Site icon Vistara News

ಲೈಫ್‌ ಸರ್ಕಲ್‌ ಅಂಕಣ | ಏಷಣದಿಂದ ಶಿಕ್ಷಣದವರೆಗಿನ ಅನ್ವೇಷಣ

life circle education

ಜೀವನವನ್ನು ಆಳವಾಗಿ ನೋಡಿದಾಗ, ಅದರ ಒಂದು ಚಿತ್ರಪಟ ಮಾತ್ರ ಗೋಚರಿಸುತ್ತದೆ. ಒಂದೆಡೆ, ಅದರ ನಡವಳಿಕೆಯಲ್ಲಿ ಅಹಂಕಾರ ಮತ್ತು ಮಮಕಾರದ ಗತಿಯುಳ್ಳ ಹರಿವು ಕಂಡುಬರುತ್ತದೆ. ಮರುಕ್ಷಣವೇ ಒಳಗಿಳಿದು ತಾನು ಏನು ಮಾಡಿದೆ ಎಂದು ಅಳಲು ಪ್ರಾರಂಭಿಸುತ್ತಾರೆ! ಕರ್ಮದ ಹೊಸ ಬಂಧಗಳನ್ನು ತಾನು ಕಟ್ಟಿಕೊಂಡೆ! ತಾನು ಮೋಕ್ಷದ ಹಾದಿಯಲ್ಲಿ ನಡೆಯಬೇಕಿತ್ತು. ಅಯ್ಯೋ ದಾರಿ ತಪ್ಪಿದೆ ಎಂದು ಗೊಣಗುತ್ತಾರೆ.

ಈ ಕಾಮ ವರ್ತುಲವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದರಿಂದ ಹೊರಬರುವುದು ಹೇಗೆ? ಬಹುತೇಕ ಮನುಷ್ಯರು ಈ ವಾಸನಗಳಿಂದ ಹುಟ್ಟುತ್ತಾರೆ, ಯಾವಾಗಲೂ ಅದರಲ್ಲಿಯೇ ಬೆಳೆಯುತ್ತಾರೆ. ಹುಟ್ಟಿನಿಂದಲೇ ಹಸಿವು ಮತ್ತು ಬಾಯಾರಿಕೆಯಂತೆ, ಈ ಆವರಣಗಳನ್ನು ಇಂದ್ರಿಯಗಳು ಹೊಂದಿಸಿಕೊಂಡು ಬರುತ್ತವೆ. ಇದರ ಅರಿವು ನಮಗಿಲ್ಲ. ಈ ವಾಸನಾ ಎಂಬುದು ಕಾಮನೆಗೆ ಸಮಾನಾರ್ಥಕವಾಗಿದೆ. ಇದು ಗತಿಯನ್ನು ಪ್ರೇರೇಪಿಸುವ ಬಯಕೆಯಾಗಿದೆ. ಮರುಜನ್ಮಕ್ಕೂ ಆಸೆಯೇ ಕಾರಣ. ಬಯಕೆಯು ಆತ್ಮದ ಅಶುದ್ಧತೆಯ ಭಾವನೆಯಾಗಿದೆ. ಶುದ್ಧ ಮನಸ್ಸಿನಲ್ಲಿ ಆಸೆ ಹುಟ್ಟುವುದಿಲ್ಲ. ಯಾವಾಗ ಮನಸ್ಸು ಪ್ರಕೃತಿಯ ಸತ್ತ್ವ, ರಜ ಮತ್ತು ತಮಗಳಿಂದ ಆವರಿಸಲ್ಪಟ್ಟಿದೆಯೋ ಆಗ ಅದು ಅಶುದ್ಧವಾಗಿ ಉಳಿಯುತ್ತದೆ. ಪ್ರತಿಫಲಿತವಾಗಿ ಕಾಣುತ್ತದೆ. ಕೊರತೆ ಇದ್ದಂತೆ ಕಾಣುತ್ತದೆ. ಆಗ ಅದು ವಸ್ತುಗಳು ಅಥವಾ ವ್ಯಕ್ತಿಗಳ ಹಿಂದೆ ಓಡುತ್ತದೆ. ಈ ಕೊರತೆಯೇ ತೀವ್ರವಾಗಿ ತೃಷ್ಣಾ ಅಂದರೆ ಕಡುಬಯಕೆಯಾಗುತ್ತದೆ. ಹಿಂಸೆಗೆ ಕಾರಣವಾಗುತ್ತದೆ. ಮನುಷ್ಯನು ಬೇಕು, ಬೇಡದ್ದೆಲ್ಲವನ್ನೂ ಸಂಗ್ರಹಿಸಲು ಪ್ರಾರಂಭಿಸುತ್ತಾನೆ. ಅವಶ್ಯಕತೆಯ ಮಿತಿ ಕಳೆದುಹೋಗುತ್ತದೆ. ದುರಾಸೆ ಸುತ್ತುವರಿಯುತ್ತದೆ. ಅದೇ ಅಧಿಭೌತ ಪ್ರಪಂಚವಾದ ವಿತ್ತೈಷಣಾ. ಅಹಂಕಾರವು ಗಾಳಿ ಹಾಕಲು ಪ್ರಾರಂಭಿಸುತ್ತದೆ. ಎಲ್ಲಾ ಭಾವನೆಗಳು ಕಣ್ಮರೆಯಾಗುತ್ತವೆ.

ಇದೇಕೆ ಹೀಗಾಗುತ್ತದೆ? ಯಾವಾಗ ದೇಹವು ನಾನಲ್ಲ, ಬುದ್ಧಿಯು ನಾನಲ್ಲ, ಮನಸ್ಸು ನಾನಲ್ಲವೋ, ಆಗ ಮಮಕಾರ ಮತ್ತು ಅಹಂಕಾರದ ಸ್ವರೂಪವೆಂತು? ‘ಏಕೋಹಂ ಬಹುಸ್ಯಾಮ್’ ಎಂಬ ಬ್ರಹ್ಮದ ಮೂಲ ಭಾವನೆಯಿಂದ ಅದರ ಅಂಶ ರೂಪದಲ್ಲಿ ನಾವು ಹುಟ್ಟಿದ್ದೇವೆ. ಅದರ ಪ್ರತಿನಿಧಿಯಾದ ನಮಗೂ ಅದೇ ಆಸೆ ಇತ್ತು. ನಾವು ಅದಕ್ಕೆ ಪುತ್ರೈಷಣಾ ಎಂದು ಹೆಸರಿಸಿದೆವು. ಶಕ್ತಿವಂತನಿಲ್ಲದೆ ಶಕ್ತಿಗೆ ಅಸ್ತಿತ್ವವಿಲ್ಲ. ಶಕ್ತಿಯು ಯಾರದ್ದಾದರೂ ಆಗಿರಲೇಬೇಕು. ಇಲ್ಲದಿದ್ದರೆ, ಅದು ಜಗತ್ತಿನಲ್ಲಿ ವಿನಾಶದ ಕಾರಣವಾಗುತ್ತದೆ. ಶಕ್ತಿಯು ಶಕ್ತಿವಂತನ ಪ್ರತಿನಿಧಿ. ಪುತ್ರೈಷಣವು ಶಕ್ತಿಯಲ್ಲಿರುವುದಿಲ್ಲ. ಬೀಜವು ಪುರುಷನ ಜೊತೆಗಿರುತ್ತದೆ. ಶಕ್ತಿಯು ಪುರುಷನೊಂದಿಗೆ ಸಖಿಯಾಗಿ ಕುಟುಂಬದ ಬೆಳವಣಿಗೆಗೆ ಸಹಕರಿಸುತ್ತದೆ. ಸೌಮ್ಯಳಾಗಿದ್ದು, ಅಗ್ನಿಗೆ ಸಮರ್ಪಿತಳಾಗಿರುತ್ತಾಳೆ ಶಕ್ತಿ. ಆದ್ದರಿಂದ ಅವಳ ಅಸ್ತಿತ್ವವು ಗೌಣವಾಗುತ್ತದೆ. ಅದಕ್ಕಾಗಿಯೇ ಸಂಸಾರವನ್ನು ಬ್ರಹ್ಮದ ವಿವರ್ತ ಎಂದು ಕರೆಯಲಾಗುತ್ತದೆಯೇ ಹೊರತು ಶಕ್ತಿಯದ್ದಲ್ಲ. ಅದಕ್ಕೆ ಶಕ್ತಿಯು ಪೂರಕಳು. ಸಂತಾನ ಪ್ರಾಪ್ತಿಯಿಂದ ಪುರುಷನ ವಂಶವೇ ಬೆಳೆಯುವುದು. ಪುತ್ರ ಪ್ರಾಪ್ತಿಯಿಂದ ಸಪ್ತ-ಪಿತೃ ಸಂಸ್ಥೆಯ ಕೊನೆಯ ಪಿತೃವು ಸರಪಳಿಯಿಂದ ಮುಕ್ತವಾಗುತ್ತಾರೆ. ಮಗನಲ್ಲಿ ಎಲ್ಲಾ ಹಿಂದಿನ ಏಳು ಪಿತೃಗಳ ಅಂಶವಿರುತ್ತದೆ. ಇದು ಆಧ್ಯಾತ್ಮಿಕ ಕ್ಷೇತ್ರ.

ಮೂರನೆಯ ಬಯಕೆಯ ರೂಪವು ಲೋಕೈಷಣಾ. ಇದು ಪ್ರಬಲವಾದ ಬಯಕೆಯಾಗಿದೆ. ಶಕ್ತಿಯು ವ್ಯಕ್ತಿಯ ಮುಖದ ಮೇಲೆ ಅನೇಕ ಮುಖವಾಡಗಳನ್ನು ಹಾಕುತ್ತಾಳೆ. ತನ್ನನ್ನು ತಾನು ಶ್ರೇಷ್ಠಳೆಂದು ಸಾಬೀತುಪಡಿಸಲು, ಶಕ್ತಿಯು ವ್ಯಕ್ತಿಯಿಂದ ಅನೇಕ ಬೂಟಾಟಿಕೆಗಳನ್ನು ಮಾಡಿಸುತ್ತಾಳೆ. ಒಬ್ಬ ವ್ಯಕ್ತಿಯಿಂದ ಎಷ್ಟು ಸಾಧ್ಯವೋ ಅಷ್ಟು ಸುಳ್ಳನ್ನು ಹೇಳಿಸುತ್ತಾಳೆ. ಅವನಿಗಾದರೋ ಲೋಕದಲ್ಲಿ ಖ್ಯಾತಿಯ ಹಂಬಲ. ಎಲ್ಲೆಡೆ ತನ್ನ ಹರ್ಷೋದ್ಗಾರಗಳನ್ನು ಕೇಳಲು ಹಾತೊರೆಯುತ್ತಾನೆ. ಇನ್ನೊಬ್ಬರ ಕೀರ್ತಿ ಅವನ ಕಿವಿಗೆ ಬಿದ್ದರೆ ಅಸಹನೀಯ.

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ಕರ್ಮ ಮತ್ತು ಪುನರ್ಜನ್ಮದ ಸಂಬಂಧವೇನು?

ಇಷ್ಟೆಲ್ಲ ಇದ್ದಾಗ್ಯೂ ಲೋಕೈಷಣವು ಅಧಿದೈವಕ್ಕೆ ಸಂಬಂಧಿಸಿದ ಕಾಮನೆ. ಹಿಂದಿನ ಕರ್ಮಗಳ ಪುಣ್ಯದಿಂದಾಗಿ, ಗುರುವಿನ ಅನುಗ್ರಹದಿಂದ ಅಥವಾ ಸಕಾರಾತ್ಮಕ ಕಾಲ-ಸಂಚರಣೆಯಿಂದಾಗಿ, ಒಬ್ಬ ವ್ಯಕ್ತಿಯು ಎಂತಹಾ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದೆಂದರೆ, ಅದರಿಂದ ಕರ್ಮದ ಫಲವೂ ಸಹ ಅನುಭವಿಸಿ, ಹೊಸ ಬಂಧಗಳು ಸಹ ಕಟ್ಟಲ್ಪಡುವುದಿಲ್ಲ. ಇಲ್ಲಿ ಲೋಕೈಷಣವು ವ್ಯಕ್ತಿಯ ಆತ್ಮವನ್ನು ವಿಸ್ತರಿಸುತ್ತದೆ. ಪ್ರಸ್ತುತ ಉದಾಹರಣೆ ಎಂದರೆ ನಡೆದಾಡುವ ದೇವರುಗಳಾಗಿದ್ದ ಸಿದ್ಧಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ಇತ್ತೀಚೆಗೆ ಲಿಂಗೈಕ್ಯರಾದ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ. ಸೇವಾ ಕಾರ್ಯ, ನಿಸ್ವಾರ್ಥ ಸೇವಾ ಕಾರ್ಯಗಳನ್ನು ದರಿದ್ರ ನಾರಾಯಣನ ಸೇವೆ ಎನ್ನುತ್ತಾರೆ. ಅವನ ಕೀರ್ತಿ ಎಲ್ಲೆಡೆ ಹೆಚ್ಚುತ್ತದೆ. ಜನಪರ ಕಾಳಜಿಯ ಎಲ್ಲ ಕೆಲಸಗಳೂ ಈ ಯಶೋವೃದ್ಧಿಗೆ ಸಹಕಾರಿ. ಎಲ್ಲಿ ಫಲದ ಅಪೇಕ್ಷೆ ಇಲ್ಲವೋ, ಅಲ್ಲಿ ಎಲ್ಲಾ ಕರ್ಮಗಳು ಭಗವಂತನಿಗೆ ಸಮರ್ಪಿತವಾಗುತ್ತವೆ. ಪ್ರಶ್ನೆಯೆಂದರೆ- ಕೃಷ್ಣನನ್ನು ಕಣ್ಣೆದುರು ಇಟ್ಟುಕೊಂಡು ಅವನ ಹೆಸರಿನಲ್ಲಿ ಕೆಲಸ ಮಾಡುವುದು.

ನನ್ನ ಕರ್ಮದಿಂದ ಯಶಸ್ಸು ಹೆಚ್ಚುವುದಿಲ್ಲ. ನಾನೆಂಬ ಧೋರಣೆ ಇದ್ದರೆ ಯಾವ ಹೂವಿನಿಂದಲೂ ಪರಿಮಳ ಬರುವುದಿಲ್ಲ. ಸುಗಂಧವೂ ಭಗವಂತನೇ, ಕರ್ತನೂ ಆತನೇ, ನಾವು ನಿಮಿತ್ತ ಮಾತ್ರ. ಆಗ ಪಡೆಯುವವ ಶ್ರೀನಾಥನು, ಕೊಡುವವನೂ ಶ್ರೀನಾಥನು. ಅವರ ಖ್ಯಾತಿಯ ಪ್ರಸಾರವನ್ನು ತಡೆಯುವವರಾರು? ಅವನಂಶವು ಇಡೀ ಜಗತ್ತಿನಲ್ಲಡಗಿದೆ. ಈ ಅಂಶವನ್ನು ಗುರಿಯಾಗಿಟ್ಟು ಪೋಷಿಸಿದರೆ ಲೋಕೈಷಣವು ಅಮೃತವಾಗುತ್ತದೆ. ಅದರ ನಂತರ ಯಾವುದೇ ಆಸೆ ಉಳಿಯುವುದಿಲ್ಲ.

ಸಂಪ್ರೇಷಣದ ಮೊದಲ ಷರತ್ತು ಏನೆಂದರೆ, ನಾನು ಸಮಾಜದ ಒಳಿತಿಗಾಗಿ ಜನರ ಕಲ್ಯಾಣಕ್ಕಾಗಿ ಏನನ್ನಾದರೂ ಬರೆಯಬೇಕೇ ಹೊರತು ನನ್ನ ಹಿತಾಸಕ್ತಿಗಾಗಿ ಅಲ್ಲ. ಗೀತೆಯೂ ಇದನ್ನೇ ಹೇಳುತ್ತದೆ. ಆದರೆ, ಆ ಭಾವನೆಗಳು ಮನಸ್ಸಿನಲ್ಲಿ ಹೇಗೆ ಮೂಡುತ್ತವೆ ಎಂದು ಅರ್ಥ ಮಾಡಿಕೊಳ್ಳಬೇಕು. ಈಗ ಶಿಕ್ಷಣದಿಂದ ಅಂತಹ ಭಾವನೆಗಳು ಬರುವುದಿಲ್ಲ ಏಕೆಂದರೆ ಶಿಕ್ಷಣದಿಂದ ದೇಹ ಮತ್ತು ಬುದ್ಧಿ ಎಂಬೆರಡರ ಅಭಿವೃದ್ಧಿ ಮಾತ್ರ ಆಗುತ್ತಿದೆ. ಮನಸ್ಸಿನ ವಿಕಾಸವು ತಾಯಿಯಿಂದ ಮಾತ್ರ ಸಾಧ್ಯ. ಮಗು ಹೊಟ್ಟೆಯಲ್ಲಿದ್ದಾಗಲೂ ಅವಳು ಅದನ್ನು ಮಾಡಬಹುದು. ಆದರೆ ಆ ಪ್ರಕ್ರಿಯೆಯೂ ಈಗ ಬಹುತೇಕ ನಿಂತೇ ಹೋಗಿದೆ. ಈಗ ಅಭಿಮನ್ಯುವಂತಹ ಮಗನು ಯಾವುದೇ ಮನೆಯಲ್ಲಿ ಮತ್ತೆ ಹುಟ್ಟಲಿಲ್ಲ. ಏಕೆಂದರೆ ತಾಯಿಗೆ ತನ್ನ ಮಗುವನ್ನು ಗರ್ಭದಲ್ಲೇ ಏನಕ್ಕೇನಾಗಿಯೂ ರೂಪಿಸಬಹುದು ಎಂಬ ಪುರಾತನ ಜ್ಞಾನವಿಲ್ಲ. ಈ ಭೂಮಿಯಲ್ಲಿ ಮಗುವಿಗೆ ಸಂಸ್ಕಾರ ನೀಡುವ ಮೊದಲ ಗುರು ತಾಯಿ. ಈಗ ಈ ವಿಷಯವೂ ಗೌಣವಾಗಿದೆ.‌

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ಉಪಾಸನಾ ಲೋಕದಲ್ಲೊಂದು ಪಯಣ

ಶಾಲೆಗಳಲ್ಲಿ ಗುರುಗಳಿಲ್ಲ, ಶಿಕ್ಷಕರಿದ್ದಾರೆ. ವಿಷಯವನ್ನು ಕಲಿಸಲು ಮಾತ್ರ ಶಿಕ್ಷಕರು. ಅವರಿಗೆ ಮಕ್ಕಳ ಜೀವನ ವಿಧಾನ ಬಗ್ಗೆ ಕಾಳಜಿ ವಹಿಸಲು ಬಿಗಿಯ ಪಠ್ಯಕ್ರಮವು ಅನುವು ಮಾಡಿಕೊಡುವುದಿಲ್ಲ. ಶಿಕ್ಷಕರಿಗೂ ಮಕ್ಕಳಿಗೂ ಸ್ವಾತಂತ್ರ್ಯವಿಲ್ಲ. ಸರ್ಕಾರವು ಪಠ್ಯಕ್ರಮವನ್ನು ಆದೇಶಿಸಿದೆ. ಈಗ ಮುಖ್ಯವಾಗಿ ಸ್ವತಂತ್ರ ಸಮರ್ಥ ಗುರು ಮತ್ತು ಗುರುಕುಲಗಳು ಬೇಕಿವೆ. ಭಾರತೀಯ ಮೂಲ ರಾಜ್ಯಶಾಸ್ತ್ರ ರೀತ್ಯಾ ಗುರುವಿಗೆ ಪಠ್ಯಕ್ರಮವನ್ನು ಆದೇಶಿಸಲು ರಾಜದಂಡಕ್ಕೂ ಹಕ್ಕಿಲ್ಲ. ಏಕೆಂದರೆ ಗುರುವು ಶಿಷ್ಯರಿಗೆ ಸರಿಯಾದ್ದನ್ನು ಕಲಿಸುವುದರಲ್ಲಿ ಸಮರ್ಥ ಮತ್ತು ಸ್ವತಂತ್ರ. ತನ್ನ ಏಷಣಗಳನ್ನು ಬದಿಗಿಟ್ಟು ಸರ್ಕಾರವು ಭಾರತದೆಲ್ಲೆಡೆ ಉಚಿತ ಶಿಕ್ಷಣ ನೀತಿಯನ್ನು ಜಾರಿಗೆ ತಂದರೆ ಮಾತ್ರ ಪಟ್ಟಭದ್ರ ಹಿತಾಸಕ್ತಿಗಳು ಶಿಕ್ಷಣ ಕ್ಷೇತ್ರದಿಂದ ತೊಲಗುತ್ತಾರೆ. ಆಗ ಗುರುಗಳು, ಗುರುಕುಲಗಳು ಬೆಳಕಿಗೆ ಬರುತ್ತವೆ. ಆಗ ಕುಮುದೇಂದು ಮುನಿಗಳ ಸಿರಿಭೂವಲಯದ ಇಚ್ಛೆಯಂತೆ ಗುರುವೇ ಶಿಷ್ಯನಾಗಿ, ನಂತರ ಶಿಷ್ಯವು ಗುರುವಾಗಿ, ಗುರು-ಶಿಷ್ಯ ಪರಂಪರೆ ನಿರಂತರವಾಗಿ ಎಲ್ಲರೂ ತಮಗೆ ತಾವೇ ಬ್ರಹ್ಮರಾಗಬಹುದು. ಆಗ ಮಾತ್ರ ನಿಜವಾಗಿ ಭಾರತವು ವಿಶ್ವಗುರುವಾಗುತ್ತದೆ.

ಈಗ ಮನಸ್ಸು ಮತ್ತು ಆತ್ಮವು ಶಿಕ್ಷಣದಿಂದ ಹೊರಗುಳಿಯುತ್ತಿದೆ. ಹಾಗಾಗಿ ಶಿಕ್ಷಣವು ಅಪೂರ್ಣ ವ್ಯಕ್ತಿಗಳನ್ನು ನಿರ್ಮಿಸುತ್ತಿದೆ. ಎಲ್ಲರಲ್ಲಿಯೂ ಅತೃಪ್ತಿಯು ತಾಂಡವವಾಡುತ್ತಿದೆ. ಎಷ್ಟು ಕಲಿತರೂ ಕೊನೆಯಿಲ್ಲ, ಎಷ್ಟು ದುಡಿದರೂ ಸಾಕಾಗುವುದಿಲ್ಲ. ಅಪೂರ್ಣ ವ್ಯಕ್ತಿಯು ಹೆಚ್ಚಿನ ಅಧ್ಯಯನವನ್ನು ಮುಂದುವರೆಸುತ್ತಾ ಹೋದಂತೆ, ಅವನ ಅಪೂರ್ಣತೆಯು ಹೆಚ್ಚುತ್ತಲೇ ಹೋಗುತ್ತಿದೆ. ಕಾಲ ಸಾಗಿದಂತೆ ಮಗುವು ಮನಸ್ಸಿನ ಪರಿಚಯವೇ ಇಲ್ಲದಂತೆ ದೂರ ಉಳಿಯುತ್ತಿದೆ. ಈ ಶಿಕ್ಷಣವು ನಮಗೆ ಏನನ್ನಾದರೂ ನೀಡುತ್ತಿದೆಯೇ ಅಥವಾ ಇರುವುದನ್ನೆಲ್ಲಾ ಕಸಿದುಕೊಳ್ಳುತ್ತಿದೆಯೇ ಎಂದು ಪ್ರೌಢ ಬರಹಗಾರರು ನಿರ್ಣಯಿಸಬೇಕಾಗುತ್ತದೆ. ವಿಕಲ ಮನಸ್ಕರಿಂದ ಸಮಾಜವು ಹೇಗೆ ಅಭಿವೃದ್ಧಿ ಮತ್ತು ಸಮೃದ್ಧಿಗೊಳ್ಳುತ್ತದೆ? ಇದೊಂದು ದೊಡ್ಡ ಪ್ರಶ್ನೆ. ಮಗುವಿನ ಬೆಳವಣಿಗೆಯ ಹಂತಗಳ ಬಗ್ಗೆಯೂ ಬರಹಗಳು ಬರಬೇಕು. ಏಕೆಂದರೆ ಓದು ಮುಗಿಸಿ ಮನೆಗೆ ಮರಳುತ್ತಿರುವ ಮಗುವಿನಲ್ಲಿ ಏನೆಲ್ಲಾ ಬದಲಾವಣೆಗಳು ಬಂದಿವೆ? ಅದು ಕಲಿಯುತ್ತಿರುವುದನ್ನು ನಾವು ನಿಯಮಿತವಾಗಿ ನೋಡುತ್ತೇವೆ. ಅದರ ಸಂವೇದನೆಗಳನ್ನು ಪಾಲನೆ ಪೋಷಣೆ ಮಾಡುತ್ತೇವೆ. ಮಕ್ಕಳು ದೊಡ್ಡವರಾಗಿ ಒಳ್ಳೆಯ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂಬುದು ಮಾತ್ರ ಶಾಲೆಯವರ ಗುರಿ. ನಂತರ ಅವರಿಗೂ ಇವರಿಗೂ ಯಾವುದೇ ಸಂಬಂಧವಿಲ್ಲ. ನಮ್ಮ ಮಕ್ಕಳು ಉತ್ತಮ ಅಂಕ ಗಳಿಸಿ ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಏಷಣದಿಂದ ನಾವು ಕೂಡ ಅದೇ ಸಾಲಿಗೆ ಬಿದ್ದೆವು. ಇದರ ನಂತರ, ನಮ್ಮ ಮಕ್ಕಳ ಬೆಳವಣಿಗೆಯಲ್ಲಿ ನಮ್ಮ ಯಾವುದೇ ಪಾತ್ರವಿರುವುದಿಲ್ಲ.

ಇದನ್ನೂ ಓದಿ | ಲೈಫ್‌ ಸರ್ಕಲ್‌ ಅಂಕಣ | ತಪಸ್ಸಿನ ಆಚರಣೆ ಹೇಗೆ?

Exit mobile version