Site icon Vistara News

ರಾಜ ಮಾರ್ಗ ಅಂಕಣ | ಹಾಕಿ ಕ್ಯಾಪ್ಟನ್ ರಾಣಿ ರಾಂಪಾಲ್ ಎಂಬ ಹುಟ್ಟು ಹೋರಾಟಗಾರ್ತಿ, ಆಕೆ ಹುಟ್ಟಿದ್ದೇ ಕುರುಕ್ಷೇತ್ರದಲ್ಲಿ!

Rani rampal

ಕಳೆದ ವರ್ಷ ನಡೆದ ಟೋಕಿಯೋ ಒಲಿಂಪಿಕ್ಸ್ ಭಾರತಕ್ಕೆ ನಿರೀಕ್ಷೆ ಮಾಡಿದಷ್ಟು ಪದಕಗಳನ್ನು ತಂದುಕೊಡದೆ ಮುಗಿದು ಹೋಗಿರಬಹುದು. ಆದರೆ ಒಬ್ಬ ವ್ಯಕ್ತಿತ್ವ ವಿಕಸನದ ತರಬೇತುದಾರ ಆಗಿ ನನಗೆ ನೂರಾರು ವ್ಯಕ್ತಿತ್ವಗಳನ್ನು,
ಯಶೋಗಾಥೆಗಳನ್ನು ಪರಿಚಯ ಮಾಡಿ ಸ್ಮರಣೀಯ ಆಯಿತು.

ಅದರಲ್ಲಿ ಅತ್ಯಂತ ಹೆಚ್ಚು ಸ್ಫೂರ್ತಿ ನೀಡಿದ್ದು ಈಕೆ! ಹೆಸರು ರಾಣಿ ರಾಂಪಾಲ್. ಕಂಚಿನ ಪದಕವನ್ನು ಕೂದಲೆಳೆಯ ಅಂತರದಲ್ಲಿ ಮಿಸ್ ಮಾಡಿಕೊಂಡ ಭಾರತದ ಮಹಿಳಾ ಹಾಕಿ ತಂಡದ ಕ್ಯಾಪ್ಟನ್! ಆಕೆ ಹರಿಯಾಣ ರಾಜ್ಯದ ಕುರುಕ್ಷೇತ್ರ ಜಿಲ್ಲೆಯ ಒಂದು ಸಣ್ಣ ಊರಿನವಳು. ಹದಿನೆಂಟು ದಿನ ಮಹಾಭಾರತದ ಯುದ್ಧ ನಡೆದ ಅದೇ ರಣ ಭೂಮಿಯಿಂದ ಬಂದವಳು! ಆದ್ದರಿಂದ ಹೋರಾಟ ಅವಳ ರಕ್ತದಲ್ಲಿ ಬಂದಿರಬೇಕು!

ಬಡತನ ಮತ್ತು ಅಮ್ಮ ಇವಿಷ್ಟು ಆಕೆಯ ಒಡನಾಡಿಗಳು!
ಅವಳಿಗೆ ಬಾಲ್ಯದಲ್ಲಿ ಜೊತೆಯಾಗಿ ಇದ್ದದ್ದು ತೀವ್ರವಾದ ಬಡತನ ಮತ್ತು ಅಪ್ಪ, ಅಮ್ಮನ ಪ್ರೀತಿ ಮಾತ್ರ! ಆಕೆ ಬೆಳಗ್ಗೆ ಬೇಗ ಎದ್ದು ನಾಲ್ಕು ಗಂಟೆಗೆ ಅಕಾಡೆಮಿ ತಲುಪಿ ಹಾಕಿ ಅಭ್ಯಾಸವನ್ನು ಆರಂಭ ಮಾಡಬೇಕಾಗಿತ್ತು. ಆದರೆ ಅವಳ ಮನೆಯಲ್ಲಿ ಸಮಯವನ್ನು ತೋರಿಸುವ ಒಂದೇ ಒಂದು ಗಡಿಯಾರ ಇರಲಿಲ್ಲ!

ಮಗಳನ್ನು ಬೇಗನೆ ಎಬ್ಬಿಸಬೇಕು ಎಂಬ ಕಾಳಜಿಯಿಂದ ಅವಳ ಪ್ರೀತಿಯ ಅಮ್ಮ ಇಡೀ ರಾತ್ರಿ ಮಲಗುತ್ತಲೇ ಇರಲಿಲ್ಲ. ರಾತ್ರಿಯ ಆಕಾಶದಲ್ಲಿ ಚಂದ್ರ ಅಥವಾ ನಕ್ಷತ್ರಗಳ ಸ್ಥಾನವನ್ನು ಅಂದಾಜು ಮಾಡಿ ಸಮಯವನ್ನು ಲೆಕ್ಕ ಮಾಡುತ್ತಿದ್ದರು. ಅಮ್ಮ ಅವಳನ್ನು ಬೇಗ ಎಬ್ಬಿಸಿ ಟಿಫಿನ್ ಕಟ್ಟಿಕೊಟ್ಟು ಆಡಲು ಕಳುಹಿಸುತ್ತಿದ್ದರು! ಅಂತಹ ಹುಡುಗಿ ಜಿದ್ದಿಗೆ ಬಿದ್ದವಳ ಹಾಗೆ ಹಾಕಿ ಆಡುತ್ತಿದ್ದಳು.

ಮುರಿದ ಹಾಕಿ ಸ್ಟಿಕ್ ಕೈ ಸೇರಿತು!
ಅವಳಿಗೆ ಹಾಕಿ ಸ್ಟಿಕ್ ಕೊಡಿಸಲು ಅವಳ ಅಪ್ಪನ ಹತ್ತಿರ ದುಡ್ಡು ಇರಲಿಲ್ಲ. ಅಪ್ಪ ಮೈದಾನದ ಮೂಲೆಯಲ್ಲಿ ಯಾರೋ ಎಸೆದಿದ್ದ ಅರ್ಧ ಮುರಿದಿದ್ದ ಹಾಕಿ ಸ್ಟಿಕ್ ತಂದು ಮಗಳ ಕೈಯ್ಯಲ್ಲಿ ಕೊಟ್ಟು ಇದರಿಂದ ಆಡು ಮಗಳೇ ಎನ್ನುತ್ತಿದ್ದರು! ಆದರೆ ಆಕೆ ತನ್ನ ಬಾಲ್ಯದಲ್ಲಿ ಸೌಲಭ್ಯಗಳ ಕೊರತೆಗಳ ಬಗ್ಗೆ ಗೊಣಗಿದ್ದು ಇಲ್ಲವೇ ಇಲ್ಲ!

ಅವಳ ಅಪ್ಪ ಗಾಡಿಯನ್ನು ಎಳೆದು ಪಡೆಯುತ್ತಿದ್ದ ದಿನದ ಸಂಪಾದನೆ ಎಂದರೆ ಹೆಚ್ಚು ಕಡಿಮೆ ಎಂಬತ್ತು ರೂಪಾಯಿ! ತಾಯಿ ಹತ್ತಾರು ಮನೆಗಳಲ್ಲಿ ಮುಸುರೆ ತಿಕ್ಕಿ ಸಂಪಾದನೆ ಮಾಡಿದ ದುಡ್ಡು ಕುಟುಂಬದ ಒಂದು ಹೊತ್ತಿನ ಊಟಕ್ಕೂ ಸಾಕಾಗುತ್ತಿರಲಿಲ್ಲ.

ಆಕೆಯ ಇಬ್ಬರು ಅಣ್ಣಂದಿರು ಸರಕಾರಿ ಶಾಲೆಗಳಿಗೆ ಹೋಗ್ತಾ ಇದ್ದರು. ಆದರೆ ರಾಣಿಗೆ ಬಡತನದ ಕಾರಣಕ್ಕೆ ಪ್ರೈಮರಿಯ ಹಂತ ದಾಟುವುದು ಕೂಡ ಕಷ್ಟ ಆಯ್ತು. ಆರು ವರ್ಷದ ಹುಡುಗಿ ಮನೆಯ ಸಮಸ್ಯೆ ನೀಗಿಸಲು ಕನಸು ಕಟ್ಟಿ ಆರಿಸಿಕೊಂಡದ್ದು ಹಾಕಿ ಆಟವನ್ನು!

ಬಡತನ ನಿವಾರಣೆ ಮಾಡಲು ಹಾಕಿ ಒಂದೇ ಆಧಾರ!
ಕೈಯಲ್ಲಿ ಅರ್ಧ ಮುರಿದ ಹಾಕಿ ಸ್ಟಿಕ್ ಹಿಡಿದು ಈ ಆರು ವರ್ಷದ ಸಣಕಲು ಹುಡುಗಿ ಹಾಕಿ ಕೋಚ್ ಬಲದೇವ್ ಸಿಂಗ್ ಮುಂದೆ ನಿಂತಿದ್ದಳು. ಗಟ್ಟಿಯಾದ ಕನಸು ಮತ್ತು ಆತ್ಮವಿಶ್ವಾಸ ಮಾತ್ರ ಆಕೆಯ ಜೊತೆಗೆ ಇದ್ದವು. ಕಾಲಿಗೆ ಶೂ ಇಲ್ಲದೆ ಹಾಕಿ ಆಡುತ್ತಿದ್ದ ಈ ದಿಟ್ಟ ಹುಡುಗಿಯು ತನ್ನ ಚೂಡಿದಾರದ ಶಾಲನ್ನು ಹೊಟ್ಟೆಗೆ ಬಿಗಿಯಾಗಿ ಕಟ್ಟಿಕೊಂಡು ಓಡುತ್ತಿದ್ದಳು. ಹದಿಹರೆಯದಲ್ಲಿ ಉಕ್ಕಿ ಬರುತ್ತಿದ್ದ ಹಸಿವೆಯನ್ನು ತಡೆದುಕೊಳ್ಳಲು ಆ ಶಾಲು ಅವಳಿಗೆ ಸಹಾಯ ಮಾಡುತ್ತಿತ್ತು!

ಮೊದಲ ಬಾರಿಗೆ ಹಾಕಿ ಟೂರ್ನಮೆಂಟ್ ಒಂದರಲ್ಲಿ ಐನೂರು ರೂಪಾಯಿ ಬಹುಮಾನ ಗೆದ್ದು ಖುಷಿಯಿಂದ ದುಡ್ಡನ್ನು ಅಪ್ಪನ ಕೈಯ್ಯಲ್ಲಿ ತಂದು ಕೊಟ್ಟು ಮಗಳು ಹೇಳಿದ್ದಳು – ಅಪ್ಪ, ನಿಮ್ಮನ್ನೆಲ್ಲ ಮುಂದೆ ದೊಡ್ಡ ಮನೆಯಲ್ಲಿ ಇಟ್ಟು ಸಾಕ್ತೀನಪ್ಪ! ಅಪ್ಪ-ಅಮ್ಮನ ಕಣ್ಣಲ್ಲಿ ಅವತ್ತು ಕಣ್ಣೀರು ಧಾರೆ ಧಾರೆಯಾಗಿ ಸುರಿದಿತ್ತು.

ಕಿರುಕುಳ ನಿಲ್ಲಲೇ ಇಲ್ಲ!
ಮುಂದೆ ಪ್ರಾಯಕ್ಕೆ ಬಂದ ಹುಡುಗಿ ಗಿಡ್ಡ ಸ್ಕರ್ಟನ್ನು ಹಾಕಿಕೊಂಡು ಹಾಕಿ ಮೈದಾನದ ಉದ್ದಗಲದಲ್ಲಿ ಓಡಾಡುವಾಗ ಮತ್ತೆ ಸಂಬಂಧಿಕರ, ನೆರೆಮನೆಯವರ ಕಿರುಕುಳ ಆರಂಭ ಆಯಿತು. ಅಪ್ಪ ರಾಂಪಾಲ್ ಕಿವಿ ತೂತಾಗುವಷ್ಟು ದೂರುಗಳು ಬಂದವು. ‘ಹೀಗೆಲ್ಲ ಮರ್ಯಾದೆ ಬಿಟ್ಟು ಆಡಿದರೆ ಮುಂದೆ ಯಾರು ನಿಮ್ಮ ಮಗಳನ್ನು ಮದುವೆ ಆಗ್ತಾರೆ? ಮಗಳು ಹೇಳಿದ ಹಾಗೆ ಕುಣಿಯಬೇಡ’ ಇತ್ಯಾದಿ ಮಾತುಗಳು! ಆದರೆ ಮಗಳ ಹಟದ ಮುಂದೆ ಅಪ್ಪನಿಗೆ ಮಾತೇ ಬರುತ್ತಿರಲಿಲ್ಲ. ಮನೆಗೆ ಬಂದು ಮದುವೆಯ ವಿಷಯ ಮಗಳ ಮುಂದೆ ಪ್ರಸ್ತಾವ ಮಾಡಿದರೆ ಮಗಳು ಉರಿದು ಬೀಳ್ತಾ ಇದ್ದಳು!

ಮಗಳ ಹಟದ ಮುಂದೆ ಅಪ್ಪ ಸೋತರು!
ಆದರೂ 14 ವರ್ಷದ ಹುಡುಗಿಗೆ ಮದುವೆಯ ಪ್ರಸ್ತಾಪ ತೆಗೆದುಕೊಂಡು ಅಪ್ಪ ಒಮ್ಮೆ ಮನೆಗೆ ಬಂದಿದ್ದರು. ಮಗಳು ಅಪ್ಪನ ಕೈ ಹಿಡಿದುಕೊಂಡು ಕುರ್ಚಿಯಲ್ಲಿ ಕೂರಿಸಿ ಕಣ್ಣಲ್ಲಿ ಕಣ್ಣಿಟ್ಟು ‘ಅಪ್ಪಾ. ನಾನು ನಿಮಗೆ ಭಾರ ಆಗಿದ್ದೇನಾ? ಯಾಕೆ ಅವಸರ ಮಾಡ್ತೀರಿ? ಮುಂದಿನ ವಾರ ರಷ್ಯಾದಲ್ಲಿ ಚಾಂಪಿಯನ್ ಚಾಲೆಂಜ್ ಟೂರ್ನಿಗೆ ನಾನು ಆಯ್ಕೆ ಆಗಿದ್ದೇನೆ. ಸೋತು ಬಂದರೆ ನೀವು ತೋರಿಸಿದ ಹುಡುಗನನ್ನು ಮದುವೆ ಆಗುವೆ!’ ಎಂದಳು. ಅಪ್ಪ ಹೂಂ ಅಂದರು. ಆದರೆ ಮಗಳು ಸೋಲಲು ಹುಟ್ಟಿದವಳೆ ಅಲ್ಲ! ಮಗಳು ರಷ್ಯಾದಲ್ಲಿ ಜಯಭೇರಿ ಬಾರಿಸಿ ಮನೆಗೆ ಹಿಂದೆ ಬಂದಾಗ ಅಪ್ಪ ಮಾತು ಮರೆಯುತ್ತಿದ್ದರು! ಮದುವೆಯ ಪ್ರಪೋಸಲ್ ಮರೆತು ಹೋಗುತ್ತಿತ್ತು!

ಹಾಕಿ ಜೈತ್ರಯಾತ್ರೆ ಆರಂಭ!
ಮೊದಲ ಬಾರಿಗೆ 2010ರ ಹಾಕ್ಕಿ ವಿಶ್ವಕಪ್ ಕೂಟದಲ್ಲಿ ಆಕೆ ಭಾಗವಹಿಸಿದಾಗ ಆಕೆಗೆ ಕೇವಲ 15 ವರ್ಷ! ಅಲ್ಲಿ ಏಳು ಗೋಲು ಬಾರಿಸಿದ ದಿಟ್ಟ ಹುಡುಗಿ ರಾಣಿ.

ಅಂತಹ ರಾಣಿ ರಾಂಪಾಲ್‌ಗೆ ಈಗ 28 ವರ್ಷ. ಆಕೆ ಕ್ರೀಡಾಂಗಣದಲ್ಲಿ ಅತ್ಯುತ್ತಮ ಸ್ಟ್ರೈಕರ್. ಗೋಲು ಬಾರಿಸುವ ಒಂದೊಂದು ಅವಕಾಶವನ್ನು ಕೂಡ ಆಕೆ ಹಾಳು ಮಾಡುವುದೇ ಇಲ್ಲ. ಎರಡು ಹಾಕಿ ವಿಶ್ವಕಪ್, ಎರಡು ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾರತದ ಹಾಕಿ ತಂಡದ ನಾಯಕಿ ಆಗಿ ಮುನ್ನಡೆಸಿದ ಅನುಭವವು ಆಕೆಗೆ ಇದೆ.

ಟೋಕಿಯೋ ಒಲಿಂಪಿಕ್‌ನ ಕಹಿ ನೆನಪು!
ಆಕೆಯ ಟೋಕಿಯೋ ಒಲಿಂಪಿಕ್ ತಂಡದಲ್ಲಿ ಇದ್ದವರು ಎಲ್ಲರೂ ಸಮಸ್ಯೆಗಳ ಮೂಟೆಯನ್ನು ಹೊತ್ತುಕೊಂಡು ಆಟವಾಡಲು ಟೋಕಿಯೋಗೆ ಬಂದವರು. ವಂದನಾ ಕಟಾರಿಯ, ನಿಶಾ ವಾರ್ಸಿಯ, ನೇಹಾ ಗೋಯೆಲ್, ನಿಕ್ಕಿ ಪ್ರಧಾನ್ ಇವರೆಲ್ಲರೂ ತುಂಬ ಕಷ್ಟಗಳ ಮಧ್ಯೆ ಬೆಳೆದವರು.
ಟೋಕಿಯೋದಲ್ಲಿ ಸಾಲು ಸಾಲು ಸವಾಲಿನ ಪಂದ್ಯಗಳನ್ನು ಭಾರತದ ತಂಡವು ಆಡಬೇಕಾಯಿತು. ಪಂದ್ಯಗಳ ನಡುವೆ ವಿಶ್ರಾಂತಿಯೇ ಇರಲಿಲ್ಲ. ತಂಡದ ಸದಸ್ಯರು ಸಣ್ಣ ಸೋಲುಗಳಿಗೆ ಡಿಪ್ರೆಸ್ ಆಗ್ತಾ ಇದ್ದರು. ಆಗ ಇಡೀ ತಂಡದ ಹಿರಿಯಕ್ಕನಾಗಿ ಅವರಿಗೆಲ್ಲ ಧೈರ್ಯ ತುಂಬಿಸಿ, ತನ್ನ ಆತ್ಮವಿಶ್ವಾಸವನ್ನು ಕೂಡ ಕಳೆದುಕೊಳ್ಳದೆ ಆಕೆ ಆಡಿದ ರೀತಿ ಇದೆಯಲ್ಲಾ ಅದು ನಿಜಕ್ಕೂ ಮಾರ್ವೆಲಸ್!

ಕಂಚಿನ ಪದಕದ ಪಂದ್ಯದಲ್ಲಿ ಭಾರತ ಹಾಕಿ ತಂಡವು ಸೋತಾಗ ಇಡೀ ತಂಡ ಕಣ್ಣೀರ ಕೋಡಿ ಹರಿಸಿತು. ಆಗ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಫೋನ್ ಮಾಡಿ ಸಾಂತ್ವನ ಹೇಳಿದಾಗ ಕಣ್ಣೀರು ಒರೆಸಿಕೊಂಡು ರಾಣಿ ರಾಂ ಪಾಲ್ ಹೇಳಿದ ಮಾತು ಇನ್ನೂ ಕಿವಿಯಲ್ಲಿ ಇದೆ.

“ಮೋದಿಜಿ, ಈ ಬಾರಿ ನಾವು ಸೋತಿದ್ದೇವೆ. ಆದರೆ ಮುಂದೆ ಬೂದಿಯಿಂದ ಎದ್ದು ಬರುತ್ತೇವೆ. ಮುಂದಿನ ಒಲಿಂಪಿಕ್ಸ್ ಕೂಟದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ!”

ಆಕೆಗೆ ಈಗಾಗಲೆ ಅರ್ಜುನ ಪ್ರಶಸ್ತಿ, ಪದ್ಮಶ್ರೀ, ಖೇಲ್ ರತ್ನ ಪ್ರಶಸ್ತಿ ಎಲ್ಲವೂ ದೊರೆತಾಗಿದೆ. ಮುಂದೆ ಭಾರತರತ್ನ ಪ್ರಶಸ್ತಿಗೆ ಕೂಡ ಆಕೆ ಅರ್ಹತೆ ಹೊಂದಿದ್ದಾರೆ. ಜೈ ಹಿಂದ್!

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಈ ಹತ್ತು ಟೀ ನಿಮ್ಮ ಹತ್ರ ಇದ್ದರೆ ನೀವು ಬದುಕಿನಲ್ಲಿ ಗೆದ್ದಂತೆಯೇ! ಏನಿದು ಟೀ ಮಂತ್ರ?

Exit mobile version