Site icon Vistara News

Sandalwood News : ಚಿತ್ರರಂಗದ ಸಮಸ್ಯೆ ಬಗೆಹರಿಸಲು ಗೋವಾಕ್ಕೆ ಹೋದ ನಿಯೋಗದೊಳಗೆ ಜಟಾಪಟಿ!

Kannada producers

ಬೆಂಗಳೂರು: ಕನ್ನಡ ಚಲನಚಿತ್ರ ಕ್ಷೇತ್ರ (Sandalwood News) ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲೆಂದು ಗೋವಾಗೆ ಹೋಗಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Film Chamber), ನಿರ್ಮಾಪಕರ ಸಂಘ (Kannada Producers) ಹಾಗೂ ನಿರ್ದೇಶಕರ ಸಂಘದ ಪದಾಧಿಕಾರಿಗಳಲ್ಲಿ ಕೆಲವು ಪರಸ್ಪರ ಗಲಾಟೆ ಮಾಡಿಕೊಂಡ ಪ್ರಸಂಗ ವರದಿಯಾಗಿದೆ. ಸಣ್ಣದಾಗಿ ಆರಂಭಗೊಂಡ ವಾಗ್ವಾದ ದೊಡ್ಡ ಗಲಾಟೆಯಾಗಿ ಮಾರ್ಪಟ್ಟಿದ್ದು ಪರಸ್ಪರ ಹೊಡೆದಾಡಿಕೊಂಡ ಬಳಿಕ ಪ್ರತ್ಯೇಕವಾಗಿ ಬೆಂಗಳೂರಿಗೆ ತಿರುಗಿ ಬಂದಿದ್ದಾರೆ. ಈ ಮೂಲಕ ಸಮಸ್ಯೆಯನ್ನು ಬಗೆಹರಿಸಲೆಂದು ಹೋದವರು ಹೊಸ ಸಮಸ್ಯೆ ಸೃಷ್ಟಿಸಿಕೊಂಡು ಬಂದಿದ್ದಾರೆ.

ಸಂಘದ ಪದಾಧಿಕಾರಿಗಳೆಲ್ಲರೂ ಬಸ್​​ ಮೂಲಕ ಗೋವಾಕ್ಕೆ ಪ್ರಯಾಣ ಮಾಡಿದ್ದರು. ಹಿಬೀಸ್ ರೆಸಾರ್ಟ್​​ನಲ್ಲಿ ಸೋಮವಾರ ರಾತ್ರಿ (ಮೇ 27ರಂದು) ಸಭೆ ಆಯೋಜಿಸಲಾಗಿತ್ತು. ಅಲ್ಲಿ ವಿಚಾರವೊಂದರ ಬಗ್ಗೆ ಆಕ್ಷೇಪ ವ್ಯಕ್ತವಾಗಿ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಗಿದೆ. ಕೊನೆಗದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ನಿರ್ಮಾಪಕರಾದ ರಥಾವರ ಮಂಜುನಾಥ್, ಎ.ಗಣೇಶ್ ಹಾಗೂ ಸತೀಶ್ ಆರ್ಯ ನಡುವೆ ವಾಗ್ವಾದ ನಡೆದಿದೆ ಎಂದು ವರದಿಯಾಗಿದೆ.

ಗಲಾಟೆ ಮಾಡಿದ ಬಳಿಕ ಮೂವರನ್ನು ವಿಮಾನದ ಮೂಲಕ ಬೆಂಗಳೂರಿಗೆ ವಾಪಸ್ ಕಳುಹಿಸಲಾಗಿದೆ. ಗೋವಾ ಟ್ರಿಪ್‌ಗೆ ಹೋದ ನಿಯೋಗದ ಸದಸ್ಯರು, ಪದಾಧಿಕಾರಿಗಳು ಬುಧವಾರ ಬೆಂಗಳೂರಿಗೆ ವಾಪಸಾಗಲಿದ್ದಾರೆ. ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎನ್.ಎಂ.ಸುರೇಶ್, ಉಮೇಶ್ ಬಣಕಾರ್, ಆಸ್ಕರ್ ಕೃಷ್ಣ, ಭಾಮಾ ಹರೀಶ್, ಭಾಮಾ ಗಿರೀಶ್, ಟೇಸಿ ವೆಂಕಟೇಶ್ ಈ ಪ್ರವಾಸದಲ್ಲಿದ್ದರು.

ಇದನ್ನೂ ಓದಿ: Kannada New Movie: ʼಕೋಟಿʼ ಚಿತ್ರಕ್ಕೆ ಕಿಚ್ಚನ ಬಲ; ಹೊಸ ಪೋಸ್ಟರ್‌ ರಿಲೀಸ್‌

ಗಲಾಟೆ ಯಾವ ಕಾರಣಕ್ಕೆ ನಡೆಯಿತು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಪಾರ್ಟಿ ಮಾಡುವ ವೇಳೆ ಮಾತಿಗೆ ಬೆಳೆದು ಗಲಾಟೆಯಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ವಿಚಾರ ಟೀಕೆಗೆ ಒಳಗಾಗಿದ್ದು ಅಲ್ಲಿಗೆ ಹೋಗಿ ಗಲಾಟೆ ಮಾಡಿ ಬರುವ ಅನಿವಾರ್ಯತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

Exit mobile version