Site icon Vistara News

BBK SEASON 10 : ಬಿಗ್‌ ಬಾಸ್‌ ಮನೆಯಿಂದ ಮೊದಲು ತುಕಾಲಿ, ನಂತ್ರ ವಿನಯ್‌ ಔಟ್‌?

BBK Season 10 Tukali santosh Vinaya Gowda

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಹತ್ತನೇ ಸೀಸನ್‌ (BBK SEASON 10) ಫಿನಾಲೆ ಹಬ್ಬ ಶುರುವಾಗಿ ಆಗಿದೆ. ಸಖತ್ ಅದ್ದೂರಿ ವೇದಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ (Kichcha Sudeep) ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಫೈನಲಿಸ್ಟ್‌ಗಳಾಗಿರುವ ಆರು ಮಂದಿ ಸ್ಪರ್ಧಿಗಳಲ್ಲಿ ಮೊದಲು ಹೊರಬರುವ ಇಬ್ಬರು ಸ್ಪರ್ಧಿಗಳ ಹೆಸರು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಮತ್ತು ಕೆಲವೊಂದು ಮೂಲಗಳು ಇದನ್ನು ಹೌದು ಎಂದು ಒಪ್ಪಿಕೊಂಡಿವೆ. ಆ ಎರಡು ಹೆಸರುಗಳೇ ತಮ್ಮ ಕಾಮಿಡಿಗಳಿಂದ ಮನಸೂರೆಗೊಂಡ ತುಕಾಲಿ ಸಂತೋಷ್‌ ಮತ್ತು ಅಗ್ರೆಷನ್‌ ಮತ್ತು ಸ್ಟ್ರಾಟೆಜಿಯಿಂದ ಎಲ್ಲರನ್ನೂ ಬೆಚ್ಚಿಬೀಳಿಸಿದ ವಿನಯ್‌ ಗೌಡ ಎಂದು ಹೇಳಲಾಗುತ್ತಿದೆ. ಬಾಟಂ ನಾಲ್ಕನೇ ಸ್ಥಾನದಲ್ಲಿರುವ ಮತ್ತೊಬ್ಬ ಸ್ಪರ್ಧಿ ವರ್ತೂರು ಸಂತೋಷ್‌ ಎಂದು ಹೇಳಲಾಗುತ್ತಿದೆ. ಇದು ಹೌದಾಗಿದ್ದರೆ ಸಂಗೀತಾ ಶೃಂಗೇರಿ, ಡ್ರೋನ್‌ ಪ್ರತಾಪ್‌ ಮತ್ತು ಕಾರ್ತಿಕ್‌ ಮಹೇಶ್‌ ಅವರು ಫಿನಾಲೆ ದಿನಕ್ಕೆ ಕಾಲಿಡುವ ಸ್ಪರ್ಧಿಗಳಾಗಿರುವ ಸಾಧ್ಯತೆ ದಟ್ಟವಾಗಿದೆ.

ಶನಿವಾರ ಮತ್ತು ಭಾನುವಾರ ಫೈನಲ್‌ ಎಪಿಸೋಡ್‌ ಗಳು ಪ್ರಸಾರವಾಗಲಿದ್ದು, ಶನಿವಾರ ಶೂಟಿಂಗ್‌ ಶುಕ್ರವಾರವೇ ಮುಕ್ತಾಯಗೊಂಡಿದೆ ಎನ್ನಲಾಗುತ್ತಿದೆ. ಇದರಲ್ಲಿ ವರ್ತೂರು ಸಂತೋಷ್ ಅವರು ಜೈಲಿಗೆ ಹೋಗಿದ್ದ ಸಂಗತಿಯನ್ನು ಸುದೀಪ್‌ ರಿವೀಲ್ ಮಾಡಿದ್ದಾರೆ ಎಂದು ಜಿಯೋ ಸಿನಿಮಾ ತಂಡ ತಿಳಿಸಿದೆ. ಈ ಮಾತು ಕೇಳಿ ಮನೆಯೊಳಗಿದ್ದ ಉಳಿದ ಸ್ಪರ್ಧಿಗಳು ಅಚ್ಚರಿಯಿಂದ ಕಣ್ಣರಳಿಸಿದ್ದಾರೆ. ಇತ್ತ ವರ್ತೂರು ಸಂತೋಷ್‌ ಅವರು ಕಣ್ಣಾಲಿಗಳು ತುಂಬಿದರೆ ಹೊರಗೆ ಕುಳಿತಿದ್ದ ಅಮ್ಮನೂ ಕಣ್ಣೀರು ಒರೆಸಿಕೊಂಡಿದ್ದಾರೆ.

ಇದೂ ಸೇರಿದಂತೆ ಹಲವು ಪರ್ಫಾರ್ಮೆನ್ಸ್‌, ಕಲರ್‌ಫುಲ್‌ ಡಾನ್ಸ್‌, ಕಚಗುಳಿಯ ಮಾತುಕತೆ ಎಲ್ಲವೂ ತಂಬಿರುವ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಫಿನಾಲೆ ಶನಿವಾರ ಮತ್ತು ಭಾನುವಾರ ಜಿಯೊಸಿನಿಮಾದಲ್ಲಿ ಸಂಜೆ 7.30ಯಿಂದ ಪ್ರಸಾರವಾಗಲಿದೆ. ಕಲರ್ಸ್‌ ಕನ್ನಡದಲ್ಲಿಯೂ ಅದೇ ಸಮಯದಲ್ಲಿ ಫಿನಾಲೆ ವೀಕ್ಷಿಸಬಹುದು.

ಟಾಪ್‌ ತ್ರಿಯಲ್ಲಿ ಯಾರು ಉಳಿಯುತ್ತಾರೆ.? ಪ್ರತಾಪ್‌ ವಿನ್ನರ್‌?

ಬಿಗ್‌ ಬಾಸ್‌ ಸೀಸನ್‌ 10 ಬಾರಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಅಚ್ಚರಿಯ ಫಲಿತಾಂಶ ಮೂಡಿಬರಲಿದೆ ಎಂಬ ನಿರೀಕ್ಷೆ ಎಲ್ಲೆಡೆ ಇದೆ. ಈ ಬಾರಿಯ ಬಿಗ್‌ ಬಾಸ್‌ ಸೀಸನ್‌ 10 ವೇದಿಕೆಗೆ 17 ಮಂದಿ ಪ್ರವೇಶ ಪಡೆದಿದ್ದರು. ಅವರಲ್ಲಿ ಈಗಾಗಲೇ ಆರು ಸ್ಪರ್ಧಿಗಳು ಫಿನಾಲೆಗೆ ತಲುಪಿದ್ದಾರೆ. ಇವರಲ್ಲಿ ಸಂಗೀತಾ ಶೃಂಗೇರಿ, ಡ್ರೋನ್‌ ಪ್ರತಾಪ್‌ ಮತ್ತು ಕಾರ್ತಿಕ್‌ ಮಹೇಶ್‌ ಟಾಪ್‌ ತ್ರೀಯಲ್ಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇತ್ತ ಜನರ ಪ್ರೀತಿಗೆ ಪಾತ್ರರಾದ ವರ್ತೂರು ಸಂತೋಷ್‌ ಹೆಸರು ಕೂಡಾ ಈ ಪಟ್ಟಿಯಲ್ಲಿ ಕೇಳಿಬರುತ್ತಿದೆ.

ಜನರ ಮತಗಳನ್ನೇ ಆಧರಿಸಿ ತೀರ್ಪು ನೀಡುವುದಾದರೆ ನಿಸ್ಸಂಶಯವಾಗಿ ಡ್ರೋನ್‌ ಪ್ರತಾಪ್‌ ವಿನ್ನರ್‌ ಎಂದು ಜಾಲ ತಾಣದಲ್ಲಿ ಚರ್ಚೆಯಾಗುತ್ತಿದೆ. ಇತ್ತೀಚೆಗೆ ರ‍್ಯಾಪರ್‌ ಇಶಾನಿ ಅವರು ಪ್ರತಾಪ್‌ ಬಗ್ಗೆ ಆಡಿದ ʻಕಾಗೆ ಕಕ್ಕ ಮಾಡಿಕೊಂಡುʼ ಮಾತಿಗೆ ಪ್ರತಿಯಾಗಿ ಸುಮಾರು 1.5 ಲಕ್ಷ ಮಂದಿ ಇನ್‌ ಸ್ಟಾ ಗ್ರಾಂನಲ್ಲಿ ವೈಯಕ್ತಿಕ ಕಮೆಂಟ್‌ಗಳ ಮೂಲಕ ಪ್ರತಾಪ್‌ ಪರವಾಗಿ ನಿಂತಿದ್ದರು. ಇದು ಅವರ ಜನಪ್ರಿಯತೆಯನ್ನು ತೋರಿಸಿದೆ. ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್‌ ಮಹೇಶ್‌ ಪರವಾಗಿಯೂ ಅದೇ ರೀತಿಯ ಮಾಸ್‌ ಅಭಿಮಾನ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: BBK SEASON 10: ಹಳೆಯ ಬೇಸರ ಮರೆತು ಕಾರ್ತಿಕ್‌ಗೆ ಸಪೋರ್ಟ್‌ ಮಾಡಿ ಎಂದ ತನಿಷಾ!

ಹಲವು ವಿವಾದಗಳಿಂದ ಈ ಬಾರಿ ʻಬಿಗ್‌ ಬಾಸ್‌ʼ ಕನ್ನಡ ಸಾಕಷ್ಟು ಸುದ್ದಿಯಲ್ಲಿತ್ತು. ಇದೀಗ ವಿಜೇತರಿಗೆ ಬಹುಮಾನ ಏನೆಲ್ಲ ಇರಬಹುದು ಎಂಬುದು ವೀಕ್ಷಕರಿಗೆ ಕುತೂಹಲ. ಬಿಗ್ ಬಾಸ್‌ನ ಟ್ರೋಫಿಯ ಹೊರತಾಗಿ, ಬಿಗ್ ಬಾಸ್ 10 ವಿಜೇತರು ನಗದು ಬಹುಮಾನದ ಹಣದ ಜತೆಗೆ ಹೊಚ್ಚ ಹೊಸ ಕಾರನ್ನು ಸಹ ಪಡೆಯುತ್ತಾರೆ. ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿಜೇತರಿಗೆ ಶೋ ಗೆದ್ದ ನಂತರ 50 ಲಕ್ಷ ರೂಪಾಯಿ, ಅದ್ದೂರಿ ಕಾರು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಹುಮಾನವಾಗಿ ನೀಡಲಾಗುತ್ತಿದೆ.

Exit mobile version