Site icon Vistara News

Team India : ಅಪರೂಪದಲ್ಲಿ ಅಪರೂಪ; ಮುಂಬೈ ವಿಮಾನ ನಿಲ್ದಾಣದಲ್ಲಿ ಟೀಂ ಇಂಡಿಯಾದ ವಿಮಾನಕ್ಕೆ ಸೆಲ್ಯೂಟ್

Team India

ಮುಂಬಯಿ: ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ (T20 World Cup) ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾದ (Team India) ವಿಜಯೋತ್ಸವ ಮುಗಿಲು ಮುಟ್ಟುತ್ತಿದೆ. ಗುರುವಾರ ಬೆಳಗ್ಗೆ ಡೆಲ್ಲಿಗೆ ಬಂದ ಅವರು ಪ್ರಧಾನಿ ಮೋದಿಯವರ ಆತಿಥ್ಯ ಸ್ವೀಕರಿಸಿದ್ದಾರೆ. ಬಳಿಕ ಆಟಗಾರರು ಮುಂಬಯಿಗೆ ಬಂದರು. ವಿಶೇಷ ವಿಮಾನದಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದ ಅವರಿಗೆ ಇನ್ನಷ್ಟು ದೊಡ್ಡ ಗೌರವ ದೊರಕಿತು. ವಿಮಾನ ನಿಲ್ದಾಣದಲ್ಲಿ ಅವರ ವಿಮಾನಕ್ಕೆ ವಾಟರ್​ಜೆಟ್​ ಸೆಲ್ಯೂಟ್ ಹೊಡೆಯಲಾಯಿತು. ಅದೇ ರೀತಿ ಅವರ ವಿಮಾನವನ್ನು ಭಾರತದ ಧ್ವಜವನ್ನು ಹೊಂದಿರುವ ಜೀಪ್​ಗಳ ಮೂಲಕ ಪಾರ್ಕಿಂಗ್​ ಬೇ ತನಕ ಕರೆದುಕೊಂಡು ಬರಲಾಯಿತು. ಇಂಥ ಗೌರವಗಳು ಸಿಗುವುದು ಅಪರೂಪಕ್ಕೆ ಅಪರೂಪ ಎಂಬುದು ವಿಶೇಷ. ಇಂಥ ವಿಶೇಷ ಗೌರವವನ್ನು ಅವರು ಪಡೆದುಕೊಂಡರು.

ತಂಡವು ವಿಮಾನ ನಿಲ್ದಾಣಕ್ಕೆ ಬಂದಾಗ ವಿಶ್ವಕಪ್ ವಿಜೇತರನ್ನು ಸ್ವಾಗತಿಸಲು ನೂರಾರು ಅಭಿಮಾನಿಗಳು ಮಳೆಯನ್ನು ಲೆಕ್ಕಿಸದೆ ವಿಮಾನ ನಿಲ್ದಾಣದ ಹೊರಗೆ ಸಾಲುಗಟ್ಟಿ ನಿಂತಿದ್ದರು. ವಿಜಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಲು ಮುಂಬೈಗೆ ತೆರಳುವ ಮೊದಲು ಭಾರತ ತಂಡವು ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ನಿವಾಸದಲ್ಲಿ ಸಮಯ ಕಳೆಯಿತು.

ಬಳಿಕ ವಿಸ್ತಾರಾ ಏರ್​ಲೈನ್ಸ್​ ವಿಮಾನ ಯಾನ ಸಂಸ್ಥೆಯು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಗೌರವ ಸಲ್ಲಿಸಿದೆ. ಭಾರತೀಯ ತಂಡಕ್ಕೆ ನಿಯೋಜಿಸಲಾದ ವಿಮಾನವು ‘ಯುಕೆ 1845’ ಕೋಡ್​ ಹೊಂದಿತ್ತು. ಕೋಡ್ ರೋಹಿತ್ ಮತ್ತು ಕೊಹ್ಲಿಯ ಜೆರ್ಸಿ ಸಂಖ್ಯೆಗಳನ್ನು ಪ್ರತಿನಿಧಿಸುತ್ತದೆ. ವಿಶ್ವಕಪ್ ಫೈನಲ್ ಪಂದ್ಯದ ನಂತರ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಟಿ 20 ಪಂದ್ಯಗಳಿಂದ ನಿವೃತ್ತಿ ಘೋಷಿಸಿದ್ದರು.

ಇದನ್ನೂ ಓದಿ: Hardik Pandya : ಅವಮಾನ ಮಾಡಿದ ಪ್ರೇಕ್ಷಕರಿಂದಲೇ ಜೈಕಾರ ಹಾಕಿಸಿಕೊಂಡ ಹಾರ್ದಿಕ್ ಪಾಂಡ್ಯ!

ಮುಂಬೈನಲ್ಲಿ ವಿಸ್ತಾರಾ ವಿಮಾನದಿಂದ ಭಾರತೀಯ ತಂಡವು ಹೊರಬರುವ ಮೊದಲೇ, ವಿಮಾನಯಾನ ಸಂಸ್ಥೆ ಮತ್ತೊಂದು ವಿಶೇಷತೆ ತೋರಿತು/ ವಿಮಾನವು ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ, ಭಾರತೀಯ ತಂಡಕ್ಕೆ ಅದ್ಭುತ ವಾಟರ್ ಸೆಲ್ಯೂಟ್ ನೀಡಲಾಯಿತು. ಈ ವಿಶೇಷ ಕ್ಷಣದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಟೀಮ್ ಇಂಡಿಯಾ ಮರೀನ್ ಡ್ರೈವ್​ನಿಂದ ವಾಂಖೆಡೆ ಕ್ರೀಡಾಂಗಣಕ್ಕೆ ಓಪನ್-ಟಾಪ್ ಬಸ್​ನಲ್ಲಿ ವಿಜಯದ ಮೆರವಣಿಗೆ ನಡೆಸಿತು. ಭಾರತ ತಂಡದ ಆಗಮನಕ್ಕೂ ಮೊದಲೇ ಸಾವಿರಾರು ಅಭಿಮಾನಿಗಳು ಬೀದಿಗಿಳಿದಿದ್ದರು. ವಾಂಖೆಡೆ ಸ್ಟೇಡಿಯಂ ಕೂಡ ಸಂಪೂರ್ಣ ಭರ್ತಿಯಾಗಿದೆ. ಮೆರವಣಿಗೆಯ ನಂತರ, ಬಿಸಿಸಿಐ ಕ್ರೀಡಾಂಗಣದಲ್ಲಿ ಭಾರತೀಯ ತಂಡವನ್ನು ಸನ್ಮಾನಿಸಲಿದೆ.

ಟಿ20 ವಿಶ್ವಕಪ್​​ನಲ್ಲಿ ಭಾರತ ತಂಡದ ಕನಸಿನ ಓಟ

2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಅವರು ಸ್ಪರ್ಧೆಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲಲಿಲ್ಲ. ಗುಂಪು ಹಂತದಲ್ಲಿ ಭಾರತವು ಐರ್ಲೆಂಡ್, ಪಾಕಿಸ್ತಾನ ಮತ್ತು ಯುಎಸ್ಎಗಳನ್ನು ಸೋಲಿಸಿದರೆ, ಕೆನಡಾ ವಿರುದ್ಧದ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು.

ಸೂಪರ್ 8ರರಲ್ಲಿ ಭಾರತ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾವನ್ನು ಸೋಲಿಸಿತು. ಬಾರ್ಬಡೋಸ್​​ನ ಲ್ಲಿ ನಡೆದ ಸೆಮಿ ಫೈನಲ್​ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 68 ರನ್​ಗಳ ಜಯ ಸಾಧಿಸಿದರೆ, ಬಾರ್ಬಡೋಸ್​ನಲ್ಲಿ ನಡೆದ ಫೈನಲ್​​ನಲ್ಲಿ ಮೆನ್ ಇನ್ ಬ್ಲೂ ದಕ್ಷಿಣ ಆಫ್ರಿಕಾವನ್ನು 7 ರನ್ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಐಸಿಸಿ ಟ್ರೋಫಿ ಮತ್ತು ಟಿ 20 ವಿಶ್ವಕಪ್​ಗೆ ಮರಳಿತು.

Exit mobile version