Site icon Vistara News

Divorce Case : ಶುಭ ಸುದ್ದಿ! ಕಾರಣ ಸರಿಯಾಗಿದ್ದರೆ ಕೂಲಿಂಗ್‌ ಪೀರಿಯೆಡ್‌ ಇಲ್ಲದೆಯೇ ತಕ್ಷಣ ಡೈವೋರ್ಸ್ ಸಿಗುತ್ತೆ!

Happy divorce

ಬೆಂಗಳೂರು: ಗಂಡ-ಹೆಂಡತಿ ಪ್ರಬುದ್ಧರಾಗಿದ್ದು, ಪ್ರಜ್ಞಾಪೂರ್ವಕವಾಗಿ ವಿಚ್ಛೇದನಕ್ಕೆ (Divorce Case) ಒಪ್ಪಿದರೆ, ಮುಂದೆ ಯಾವ ಕಾರಣಕ್ಕೂ ನಿರ್ಧಾರ ಬದಲಾಗುವುದಿಲ್ಲ ಎನ್ನುವಷ್ಟು ದೃಢವಾಗಿದ್ದರೆ ಡೈವೋರ್ಸ್‌ ಪ್ರಕರಣಗಳಲ್ಲಿ ಸಾಮಾನ್ಯವಾಗಿ ವಿಧಿಸಲಾಗುವ ಕೂಲಿಂಗ್‌ ಪೀರಿಯೆಡ್‌ (Cooling period) ಬೇಕಾಗಿಲ್ಲ ಎಂದು ರಾಜ್ಯ ಹೈಕೋರ್ಟ್‌ (Karnataka High court) ಅಭಿಪ್ರಾಯಪಟ್ಟಿದೆ.

ಪ್ರಕರಣವೊಂದರಲ್ಲಿ ಪತಿ-ಪತ್ನಿ ಇಬ್ಬರು ದೂರವಾಗಿ ಪರಸ್ಪರ ವೃತ್ತಿಯ ಬಗ್ಗೆ ಗಮನ ಹರಿಸುವುದಾಗಿ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ವಿವಾಹ ವಿಚ್ಛೇದನ ಮಂಜೂರಾತಿಗೆ ಇರುವ ಒಂದು ವರ್ಷದ ಕಡ್ಡಾಯ ಅವಧಿಯನ್ನು ಮನ್ನಾ ಮಾಡಿ ವಿಚ್ಚೇದನಕ್ಕೆ ಕರ್ನಾಟಕ ಹೈಕೋರ್ಟ್‌ ಅವಕಾಶ ಮಾಡಿಕೊಟ್ಟಿದೆ.

ಕೌಟುಂಬಿಕ ನ್ಯಾಯಾಲಯ ಅವರ ತ್ವರಿತ ವಿಚ್ಛೇದನಕ್ಕೆ ಅವಕಾಶ ನೀಡದೆ ಕೂಲಿಂಗ್‌ ಪೀರಿಯೆಡ್‌ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ದಂಪತಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದೀಗ ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠವು ಕೂಲಿಂಗ್‌ ಪೀರಿಯೆಡ್ ರದ್ದುಗೊಳಿಸಿದೆ. ಪರಸ್ಪರ ವಿವಾಹ ರದ್ದತಿ ಕೋರಿ ಸಂಬಂಧಿತ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಪೀಠವು ಪತಿ-ಪತ್ನಿಯರಿಗೆ ಆದೇಶಿಸಿದೆ.‌

ಯಾಕೆ ಕೂಲಿಂಗ್‌ ಪೀರಿಯೆಡ್‌ ಅಗತ್ಯವಿಲ್ಲ: ಹೈಕೋರ್ಟ್‌ ಹೇಳಿದ್ದೇನು?

  1. ಅರ್ಜಿದಾರರು 32ರಿಂದ 37 ವರ್ಷದ ವಯೋಮಾನದವರು, ಅವರಿಬ್ಬರೂ ನಿರ್ದಿಷ್ಟವಾಗಿ ಪರಸ್ಪರ ದೂರ ಸರಿದು ತಮ್ಮ ತಮ್ಮ ವೃತ್ತಿ ಜೀವನದ ಮೇಲೆ ಹೆಚ್ಚಿನ ಗಮನಹರಿಸಲು ಮತ್ತು ಪ್ರತ್ಯೇಕ ಜೀವನ ನಡೆಸಲು ಒಪ್ಪಿದ್ದಾರೆ.
  2. ಅವರು ಕೈಗೊಂಡಿರುವ ನಿರ್ಧಾರ ಪ್ರಜ್ಞಾಪೂರ್ವಕವಾದುದು ಮತ್ತು ಆ ನಿರ್ಧಾರದ ಪರಿಣಾಮಗಳ ಬಗ್ಗೆ ಅವರಿಗೆ ಅರಿವಿದೆ. ಹೀಗಾಗಿ, ಈ ಮೇಲಿನ ಪರಿಸ್ಥಿತಿ ಮತ್ತು ಸಂದರ್ಭದ ಹಿನ್ನೆಲೆಯಲ್ಲಿ ಅವರಿಬ್ಬರ ನಡುವಿನ ಸಂಧಾನ ಸಾಧ್ಯತೆ ಕ್ಷೀಣಿಸುತ್ತಿದೆ.
  3. ನಿಯಮದ ಪ್ರಕಾರ ಅರ್ಜಿ ಸಲ್ಲಿಸಿದ ಆರು ತಿಂಗಳು ಸಮಯ ನೀಡುವುದು (ಕೂಲಿಂಗ್ ಅವಧಿ) ನ್ಯಾಯಾಲಯದ ಮೆಟ್ಟಿಲೇರಿರುವ ಪತಿ-ಪತ್ನಿ ಮನಸು ಬದಲಾವಣೆಯಾಗಬಹುದು ಎಂಬುದಾಗಿದೆ.
  4. ಆರು ತಿಂಗಳ ನಂತರವೂ ಪತಿ-ಪತ್ನಿ ಇಬ್ಬರೂ ಮನಸು ಬದಲಿಸದೆ, ವಿಚ್ಛೇದನ ಅರ್ಜಿಯನ್ನು ಮುಂದುವರಿಸಲು ಸಮ್ಮತಿಸಿದರೆ ಆಗ ನ್ಯಾಯಾಲಯ ಮುಂದಿನ ಆರು ತಿಂಗಳಲ್ಲಿ ಮೆರಿಟ್ ಆಧಾರದ ಮೇಲೆ ಅರ್ಜಿ ಪರಿಶೀಲಿಸಿ ಅಗತ್ಯ ಆದೇಶಗಳನ್ನು ಹೊರಡಿಸುತ್ತದೆ.
  5. ಆದರೆ, ಸುಪ್ರೀಂ ಕೋರ್ಟ್ 2017ರಲ್ಲಿ ಅಮರ್ ದೀಪ್ ಸಿಂಗ್ ವರ್ಸಸ್ ಹರ್ವೀನ್ ಕೌರ್ ಪ್ರಕರಣದಲ್ಲಿ ಕೂಲಿಂಗ್ ಅವಧಿ ಕಡ್ಡಾಯವೇನಲ್ಲ ಎಂದು ಹೇಳಿದೆ.
  6. ವಿಚ್ಛೇದನ ಮಂಜೂರು ಮಾಡುವಾಗ ಪ್ರಕರಣಗಳ ವಾಸ್ತವಾಂಶ ಹಾಗೂ ಸಂದರ್ಭಗಳಿಗೆ ಅನುಗುಣವಾಗಿ ನ್ಯಾಯಾಲಯಗಳು ವಿವೇಚನೆ ಬಳಸಬೇಕು ಮತ್ತು ಪಕ್ಷಕಾರರನ್ನು ಮತ್ತೆ ಒಂದುಗೂಡಿ ಸಂಸಾರ ನಡೆಸುತ್ತಾರೆಯೇ ಎಂದು ಕೇಳಬೇಕು. ಅವರು ಒಪ್ಪಲಿಲ್ಲ ಎಂದಾದರೆ ವಿಚ್ಛೇದನ ಮಂಜೂರು ಮಾಡಬಹುದು.

ಪತಿ-ಪತ್ನಿ ಇಬ್ಬರೂ ಎಂಜಿನಿಯರ್‌ಗಳು

ಹಾಲಿ ಪ್ರಕರಣದಲ್ಲಿ ಪತಿ-ಪತ್ನಿ ಇಬ್ಬರೂ ಎಂಜಿನಿಯರಿಂಗ್ ಪದವೀಧರರು. ಇಬ್ಬರೂ ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಬ್ಬರಿಗೂ ತಮ್ಮ ನಡುವಿನ ಪರಸ್ಪರ ಭಿನ್ನಾಭಿಪ್ರಾಯಗಳು, ಇಷ್ಟ, ಕಷ್ಟಗಳು ಅರ್ಥವಾಗಿವೆ. ಸಂಧಾನಕ್ಕೆ ಮಾಡಿರುವ ಯತ್ನಗಳು ವಿಫಲವಾಗಿವೆ. ಇಬ್ಬರೂ ಪರಸ್ಪರ ಯಾವುದೇ ಆರೋಪ-ಪ್ರತ್ಯಾರೋಪಗಳನ್ನು ಮಾಡದೆ ವಿವಾಹ ಬಂಧನ ಕಡಿದುಕೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿ ಕಾಯಿಸುವುದು ಬೇಕಾಗಿಲ್ಲ ಎನ್ನುವುದು ಕೋರ್ಟ್‌ ಅಭಿಪ್ರಾಯ.

ಅಂದ ಹಾಗೆ ಇವರಿಬ್ಬರ ಮದುವೆ ನಡೆದಿದ್ದು 2022ರ ನವೆಂಬರ್‌ ತಿಂಗಳಲ್ಲಿ. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಬೇರೆಯಾಗಲು ನಿರ್ಧರಿಸಿದ್ದರು. ಇಬ್ಬರನ್ನು ಒಂದು ಮಾಡಲು ನಡೆಸಿದ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿಲ್ಲ. ಈಗ ಕೋರ್ಟ್‌ ಕೂಡಾ ಓಕೆ ಅಂದಿದೆ.

Exit mobile version