Site icon Vistara News

Gold rate today : ಬಂಗಾರದ ದರದಲ್ಲಿ 120 ರೂ. ಏರಿಕೆ, ಬೆಳ್ಳಿ ಯಥಾಸ್ಥಿತಿ

Gold weared women

ಬೆಂಗಳೂರು: ಬೆಂಗಳೂರಿನಲ್ಲಿ ಮಂಗಳವಾರ ಬಂಗಾರದ ದರದಲ್ಲಿ 120 ರೂ. ಏರಿಕೆಯಾಗಿದೆ. (Gold rate today) 24 ಕ್ಯಾರಟ್‌ನ 10 ಗ್ರಾಮ್‌ ಚಿನ್ನದ ದರ 60,100 ರೂ.ಗೆ ಏರಿಕೆಯಾಗಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್‌ನ 10 ಗ್ರಾಮ್‌ ಬಂಗಾರದ ದರದಲ್ಲೂ 120 ರೂ. ಏರಿಕೆಯಾಗಿದ್ದು, 55,100 ರೂ.ಗೆ ವೃದ್ಧಿಸಿದೆ. ಪ್ರತಿ ಕೆ.ಜಿ ಬೆಳ್ಳಿಯ ದರ 77,000 ರೂ.ನಷ್ಟಿತ್ತು.

ಮದುವೆಗಳು ಮತ್ತು ಹಬ್ಬಗಳಲ್ಲಿ ಚಿನ್ನದ ಖರೀದಿ ಹೆಚ್ಚು: ಭಾರತದಲ್ಲಿ ಮದುವೆ ಹಾಗೂ ಹಬ್ಬಗಳ ಸಂದರ್ಭ ಚಿನ್ನದ ಖರೀದಿ ಹೆಚ್ಚು.ಮಾರುಕಟ್ಟೆಯಲ್ಲಿ ಅರ್ಧದಷ್ಟು ಪಾಲನ್ನು ವಧುವಿನ ಆಭರಣಗಳು ಮತ್ತು ಹಬ್ಬಗಳ ಸಂದರ್ಭ ಕೊಳ್ಳುವ ಒಡವೆಗಳೇ ವಹಿಸುತ್ತಿವೆ. ಭಾರತದಲ್ಲಿ ಚಿನ್ನದ ಖರೀದಿ ಹೊಸತೇನಲ್ಲ, ಹೀಗಿದ್ದರೂ ಮುಂಬರುವ ವರ್ಷಗಳಲ್ಲಿ ಶಾಪಿಂಗ್‌ ಗಣನೀಯ ಹೆಚ್ಚಲಿದೆ ಎನ್ನಲು ಕಾರಣಗಳನ್ನು ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ಮುಂದಿಟ್ಟಿದೆ.

ಆರ್ಥಿಕ ಬೆಳವಣಿಗೆ, ಸಂಪತ್ತಿನ ವಿತರಣೆ, ನಗರೀಕರಣ ಎಫೆಕ್ಟ್: ಭಾರತದಲ್ಲಿ ಉಂಟಾಗುತ್ತಿರುವ ಆರ್ಥಿಕ ಬೆಳವಣಿಗೆ, ಸಂಪತ್ತಿನ ವಿತರಣೆ, ನಗರೀಕರಣದ ಪರಿಣಾಮ ಬಂಗಾರದ ಖರೀದಿಯ ಪ್ರವೃತ್ತಿ ಗಣನೀಯ ಹೆಚ್ಚಳವಾಗಲಿದೆ ಎಂದು ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ಜ್ಯುವೆಲ್ಲರಿ ರಫ್ತು: ಭಾರತದಿಂದ ಇತ್ತೀಚಿನ ವರ್ಷಗಳಲ್ಲಿ ಜ್ಯುವೆಲ್ಲರಿ ರಫ್ತು ಕೂಡ ಗಣನೀಯ ಏರಿಕೆಯಾಗುತ್ತಿದೆ. 2015ರಲ್ಲಿ 7.6 ಶತಕೋಟಿ ಡಾಲರ್‌ನಷ್ಟಿದ್ದ ಜ್ಯುವೆಲ್ಲರಿ ರಫ್ತು 2020ರಲ್ಲಿ ಕೋವಿಡ್-‌19 ಬರುವುದಕ್ಕೆ ಮುನ್ನ ೧೨.೪ ಶತಕೋಟಿ ಡಾಲರ್‌ಗೆ ಏರಿಕೆಯಾಗಿತ್ತು. ಭಾರತೀಯ ಜ್ಯುವೆಲ್ಲರಿಗಳನ್ನು ಹೊಸ ಮಾರುಕಟ್ಟೆಗೆ ರಫ್ತು ಮಾಡಬೇಕಾದ ಅಗತ್ಯವೂ ಇದೆ. ಈಗ ಜ್ಯುವೆಲ್ಲರಿ ರಫ್ತಿನ 90% ಪಾಲು ಕೂಡ ಕೇವಲ ಐದು ದೇಶಗಳಿಗೆ ಹೋಗುತ್ತಿದೆ.

ಇದನ್ನೂ ಓದಿ: Tirupati Temple: ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಶಂಖ, ಆಮೆ ವಿಗ್ರಹವನ್ನು ನೀಡಿದ ನಾರಾಯಣಮೂರ್ತಿ ದಂಪತಿ

ವಧುವಿನ ಆಭರಣಕ್ಕಾಗಿ ಖರೀದಿಯ ಪ್ರಾಬಲ್ಯ: ಶತಶತಮಾನಗಳಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಎಲ್ಲಿಲ್ಲದ ಪ್ರಾಧಾನ್ಯತೆ ಇದೆ. ಅದಕ್ಕೆ ಧಾರ್ಮಿಕ ನಂಬಿಕೆಗಳೂ ಬೆಸೆದುಕೊಂಡಿದೆ. ಹೀಗಾಗಿ ವಧುವಿನ ಆಭರಣಗಳಿಗೆ ಚಿನ್ನದ ಒಡವೆಗಳನ್ನು ಖರೀದಿಸುವುದು ವಾಡಿಕೆ. ಮಾಂಗಲ್ಯ ಸೂತ್ರಕ್ಕೆ ಜನ ಬಂಗಾರವನ್ನು ಕೊಳ್ಳುತ್ತಾರೆ. ಅದೊಂದೇ ಅಲ್ಲದೆ, ವಧುವಿನ ಅಂದ ಚಂದ ಹೆಚ್ಚಿಸಲು, ಗಮನ ಸೆಳೆಯಲು ಆಭರಣಗಳನ್ನು ಧರಿಸುತ್ತಾರೆ. ದೇಶದಲ್ಲಿ ಪ್ರತಿ ವರ್ಷ 1.1 ಕೋಟಿಗೂ ಹೆಚ್ಚು ಮದುವೆ ಕಾರ್ಯಕ್ರಮಗಳು ನಡೆಯುತ್ತವೆ. ಈ ಟ್ರೆಂಡ್‌ ದೀರ್ಘಕಾಲೀನವಾಗಿ ಮುಂದುವರಿಯಲಿದೆ. ವಧುವಿಗೆ ನೀಡುವ ಆಭರಣಗಳು ಅವಳದ್ದೇ ಆಸ್ತಿಯಾಗಿ ಇರುವುದರಿಂದ ಹಾಗೂ ಆರ್ಥಿಕ ಭದ್ರತೆಯ ದೃಷ್ಟಿಯಿಂದ ಮಹತ್ವದ್ದಾಗಿರುವುದರಿಂದ ಬಂಗಾರಕ್ಕೆ ಮದುವೆ ಸಂದರ್ಭ ಬೇಡಿಕೆ ಹೆಚ್ಚುತ್ತದೆ. ಕೃಷಿ ಕೂಡ ಚಿನ್ನಕ್ಕೆ ಬೇಡಿಕೆ ಸೃಷ್ಟಿಸಿದೆ. ಹೂಡಿಕೆಯ ಸಾಧನವಾಗಿಯೂ ಚಿನ್ನ ಬೇಡಿಕೆ ಉಳಿಸಿಕೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸಾಯದ ಅಭಿವೃದ್ಧಿ, ಮಳೆ-ಬೆಳೆಯನ್ನು ಆಧರಿಸಿ ಚಿನ್ನಕ್ಕೆ ಬೇಡಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಮಳೆ-ಬೆಳೆ ಚೆನ್ನಾಗಿದ್ದಾಗ ಚಿನ್ನದ ಖರೀದಿ ಹೆಚ್ಚುತ್ತದೆ. ಕೃಷಿ ಕಡಿಮೆಯಾದಾಗ ಬಂಗಾರಕ್ಕೆ ಬೇಡಿಕೆ ಕಡಿಮೆಯಾಗುತ್ತದೆ.

Exit mobile version