Site icon Vistara News

Sunday read | ಹೊಸ ಪುಸ್ತಕ | ಮತ್ತೆ ಹಾಡಾಗಿದೆ ಮಳೆ ಸಂಗೀತ

nanna kitaki

| ಯೋಗೀಂದ್ರ ಮರವಂತೆ

ನೈಋತ್ಯ ಮಾರುತದ ಆಗಮನವಾಗಿ ತಿಂಗಳು ಕಳೆದಿದೆ. ಚಲನಶೀಲ ಮೇಘರಾಶಿಯು ಭಾರತದ ಮೇಲೆ ಹರಡುವುದು ಆಮೇಲೆ ಮಳೆಯಾಗಿ ಇಳಿಯುವುದು ಸುರಿಯುವುದು, ನಡುನಡುವೆ ಗುಡುಗುವುದು ಮಿಂಚುವುದು ಬೀಸುವುದು, ನದಿ ಉಕ್ಕುವುದು, ತೊರೆ ತುಂಬುವುದು, ನೆರೆ ಬರುವುದು, ಸಮುದ್ರ ಮೊರೆಯುವುದು, ಜಲಪಾತ ಧುಮ್ಮಿಕ್ಕುವುದು, ನೆಲ ಮಣ್ಣು ಬೆಟ್ಟ ಗುಡ್ಡ ರಸ್ತೆ ತೋಟ ತೋಯುವುದು, ಯಾವ ದೇಶದ ಯಾವ ದಿಕ್ಕಿನಲ್ಲಿ ಯಾವ ಕಾಲಮಾನ ತಾಪಮಾನವೇ ಆದರೂ ಭಾರತದಲ್ಲೀಗ ವರ್ಷ ಋತುಮಾನ. ಮಳೆ ಸುರಿಯುವ ಊರಿರಲಿ, ನೀರು ಕಾಣದ ಬಂಜರಿರಲಿ, ಕಪ್ಪುಗಟ್ಟಿದ ಮೋಡಗಳ ನೆರಳು ಬೀಳುವ ತಾಣವಿರಲಿ, ಮೋಡವೇ ಇಲ್ಲದ ಸ್ವಚ್ಛ ಬರಡು ಬಾನಿನಡಿಯ ಹಾದಿಯಿರಲಿ, ತುಂಬಿದ ಕೆರೆಯ ಗ್ರಾಮವಿರಲಿ ಅಥವಾ ಬರಿದು ಕೆರೆಗಳ ಸ್ಥಳವಿರಲಿ, ಜಗತ್ತಿನ ಯಾವ ದೇಶದ ಯಾವ ಮೂಲೆಗೆ ಹೋದರೂ ಅಲ್ಲೆಲ್ಲ ಅಲ್ಲಿರುವವರನ್ನೆಲ್ಲ ತುಂಬಾ ಕಾಡಿದ ವಸ್ತು, ವಿಷಯ, ಪ್ರಕ್ರಿಯೆ, ಬದಲಾವಣೆ ಮಳೆಯೇ ಇರಬೇಕು.

ಮಳೆ ಬೀಳದ ಕಾರಣಕ್ಕೋ ಅಥವಾ ಮಳೆ ಬರುವ ನಿಮಿತ್ತಕ್ಕೋ. ಕವಿಗಳಿರಲಿ, ಕಥೆಗಾರರಿರಲಿ, ಬರಹಗಾರರಿರಲಿ, ಓದುಗರಿರಲಿ, ಅಕ್ಷರ ಪ್ರೇಮಿಗಳಿರಲಿ, ನಿರಕ್ಷರರಿರಲಿ ಮಳೆ ಎಲ್ಲರನ್ನೂ ಆವರಿಸುತ್ತದೆ. ಮಳೆಯನ್ನು ಅದಮ್ಯವಾಗಿ ಪ್ರೀತಿಸುವವರು, ಮಳೆಗಾಗಿ ಹಂಬಲಿಸುವವರು ರೈತರೊ ತೋಟಗಾರರೊ ಮಾತ್ರ ಆಗಿರಬೇಕೆಂದಿಲ್ಲ. ಮಳೆ ಸೃಜಿಸುವ ಸಂವಹನ, ತುಂಬುವ ಸ್ಫೂರ್ತಿಯೇ ಅಂತಹದ್ದು. ಯಾರೊಂದಿಗೂ ಮಾತಾಡಬಲ್ಲುದು ಯಾರನ್ನೂ ಮಾತಾಡಿಸಬಲ್ಲುದು; ಯಾರನ್ನೂ ಕಾಡಬಲ್ಲದು ಯಾರೊಡನೆಯೂ ಹಾಡಬಲ್ಲದು. ಬಾಯಾರಿದವನಿಗೆ ಮಾತ್ರ ಮಳೆ ಜೀವ ನೀಡುವುದಲ್ಲ, ಮಳೆಗೆ ಒದ್ದೆ ಆಗುವ ಮನಸ್ಸಿದ್ದವರನ್ನೆಲ್ಲ ಮಳೆ ಹಿಡಿದು ಕಾಡಬಲ್ಲದ್ದು. ಮಳೆ ಬರುವಾಗ ಕೆಲವರಿಗೆ ಬಾಲ್ಯ ನೆನಪಾಗುತ್ತದೆ, ಇನ್ನು ಕೆಲವರಿಗೆ ಪ್ರೇಮಿಯ ನೆನಪು ಕಾಡುತ್ತದೆ, ಹೊಸ ಕನಸು ಮೂಡಬಹುದು, ಮತ್ತೆ ಕೆಲವರಿಗೆ ಬಿಸಿ ಚಹಾ ಅಥವಾ ಕಾಫಿ ಹೀರುತ್ತಾ ಹಪ್ಪಳ ತಿನ್ನುವ ಅನಿಸಬಹುದು, ಇನ್ನು ಎಳೆ ಹೃದಯದ ಹುಚ್ಚುಮನಸಿನ ಜೀವಗಳಿಗೆ ಮಳೆಯಲ್ಲಿ ನೆನೆಯುತ್ತ ನೀರು ಸಿಡಿಸುತ್ತ ಆಡುವ ಹಂಬಲ ಆಗಬಹುದು, ಮತ್ತೆ ಕೆಲವರಿಗೆ ಕಾಗದ ದೋಣಿ ಮಾಡಿ ಮನೆಯ ಮುಂದೆ ಹರಿಯುವ ನೀರಿನ ಕಾಲುವೆಯಲ್ಲಿ ಬಿಡುವ ಆಸೆ ಮೂಡಬಹುದು, ಆ ನೀರಲ್ಲಿ ಕೊಚ್ಚಿ ಹೋಗುತ್ತಿರುವ ಇರುವೆಗೆ ಕಡ್ಡಿಯ ಆಸರೆ ನೀಡಿ ಬದುಕಿಸುವ ಎಂದೆನಿಸಬಹುದು. ಮತ್ತೆ ಏನೋ ಬರೆಯುವ ಏನೋ ಹೇಳುವ ಅಂತ ಅನಿಸಬಹುದು. ಕ್ಯಾಮೆರಾ ಹಿಡಿದು ಊರು ಕಾಡು ಬೆಟ್ಟ ಗುಡ್ಡ ಜಲಪಾತ ಸುತ್ತಿ ಮಳೆ ಮೋಡ ಹಸಿರು ಆಕಾಶವನ್ನು ಆಯತಾಕಾರದ ಕಿರು ಚೌಕಟ್ಟಿನ ಭಾವಚಿತ್ರದಲ್ಲಿಯೇ ಹಿಡಿದಿಡುವ ವಾಂಛೆ ಉಕ್ಕಬಹುದು. ಅಥವಾ ಕರಾವಳಿಯ ನನ್ನೂರಿನಂತಹ ಊರಿನಿಂದ ಐದು ಸಾವಿರ ಮೈಲು ದೂರದ ಬ್ರಿಟಿನ್ನಿನ ಬೇಸಿಗೆಯಲ್ಲಿ ಕುಳಿತವರೆದುರು ಆ ಮಳೆಯ ಕನವರಿಕೆಯೇ ಚಿಟಪಟ ಸದ್ದು ಮಾಡಿ ಕುಣಿಯಬಹುದು.

ಮುಂಗಾರು ಮಳೆ ಭಾರತದ ಉದ್ದಗಲವನ್ನು ಹಂತಹಂತವಾಗಿ ತನ್ನ ತೆಕ್ಕೆಯಲ್ಲಿ ಸೆಳೆದುಕೊಳ್ಳುತ್ತಿರುವ ಹೊತ್ತಲ್ಲಿ ಮಳೆಯ ಲಹರಿಯಲ್ಲಿ ಬಳಲುತ್ತಾ ಮೋಡವನ್ನು ಮಳೆಯನ್ನು ಮುಂಗಾರನ್ನು ಜೀವಸದೃಶವಾಗಿ ದೇವಸ್ವರೂಪಿಯಾಗಿ ಕಾಲಾತೀತವಾಗಿ ಕಂಡವರು ಕೊಂಡಾಡುವವರು ಕೂಡ ಕಣ್ಣ ಮುಂದೆ ಬರುತ್ತಾರೆ. ಅವರವರ ಭಾವಕ್ಕೆ ಅವರವರ ಜೀವಕ್ಕೆ ಮಳೆ ಸತ್ವವಾಗಿ, ದೃಶ್ಯವಾಗಿ, ಚಿತ್ರವಾಗಿ, ಶಬ್ದವಾಗಿ, ಗಂಧವಾಗಿ, ಅಕ್ಷರವಾಗಿ ಒಗ್ಗುತ್ತಿರುತ್ತದೆ. ಇದು ಮಳೆಯ ಸಾಮರ್ಥ್ಯವೋ ಇಳೆಯ ಮಹಿಮೆಯೋ ಬಲ್ಲವರು ಹೇಳಬೇಕು. ಮಳೆಯ ಬಗ್ಗೆ ಮಾತನಾಡದವರನ್ನು, ಮಳೆಯ ಬಗ್ಗೆ ಕನಸು ಕಾಣದವರನ್ನು, ಮಳೆಯನ್ನು ದೂಷಿಸದವರನ್ನು, ಮಳೆಗೆ ಕರಗದವರನ್ನು ಹುಡುಕುವುದು ಕಷ್ಟ, ಹುಡುಕಿದರೂ ಸಿಗುವುದು ದುರ್ಲಭ. ಹಾಗಾಗಿಯೇ ಯಾವ ಊರಿಗೆ ನಡೆದರೂ ಯಾವ ಭಾಗಕ್ಕೆ ಹೋದರು ಮಳೆಪ್ರೇಮಿಗಳು ಸಿಗುತ್ತಾರೆ.

ಮತ್ತೆ ಮಳೆಯನ್ನು ಶಬ್ದ ವಾಕ್ಯ ಪುಸ್ತಕಗಳಲ್ಲಿ ಹುಡುಕಹೊರಟರೂ ಯಾವ ಭಾಷೆಯ ಕಾವ್ಯವನ್ನು ಅರಸುತ್ತ ಅನ್ವೇಷಿಸುತ್ತ ನಡೆದರೂ ಮಳೆಯ ಬಗ್ಗಿನ ಕವನಗಳು ಚಿತ್ರಣಗಳು ಸಾಲು ಸಾಲಾಗಿ ಸಿಗುತ್ತವೆ. ಮತ್ತೆ ಅಂತಹ ಕವನ ಕಾವ್ಯ ಸೊಲ್ಲು ಸಾಲುಗಳನ್ನು ಹುಡುಕಿ ಹುಡುಕಿ ಓದುವವರು ಮೈಮರೆಯುವವರು ಹಾತೊರೆಯುವವರು ಕೂಡ ಎಲ್ಲೆಲ್ಲೂ ಸಿಗುತ್ತಾರೆ. ಮಳೆ ಯಾಕೆ ಇಷ್ಟು ಕಾಡುತ್ತದೆ ಎನ್ನುವುದು ಮಳೆಯಷ್ಟೇ ಕಾಡುವ ಪ್ರಶ್ನೆ. ಕಪ್ಪು ಮೋಡಗಳ ಎದೆಯಿಂದ ಆಕಾಶವನ್ನು ಸೀಳಿ ಸುರಿಯುವ ಧಾರೆಗೋ, ಮಳೆಮಣ್ಣಿನ ಸ್ಪರ್ಶಕ್ಕೆ ಹಬ್ಬುವ ಗಂಧಕ್ಕೋ, ಗಂಟೆಗಟ್ಟಲೆ ದಿನಗಟ್ಟಲೆ ಬಿಡದೆ ಇಳಿದು ಬಸಿದು ಆವರಿಸುವ ಗುಂಗಿಗೋ, ಮಳೆ ಸುರಿಯುವಾಗಿನ “ರಿಂ ಜಿಮ್” ಸ್ವರಪ್ರಸ್ತಾರಕ್ಕೋ, ಮಳೆಯ ಅಸ್ತಿತ್ವದಿಂದಲೇ ಬದುಕುವ ಬಾಳುವ ಅಥವಾ ಮಳೆ ಸಂಗೀತದೊಳಗಿನ ಗುಡುಗು ಸಿಡಿಲು ಗಾಳಿ ಮರಗಳ ಹೊಯ್ದಾಟದ ಶ್ರುತಿ ಲಯ ಲಾಸ್ಯಕ್ಕೋ? ಅನುಭವಿಸಿದವರೇ ಅನ್ನಬೇಕು, ಕಾವ್ಯ ಬರೆದವರೇ ಹೇಳಬೇಕು ಅಥವಾ ಬರೆಸಿಕೊಂಡ ಮಳೆಯೇ ಚಿಟಪಟಿಸಬೇಕು.

ಮಳೆಗಾಲ ಮಹಾನ್ ಕವಿಗಳ ಮೆಚ್ಚಿನ ಮಾಸವೂ ಹೌದು. ಮೋಡಗಳನ್ನು ರಮಿಸಿ ಒಲಿಸಿ ಕಾವ್ಯದ ಮಳೆ ಸುರಿಸಿದ ಹೆಗ್ಗಳಿಕೆ ಮುಂಗಾರಿನ ಮಾಸಕ್ಕೂ ಮತ್ತು ಆ ಮಾಸದ ಮೇಘರಾಶಿಗೂ ಜೊತೆಜೊತೆಗೆ ಸಲ್ಲುತ್ತದೆ. ಮಳೆಗಾಲವು ಸೌಂದರ್ಯಪೂರ್ಣವೂ ರೌದ್ರ-ರಮಣೀಯವೂ ಆಗಿ ತೋರುವ ದೇಶಗಳಲ್ಲಿ ಭಾರತಕ್ಕೆ ಮುಖ್ಯ ಸ್ಥಾನ ಇದೆ. ಹಾಗಾಗಿ ಮಾನ್ಸೂನ್ ಕಾವ್ಯವನ್ನು ಬರೆದ ಮಹಾನ್ ಕವಿಗಳನ್ನು ಹುಡುಕಿ ನಾವೇನೂ ದೇಶಾಂತರ ಹೋಗಬೇಕಿಲ್ಲ. ಜಗತ್ತಿನ ಮಳೆಕಾವ್ಯದ ಅತಿರಥ ಮಹಾರಥರನ್ನೆಲ್ಲ ಒಂದೆಡೆ ಸೇರಿಸಿದರೆ ಬಹುಷಃ ಅವರಲ್ಲೆಲ್ಲ ಎತ್ತರದ ಸ್ಥಾನ ಭಾರತೀಯ ಕವಿ ಸಾಹಿತಿಗಳಿಗೇ ಸಿಗಬೇಕೇನೋ. ಮೋಡ, ಮಳೆ ಮತ್ತು ಮಳೆಗಾಲಗಳನ್ನು ಮತ್ತೆ ಮತ್ತೆ ಬೇರೆ ಬೇರೆ ಕಣ್ಣಲ್ಲಿ ನೋಡುತ್ತಾ ಹೊಸ ಹೊಸ ಶಬ್ದ ಕಲ್ಪನೆ ಜೋಡಿಸುತ್ತ ಕಾವ್ಯ ಹೊಸೆದ ಭಾರತೀಯ ಕವಿಗಳು ಹಲವರಿದ್ದಾರೆ.

ಅವರಲ್ಲಿ ನಮಗೆ ಇಷ್ಟವಾದ ಕವಿಗಳು ಯಾರೇ ಇದ್ದರೂ ಅಂತಹ ಕವಿಗಳ ಪಟ್ಟಿಯಲ್ಲಿ ಪೂರ್ವಜನೆನಿಸುವವನು ಮಹಾಕವಿ ಕಾಳಿದಾಸ; ಆತನ ಬಗ್ಗೆ ನುಡಿಗೌರವ ಸಲ್ಲಿಸದೆ ಬೇರೆ ಮಳೆಕವಿಗಳ ಬಗ್ಗೆ ಕುರಿತು ಹೇಳುವ ಹಾಗಿಲ್ಲ. 1600 ವರ್ಷಗಳ ಹಿಂದೆ ರಚಿಸಲ್ಪಟ್ಟಿತು ಎಂದು ಹೇಳಲಾಗುವ ಕಾಳಿದಾಸನ “ಮೇಘದೂತ” ಕಾವ್ಯಾಸಕ್ತರನ್ನು ಇಂದಿಗೂ ಮುಂದಿಗೂ ಮೋಡ ಇರುವಾಗಲೂ ಇಲ್ಲದಾಗಲೂ ಮಳೆಗಾಲದ ಮೊದಲೂ ಆಮೇಲೂ ಮಳೆಗಾಲದೊಳಗೂ ಹೊರಗೂ ಕಾಡುತ್ತದೆ. ಭಾರತದ ಎಲ್ಲ ಭಾಷೆಗಳಿಗೂ, ಆಂಗ್ಲ ಭಾಷೆಗೂ ಮತ್ತೆ ಮತ್ತೆ ಮೇಘದೂತ ಅನುವಾದಿಸಲ್ಪಟ್ಟಿದೆ. ಮೋಡವನ್ನು ಮಳೆಯನ್ನೂ ಪ್ರೀತಿಸುವವರೆಲ್ಲ ಮುಂಗಾರು ಮಳೆಯನ್ನು ನೋಡಲೇಬೇಕು, ಮೋಡ ಮಳೆಯ ಹೊಸ ಕಲ್ಪನೆ ಕವಿತೆ ಬರೆಯುವವರೆಲ್ಲ ಕಾಳಿದಾಸನ ಮೇಘದೂತವನ್ನು ಓದಲೇಬೇಕು. ಕತೆಯಾಗಿ, ಕವನವಾಗಿ, ಹಾಡಾಗಿ, ಗೀತನಾಟಕವಾಗಿ, ಗದ್ಯವಾಗಿ, ಯಕ್ಷಗಾನವಾಗಿ ಮೇಘದೂತ ಜಗತ್ತಿನ ಮೂಲೆ ಮೂಲೆಯನ್ನು ಮುಟ್ಟಿದೆ. ಶಾಪಗ್ರಸ್ತನಾಗಿ ಅಂದಿನ ಭಾರತದಲ್ಲಿ ಅಲೆದಾಡುತ್ತಿದ್ದ ಯಕ್ಷನೊಬ್ಬ ತಲೆಯ ಮೇಲೆ ಸರಿದು ಹೋಗುವ ಮೋಡದ ಮೂಲಕ ಹಿಮಾಲಯದ ಕೈಲಾಸ ಪರ್ವತದಲ್ಲಿರುವ ತನ್ನ ಪತ್ನಿಗೆ ಸಂದೇಶ ಕಳುಹಿಸುವುದನ್ನು ಕಾಳಿದಾಸ 111 ಪಂಕ್ತಿಗಳ ಕವಿತೆಯಾಗಿ ಬರೆದಿದ್ದಾನೆ. ಕಲ್ಪನೆ, ಗ್ರಹಿಕೆ, ಕಾವ್ಯದ ದೃಷ್ಟಿಯಿಂದ ಶ್ರೇಷ್ಠ ಎಂದು ಕೊಂಡಾಡಲ್ಪಡುವ ಮೇಘದೂತ, ಮಳೆಗಾಲದ ಮೋಡಗಳಿಗೂ ಹೆಮ್ಮೆ ತರುವ ಕಾವ್ಯ.

ಎಲ್ಲೋ ಹುಟ್ಟುವ ಮಳೆಗಾಲದ ಮೋಡಗಳು ದಟ್ಟವಾಗಿ ಪರ್ವತಾಕಾರವಾಗಿ ಜೂನ್ ತಿಂಗಳ ಮೊದಲಿಗೆ ಮಳೆಯ ಸಂದೇಶವನ್ನು ಹೊತ್ತು ಭಾರತವನ್ನು ಪ್ರವೇಶಿಸುತ್ತವೆ. ಜೀವಜಗತ್ತೆಲ್ಲ ಕಾಯುವ ಕಾತರಿಸುವ ಮೇಘಸಂದೇಶ ಮಳೆಯಾಗಿ ಸುರಿಯುತ್ತದೆ. ಕಾಳಿದಾಸನ ಕಾವ್ಯ ಇಂಗ್ಲಿಷ್ ಅನುವಾದದಲ್ಲಿ “ಕ್ಲೌಡ್ ಮೆಸ್ಸೆಂಜರ್” ಎಂಬ ಶಬ್ದಜೋಡಣೆಯನ್ನು ಕಲ್ಪನೆಯನ್ನು ಹುಟ್ಟುಹಾಕಿದೆ. ಹಲವು ಶತಮಾನಗಳ ಹಿಂದೆ ಕಾವ್ಯ ಕಟ್ಟಿದರೂ ಇಂದಿಗೂ ನೆನಪಿಗೆ ಬರುವ ಕಾಳಿದಾಸನ ಯುಗದ ನಂತರ ಮೋಡದ ಕುರಿತು ಮಳೆಯ ಬಗ್ಗೆ ಕವನ ಬರೆದವರು ಕತೆ ಕಾದಂಬರಿಗಳಲ್ಲಿ ಮಳೆಯ ಚಿತ್ರಣವನ್ನು ಮಾಡಿದ ಹಲವು ಕವಿಗಳು ಇದ್ದಾರೆ. ಅವರೆಲ್ಲರ ನಡುವೆ ತೀವ್ರ ಮಳೆಪ್ರೇಮದ ಕವಿ ಎಂದು ಗುರುತಿಸಲ್ಪಡುವವರು ರವೀಂದ್ರನಾಥ ಟ್ಯಾಗೋರರು. ಟ್ಯಾಗೋರರು ಬರೆದುದು ಒಂದಲ್ಲ ಎರಡಲ್ಲ ನಾಲ್ಕಲ್ಲ ಎಂಟಲ್ಲ ಅನೇಕ ಮಳೆ ಕವಿತೆಗಳನ್ನು. ಟ್ಯಾಗೋರರ ಮಳೆಕವಿತೆಗಳು ಬಂಗಾಳದಲ್ಲಿ ಮಾತ್ರ ಮನೆ ಮಾತಲ್ಲ ದೇಶದಾದ್ಯಂತ ಜಗತ್ತಿನಾದ್ಯಂತ ಇಂದಿಗೂ ಓದಲ್ಪಡುತ್ತವೆ ಹಾಡಲ್ಪಡುತ್ತವೆ.

ಇದನ್ನೂ ಓದಿ | Sunday read | ಹೊಸ ಪುಸ್ತಕ | ಮಹಾಭಾರತದ ನೈಜ ನಾಯಕ ವಿದುರ

“ಮೋಡಗಳು ತೇಲುತ್ತ ನನ್ನ ಜೀವನಕ್ಕೆ ಬರುತ್ತವೆ, ಮಳೆನೀರ ಹೊತ್ತೂ ಅಲ್ಲ ಬಿರುಗಾಳಿಯ ಜೊತೆಯಾಗಲೂ ಅಲ್ಲ, ನನ್ನ ಸೂರ್ಯಾಸ್ತದ ಬಾನಿಗೆ ಬಣ್ಣ ಹಚ್ಚಲು” ಎಂದವರು ಟ್ಯಾಗೋರರು. ಮಳೆಸಂಗೀತ ಎನ್ನುವ ಅವರ ಕವನ ಹೀಗೆ ಹಾಡುತ್ತದೆ-

“ಮಳೆದಿನಗಳಲಿ
ಮಳೆಯ ಚಿಟಪಟ ದನಿಯಾಗುವಾಗ
ಹೇಳಲಸಾಧ್ಯ ನನ್ನ ಅನಿಸಿಕೆ,
ದಿಗ್ಭ್ರಮೆಯೂ ಆಗಿದೆ ಮನಸಿಗೆ.
ಅನಿಸುತಿದೆ ಯಾರೋ ಬಿಟ್ಟು ಹೋದಂತೆ
ನನ್ನ ಕರೆಕರೆದು
ಇರುಳಲಿ ತಟ್ಟಿ ಬಾಗಿಲ
ಮಳೆದಿನಗಳಲಿ
ಸ್ವರವಾಗಿದೆ ಮಳೆಯ ಚಿಟಪಟ.
ಇರಲಿ ಕರುಣೆ ನನ್ನಲಿ, ಪ್ರಿಯೆ ಹೊತ್ತಿಸು ಬೆಳಕ ನನ್ನೆದೆಗೆ
ಕಂಡಂತಾಯ್ತು ಯಾರದೋ ನೆರಳು ಕನಸಿನಲಿ
ಅರೆನಿದ್ರೆಯ ಅರೆಎಚ್ಚರದ
ನನ್ನ ಕಂಗಳಲಿ ತುಂಬಿದೆ ಕಣ್ಣೀರು
ಯಾರೋ ಇರುಳಲಿ ಬಳಿ ಬಂದಂತಾಗಿ
ಮಳೆದಿನಗಳಲಿ
ಚಿಟಪಟ ಸಂಗೀತವಾಗಿ

ವಿಮರ್ಶಕರು ಟ್ಯಾಗೋರರ ಮಳೆಕವಿತೆಗಳೆಲ್ಲವೂ ಅವರ ದಿವ್ಯಪ್ರೇಮಿಯ (Soulmate) ಅನ್ವೇಷಣೆ, ನಿಸರ್ಗ ಮತ್ತು ಮನುಷ್ಯನ ನಡುವಿನ ಸಂಬಂಧದ ಮರುನಿರೂಪಣೆ ಎಂದಿದ್ದಾರೆ. ಮಳೆಗೂ ಪ್ರೇಮಕ್ಕೂ ಪ್ರಾಕೃತಿಕ ಸಹಜ ಸಂಬಂಧ. ಆ ಸಂಬಂಧ ಸಹಜವಾಗಿಯೇ ಟ್ಯಾಗೋರರ ಮಳೆಪದಗಳಲ್ಲೂ ಕಾಣುತ್ತದೆ. 1930ರಲ್ಲಿ ಟ್ಯಾಗೋರರು ರಷ್ಯಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಕಾರ್ಮಿಕ ಒಕ್ಕೂಟಗಳ ಕಾರ್ಯಾಗಾರದಲ್ಲಿ ಎರಡು ಕವನಗಳನ್ನು ಓದಿದ್ದರು. ಅವುಗಳಲ್ಲಿ ಒಂದು ಕವನ ಮಳೆಯ ಬಗ್ಗಿನದಾಗಿತ್ತು. ತನ್ನ ಕವನವೊಂದನ್ನು ಪರಿಚಯಿಸುವಾಗ, ಭಾರತದ ಚಿತ್ರಣವನ್ನು ವಿದೇಶದ ಅಪರಿಚಿತರಿಗೆ ಮಾಡಿಸುವಾಗ ಅವರ ಆಯ್ದುಕೊಂಡ ಕವಿತೆ ಮಳೆಪ್ರೀತಿಗೆ ನಿದರ್ಶನವಾಗಿದೆ. ಬೆಂಗಾಲಿಯಲ್ಲಿ “ನಬಬರಷ” ಎನ್ನುವ ಶೀರ್ಷಿಕೆಯ ಕವನ “ಹೊಸಮಳೆ”ಯ ಕುರಿತಾದದ್ದು. ಈ ಕವನನ್ನು ವಾಚಿಸುವ ಮುನ್ನ ಟ್ಯಾಗೋರು ರಷ್ಯನ್ ಸ್ನೇಹಿತರಿಗೆ ಕವನದ ಹಿನ್ನೆಲೆಯನ್ನೂ ನೀಡಿದ್ದರು. ಅಂದಿನ ಕೃಷಿಪ್ರಧಾನ ಭಾರತದಲ್ಲಿ ಬೇಸಿಗೆಯಲ್ಲಿ ಬೆಂದವರು ಮೋಡ ದಟ್ಟವಾಗುವುದಕ್ಕೆ ಕಾಯುವುದು, ಮೊದಲ ಮಳೆಗೆ ಪುಳಕಗೊಳ್ಳುವುದು ಸ್ವತಃ ಟ್ಯಾಗೋರರ ಹೃದಯವೇ ನವಿಲಾಗಿ ನರ್ತಿಸುವುದು; ಭತ್ತದ ತೆನೆಗಳು ನಲಿದಾಡುವುದು, ನೀರಲ್ಲಿ ಹುದುಗಿದ ಕಪ್ಪೆಗಳು ಗೊಟರ್ ಸದ್ದು ಮಾಡುವುದು, ಮಳೆಯಲ್ಲಿ ನೆನೆದ ಬಾತುಕೋಳಿಗಳು ತಮ್ಮ ಗೂಡಿನಲ್ಲಿ ಮರಿಗಳ ಜೊತೆ ನಡುಗುವುದು ಹೀಗೆ ಮಣ್ಣಿನ ಹಾಗು ಮಣ್ಣಿನ ಮಕ್ಕಳ ಬದುಕಿನ ಚಿತ್ರಣವನ್ನು ಬರೆಯುತ್ತದೆ “ಹೊಸಮಳೆ” ಕವನ. “ಗೀತಾಭಿತನ್” ಎನ್ನುವ ಟ್ಯಾಗೋರರ ನಿಸರ್ಗದ ಹಾಡುಗಳ ಸಂಗ್ರಹವನ್ನು ಅವಲೋಕಿಸಿದರೆ ಅದರಲ್ಲಿ 115 ಮಳೆಗೀತಗಳಿವೆ, 96 ಹಾಡುಗಳು ವಸಂತದ ಬಗ್ಗೆ, 30 ಹಾಡುಗಳು ಶರತ್ಕಾಲದ ಬಗ್ಗೆ, 16 ಹಾಡುಗಳು ವೈಶಾಖದ ಕುರಿತು, 12 ಚಳಿಯ ಬಗ್ಗೆ ಮತ್ತೆ ಐದು ಹೇಮಂತ ಋತುವಿನ ಪಾಲಿಗೆ. ಇಲ್ಲಿಯೂ ಮಳೆಯ ಪಕ್ಷಪಾತಿ ಟ್ಯಾಗೋರರು.

ಟ್ಯಾಗೋರರು ಜೀವನದ್ದುದ್ದಕ್ಕೂ ಬದುಕಿನ ಬೇರೆ ಬೇರೆ ಹಂತಗಳಲ್ಲಿ ಮಳೆ ಕವನಗಳನ್ನು ಬರೆದವರು. ಬದುಕಿರುವವರೆಗೂ ಅವರು ಮಳೆಹುಚ್ಚರೇ. “ಗೀತಾಂಜಲಿ” ಸಂಕಲನದಲ್ಲಿನ ಒಂದು ಹಾಡು ಹೀಗೆನ್ನುತ್ತದೆ:

“ಮೋಡಗಳ ಮೇಲೆ ಮೋಡಗಳು ಏರಿ ಕಪ್ಪೆನಿಸಿವೆ.
ಓ ಪ್ರಿಯೆ ನನ್ನ ಯಾಕೆ ಕಾಯಿಸುವೆ ಬಾಗಿಲ ಹೊರಗೆ ಒಂಟಿಯಾಗಿ?
ಈ ನಡುದಿನದ ಕೆಲಸದಲ್ಲಿ ನಿರತನಾಗಿರುವಾಗ ಗುಂಪಿನೊಳಗೆಲ್ಲೋ ಕರಗಿರುವಾಗ
ಈ ಕರಾಳ ಒಂಟಿ ದಿನದಲ್ಲಿ ನೀನೆ ನನ್ನ ಭರವಸೆ
ನೀನೆಲ್ಲಾದರೂ ಮುಖವೇ ತೋರದಿದ್ದರೆ
ನನ್ನ ಪೂರ್ತಿಯಾಗಿ ಕಡೆಗಣಿಸಿದರೆ
ಅರಿಯೆ ಹೇಗೆ ಕಳೆದೇನು ಈ ದೀರ್ಘ ಮಳೆಕ್ಷಣಗಳ
ನೋಡುತ್ತಲೇ ಇರುತ್ತೇನೆ
ಆಗಸದ ದೂರದ ಕತ್ತಲೆಯ ಭಾರ
ಮತ್ತೆ ನನ್ನೆದೆ ಅಲೆದಾಡುತ್ತ ಚೀರುತ್ತಿದೆ
ಬೀಸುವ ಅಶಾಂತ ಗಾಳಿಯೊಡನೆ.

ಮಳೆಗಾಲದಲ್ಲಿ ನೋಡುವ ಕೇಳುವ ಅನಿಸುವ ಅನುಭವಿಸುವ ಕ್ಷಣಗಳೆಲ್ಲ ಟ್ಯಾಗೋರರ ಕವಿತೆಗಳಲ್ಲಿ ಬಂದು ಹೋಗುತ್ತವೆ. ಬಾಹ್ಯಜಗತ್ತಿನ ರೂಪಾಂತರಕ್ಕೆ ಒಳಮನಸಿನ ಸ್ಪಂದನ, ತೇವ, ಭಾರಗಳೂ ಅಕ್ಷರಗಳಾಗಿ ಪ್ರಕಟಗೊಳ್ಳುತ್ತವೆ. ಟ್ಯಾಗೋರರ ಕವನಗಳನ್ನು ಓದುವವರಿಗೆಲ್ಲ, ಇಂತಹದ್ದೇ ಓದಬೇಕು ಎಂದು ಗುರಿ ಇಟ್ಟು ಹುಡುಕದೆ ಇದ್ದರೂ ಮಳೆ ಕವಿತೆಗಳೇ ಹುಡುಕಿ ಬಂದು ಓದಿಸುತ್ತವೆ. ಆ ಸಾಲುಗಳಲ್ಲಿ ಸಾಲುಗಳ ನಡುವಲ್ಲಿ ಪ್ರಕೃತಿ ಹಾಗು ಮಳೆ, ಕಾತರಿಸುವುದರ ಹಾಗು ಕಾಯುವುದು, ಒಂಟಿತನದ ಹಾಗು ಪ್ರೇಮಗಳು ತಣ್ಣಗೆಯೂ ಬೆಚ್ಚಗೆಯೂ ಅವಿತಿವೆ. ಕವಿ ಇಲ್ಲಿ ಮಳೆಗಾಗಿ ಕಾಯುವುದೋ, ಒಂಟಿತನವೇ ಅವರನ್ನು ತಿನ್ನುವುದೋ ಅಥವಾ ಮಳೆಯಂತಹ ಹುಡುಗಿಯನ್ನು ನೆನೆದು ಬೇಯುವುದೋ ಎಂದೆಲ್ಲ ವಿಮರ್ಶಕರು ವಾದಿಸುತ್ತಾರೆ.

ಇದನ್ನೂ ಓದಿ | Sunday read | ಹೊಸ ಪುಸ್ತಕ | ತಟ್ಟನೆ ಮನಮಂ ಪಸಾಯದಾನ ಕೊಟ್ಟಳು

ಮಳೆಗಾಲದ ಹೊತ್ತಿನಲ್ಲಿ ಪ್ರಾಕೃತಿಕ ಅವಘಢಗಳು ಬಾರದಿರಲಿ, ಮಳೆಯಲ್ಲಿ ಆಡುವ ಮಕ್ಕಳು ಕ್ಷೇಮವಾಗಿರಲಿ ಬೇಗ ಮನೆ ಸೇರಲಿ ಎನ್ನುವ ಆಶಯದ ಕವಿತೆಯನ್ನೂ ಬರೆದಿದ್ದಾರೆ. “ಬೆಂಗಾಲದ ಬಿಸಿಲಿನ ಬೇಗೆ ಮಣ್ಣಿನ ಬಾಯಾರಿಕೆಗಳ ಮೇಲೆ ಹೊಯ್ದು ದಾಹ ತೀರಿಸು, ಮೊದಲ ಮಳೆಗೆ ದಿಗಂತದಲ್ಲಿ ತಯಾರಿ ನಡೆಸಿ ರೈತರಲ್ಲಿ ಉತ್ಸಾಹ ತುಂಬಿಸು” ಎಂದು ಹೇಳಿದ್ದಾರೆ. ಮಳೆಯ ಚಿಟಪಟದ ಮಧ್ಯೆ ಪುರಾತನ ಕವಿಯ ಮುಂಗಾರಿನ ವರ್ಣನೆಯ ಲಯ ಮನಸ್ಸಲ್ಲಿ ಹಾದುಹೋಗುತ್ತದೆ ಎಂದು ಕಾಳಿದಾಸನನ್ನೂ ತನ್ನ ಸಾಲುಗಳಲ್ಲಿ ನೆನೆದಿದ್ದಾರೆ. “ಮಳೆಗಾಲದ ಕಾವ್ಯ ಧಾರೆ ಧಾರೆಯಾಗಿ ಭಾವಲಹರಿಯಾಗಿ ಹರಿದಿದೆ, ಮನದ ಹೊರೆ ಇಳಿಸಿದೆ” ಎಂದು ಬರೆದಿದ್ದಾರೆ.

ಟ್ಯಾಗೋರರ ಮಳೆಪ್ರೇಮ ಬರೇ ಕವನದ ಸಾಲುಗಳಲ್ಲಿ ಮಾತ್ರ ಇಣುಕಿ ಮರೆಯಾಗುವಂತಹದ್ದಲ್ಲ. ಮಳೆಯ ಸ್ವಾಗತದ ನೆಪದಲ್ಲಿ ಶಾಂತಿನಿಕೇತನದಲ್ಲಿ ಅವರು “ಬರ್ಷ ಮಂಗಲ್” ಎನ್ನುವ ಸಾಮಾಜಿಕ -ಸಾಂಸ್ಕೃತಿಕ ಹಬ್ಬವನ್ನು ಆಚರಿಸಲು ಶುರು ಮಾಡಿದವರು. ಬಂಗಾಳ ವಿಭಜನೆ ಆದರೂ ಟ್ಯಾಗೋರರ ಕಲ್ಪನೆಯ ಕೂಸಾದ “ಬರ್ಷ ಮಂಗಲ್” ಪಶ್ಚಿಮ ಬಂಗಾಲ ಮತ್ತು ಬಾಂಗ್ಲಾ ದೇಶಗಗಳೆರಡರಲ್ಲೂ ಈಗಲೂ ಪ್ರತಿವರ್ಷವೂ ಆಚರಿಸಲ್ಪಡುತ್ತದೆ; ದಿನವಿಡೀ ಮಳೆಯನ್ನು ನೆನೆಸುವ ನಮಿಸುವ ಹಾಡು ನಾಟಕ ಕುಣಿತ ಗೊಂಬೆಯಾಟಗಳು ನಡೆಯುತ್ತವೆ. ಆಷಾಢ ತಿಂಗಳಲ್ಲಿ ಆಚರಿಸಲಾಗುವ ಈ ಹಬ್ಬ ಎರಡೂ ಕಡೆಯ ಬಂಗಾಳಿ ಜನರನ್ನು ಭಾವನಾತ್ಮಕವಾಗಿ ಜೋಡಿಸುತ್ತದೆ. ಬಂಗಾಳದ ಮನೆಮನೆಗಳಲ್ಲೂ ಆಲಿಸಲ್ಪಡುವ “ರಬೀಂದ್ರ ಸಂಗೀತ”ದಲ್ಲೂ ಟ್ಯಾಗೋರರು ಬರೆದ ಮಳೆ ಪದಗಳು ಸೇರಿಕೊಂಡಿವೆ. “ಬರ್ಷ ಮಂಗಲ್”ದಂತಹ ಮಳೆನಮನ ಮಳೆಚಿಂತನ ಬಂಗಾಳದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ನಡೆಯಬೇಕಾಗಿದೆ.

ಅತಿಯಾದ ಮಳೆ ಅಲ್ಲದಿದ್ದರೆ ತೀವ್ರವಾದ ಬರದ ಭಯಗಳು ಆಸುಪಾಸಲ್ಲೆ ಸುಳಿದಾಡುವ ಕಾಲದಲ್ಲಿ ಟ್ಯಾಗೋರರು ಭಾವನಾತ್ಮಕವಾಗಿ ಬರೆದ ಕವಿತೆಗಳು ವೈಚಾರಿಕ ನೆಲೆಯಲ್ಲೂ ನಮ್ಮನ್ನು ಕಾಡಬೇಕಾಗಿದೆ. ಅವರ ಕವನಗಳಲ್ಲಿ ನಿಚ್ಚಳವಾಗಿ ಕಾಣುವ ನಿಸರ್ಗಪ್ರೇಮ ಮಳೆಪ್ರೀತಿ ರಮ್ಯ ಕಾವ್ಯವೊಂದರ ಓದಿನ ಖುಷಿಗಷ್ಟೇ ಸೀಮಿತವಾಗದೆ ನಮ್ಮೊಳಗೇ ಒಂದು ಪ್ರಾಕೃತಿಕ ಎಚ್ಚರವನ್ನು ಹೊತ್ತಿಸಬೇಕಾಗಿದೆ. ಟ್ಯಾಗೋರರು ತೀವ್ರವಾಗಿ ಪ್ರೀತಿಸಿದ ಮಳೆ ಮತ್ತೆ ಸುರಿಯುತ್ತಿದೆ ಹರಿಯುತ್ತಿದೆ. ಇಂತಹದೇ ಸಮಯಕ್ಕೆ ಹಿಂದೆಂದೋ ಟ್ಯಾಗೋರರು ಸೃಷ್ಟಿಸಿದ ಕಲ್ಪನೆಗಳು, ಜೋಡಿಸಿದ ಪದಪುಂಜಗಳು, ಪೋಣಿಸಿದ ಸಾಲುಗಳು ಮತ್ತೆ ಅವುಗಳ ಹಿಂದಿನ ಕಾವ್ಯ ಪ್ರೇಮ ಒಂಟಿತನ ಕಾತರ ಕಾಳಜಿ ಪ್ರಜ್ಞೆಗಳು ಇನ್ನೂ ಕೂಡಾ ಇಲ್ಲೇ ಎಲ್ಲೋ ತಂಗಾಳಿಯಾಗಿ ತೇಲುತ್ತಿವೆ, ಚಿಟಪಟ ಸ್ವರವಾಗಿ ಹಾಡುತ್ತಿವೆ.

ಕೃತಿ: ನನ್ನ ಕಿಟಕಿ (ಲಲಿತ ಪ್ರಬಂಧ ಸಂಕಲನ)

ಲೇಖಕ: ಯೋಗಿಂದ್ರ ಮರವಂತೆ

ಪ್ರಕಾಶನ: ಪ್ರಿಸಮ್‌ ಬುಕ್ಸ್

ಬೆಲೆ: ೨೨೫ ರೂ.

Exit mobile version