Site icon Vistara News

Sunday Read: ಹೊಸ ಪುಸ್ತಕ: ಎಚ್‌.ಎಸ್‌ ವೆಂಕಟೇಶಮೂರ್ತಿ ಹೊಸ ಕವನ ಸಂಕಲನದ ಕವಿತೆ: ಕಾಂಚನಜುಂಗ

hsv mussanje maathu

ಚಳಿಗೆ ಗದಗದ ನಡುಕ. ವಸಡುಗಳ ಅಪ್ರಯತ್ನಕ ತಾಳ,
ವ್ಯಾಘ್ರಗಿರಿಯೇರುವ ಉತ್ಸಾಹಕ್ಕೆ ಮುಂಜಾವು ನಾಕಕ್ಕೇ
ಜೀಪೇರಿ ನಾನು ಮತ್ತು ನನ್ನ ಮನೆಯಾಕೆ. ಪಿಳಿಪಿಳಿ ಕಣ್ಣ
ಹೊರತು ಎರಡು ಬಟ್ಟೆ ಮೂಟೆ, ಪರ್ವತದೇರುದಾರಿ.
ಕುತ್ತುಬ್ಬುಸಪಡುತ್ತೇರುವ ಜೀಪು, ಶಿಖರ ತಲಪಿದಾಗ
ಆರಕ್ಕೆ ಕೆಲವೇ ಕ್ಷಣ ಬಾಕಿ, ಹಬೆಯಾಡುವ ಸುಡು ಚಹಾ
ಕೈಯಿಂದ ಬಾಯಿಗೆ ಬೀಳುವಷ್ಟರಲ್ಲಿ ಉಗುರು ಬೆಚ್ಚಗೆ
ಸುವರ್ಣಜೂಟ ನಾವು ನೋಡಿಯೇವೆ? ಮೋಡಕರುಣಿಸ
ಬೇಕು. ಎಲ್ಲರ ಕಣ್ಣೂ ಪಶ್ಚಿಮಶಿಖರದ ಮೇಲೆ. ಸೂರ್ಯ
ಮೂಡಿದ ಪೂರ್ವದಲ್ಲಿ. ಅವನ ಬಂಗಾರ ಕಿರಣ ಕಾಂ
ಚನ ಜುಂಗದ ತುದಿಗೆ ತಾಕಿದ್ದೇ ಆ ಶ್ವೇತಪರ್ವತ
ಹೊನ್ನಿನ ಕಿರೀಟದಿಂದ ಆಚ್ಛಾದಿತವಾಗಿ ಯಾತ್ರಿಕರು
ಅಹಾ ಎಂದು ಉದ್ಗರಿಸುತ್ತ ನಿಂತಿದ್ದಾರೆ. ಬಂಗಾರ
ಕಿರೀಟ ನಿಧಾನಕ್ಕೆ ವಿಸ್ತರಿಸುತ್ತಾ ಇಡೀ ಪರ್ವತ ಕಾಂಚನ
ಮಯ, ಶಿವನ ಜುಟ್ಟು ಎಂದಿದ್ದು ಕವಿಯೇ ಇರಬೇಕು

ಬಿಸಿಲೇರಿ ಹಿಮ ಕರಗಿ ಕಾಂಚನಜುಂಗ ಯಾವತ್ತಿನ ನೀಲ
ಕೆಲವೇ ಕ್ಷಣದ ರಂಗಾಟ ಮುಗಿದು ಮತ್ತೆ ಸೀದಾಸಾದ.

ಕೃತಿ: ಮುಸ್ಸಂಜೆ ಮಾತು (ಕವನ ಸಂಕಲನ)
ಕವಿ: ಎಚ್. ಎಸ್‌ ವೆಂಕಟೇಶಮೂರ್ತಿ
ಪ್ರಕಾಶನ: ಬಹುರೂಪಿ
ಬೆಲೆ: 100/-

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಶ್ರೀಧರ ಬಳಗಾರರ ಕಾದಂಬರಿ ʼವಿಸರ್ಗʼ

Exit mobile version