Site icon Vistara News

Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಡಬಲ್​ ಎಂಜಿನ್​​ನ ಕೊಂಡಿ ಕಳಚಿದ ‘ಕೈ’

election result live

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election Results 2023) ಮೇ 10ರಂದು ನಡೆದಿದೆ. ಈ ಚುನಾವಣೆಯ ಫಲಿತಾಂಶದ (Karnataka Election Results) ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಕಾಂಗ್ರೆಸ್​ ಸ್ಪಷ್ಟ ಬಹುಮತಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದೆ. ಬಿಜೆಪಿ ಪ್ರತಿಪಕ್ಷವಾಗಿದೆ. ಜೆಡಿಎಸ್​ ಈ ಸಲ ಕಿಂಗ್​ ಮೇಕರ್ ಆಗುವ ಭಾಗ್ಯವನ್ನು ಕಳೆದುಕೊಂಡಿದೆ. ಈ ಸಲದ ಚುನಾವಣೆಯಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಕಾಣಿಸುತ್ತಿದೆ. ಇಂದು ಬೆಳಗ್ಗೆಯಿಂದ ನಡೆದ ಮತ ಎಣಿಕೆಯ ಸಮಗ್ರ ಮಾಹಿತಿ ಇಲ್ಲಿದೆ.

Lakshmi Hegde

ಬಿಜೆಪಿಯ ಅಹಂಕಾರಕ್ಕೆ ಪೆಟ್ಟು ಬಿತ್ತು. ಅಹಂಕಾರದಿಂದ ಯಾರೇ ಮಾತಾಡಿದರೂ ಅದು ಬಹಳ ದಿನ ನಡೆಯೋದಿಲ್ಲ. ಇದು ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವದಲ್ಲಿ ಜನರ ಸಹಕಾರವನ್ನು ತೆಗೆದುಕೊಂಡು, ಅವರ ನೋವನ್ನು ಅರ್ಥ ಮಾಡಿಕೊಂಡು ತಗ್ಗಿ-ಬಗ್ಗಿ ನಡೆದು ಜನರ ಕಲ್ಯಾಣವನ್ನು ಮಾಡ್ತೀವೋ ಆಗ ಮಾತ್ರ ಜನರ ಮನಸನ್ನ ಗೆಲ್ಲಬಹುದು ಎಂದು ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದರು.

Lakshmi Hegde

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದೇನು?

‘ಇವತ್ತಿನ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷ ಜಯಭೇರಿ ಹೊಡೆದಿದೆ ಮತ್ತು ಕಾಂಗ್ರೆಸ್ ಪಕ್ಷ ಈ ಸಲ ಭಾರಿ ಬಹುಮತದಿಂದ ಕರ್ನಾಟಕ ರಾಜ್ಯದಲ್ಲಿ ಆರಿಸಿ ಬರುತ್ತದೆ ಎಂದು ಪದೇಪದೆ ಹೇಳಿದ್ದೇವು. ಕಾಂಗ್ರೆಸ್ ಬಾವುಟ ನಮ್ಮ ವಿಧಾನಸೌಧದ ಮೇಲೆ ಹಾರುತ್ತದೆ ಎಂದೂ ಹೇಳಿದ್ದೆವು. ನಮಗೆ ಸಿಕ್ಕಿದ್ದು ಒಂದು ದೊಡ್ಡ ಗೆಲುವು. ಇಡೀ ದೇಶದಲ್ಲೇ ನಮಗೆ ಹೊಸದೊಂದು ಉತ್ಸಾಹ ಬಂದಿದೆ. ವಿಶೇಷವಾಗಿ ಬಿಜೆಪಿಯವರು ಪ್ರತಿಸಲ ನಮ್ಮನ್ನು ಕೆಣಕಿ ಮಾತಾಡ್ತಿದ್ದರು. ಆದರೆ ಈಗ ಏನಾಯಿತು? ಬಿಜೆಪಿ ಬಾಗಿಲೇ ಮುಚ್ಚಿ ಹೋಯಿತು. ಇಡೀ ದಕ್ಷಿಣ ಭಾರತವೇ ಬಿಜೆಪಿ ಮುಕ್ತವಾಗಿದೆ.

Lakshmi Hegde

ಎಡವಿದ್ದೆಲ್ಲಿ? ಎಡವಟ್ಟಾಗಿದ್ದು ಎಲ್ಲಿ:-ಜೆಡಿಎಸ್​ ವರಿಷ್ಠರ ಚರ್ಚೆ

ತಾನು ಈ ಬಾರಿಯೂ ಕಿಂಗ್ ಮೇಕರ್ ಆಗಬಹುದು ಎಂದು ಕನಸು ಕಂಡಿದ್ದ ಜೆಡಿಎಸ್​​ಗೆ ಮುಖಭಂಗವಾಗಿದೆ. 19 ಅಭ್ಯರ್ಥಿಗಳಷ್ಟೇ ಗೆಲುವು ಸಾಧಿಸಿದ್ದಾರೆ. ಇಂದಿನ ರಿಸಲ್ಟ್ ಬೆನ್ನಲ್ಲೇ ಎಚ್​.ಡಿ.ಕುಮಾರ್​ಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ಎಚ್​.ಡಿ.ದೇವೇಗೌಡ ಅವರು ಚರ್ಚೆ ನಡೆಸುತ್ತಿದ್ದಾರೆ. ದೇವೇಗೌಡರ ಮನೆಯಲ್ಲಿ ಇವರಿಬ್ಬರ ಚರ್ಚೆ ನಡೆಯುತ್ತಿದೆ. ಜೆಡಿಎಸ್ ಈ ಸಲ ಪಂಚರತ್ನ ರಥಯಾತ್ರೆ ಮೂಲಕ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿತ್ತು. ಜನರೊಂದಿಗೆ ನೇರ ಸಂವಹನ ನಡೆಸಿತ್ತು. ಆದರೆ ಜೆಡಿಎಸ್ ಅಂದುಕೊಂಡಷ್ಟು ಸೀಟ್​ಗಳು ಬರದ ಕಾರಣ ಈಗ ದೇವೇಗೌಡರು ಮತ್ತೆ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.

Lakshmi Hegde

ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ

ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್​ನಲ್ಲಿ ಈಗ ಸರ್ಕಾರ ರಚನೆಯ ಗಡಿಬಿಡಿ ಶುರುವಾಗಿದೆ. ಮಲ್ಲಿಕಾರ್ಜುನ್ ಖರ್ಗೆ ನಿವಾಸದಲ್ಲಿ ಸಭೆ ಶುರುವಾಗಿದೆ. ಈ ಸಭೆಗಾಗಿ ಸಿದ್ದರಾಮಯ್ಯ, ಸುರ್ಜೇವಾಲಾ, ವೇಣುಗೋಪಾಲ್​, ಡಿ.ಕೆ.ಶಿವಕುಮಾರ್​ ಉಪಸ್ಥಿತರಿದ್ದಾರೆ. ಶಾಸಕಾಂಗ ಪಕ್ಷದ ಸಭೆ ಯಾವಾಗ ಕರೆಯಬೇಕು ಎಂದು ಚರ್ಚಿಸುವ ಸಲುವಾಗಿ ಈ ಸಭೆ ಆಯೋಜಿಸಲಾಗಿದೆ. ಸಭೆ ಮುಗಿಯುತ್ತಿದ್ದಂತೆ ಕಾಂಗ್ರೆಸ್​ ನಾಯಕರು ಸುದ್ದಿಗೋಷ್ಠಿ ನಡೆಸಲಿದ್ದಾರೆ.

Lakshmi Hegde

ಸುಮಲತಾ ಅಂಬರೀಶ್ ಟ್ವೀಟ್​, ಕಾರ್ಯಕರ್ತರಿಗೆ ಧನ್ಯವಾದ

ಕಾಂಗ್ರೆಸ್​ ಗೆಲುವಿನ ಬೆನ್ನಲ್ಲೇ ಬಿಜೆಪಿಗೆ ಮತ ಹಾಕಿದ ಸರ್ವರಿಗೂ ಹಾಗೂ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗಾಗಿ ಶ್ರಮಿಸಿದ ಮಂಡ್ಯದ ಎಲ್ಲ ಕಾರ್ಯಕರ್ತರಿಗೂ ನನ್ನ ಕೃತಜ್ಞತೆಗಳು. ಗೆಲುವು ಹಾಗೂ ಸೋಲು ಚುನಾವಣೆಯ ಭಾಗವಾಗಿದೆ, ಹಾಗಂತ ನಾವೂ ಧೈರ್ಯವನ್ನು ಕಳೆದುಕೊಳ್ಳದೇ ಇರುವುದು ಅತ್ಯಂತ ಮುಖ್ಯವಾಗಿದೆ. ಕೆ.ಆರ್ ನಗರವೂ ಸೇರಿದಂತೆ ನನ್ನ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಮಂಡ್ಯದ ಅಭಿವೃದ್ದಿಗಾಗಿ ತಾವೆಲ್ಲರೂ ಧನಾತ್ಮಕವಾಗಿ ಕೆಲಸ ಮಾಡಲಿದ್ದೀರಿ ಎನ್ನುವ ನಂಬಿಕೆ ಮತ್ತು ಹಾರೈಕೆ ನನ್ನದು. ವಿಶೇಷವಾಗಿ ಈ ಬಾರಿ ಭ್ರಷ್ಟ ಹಾಗೂ ದುರಹಂಕಾರಿ ಕುಟುಂಬ ರಾಜಕಾರಣದ ವಿರುದ್ಧ ನಿರ್ಣಾಯಕವಾಗಿ ಮತ ಚಲಾಯಿಸಿದ್ದಕ್ಕೆ ಮಂಡ್ಯ ಜನತೆಗೆ ಧನ್ಯವಾದಗಳು. ಕರ್ನಾಟಕ ಜನತೆ ನೀಡಿರುವ ಜನಾದೇಶವನ್ನು ವಿನಮ್ರವಾಗಿ ನಾನು ಗೌರವಿಸುವೆ ಎಂದಿದ್ದಾರೆ.

Exit mobile version