Site icon Vistara News

Wild Elephant : ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಸಂಚರಿಸುವವರಿಗೆ ಎಚ್ಚರಿಕೆ; ಆಗಾಗ ಕಾಣಿಸಿಕೊಳ್ಳುತ್ತಿದೆ ಒಂಟಿ ಸಲಗ

Wild Elephant

ಚಿಕ್ಕಮಗಳೂರು:ದಕ್ಷಿಣ ಕನ್ನಡದ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಪದೇ ಪದೆ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ. ಇದು ಈ ರಸ್ತೆಯ ಮೂಲಕ ಸಾಗುವ ಮಂದಿಗೆ ಆತಂಕ ತಂದಿದೆ. ಬುಧವಾರ ರಾತ್ರಿ ಆನೆ ಕಾಣಿಸಿಕೊಂಡು ಯಾವುದೇ ಹಾನಿ ಮಾಡದೇ ಹೊರಟು ಹೋಗಿತ್ತು. ಅಂತೆಯೇ ಗುರುವಾರ ರಾತ್ರಿ ಮತ್ತೆ ಅನೆ ಕಾಣಿಸಿಕೊಂಡಿದೆ. ರಸ್ತೆ ಮಧ್ಯೆ ಒಂಟಿ ಸಲಗ ಕಾಣಿಸಿಕೊಂಡ ಕಾರಣ ಸವಾರರು ಹೆದರಿಕೊಂಡಿದ್ದರು.

ಬುಧವಾರ ರಾತ್ರಿ ಒಂಟಿ ಸಲಹ ಸರ್ಕಾರಿ ಬಸ್​ ಒಂದಕ್ಕೆ ಅಡ್ಡ ಬಂದಿತ್ತು. ಸುಮಾರು ಅರ್ಧ ಗಂಟೆ ಅಲ್ಲೇ ನಿಂತ ಕಾರಣ ವಾಹನ ದಟ್ಟಣೆ ಉಂಟಾಗಿತ್ತು. ಘಾಟಿ ರಸ್ತೆಯಲ್ಲಿ ಸುಮಾರು 2 ಕಿಲೋಮೀಟರ್​ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಂತೆಯೇ ಶುಕ್ರವಾರ ಮುಂಜಾನೆ ಒಂಟಿ ಸಲಗದ ದರ್ಶನ ಕೊಟ್ಟಿದೆ.

ಚಾರ್ಮಾಡಿ ಘಾಟ್ ಅತ್ಯಂತ ಕಿರಿದಾದ ಹಾಗೂ ತಿರುವುಗಳುಳ್ಳ ರಸ್ತೆಯನ್ನು ಹೊಂದಿದೆ. ಈ ಮಾರ್ಗದಲ್ಲಿ ಆನೆ ಎದುರಾದರೆ ತಪ್ಪಿಸಿಕೊಳ್ಳುವುದು ಕೂಡ ಕಷ್ಟ. ತಿರುವಿನಲ್ಲಿ ಬೈಕ್ ಸವಾರರು ಆನೆ ಕೈಗೆ ಸಿಕ್ಕರೆ ಅಪಾಯ ಕಟ್ಟಿಟ್ಟ ಬುತ್ತಿ.

https://vistaranews.com/wp-content/uploads/2024/06/WhatsApp-Video-2024-06-14-at-7.26.01-AM.mp4

ಚಾರ್ಮಾಡಿ ಘಾಟಿ ತಪ್ಪಲಿನ ಗ್ರಾಮಗಳಿಗೂ ಒಂಟಿ ಸಲಗ ಆಗಾಗ ಬರುತ್ತಿದೆ. ಹೀಗಾಗಿ ಈ ಆನೆಯನ್ನು ಸೆರೆ ಹಿಡಿದು ಆನೆಗಳಿರುವ ಪ್ರದೇಶಕ್ಕೆ ಬಿಡಬೇಕು ಎಂಬುದಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ.

ಆನೆ ತುಳಿದು ಗಾಯಗೊಂಡಿದ್ದ ಕಾರ್ಮಿಕ

ಕೂಲಿ ಕೆಲಸಕ್ಕೆ ಹೋಗುತ್ತಿದ್ದವನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ವಾಟೆಹಳ್ಳ ಗ್ರಾಮದಲ್ಲಿ ಗುರುವಾರ ನಡೆದಿತ್ತು . ಆಘಾತಕ್ಕೆ ರೈತನ ಕಾಲು ಮುರಿತವಾಗಿದೆ. ಬೆಳಗ್ಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಆನೆ ದಾಳಿ (Wild Elephant Attack) ಮಾಡಿತ್ತು. 60 ವರ್ಷದ ದಿವಾಕರ್ ಶೆಟ್ಟಿ ಗಾಯಗೊಂಡವರು.

ಇದನ್ನೂ ಓದಿ: Dengue Fever : ಡೆಂಗ್ಯೂ ಜ್ವರಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಬಲಿ

ದಿವಾಕರ್​ ಅವರು ಬೆಳಗ್ಗೆ ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಕಾಡಿನಿಂದ ಬಂದಿದ್ದ ಒಂಟಿ ಸಲಗವು ದಾಳಿ ಮಾಡಿದೆ. ದಿವಾಕರ್ ಅವರನ್ನು ಅಟ್ಟಿಸಿಕೊಂಡು ಬಂದು ಕಾಲಿನ ಮೇಲೆ ತುಳಿದಿದೆ. ಅವರ ಬಲಗಾಲು ಮುರಿದಿದೆ. ಅವರ ಕಿರುಚಾಟಕ್ಕೆ ಹೆದರಿದ ಆನೆ ಕಾಫಿ ತೋಟದ ಮೂಲಕ ವಾಪಸ್​ ಹೋಗಿದೆ. ಹೀಗಾಗಿ ಅವರ ಪ್ರಾಣ ಉಳಿದಿದೆ. ಅವರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಇಟಿಎಫ್ ತಂಡ ಭೇಟಿ, ಪರಿಶೀಲನೆ

ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆ

ಕಾಡಿನಿಂದ ನಾಡಿಗೆ ಮುಖ ಮಾಡಿರುವ ಆನೆಗಳು ಕಾಫಿ ತೋಟಗಳ ನಡುವೆ ನಿಂತಿವೆ. ಹೀಗಾಗಿ ಜೀವ ಭಯದಿಂದ ಕಾಫಿ ತೋಟದ ಕೆಲಸಕ್ಕೆ ಬರಲು ಕೂಲಿ ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಆನೆಗಳು ಮತ್ತು ಮಾನವನ ಸಂಘರ್ಷ ಹಲವಾರು ಸಮಯದಿಂದ ಈ ಪ್ರದೇಶದಲ್ಲಿ ನಡೆಯುತ್ತಿದೆ. ಅದಕ್ಕೊಂದು ಪರಿಹಾರ ಸಿಗುತ್ತಿಲ್ಲ. ಕಾಫಿ ತೋಟಗಳಿಗೆ ಆನೆಗಳು ಲಗ್ಗೆ ಇಡುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆನೆಗಳ ದಾಳಿಯಿಂದಾಗಿ ಹಲವಾರು ಕಾರ್ಮಿಕರು ಜರ್ಜರಿತರಾಗಿದ್ದಾರೆ. ಹೀಗಾಗಿ ಇದಕ್ಕೊಂದು ಪರಿಹಾರ ಇಲ್ಲ ಎನ್ನುವಂತಾಗಿದೆ.

Exit mobile version