Site icon Vistara News

ರಾಜ ಮಾರ್ಗ ಅಂಕಣ | ನಾರಾಯಣ ಜಗದೀಶನ್: ಭಾರತೀಯ ಕ್ರಿಕೆಟಿನ ಭವಿಷ್ಯದ ಸೂಪರ್‌ ಸ್ಟಾರ್!

Narayan jagadeeshan

ಭಾರತೀಯ ಕ್ರಿಕೆಟ್ ತಂಡವು ಈ ವರ್ಷ ಏಷಿಯಾ ಕಪ್ ಮತ್ತು ವಿಶ್ವಕಪ್‌ನಲ್ಲಿ ಸೋತ ನಂತರ ಹೊಸ ಆಟಗಾರರನ್ನು ಬಳಸಿ ಹೊಸ ತಂಡ ಕಟ್ಟುವ ಯೋಚನೆಯಲ್ಲಿ ಬಿಸಿಸಿಐ ಇದೆ. ಇಂತಹ ಸಂದರ್ಭದಲ್ಲಿ ಹಲವು ಯುವ ಆಟಗಾರರು ತಮ್ಮ ಮಹೋನ್ನತ ಆಟದ ಮೂಲಕ ತಮಗೂ ಒಂದು ಅವಕಾಶ ಕೊಡಿ ಎಂದು ಆಯ್ಕೆ ಮಂಡಳಿಯ ಕದ ತಟ್ಟುತ್ತಿದ್ದಾರೆ. ಅವರಲ್ಲಿ ಅಗ್ರ ಪಂಕ್ತಿಯ ಹೆಸರು ನಾರಾಯಣ್ ಜಗದೀಶನ್! ಆತನನ್ನು ಗೆಳೆಯರು ಜಗ್ಗಿ ಎಂದು ಕರೆಯುತ್ತಾರೆ.

ಆತನದ್ದು ಬಾಲ್ಯದಿಂದಲೂ ಹೋರಾಟದ ಬದುಕು!
ಕೊಯಮತ್ತೂರಿನಿಂದ ಚೆನ್ನೈಗೆ ಕ್ರಿಕೆಟ್ ಅವಕಾಶವನ್ನು ಹುಡುಕಿಕೊಂಡು ಬರುವಾಗ ಆತನ ಕಿಸೆಯಲ್ಲಿ ನೂರು ರೂಪಾಯಿ ಕೂಡ ಇರಲಿಲ್ಲ. ಅಲ್ಲಿ ಇಲ್ಲಿ ಸಣ್ಣ ಉದ್ಯೋಗ ಮಾಡಿಕೊಂಡು ಆತ ತನ್ನ ಹೊಟ್ಟೆಪಾಡು ನೋಡಿಕೊಳ್ಳಬೇಕಿತ್ತು. ಬಿಡುವಿನ ಅವಧಿಯಲ್ಲಿ ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಾ ಈ ಹುಡುಗ ಇಂದು ಬೆಳೆದ ಎತ್ತರ ಇದೆಯಲ್ಲ ಅದು ನಿಜಕ್ಕೂ ವಿಸ್ಮಯ!

ಆತ ನಾರಾಯಣ ಜಗದೀಶನ್!
ವಿಜಯ ಹಜಾರೆ ಟೂರ್ನಿಯಲ್ಲಿ ಕಳೆದ ವಾರ ಬೆಂಗಳೂರಿನಲ್ಲಿ ಆತ ಆಡುತ್ತಾ ದಾಖಲಿಸಿದ್ದು ಹಲವು ಅದ್ಭುತ ದಾಖಲೆಗಳನ್ನು! ಅರುಣಾಚಲ ಪ್ರದೇಶ ತಂಡದ ವಿರುದ್ಧ ಲಿಸ್ಟ್ ಎ ಪಂದ್ಯದಲ್ಲಿ (50 ಓವರ್ ಪಂದ್ಯ) ಆತ ಮಾಡಿದ್ದೆಲ್ಲ ದಾಖಲೆಯೇ ಆಗಿ ಹೋಯಿತು. 141 ಎಸೆತಗಳಲ್ಲಿ 277 ರನ್ ಹೊಡೆದದ್ದು ವಿಶ್ವ ದಾಖಲೆಯ ಭಾಗವಾಗಿ ಹೋಯಿತು.

ತಮಿಳುನಾಡು ತಂಡದ ಆರಂಭಿಕರಾದ ಜಗದೀಶನ್ ಮತ್ತು ಸಾಯಿ ಸುದರ್ಶನ್ ಸೇರಿ ಮೊದಲ
ವಿಕೆಟಿಗೆ 416 ರನ್ ಪೇರಿಸಿದ್ದು ಕೂಡ ವಿಶ್ವದಾಖಲೆ! ಇದು ಲಿಸ್ಟ್ ಎ ಪಂದ್ಯದಲ್ಲಿ ಯಾವುದೇ ವಿಕೆಟಿಗೆ ದಾಖಲಾದ ಗರಿಷ್ಠ ರನ್ ಜೊತೆಯಾಟ! ಈ ಪಂದ್ಯದಲ್ಲಿ ತಮಿಳುನಾಡು 500+ ರನ್ ದಾಖಲು ಮಾಡಿದ್ದು ಇನ್ನೊಂದು ವಿಶ್ವದಾಖಲೆ! ಅದರ ಜೊತೆಗೆ 435 ರನ್ ಅಂತರದ ಗೆಲುವು ಇನ್ನೊಂದು ವಿಶ್ವದಾಖಲೆ! ಒಟ್ಟಿನಲ್ಲಿ ನೀಳ ಕಾಯದ ಈ ಕ್ರಿಕೆಟರ್ ಅಂದು ಇಡೀ ಕ್ರಿಕೆಟ್ ಜಗತ್ತನ್ನು ಸಂಭ್ರಮಪಡುವಂತೆ ಮಾಡಿದ್ದು ಸುಳ್ಳಲ್ಲ!

ಸತತ ಐದು ಶತಕಗಳ ಸಾಧನೆ!
ಸತತ ಐದು ಶತಕಗಳನ್ನು ಬಾರಿಸಿದ ರೆಕಾರ್ಡ್ ಕೂಡ ಈಗ ಆತನ ಹೆಸರಿಗೆ ದಾಖಲು ಆಗಿದೆ. ಆತ ತಂಡದ ವಿಕೆಟ್ ಕೀಪರ್ ಕೂಡ ಆಗಿರುವುದು ವಿಶೇಷ. ತಮಿಳುನಾಡು ತಂಡಕ್ಕೆ ಪ್ರವೇಶ ಮಾಡಿ ಈಗಲೇ ಆರು ವರ್ಷ ಆಗಿರುವ ಆತ ನನಗೆ ತಾಳ್ಮೆಯ ಪ್ರತಿರೂಪ ಆಗಿ ಕಂಡುಬರುತ್ತಾನೆ. ದೈಹಿಕ ಮತ್ತು ಮಾನಸಿಕವಾಗಿ ಆತನ ದೃಢತೆ, ಹೊಡೆತಗಳ ಆಯ್ಕೆ, ಕಣ್ಣಿನ ಸೂಕ್ಷ್ಮತೆ, ವಿಕೆಟ್ ನಡುವಿನ ಓಟ, ತಾಂತ್ರಿಕ ಹೊಡೆತಗಳ ಆಯ್ಕೆ, ಬ್ಯಾಟಿನ ಬೀಸು ಎಲ್ಲದರಲ್ಲಿಯೂ ಆತ ಅದ್ಭುತವಾಗಿ ಇದ್ದಾನೆ.

ಆದರೆ ಬೆಂಬಿಡದ ದುರದೃಷ್ಟ!
ಬ್ಯಾಟರ್ ಜೊತೆಗೆ ವಿಕೆಟ್ ಕೀಪರ್ ಆಗಿರುವುದು ಆತನ ದುರದೃಷ್ಟ! ಯಾಕೆಂದರೆ ತಮಿಳುನಾಡು ತಂಡದಲ್ಲಿ ದಿನೇಶ್ ಕಾರ್ತಿಕ್ ಆಡಲು ಬಂದರೆ ಆತ ಹನ್ನೆರಡನೇ ಆಟಗಾರನಾಗಿ ಬೆಂಚ್ ಕಾಯಬೇಕು! ಭಾರತೀಯ ತಂಡಕ್ಕೆ ಆಯ್ಕೆ ಮಾಡೋಣ ಎಂದರೆ ಮೊದಲು ಧೋನಿ, ಈಗ ರಿಷಭ್ ಪಂತ್, ಸಂಜು ಸ್ಯಾಮ್ಸನ್ ಅಂತಹ ಕೀಪರ್ ಕಂ ಆಟಗಾರರು ಕ್ಯೂ ನಿಂತಿದ್ದಾರೆ!

ಭಾರತದ ODI ಟೀಮಿನಲ್ಲಿ ಕೂಡ ಸಾಲು ಸಾಲು ಸ್ಟಾರ್ ಆಟಗಾರರು ಬೇರು ಬಿಟ್ಟಿದ್ದಾರೆ. ಆಯ್ಕೆಗಾರರ ಉತ್ತರ ಭಾರತ, ದಕ್ಷಿಣ ಭಾರತ ತಾರತಮ್ಯದಲ್ಲಿ ದೀರ್ಘಕಾಲ ಬಲಿಪಶು ಆಗುವವರು ಇಂತಹ ಆಟಗಾರರು! ದಿನೇಶ್ ಕಾರ್ತಿಕ್‌ಗೆ 37 ವರ್ಷ ದಾಟಿದರೂ ಇನ್ನೂ ಆಡಿಸುವ ಉತ್ಸಾಹ ಇರುವ ಕ್ರಿಕೆಟ್ ಆಯ್ಕೆ ಮಂಡಳಿಯಿಂದ ಜಗದೀಶನ್ ಅಂತಹ ಆಟಗಾರರು ತಾತ್ಸಾರಕ್ಕೆ ಒಳಗಾಗುವುದು ಸಹಜ!

ಐಪಿಎಲ್ ಕೂಟದಲ್ಲಿ ಕೂಡ ನಿರ್ಲಕ್ಷ್ಯ
ಅದರ ಜೊತೆಗೆ ಐಪಿಎಲ್ ಕೂಟವನ್ನು ಗಮನಿಸಿದರೆ ಇಷ್ಟೊಂದು ವರ್ಷಗಳ ಅವಧಿಯಲ್ಲಿ ಜಗ್ಗಿ ಆಡಿದ್ದು ಬೆರಳೆಣಿಕೆಯ ಪಂದ್ಯಗಳನ್ನು ಮಾತ್ರ! ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ ಪರವಾಗಿ ಆಡಿರುವ ಆತ ಆಡಿದ್ದಕ್ಕಿಂತ ನೀರಿನ ಬಾಟಲ್ ಹೊತ್ತದ್ದೇ ಹೆಚ್ಚು! ಆದರೆ ಈ ಸೀಸನ್‌ನಲ್ಲಿ ಆತನನ್ನು ಚೆನ್ನೈ ತಂಡ ಬಿಡುಗಡೆ ಮಾಡಿದ್ದು ಕೂಡ ವಿಷಾದನೀಯ! ಈ ಬಾರಿ ಹರಾಜಿನಲ್ಲಿ ಆತ ಬೇರೆ ತಂಡಗಳ ಪಾಲಾಗುವ ಎಲ್ಲ ಅವಕಾಶ ಇದೆ.

‘ಐವತ್ತು ಓವರ್ ಪೂರ್ತಿ ಮೈದಾನದಲ್ಲಿ ಉಳಿಯಬೇಕು ಎನ್ನುವ ಸಂಕಲ್ಪದಲ್ಲಿ ಆಡುವುದು ನನ್ನ ಗೆಲುವಿನ ಗುಟ್ಟು’ ಎಂದು ಹೇಳುವ ಜಗ್ಗಿ ತನ್ನ ದುರದೃಷ್ಟದ ಬಗ್ಗೆ ತಲೆ ಕೆಡಿಸಿಕೊಳ್ಳದೆ ತನ್ನ ಬ್ಯಾಟಿಂಗ್ ಫಾರ್ಮ್‌ ಮತ್ತು ವಿಕೆಟ್ ಕೀಪಿಂಗ್ ಕೌಶಲಗಳ ಬಗ್ಗೆ ಮಾತ್ರ ಯೋಚನೆ ಮಾಡುತ್ತಿದ್ದಾರೆ. ವಿಕೆಟ್ ಕೀಪಿಂಗನಲ್ಲಿ ಕೂಡ ಅವರ ದಾಖಲೆಯು ಉತ್ತಮವಾಗಿಯೇ ಇದೆ. ಲೆಫ್ಟ್ ಮತ್ತು ರೈಟ್ ಸೈಡ್ ಎರಡೂ ಕಡೆ ಸುಲಭವಾಗಿ ಜಂಪ್ ಮಾಡಿ ಕ್ಯಾಚ್ ಹಿಡಿಯಬಲ್ಲ ಭಾರತದ ಕೆಲವೇ ಕೀಪರಗಳಲ್ಲಿ ಅವರೂ ಒಬ್ಬರು. ಲಿಸ್ಟ್ ಎ ಕ್ರಿಕೆಟಿನಲ್ಲಿ ಆತನ ಸರಾಸರಿ ಐವತ್ತರ ನಿಕಟ ಇದೆ. ಆತನಿಗೆ ನೆಲ ಕಚ್ಚಿ ಆಡಲು ಗೊತ್ತಿದೆ ಮತ್ತು ಆಕ್ರಮಣಕಾರಿ ಆಗಿ ಸ್ಫೋಟಕ ಆಟ ಕೂಡ ಆಡಬಲ್ಲ! ಯಾವ ವಿಕೆಟ್‌ನಲ್ಲಿ ಕೂಡ ಬ್ಯಾಟ್ ಬೀಸಬಲ್ಲ ಸಾಮರ್ಥ್ಯ ಆತನಿಗೆ ಇದೆ.

ಆತನಿಗೆ ಈಗಲೇ ವರ್ಷ 26 ದಾಟಿದೆ! ನಾರಾಯಣ್ ಜಗದೀಶನ್ ಅಂತಹ ಪ್ರತಿಭೆಯನ್ನು ಕ್ರಿಕೆಟ್ ಆಯ್ಕೆ ಮಂಡಳಿಯು ಸರಿಯಾಗಿ ಬಳಸಿಕೊಂಡರೆ ಭಾರತೀಯ ಕ್ರಿಕೆಟಿಗೆ ಇನ್ನೋರ್ವ ಧೋನಿ, ಕಿರಣ್ ಮೋರೆ, ಕಿರ್ಮಾನಿ ಅಥವಾ ನಯನ್ ಮೊಂಗಿಯ ದೊರೆಯುತ್ತಾರೆ ಅನ್ನುವುದು ಗೋಡೆ ಬರಹದಷ್ಟೆ ಸತ್ಯ!

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ದೈಹಿಕ ಶಕ್ತಿ ಕುಂದಿರಬಹುದು, ಆದರೆ, ಇಚ್ಛಾಶಕ್ತಿಯಿಂದ ಜಗತ್ತನ್ನೇ ಗೆಲ್ಲಬಹುದು ಅಂತ ಸಾಧಿಸಿ ತೋರಿಸಿದವರು

Exit mobile version