿಸಿದ ನೀರಿನ ಬಳಕೆ ವಿಚಾರದಲ್ಲಿ ನಿರ್ದೇಶನ

ಚಿನ್ನಸ್ವಾಮಿ ಕ್ರೀಡಾಂಗಣವು ಐಪಿಎಲ್ ಪಂದ್ಯಗಳಿಗೆ ಸಂಸ್ಕರಿಸಿದ ನೀರನ್ನು ಬಳಸುತ್ತಿದೆ ಎಂಬ ವರದಿಗಳು ಹೊರಬಂದ ನಂತರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ಕ್ರಮ ಕೈಗೊಂಡಿದೆ. ಎನ್​ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ತಜ್ಞ ಸದಸ್ಯ ಡಾ.ಎ.ಸೆಂಥಿಲ್ ವೇಲ್ ಅವರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : Hardik Pandya : ಟೀಕಾಕಾರರ ಬಾಯ್ಮುಚ್ಚಿಸಲು ಸೋಮನಾಥ ದೇಗುಲದಲ್ಲಿ ವಿಶೇಷ ಪೂಜೆ ಮಾಡಿದ ಪಾಂಡ್ಯ

ಚಿನ್ನಸ್ವಾಮಿ ಕ್ರೀಡಾಂಗಣವು ಈವರೆಗೆ ಮೂರು ಐಪಿಎಲ್ ಪಂದ್ಯಗಳಿಗೆ ಆತಿಥ್ಯ ವಹಿಸಿದೆ ಮತ್ತು ಈ ಎಲ್ಲಾ ಆಟಗಳಲ್ಲಿ ನೀರಿನ ಬಳಕೆ ಸುಮಾರು 75,000 ಲೀಟರ್ ಆಗಿದೆ. ವಿಶೇಷವೆಂದರೆ, ನಗರದಲ್ಲಿ ಕ್ರಮವಾಗಿ ಏಪ್ರಿಲ್ 15, ಮೇ 4, ಮೇ 12 ಮತ್ತು ಮೇ 18 ರಂದು ನಾಲ್ಕು ಪಂದ್ಯಗಳು ನಡೆಯಲಿವೆ.

ಕುಡಿಯುವ ನೀರಿನ ಬಳಕೆಯಿಲ್ಲ

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಮನವಿಯ ನಂತರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರನ್ನು ಒದಗಿಸಲು ಅನುಮತಿ ನೀಡಿದೆ ಎಂಬ ಹೇಳಿಕೆಗಳನ್ನು ಎನ್​ಜಿಟಿ ಪರಿಗಣಿಸಿದೆ.

ಪಿಚ್ ಅಥವಾ ಔಟ್ ಫೀಲ್ಡ್ ನಿರ್ವಹಣೆಯಂತಹ ಕಾರ್ಯಗಳಿಗೆ ಅಂತರ್ಜಲ ಅಥವಾ ಕುಡಿಯುವ ನೀರನ್ನು ಬಳಸುವುದನ್ನು ಕೆಎಸ್ ಸಿಎ ಅಧಿಕಾರಿಗಳು ಬಹಿರಂಗವಾಗಿ ನಿರಾಕರಿಸಿದ್ದಾರೆ. ಏತನ್ಮಧ್ಯೆ, ಕರ್ನಾಟಕ ಸರ್ಕಾರವು ತೋಟಗಾರಿಕೆ ಮತ್ತು ವಾಹನ ತೊಳೆಯುವಿಕೆಯಂತಹ ಅನಿವಾರ್ಯವಲ್ಲದ ಉದ್ದೇಶಗಳಿಗಾಗಿ ಕುಡಿಯುವ ನೀರನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ.

Exit mobile version