Site icon Vistara News

ಸಲ್ಮಾನ್ ರಶ್ದಿಗೆ ಶಸ್ತ್ರಚಿಕಿತ್ಸೆ; ಇರಿದ ಆರೋಪಿ ಪೊಲೀಸರ ವಶಕ್ಕೆ

salman rushdie

ನ್ಯೂಯಾರ್ಕ್‌: ಚಾಕು ಇರಿತಕ್ಕೆ ಒಳಗಾದ ಜನಪ್ರಿಯ ಲೇಖಕ, ಭಾರತೀಯ ಮೂಲದ ಸಲ್ಮಾನ್ ರಶ್ದಿ (Salman Rushdie) ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಆದರೆ ಅವರ ಸ್ಥಿತಿಯ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಅವರು ಜೀವಂತವಾಗಿದ್ದಾರೆ ಎಂದಷ್ಟೇ ನ್ಯೂಯಾರ್ಕ್‌ ಗೌರ್ನರ್‌ ತಿಳಿಸಿದ್ದಾರೆ.

ನ್ಯೂಯಾರ್ಕ್‌ನ ಶುಟಾಕ್ವೇ ಇನ್‌ಸ್ಟಿಟ್ಯೂಷನ್‌ನಲ್ಲಿ ಉಪನ್ಯಾಸನೀಡಲು ಅವರು ವೇದಿಕೆ ಏರಿದ್ದಾಗ ಅಗಂತುಕನೋರ್ವ ಚಾಕುವಿನಿಂದ ಅವರಿಗೆ ಬಲವಾಗಿ ಇರಿದಿದ್ದು, ಕುತ್ತಿಗೆಗೆ ಗಂಭೀರ ಗಾಯವಾಗಿದೆ. ದೇಹದಲ್ಲಿ ಚಾಕುವಿನ ಹಲವು ಗಾಯಗಳಿದ್ದು, ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೂಡಲೇ ಸಭಿಕರು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಆದರೂ ಅವರು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದರು. ಅವರನ್ನು ಕೂಡಲೇ ಮೆಡಿಕಲ್‌ ಹೆಲಿಕ್ಯಾಪ್ಟರ್‌ನಲ್ಲಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿತ್ತು.

ಚಾಕುವಿನಿಂದ ಇರಿದ ಆರೋಪಿ

ಚಾಕುವಿನಿಂದ ಇರಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಯಾವ ಕಾರಣದಿಂದ ಈ ದಾಳಿ ನಡೆದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ದಾಳಿಯನ್ನು ಲೇಖಕಿ ತಸ್ಲೀಮಾ ನಸ್ರೀನ್‌, ಜಾವೇದ್ ಅಕ್ತರ್, ಅಮಿತ್‌ ಘೋಷ್‌ ಸೇರಿದಂತೆ ಅನೇಕ ಹೆಸರಾಂತ ಸಾಹಿತಿಗಳು, ರಾಜಕಾರಣಿಗಳು ಖಂಡಿಸಿದ್ದಾರೆ.

೭೫ ವರ್ಷದ ರಶ್ದಿ ಈ ಹಿಂದಿನಿಂದಲೂ ಇಸ್ಲಾಮ್‌ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಎದುರಿಸುತ್ತಿದ್ದರು. ಭಾರತೀಯ ಮೂಲದವರಾದ ರಶ್ದಿ, ಇಂಗ್ಲೆಂಡ್‌ ದೇಶದ ಪ್ರಜೆಯಾಗಿದ್ದಾರೆ. ಆದರೆ ಕಳೆದ ೨೦ ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ೧೯೯೮ರಲ್ಲಿಯೇ ಇರಾನಿನ ಪ್ರಮುಖ ಧಾರ್ಮಿಕ ನಾಯಕರೊಬ್ಬರು ಇವರ ಹತ್ಯೆಗೆ ಬಹುಮಾನ ಘೋಷಿಸಿದ್ದರು.

1981 ರಲ್ಲಿ ಬಿಡುಗಡೆಯಾದ ʼಮಿಡ್‌ನೈಟ್ಸ್‌ ಚಿಲ್ಟ್ರನ್‌ʼ ನಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ರಶ್ದಿ ೧೯೮೦ರಲ್ಲಿ ಬರೆದ ದಿ ಸಟಾನಿಕ್ ವರ್ಸಸ್ ಕಾದಂಬರಿಯಿಂಧಾಗಿ ತೀವ್ರ ವಿವಾದಕ್ಕೊಳಗಾಗಿದ್ದರು. ಮಿಡ್‌ನೈಟ್ಸ್‌ ಚಿಲ್ಟ್ರನ್‌ಗೆ ಅವರು ಬೂಕರ್‌ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕಾಶ್ಮೀರದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಅವರು, ಕೇಂಬ್ರಿಡ್ಜ್‌ನಲ್ಲಿ ಓದಿದ್ದು, ಪ್ರಪಂಚದ ಹೆಸರಾಂತ ಲೇಖಕರ ಪೈಕಿ ಒಬ್ಬರಾಗಿದ್ದಾರೆ.

Exit mobile version