Site icon Vistara News

Puri Rath Yatra : ಪುರಿ ರಥಯಾತ್ರೆ ವೇಳೆ ಜಾರಿ ಬಿದ್ದ ಬಲಭದ್ರ ದೇವರ ವಿಗ್ರಹ; 7 ಮಂದಿಗೆ ಗಾಯ

Puri Rath Yatra

ಬೆಂಗಳೂರು: ಎರಡು ದಿನಗಳ ಹಿಂದೆಯಷ್ಟೇ ಪುರಿ ಜಗನ್ನಾಥ ದೇವಾಲಯದ ರಥೋತ್ಸವದ (Puri Rath Yatra ) ಸಂದರ್ಭದಲ್ಲಿ ಉಂಟಾದ ನೂಕು- ನುಗ್ಗಲಿಗೆ ಒಬ್ಬ ಮೃತಪಟ್ಟು ಹಲವರು ಗಾಯಗೊಂಡಿದ್ದರು. ಇದೀಗ ಅದೇ ಜಾತ್ರೆಯಲ್ಲಿ ಮಂಗಳವಾರ ದೇವರ ಉತ್ಸವದ ವೇಲೆ ಭಗವಾನ್ ಬಲಭದ್ರನ ವಿಗ್ರಹ ಬಿದ್ದು ಕನಿಷ್ಠ ಏಳು ಮಂದಿ ಗಾಯಗೊಂಡ ಘಟನೆ ನಡೆದಿದೆ. ಮಂಗಳವಾರ ಸಂಜೆ ಮೂರು ವಿಗ್ರಹಗಳನ್ನು ರಥಗಳಿಂದ ಗುಂಡಿಚಾ ದೇವಾಲಯದ ಅಡಪ ಮಂಟಪಕ್ಕೆ ಕರೆದೊಯ್ಯುತ್ತಿದ್ದಾಗ ಈ ಘಟನೆ ನಡೆದಿದೆ.

ಜಾತ್ರೆಯ ಎಲ್ಲ ಆಚರಣೆಗಳು ಪೂರ್ಣಗೊಂಡ ನಂತರ, ವಿಗ್ರಹಗಳ ‘ಪಹಂಡಿ’ ಪ್ರಾರಂಭವಾಗಿತ್ತು. ಅಲ್ಲಿ ಅರ್ಚಕರು ಹಾಗೂ ಸ್ವಯಂಸೇವಕರು ವಿಗ್ರಹಗಳನ್ನು ನಿಧಾನವಾಗಿ ತಿರುಗಿಸುತ್ತಾ ಮೂರು ಮೂರ್ತಿಗಳನ್ನು ಅಡಪ ಮಂಟಪಕ್ಕೆ ಕೊಂಡೊಯ್ಯುತ್ತಿದ್ದರು. ಅಂತೆಯೇ ಬಲಭದ್ರನ ವಿಗ್ರಹವನ್ನು ರಥದ ತಲಧ್ವಜದಿಂದ ತೆಗೆದುಕೊಳ್ಳುವಾಗ, ಚರಮಾಲಾ ಎಂಬ ರಥದ ತಾತ್ಕಾಲಿಕ ರ್ಯಾಂಪ್ ಮೇಲೆ ಜಾರಿ ಸೇವಕರ ಮೇಲೆ ಬಿದ್ದಿದೆ. ಅವರಲ್ಲಿ ಹಲವರು ಗಾಯಗೊಂಡಿದ್ದಾರೆ.

ರಕ್ಷಣಾ ಸಿಬ್ಬಂದಿ ಇತರ ಸೇವಕರೊಂದಿಗೆ ಸ್ಥಳಕ್ಕೆ ಧಾವಿಸಿ ವಿಗ್ರಹವನ್ನು ಎತ್ತಿಕೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಬ್ಬನ ಸಾವು, 400 ಭಕ್ತರಿಗೆ ಗಾಯಗೊಂಡಿದ್ದರು

ಜುಲೈ 7ರಂದು ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆಯ (Puri Jagannath Rath Yatra) ವೇಳೆಯೂ ಕಾಲ್ತುಳಿತ ಸಂಭವಿಸಿತ್ತು. ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟರೆ, 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಭಾನುವಾರ ರಥ ಎಳೆಯುವಾಗ ನೂಕುನುಗ್ಗಲು ಉಂಟಾಗಿದ್ದು, ಉಸಿರಾಡಲು ಆಗದೆ ಒಬ್ಬ ಭಕ್ತ ಮೃತಪಟ್ಟಿದ್ದರು. ನೂಕುನುಗ್ಗಲು ಬಳಿಕ ಕಾಲ್ತುಳಿತ (Stampede) ಉಂಟಾಗಿದ್ದು, 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಇದನ್ನೂ ಓದಿ: PM Modi Russia Visit : ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ಟಲ್’ ಪ್ರದಾನ

“ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ ಉಂಟಾಗಿದೆ. ಒಬ್ಬ ಭಕ್ತ ಉಸಿರಾಡಲು ಆಗದೆ ಮೃತಪಟ್ಟಿದ್ದಾನೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ರಥ ಎಳೆಯುವಾಗ ಒಬ್ಬರಿಗೊಬ್ಬರು ನೂಕುನುಗ್ಗಲು ಮಾಡಿದ್ದಾರೆ. ಇದರಿಂದಾಗಿ ಕಾಲ್ತುಳಿತ ಉಂಟಾಗಿದೆ” ಎಂದು ಅಧಿಕಾರಿಗಳು ತಿಳಿಸಿದರು. “ಒಬ್ಬ ವ್ಯಕ್ತಿ ಮೃತಪಟ್ಟಿರುವುದು ಹೃದಯಾಘಾತದಿಂದ ಅಲ್ಲ. ನೂಕುನುಗ್ಗಲು ಉಂಟಾದ ಕಾರಣ ಉಸಿರಾಡಲು ಆಗದೆ, ಉಸಿರುಗಟ್ಟಿ ಆತ ಮೃತಪಟ್ಟಿದ್ದಾನೆ” ಎಂದು ಸೇಂಟ್‌ ಜಾನ್‌ ಆಂಬುಲೆನ್ಸ್‌ ಸೇವೆಗಳ ವಿಭಾಗದ ಅಸಿಸ್ಟಂಟ್‌ ಕಮಾಂಡಂಟ್‌ ಸುಶಾಂತ್‌ ಕುಮಾರ್‌ ಪಟ್ನಾಯಕ್‌ ತಿಳಿಸಿದ್ದರು.

ಕಾಲ್ತುಳಿತದ ಬಳಿಕ 300 ಜನರನ್ನು ಪುರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 50 ಮಂದಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಡಿಸ್‌ಚಾರ್ಜ್‌ ಮಾಡಲಾಗಿದೆ. ಯಾರಿಗೂ ಗಂಭೀರವಾಗಿ ಗಾಯಗಳಾಗಿಲ್ಲ. ಕಾಲ್ತುಳಿತದ ಬಳಿಕವೂ ರಥಯಾತ್ರೆಯು ಸುಗಮವಾಗಿ ಸಾಗಿದೆ ಎಂಬುದಾಗಿ ಒಡಿಶಾ ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದರು.

Exit mobile version