Site icon Vistara News

BJP’s national convention : ಜುಲೈ, ಆಗಸ್ಟ್​ನ ವಿದೇಶ ಪ್ರವಾಸ ಬುಕ್ ಆಗಿದೆ; ಹ್ಯಾಟ್ರಿಕ್​ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಮೋದಿ

Narendra Modi speech

ನವದೆಹಲಿ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ (BJP) ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಪುನರುಚ್ಚರಿಸಿದ್ದಾರೆ. “ಆಯೇಗಾ ತೋ ಮೋದಿ ಹೈ (ಮೋದಿ ಮರಳಿಬರುತ್ತಾರೆ ) ಎಂಬ ಸಂಗತಿ ವಿದೇಶಗಳಿಗೂ ತಿಳಿದಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಮುಂದಿನ ಜುಲೈ, ಆಗಸ್ಟ್​ ಹಾಗೂ ಸೆಪ್ಟೆಂಬರ್​ನಲ್ಲಿ ವಿದೇಶ ಪ್ರವಾಸಕ್ಕಾಗಿ ಈಗಾಗಲೇ ಆಹ್ವಾನಗಳು ಬಂದಿವೆ ಎಂಬ ಸಂಗತಿಯನ್ನು ಬಹಿರಂಗ ಮಾಡಿದ್ದಾರೆ. (BJP’s national convention)

ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ (BJP’s national convention ) ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ “ಚುನಾವಣೆಗಳು ಇನ್ನೂ ನಡೆಯಬೇಕಾಗಿದೆ ಆದರೆ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್​ನಲ್ಲಿ ನನಗೆ ವಿದೇಶ ಪ್ರವಾಸಕ್ಕಾಗಿ ಈಗಾಗಲೇ ಆಹ್ವಾನಗಳಿವೆ. ಇದರ ಅರ್ಥವೇನು? ಇದರರ್ಥ ವಿಶ್ವದ ವಿವಿಧ ರಾಷ್ಟ್ರಗಳು ಬಿಜೆಪಿ ಸರ್ಕಾರದ ಮರಳುವಿಕೆಯ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿವೆ. ಅವರಿಗೂ ತಿಳಿದಿದೆ ಎಂಬುದಾಗಿ ನುಡಿದರು.

ಅಧಿಕಾರವನ್ನು ಅನುಭವಿಸಲು ಮೂರನೇ ಅವಧಿಗೆ ಬಯಸುತ್ತಿಲ್ಲ, ಆದರೆ ರಾಷ್ಟ್ರಕ್ಕಾಗಿ ಕೆಲಸ ಮಾಡಲು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು. “ನಾನು ನನ್ನ ಮನೆಯ ಬಗ್ಗೆ ಯೋಚಿಸಿದ್ದರೆ, ಕೋಟ್ಯಂತರ ಜನರಿಗೆ ಮನೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ” ಎಂದು ಅವರು ಹೇಳಿಕೊಂಡರು.

100 ದಿನಗಳು ನಿರ್ಣಾಯಕ

ಪಕ್ಷದ ಪ್ರಮುಖ ಸಭೆಯಲ್ಲಿ ಜಮಾಯಿಸಿದ್ದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ 100 ದಿನಗಳು ಬಹಳ ನಿರ್ಣಾಯಕ ಎಂದು ಹೇಳಿದರು. “ಮುಂದಿನ 100 ದಿನಗಳಲ್ಲಿ, ನೀವು ಪ್ರತಿ ಹೊಸ ಮತದಾರರೊಂದಿಗೆ ಸಂಪರ್ಕ ಸಾಧಿಸಬೇಕು, ಪ್ರತಿ ಫಲಾನುಭವಿ, ಪ್ರತಿ ವಿಭಾಗ, ಪ್ರತಿ ಸಮುದಾಯ ಮತ್ತು ಪ್ರತಿಯೊಂದು ಧರ್ಮವನ್ನು ನಂಬುವ ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪಬೇಕು. ನಾವು ಎಲ್ಲರ ವಿಶ್ವಾಸ ಗಳಿಸಬೇಕಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ತಮ್ಮ ಸರ್ಕಾರದ ಹತ್ತು ವರ್ಷಗಳನ್ನು ಒತ್ತಿ ಹೇಳುತ್ತಾ, “ಕಳೆದ 10 ವರ್ಷಗಳಲ್ಲಿ, ಭಾರತವು ಅಭೂತಪೂರ್ವ ಆವೇಗವನ್ನು ಸಾಧಿಸಿದ್ದೇವೆ. ಗುರಿಗಳನ್ನು ಸಾಧಿಸುವ ಧೈರ್ಯವನ್ನು ಗಳಿಸಿದೆ. ಭಾರತವು ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಎತ್ತರವನ್ನು ತಲುಪಿದೆ, ಅಭಿವೃದ್ಧಿ ಹೊಂದಿದ ಭಾರತವಾಗಿದೆ. ನಾವು ಭಾರತವನ್ನು ಅಭಿವೃದ್ಧಿಪಡಿಸಬೇಕು ಮತ್ತು ಇದರಲ್ಲಿ ಮುಂದಿನ 5 ವರ್ಷಗಳು ಮಹತ್ವದ ಪಾತ್ರ ವಹಿಸುತ್ತವೆ. ಮುಂದಿನ 5 ವರ್ಷಗಳಲ್ಲಿ, ಭಾರತವು ಮೊದಲಿಗಿಂತ ಹೆಚ್ಚು ವೇಗವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

“ಎಲ್ಲರೂ ಜನರ ಬಳಿ ಹೋಗಿ, ನಿಮಗೆ ನರೇಂದ್ರ ಮೋದಿ ಅವರು ನಮಸ್ಕಾರ ಮಾಡಿದ್ದಾರೆ ಎಂಬುದಾಗಿ ತಿಳಿಸಿ. ಕೇಂದ್ರ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಿ, ಅವರಿಗೆ ಯೋಜನೆಗಳ ಕುರಿತು ಜಾಗೃತಿ ಮೂಡಿಸಿ. ಬಿಜೆಪಿ ಸರ್ಕಾರ ಕಳೆದ 10 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಯೋಜನೆಗಳು, ಮುಂದಿನ 5 ವರ್ಷದಲ್ಲಿ ಕೇಂದ್ರ ಸರ್ಕಾರದ ದೂರದೃಷ್ಟಿಯ ಬಗ್ಗೆ ವಿವರವಾಗಿ ತಿಳಿಸಿ” ಎಂದು ಹೇಳಿದರು.

“ಕಾಂಗ್ರೆಸ್‌ನ ಇತಿಹಾಸವನ್ನು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಬೇಕು. ಕಾಂಗ್ರೆಸ್‌ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಸ್ಥಿರತೆಯ ಜನನಿಯಾಗಿದೆ. ನಮ್ಮೆದುರು ಕಾಂಗ್ರೆಸ್‌ನ ಇತಿಹಾಸವೇ ಇದೆ. ಇದನ್ನು ಪ್ರತಿಯೊಬ್ಬರಿಗೂ ತಿಳಿಸಬೇಕು. ಆ ಮೂಲಕ ಕಾಂಗ್ರೆಸ್‌ನಿಂದ ದೇಶ ಹಾಗೂ ಜನರನ್ನು ಮುಕ್ತಗೊಳಿಸಬೇಕು. ಇದರೊಂದಿಗೆ ದೇಶದ ಮತ್ತಷ್ಟು ಏಳಿಗೆಗೆ ನಾಂದಿ ಹಾಡಬೇಕು” ಎಂದು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಭಾರತೀಯ ಸೇನೆಗೆ ಕಾಂಗ್ರೆಸ್‌ ಅಪಮಾನ


“ಕಾಂಗ್ರೆಸ್‌ ಸರ್ಕಾರವಿದ್ದಾಗ ರಫೇಲ್‌ ಯುದ್ಧವಿಮಾನದ ಒಪ್ಪಂದ ನಡೆಯಲಿಲ್ಲ. ಆದರೆ, ನಮ್ಮ ಸರ್ಕಾರವು ಫ್ರಾನ್ಸ್‌ ಜತೆಗೆ ಯಶಸ್ವಿಯಾಗಿ ಒಪ್ಪಂದ ಮಾಡಿಕೊಂಡು ರಫೇಲ್‌ ಯುದ್ಧವಿಮಾನಗಳನ್ನು ಖರೀದಿಸುವ ಮೂಲಕ ವಾಯುಪಡೆಯ ಬಲವನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲ, ಭಾರತೀಯ ವಾಯುಪಡೆಯು ವಾಯುದಾಳಿ ನಡೆಸಿದಾಗ ಯೋಧರ ಸಾಮರ್ಥ್ಯವನ್ನೇ ಕಾಂಗ್ರೆಸ್‌ ಪ್ರಶ್ನಿಸಿತು. ಇದರೊಂದಿಗೆ ದೇಶದ ಸೇನೆಗೆ ಕಾಂಗ್ರೆಸ್‌ ಅಪಮಾನ ಮಾಡಿತು” ಎಂದು ನರೇಂದ್ರ ಮೋದಿ ಹೇಳಿದರು.

ಇದನ್ನೂ ಓದಿ : Farmers Protest: ರೈತರ ಪ್ರತಿಭಟನೆ ಹಿನ್ನೆಲೆ; ಫೆ. 24ರವರೆಗೆ ಇಂಟರ್‌ನೆಟ್‌ ಸೇವೆ ಸ್ಥಗಿತ

“ನಾನೇನೂ ಅಧಿಕಾರ ಅನುಭವಿಸಲು ಮೂರನೇ ಅವಧಿಯನ್ನು ಕೇಳುತ್ತಿಲ್ಲ. ನನ್ನ ಮನೆಯನ್ನು ನೋಡಿದರೆ, ಎಲ್ಲ ಬಡವರಿಗೂ ಮನೆಗಳನ್ನು ನಿರ್ಮಿಸಲು ಆಗಿಲ್ಲ. ನಮ್ಮ ಬಡ ಮಕ್ಕಳ ಭವಿಷ್ಯಕ್ಕಾಗಿ ನಾನು ಜೀವಿಸುತ್ತಿದ್ದೇನೆ. ಕೋಟ್ಯಂತರ ಬಡವರು, ಮಹಿಳೆಯರು ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಮೂರನೇ ಅವಧಿ ನೀಡಿ ಎಂಬುದಾಗಿ ಕೇಳುತ್ತಿದ್ದೇನೆ” ಎಂದರು.

Exit mobile version