Site icon Vistara News

ರಾಜ ಮಾರ್ಗ ಅಂಕಣ : ನಾಟು ನಾಟು ಹಾಡು ಮತ್ತು ಕೀರವಾಣಿ – ಈಗ ಸ್ವರ್ಗಕ್ಕೆ ಒಂದೇ ಗೇಣು!

Naatu Naatu song

#image_title

ನೀವು ಈ ಸಾಧನೆಯನ್ನು ಹೇಗೆ ಬೇಕಾದರೂ ಕರೆಯಬಹುದು! ಇದನ್ನು ಭಾರತೀಯ ಸಿನಿಮಾದ ವಿಜಯ ಅನ್ನುವವರೂ ಇದ್ದಾರೆ. ದಕ್ಷಿಣ ಭಾರತದ ವಿಜಯ, ತೆಲುಗು ಸಿನಿಮಾ ರಂಗದ ವಿಜಯ, ಕೀರವಾಣಿ ಗೆಲುವು, ರಾಜಮೌಳಿ ಗೆಲುವು…. ನೀವು ಹೇಗೆ ಬೇಕಾದರೂ ಕರೆಯಬಹುದು! ಆದರೆ ಅಮೆರಿಕದ ಲಾಸ್ ಏಂಜಲೀಸ್ ನಗರದ ವೈಭವೋಪೇತವಾದ ಸಭಾಂಗಣದಲ್ಲಿ ನಾಟು ನಾಟು ಹಾಡು ಸಮುದ್ರದ ಅಲೆಗಳನ್ನು ಸೃಷ್ಟಿ ಮಾಡಿದ್ದು ಸುಳ್ಳಲ್ಲ! ಇದು ಅಂತಿಮವಾಗಿ ಭಾರತೀಯ ಸಿನಿಮಾ ರಂಗದ ಗೆಲುವು ಎಂಬ ಷರಾ ಬರೆದು ಭಾರತೀಯರು ಖುಷಿಯಿಂದ ಸಂಭ್ರಮಪಟ್ಟದ್ದು ಮಾತ್ರ ಕಣ್ಣ ಮುಂದಿರುವ ದೃಶ್ಯ!

ಭಾರತಕ್ಕೆ ಅಕಾಡೆಮಿ ಪ್ರಶಸ್ತಿಗಳು ಹೊಸತಲ್ಲ!

ಪ್ರತಿ ವರ್ಷವೂ ಒಂದಲ್ಲ ಒಂದು ಸಿನಿಮಾಗಳು ಅಕಾಡೆಮಿ ಪ್ರಶಸ್ತಿಗಳಿಗೆ ನಾಮಕರಣ ಆಗುವುದು ಮತ್ತೆ ಅಷ್ಟೇ ವೇಗದಲ್ಲಿ ಡ್ರಾಪ್ ಆಗುವುದು ಹಿಂದೆ ಹಲವು ಬಾರಿ ನಡೆದಿದೆ. ಆದರೆ ಭಾರತೀಯ ಸಿನಿಮಾದ ಹೆಮ್ಮೆಯ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ ಜೀವಮಾನದ ಸಾಧನೆ ಪರಿಗಣಿಸಿ ಈ ಪ್ರಶಸ್ತಿಯ ಗೌರವ ದೊರೆತಿತ್ತು. ಅದಕ್ಕಿಂತಲೂ ಮೊದಲು ಭಾನು ಅಥೆಯ್ಯ ಎಂಬ ಮಹಿಳೆಯು ವಸ್ತ್ರ ವಿನ್ಯಾಸದ ವಿಭಾಗದಲ್ಲಿ (ಗಾಂಧಿ ಸಿನೆಮಾ) ಅಕಾಡೆಮಿ ಪ್ರಶಸ್ತಿ ಗೆದ್ದರು. ಮುಂದೆ ‘ಸ್ಲಂ ಡಾಗ್ ಮಿಲಿಯನೇರ್’ ಎಂಬ ಬ್ರಿಟಿಷ್ ಸಿನೆಮಾದ ಜೈ ಹೋ ಹಾಡಿಗೆ ಮತ್ತು ಅದರ ಹಿನ್ನೆಲೆ ಸಂಗೀತಕ್ಕೆ ರೆಹಮಾನ್ ಎರಡು ಅಕಾಡೆಮಿ ಪ್ರಶಸ್ತಿ ಗೆದ್ದರು! ಗುಲ್ಜಾರ್ ಆ ಹಾಡಿನ ಸಾಹಿತ್ಯಕ್ಕೆ ಇದೇ ವಿಶ್ವಮಟ್ಟದ ಪ್ರಶಸ್ತಿ ಪಡೆದರು. ಅದೇ ಸಿನೆಮಾದ ಸೌಂಡ್ ಎಂಜಿನಿಯರ್ ರಸೆಲ್ ಪೂಕುಟ್ಟಿ ಅವರು ಕೂಡ ಅಕಾಡೆಮಿ ಪ್ರಶಸ್ತಿ ಪಡೆದರು.

ಇದೀಗ ನಾಟು ನಾಟು ಸರದಿ!

ಇದೀಗ ನಾಟು ನಾಟು ಹಾಡು ಅದೇ ಪ್ರಶಸ್ತಿಯ ವೇದಿಕೆಯಲ್ಲಿ ಸದ್ದು ಮಾಡಿದೆ. ಆ ಹಾಡಿಗೆ ಮ್ಯೂಸಿಕ್ ಕೊಟ್ಟ ಲೆಜೆಂಡ್ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಮತ್ತು ಆ ಹಾಡು ಬರೆದ ಚಂದ್ರ ಬೋಸ್ ಜೊತೆಯಾಗಿ ಆಸ್ಕರ್ ಪ್ರಶಸ್ತಿಯ ವೇದಿಕೆಯೇರಿ ಪ್ರಶಸ್ತಿ ಪಡೆದಾಗ ಜಗತ್ತಿನಾದ್ಯಂತ ಭಾರತೀಯರ ಖುಷಿಗೆ ಪಾರವೇ ಇರಲಿಲ್ಲ! ಆ ಹಾಡನ್ನು ಸಿನೆಮಾದಲ್ಲಿ ಹಾಡಿದ್ದ ರಾಹುಲ್ ಸಿಪ್ಲಿಗಂಜ್ ಮತ್ತು ಕಾಲಾ ಭೈರವ (ಕೀರವಾಣಿ ಮಗ) ಆ ಪ್ರಶಸ್ತಿ ವೇದಿಕೆಯಲ್ಲಿ ಮತ್ತೆ ಆ ಹಾಡನ್ನು ಹಾಡಿ ರೋಮಾಂಚನಗೊಳಿಸಿದರು! ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿಯು ಘೋಷಣೆ ಆಗಿದ್ದು ಆ ವಿಭಾಗದಲ್ಲಿ ಭಾರತವು (ಮಾತ್ರವಲ್ಲ ಏಷಿಯಾದಲ್ಲಿ ಕೂಡ) ಗೆದ್ದ ಮೊದಲ ಅಕಾಡೆಮಿ ಪ್ರಶಸ್ತಿ ಇದಾಗಿದೆ! ಆ ಸಿನೆಮಾ ನಿರ್ದೇಶನ ಮಾಡಿದ್ದ ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ, ಕತೆ ಬರೆದ ಅವರ ತಂದೆ ವಿಜಯೇಂದ್ರ ಪ್ರಸಾದ್, ನೃತ್ಯ ನಿರ್ದೇಶನ ಮಾಡಿದ ಪ್ರೇಮ್ ರಕ್ಷಿತ್ ಇವರೆಲ್ಲ ಈ ಯಶಸ್ಸಿನ ಪಾಲುದಾರರು!

ಎಂ.ಎಂ. ಕೀರವಾಣಿ ಮತ್ತು ಚಂದ್ರ ಬೋಸ್

RRR ಒಂದು ಲೆಜೆಂಡ್ ಫಿಲ್ಮ್!

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಆಂಧ್ರ ಪ್ರದೇಶದಲ್ಲಿ ಕಿಡಿ ಹಚ್ಚಿದ್ದ ಇಬ್ಬರು ಯುವಕರ ಕತೆಯನ್ನು ಆಧರಿಸಿ ಈ ಆರ್‌ಆರ್‌ಆರ್‌ ಸಿನಿಮಾವನ್ನು ಮಾಡಲಾಗಿತ್ತು. ಅವರಿಬ್ಬರೂ ತಮ್ಮ ಜೀವನದಲ್ಲಿ ಎಂದಿಗೂ ಭೇಟಿ ಮಾಡಿರಲಿಲ್ಲ! ಆದರೆ ಆ ಸಿನಿಮಾದಲ್ಲಿ ಅವರನ್ನು ಅತ್ಯುತ್ತಮ ಗೆಳೆಯರಾಗಿ ಚಿತ್ರೀಕರಿಸಲಾಗಿದೆ! ಫ್ಯಾ0ಟಸಿ, ರೋಮಾನ್ಸ್, ರಾಷ್ಟ್ರಪ್ರೇಮ, ರೋಮಾಂಚಕ ಹೋರಾಟಗಳು, ಭಾರತೀಯ ಪುರಾಣಗಳ ಟಚ್ ಈ ಸಿನಿಮಾದಲ್ಲಿ ಇದೆ. ರಾಜಮೌಳಿ ತಮ್ಮದೇ ಅದ್ಭುತ ಶೈಲಿಯಲ್ಲಿ ಈ ಸಿನಿಮಾವನ್ನು ದೃಶ್ಯ ಕಾವ್ಯ ಆಗಿ ಕಟೆದು ನಿಲ್ಲಿಸಿದ್ದಾರೆ! ಅವರ ಬಾಹುಬಲಿ ಸರಣಿಯ ಸಿನಿಮಾಗಳಿಗಿಂತ ಹೆಚ್ಚು ರೋಚಕವಾಗಿ ಈ ಸಿನಿಮಾ ಮೂಡಿ ಬಂದಿದೆ ಎಂದು ವಿಮರ್ಶೆಗಳು ಬಂದಿವೆ.

ನಾಲ್ಕು ವರ್ಷಗಳ ದೀರ್ಘ ಕಾಲ ಶೂಟ್ ಆದ ಸಿನೆಮಾ ಇದು! 550 ಕೋಟಿ ರೂಪಾಯಿ ವೆಚ್ಚದ ಈ ಸಿನಿಮಾ 1800 ಕೋಟಿ ರೂಪಾಯಿಗಿಂತ ಹೆಚ್ಚು ದುಡ್ಡು ಮಾಡಿತು. ವಿದೇಶದಲ್ಲಿ ಕೂಡ ಈ ಸಿನಿಮಾ ತುಂಬಿದ ಗೃಹಗಳಲ್ಲಿ ಪ್ರದರ್ಶನ ಆಗಿದೆ ಅಂದರೆ ಅದರ ಜನಪ್ರಿಯತೆಯು ನಮಗೆ ಅರ್ಥ ಆಗುತ್ತದೆ!

ಇಡೀ ಸಿನಿಮಾವನ್ನು ಆವರಿಸಿರುವ ರಾಮಚರಣ್ ತೇಜ ಮತ್ತು ಜ್ಯೂನಿಯರ್ ಎನ್‌ಟಿಆರ್ ಅವರ ಅಭಿನಯವೂ ಕ್ಲಾಸ್ ಇದೆ. ಭಾರತೀಯ ಸಿನಿಮಾ ರಂಗದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ ಇದಕ್ಕೆ ಮೂರನೇ ಸ್ಥಾನ!

ಎಂ ಎಂ ಕೀರವಾಣಿ ಎಂಬ ಸಂಗೀತ ಮಾಂತ್ರಿಕ!

ಕೊಡುರಿ ಮರತಮಣಿ ಕೀರವಾಣಿ ಎನ್ನುವುದು ಅವರ ಪೂರ್ಣ ಹೆಸರು. ಸಂಬಂಧದಲ್ಲಿ ಅವರು ರಾಜಮೌಳಿ ಅವರ ಕಸಿನ್. ವಯಸ್ಸು 61 ವರ್ಷ. ಸಿನಿಮಾ ಕ್ಷೇತ್ರಕ್ಕೆ ಬಂದು ಇಪ್ಪತ್ತು ವರ್ಷ ಆಗಿದೆ. ಸಂಗೀತ ಕೊಟ್ಟ ಸಿನಿಮಾಗಳ ಸಂಖ್ಯೆ ಅಂದಾಜು ಆರುವತ್ತು ಮಾತ್ರ! ಆದರೆ ಎಲ್ಲ ಸಿನೆಮಾ, ಎಲ್ಲ ಹಾಡುಗಳೂ ಹಿಟ್! ಬಾಹುಬಲಿ ಸರಣಿ ಸಿನಿಮಾಗಳಿಗೆ ಮ್ಯೂಸಿಕ್ ಕೊಟ್ಟವರು ಇದೇ ಕೀರವಾಣಿ! ಅವರಿಗೆ ಈಗಾಗಲೇ ಒಂದು ರಾಷ್ಟ್ರಪ್ರಶಸ್ತಿ, ಆರು ಫಿಲ್ಮಫೇರ್ ಪ್ರಶಸ್ತಿ, ಎಂಟು ತೆಲುಗಿನ ನಂದಿ ಪ್ರಶಸ್ತಿಗಳು ಲಭಿಸಿವೆ! ಇಂದಿನ ಯುವಜನತೆಗೆ ಏನು ಬೇಕು ಎಂದು ಅವರಿಗೆ ಸರಿಯಾಗಿ ಗೊತ್ತಿದೆ. ಹಾಗೆ ಹುಟ್ಟಿದ್ದು ಈ ಮುತ್ತಿನಂತಹ ಹಾಡು!

ಈ ಹಾಡಿನ ವೇಗವೇ ಅದರ ಯಶಸ್ಸು!

ಬ್ರಿಟಿಷ್ ಅರಸೊತ್ತಿಗೆಗೆ ಸಡ್ಡು ಹೊಡೆಯುವ ಇಬ್ಬರು ಯುವಕರು ರಾಜಕುಮಾರಿಯ ಮುಂದೆ ಅದ್ಭುತ ಕುಣಿಯುವ ಹಾಡು ಇದು. ಈ ಹಾಡಿನ ಅಸಾಧಾರಣವಾದ ವೇಗಕ್ಕೆ ಅಷ್ಟೇ ಅದ್ಭುತವಾದ ಹಿನ್ನೆಲೆಯ ಸಂಗೀತ ಇದೆ. ಅಷ್ಟೇ ಅದ್ಭುತವಾದ ಕೊರಿಯೋಗ್ರಫಿಯು ಇದೆ. ಅಷ್ಟೇ ವೇಗವಾಗಿ ಚಲಿಸುವ ಸಿನಿಮಾಟೋಗ್ರಫಿ ಇದೆ. ಆ ಹಾಡು ಸಿನಿಮಾದಲ್ಲಿ ಬಂದಾಗಲೆಲ್ಲ ಇಡೀ ಥಿಯೇಟರ್ ಒಳಗಿರುವ ಕಾಲೇಜು ಹೈಕಳು ಸೀಟಿನಿಂದ ಎದ್ದು ಕುಣಿಯಲು ತೊಡಗಿದ್ದು ಈ ಹಾಡಿನ ಸಕ್ಸಸ್! ಇದೀಗ ಅಕಾಡೆಮಿ ಪ್ರಶಸ್ತಿ ಕೂಡ ದೊರೆತದ್ದು ಇನ್ನೂ ದೊಡ್ಡ ಸಕ್ಸಸ್! ಈ ವರ್ಷದ ಜನವರಿ ತಿಂಗಳಲ್ಲಿ ಇದೇ ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಕೂಡ ದೊರೆತಿರುವುದು ಉಲ್ಲೇಖನೀಯ.

ದಿ ಎಲಿಫೆಂಟ್‌ ವಿಸ್ಪರರ್ಸ್‌ ಡಾಕ್ಯುಮೆಂಟರಿಯ ಒಂದು ದೃಶ್ಯ

ಭರತವಾಕ್ಯ!

ಈ ಜಾಗತಿಕ ಮಟ್ಟದ ಪ್ರಶಸ್ತಿ ಗೆದ್ದ ಕೀರವಾಣಿ ಮತ್ತವರ ತಂಡಕ್ಕೆ ಖಂಡಿತವಾಗಿ ನಮ್ಮ ಅಭಿನಂದನೆ ಇರಲಿ. ಅದರ ಜೊತೆಗೆ ಎಲಿಫೆಂಟ್ ವಿಸ್ಪರ್ ಎಂಬ ತಮಿಳು ಭಾಷೆಯ ಸಾಕ್ಷ್ಯಚಿತ್ರಕ್ಕೆ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಇನ್ನೊಂದು ಅಕಾಡೆಮಿ ಪ್ರಶಸ್ತಿ ಬಂದಿದೆ. ಅವರನ್ನೂ ಅಭಿನಂದನೆ ಮಾಡೋಣ.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಭಯವೆಂದರೆ ಏನೆಂದೇ ಗೊತ್ತಿಲ್ಲದ ಮುಗ್ಧ ಮಗುವಿನಲ್ಲಿ ಭಯ ತುಂಬಿಸುವವರು ಯಾರು?

Exit mobile version