Site icon Vistara News

Naadageethe row : ನಾಡಗೀತೆ ವಿವಾದ ಕೇಳಿದ್ರೆ ಕುವೆಂಪು ಏನಂದ್ಕೊಳ್ತಾರೋ!; ಹೈಕೋರ್ಟ್‌ನಲ್ಲಿ ಹೀಗೂ ಒಂದು ಜಿಜ್ಞಾಸೆ!

Naadageethe row Kuvempu and Justice Krishna S dixit

ಬೆಂಗಳೂರು: ʻಜೈ ಭಾರತ ಜನನಿಯ ತನುಜಾತೆʼ ಹಾಡನ್ನು ನಾಡಗೀತೆಯಾಗಿ (Kannada Naadageethe) ಯಾವ ರಾಗದಲ್ಲಿ ಹಾಡಬೇಕು ಎನ್ನುವ ಕುರಿತಂತೆ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ (Karnataka High court) ಗುರುವಾರ (ಆಗಸ್ಟ್‌ 17) ಕುತೂಹಲಕಾರಿ ಚರ್ಚೆ ನಡೆಯಿತು. ಅದೇನೆಂದರೆ, ಒಂದೊಮ್ಮೆ ನಾಡಗೀತೆಯನ್ನು ರಾಗದ ವಿಚಾರದಲ್ಲಿ ಕೋರ್ಟ್‌ ಕಟಕಟೆಯನ್ನು ಹತ್ತಿರುವ ವಿಷಯವನ್ನು ತಿಳಿದರೆ ಕುವೆಂಪು ಏನೆಂದುಕೊಳ್ಳಬಹುದು ಎನ್ನುವುದು ಜಿಜ್ಞಾಸೆಯ ಪ್ರಮುಖ ಸಂಗತಿ.

ಕುವೆಂಪು ವಿರಚಿತ (Rashtrakavi Kuvempu) ನಾಡಗೀತೆಯನ್ನು ಮೈಸೂರು ಅನಂತಸ್ವಾಮಿ (Mysore Ananthaswamy) ಸಂಯೋಜಿಸಿದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ಹಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರ 2022ರ ಸೆಪ್ಟೆಂಬರ್‌ 25ರಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ (Kikkeri Krishnmurthy) ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ (Justice Krishna S Dixit) ಅವರ ನೇತೃತ್ವದ ಏಕಸದಸ್ಯ ಪೀಠದಡಿ ನಡೆಯುತ್ತಿದೆ. ಹಲವು ಬಾರಿ ವಿಚಾರಣೆ ನಡೆದಿದ್ದು, ಒಂದು ಹಂತದಲ್ಲಿ ಕೋರ್ಟ್‌ನಲ್ಲಿ ನಾಡಗೀತೆಯನ್ನು ಬೇರೆ ಬೇರೆ ರಾಗಗಳಲ್ಲಿ ಹೇಗೆ ಹಾಡಬಹುದು ಎನ್ನುವ ಪ್ರಾತ್ಯಕ್ಷಿಕೆಯೂ ನಡೆದಿತ್ತು!

ಕುವೆಂಪು ಏನಂದುಕೊಳ್ಳುತ್ತಾರೋ ಏನೊ!

ಗುರುವಾರದ ವಿಚಾರಣೆಯ ಸಂದರ್ಭದಲ್ಲಿ ತಮ್ಮದೊಂದು ಅಭಿಪ್ರಾಯ ಮಂಡಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರು, ʻಕುವೆಂಪು ಅವರು ಮೇಲಿನಿಂದ ನಮ್ಮನ್ನು ನೋಡಿ ಏನಂದುಕೊಳ್ಳುತ್ತಾರೋ ಗೊತ್ತಿಲ್ಲ. ಇಂಥ ಉತ್ಕೃಷ್ಟವಾದ ಕಾವ್ಯವನ್ನು ಇವರಿಗೆ ನೀಡಿದೆ. ಆದರೆ, ಇದನ್ನು ಈ ರಾಗದಲ್ಲಿ ಹೇಳಬೇಕೋ, ಆ ರಾಗದಲ್ಲಿ ಹೇಳಬೇಕೋ, ಯಾವ ರಾಗದಲ್ಲಿ ಹೇಳಬೇಕು ಎಂಬುದು ಒಂದು ದೊಡ್ಡ ಜಿಜ್ಞಾಸೆಯಾಗಿ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದು ಅಂದುಕೊಳ್ಳಬಹುದು” ಎಂದರು.

ಮತ್ತೆ ಜೋರಾಗಿ ನಡೆದ ವಾದ ವಿವಾದ

ಅರ್ಜಿದಾರ ಕಿಕ್ಕೇರಿ ಕೃಷ್ಣಮೂರ್ತಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು “ನಾಡಗೀತೆಯನ್ನು ಇದೇ ಧಾಟಿಯಲ್ಲಿ ಹಾಡಬೇಕು ಎಂದು ಆದೇಶ ಮಾಡಲು ರಾಜ್ಯ ಸರ್ಕಾರಕ್ಕೆ ಯಾವ ಅಧಿಕಾರವಿದೆ? ಸಿ ಅಶ್ವತ್ಥ್‌ ಅವರ ಸಂಯೋಜನೆ ಮತ್ತು ಹಾಡುಗಾರಿಕೆಯನ್ನು ಎಲ್ಲರೂ ಒಪ್ಪಿದ್ದಾರೆ. ಮೈಸೂರು ಅನಂತಸ್ವಾಮಿ ಅವರು ಪೂರ್ತಿಯಾಗಿ ಸ್ವರ ಸಂಯೋಜನೆ ಮಾಡಿಲ್ಲ. ಸರ್ಕಾರ ಈ ರೀತಿಯಲ್ಲಿ ಹಾಡಬೇಕು ಎಂದು ನಿರ್ದೇಶಿಸಲಾಗದು” ಎಂದರು.

ಆಗ ಪೀಠವು “ಶಾಲೆಯೊಂದರಲ್ಲಿ ಒಂದು ಸಾವಿರ ವಿದ್ಯಾರ್ಥಿಗಳ ಪೈಕಿ 500 ಮಂದಿ ಮೈಸೂರು ಅನಂತಸ್ವಾಮಿ ಅವರ ಸಂಯೋಜನೆಯಲ್ಲಿ ಹಾಡುತ್ತೇವೆ. ಉಳಿದವರು ಅಶ್ವತ್ಥ್‌ ಅವರ ಸಂಯೋಜನೆಯಲ್ಲಿ ಹಾಡುತ್ತೇವೆ ಎಂದರೆ ಏನು ಮಾಡುವುದು?” ಎಂದು ಕೇಳಿತು. ಆಗ ಹಾರನಹಳ್ಳಿ ಅವರು “ಅದನ್ನು ಶಾಲೆಯ ಆಡಳಿತ ಮಂಡಳಿ ನಿರ್ಧರಿಸುತ್ತದೆ” ಎಂದರು.

ರಾಗವೊಂದೇ ಮುಖ್ಯವಲ್ಲ, ಸಾಹಿತ್ಯ ಮುಖ್ಯ ಎಂದ ಪೀಠ

ನಾಡಗೀತೆ ವಿವಾದವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರು, ಒಂದೊಂದು ಶಾಲೆಯಲ್ಲಿ ಒಂದೊಂದು ರಾಗದಲ್ಲಿ ನಾಡಗೀತೆ ಹಾಡುವಂತೆ ಮಾಡಲು ಆಗುವುದಿಲ್ಲ. ಒಂದು ಶಾಲೆ ಬಿಟ್ಟು ಇನ್ನೊಂದು ಶಾಲೆಗೆ ಹೋಗುವ ವಿದ್ಯಾರ್ಥಿಗಳು ತಮಗೆ ಹಿಂದಿನ ಶಾಲೆಯಲ್ಲಿ ಕಲಿಸಿದ ರಾಗದಲ್ಲಿ ನಾಡಗೀತೆ ಹಾಡಲಾಗುವುದೇ. ಹಾಗೆ ಮಾಡಿದರೆ ಹಾಡಿನ ಘನತೆ ಉಳಿಯುವುದಿಲ್ಲ” ಎಂದರು.

ಇವೇ ವಿಚಾರವನ್ನು ಇನ್ನಷ್ಟು ಆಳವಾಗಿ ವಿಶ್ಲೇಷಿಸಿದ ಪೀಠವು, “ಸುಗಮ ಸಂಗೀತದಲ್ಲಿ ಒಂದು ಕಾವ್ಯದ ಅರ್ಥ ಮತ್ತು ಭಾವವನ್ನು ಒಯ್ಯುವ ವಾಹನವಾಗಿ ರಾಗದ ಬಳಕೆಯಾಗುತ್ತದೆ ಎನ್ನಬಹುದೇ? ಇಲ್ಲಿ ಸಾಹಿತ್ಯ ಪ್ರಧಾನವಾಗಿದ್ದು, ಇದನ್ನು ಪ್ರೇಕ್ಷಕರು ಮತ್ತು ಕೇಳುಗರಿಗೆ ಅರ್ಥ ಮತ್ತು ಭಾವ ಒಯ್ಯುವ ವಾಹಕವಾಗಿ ಸ್ವರ ಅಥವಾ ರಾಗ ಕೆಲಸ ಮಾಡುತ್ತದೆ” ಎಂದಿತು.

“ರಾಗ ಸರಳವಾಗಿದೆ ಎನ್ನಲಾಗದು. ಯುದ್ದದಲ್ಲಿ ಪಾಂಚಜನ್ಯ ಘೋಷಣೆ, ಯುದ್ದಕ್ಕೆ ಬೇಕಾದ ರಾಗ ಬೇರೆ, ಪ್ರೇಮಕ್ಕೆ ಬೇಕಾದ ರಾಗ ಬೇರೆ. ಯುದ್ಧ ರಂಗದಲ್ಲಿ ಪ್ರೇಮ ರಾಗ ಹೇಳಲಾಗದು. ಯುದ್ಧ ರಂಗದ ರಾಗಗಳನ್ನು ಪ್ರೇಮದ ಪವಿತ್ರ ಭೂಮಿಯಲ್ಲಿ ಹಾಡಲಾಗದು. ಸಾಹಿತ್ಯ ಪ್ರಧಾನವಾಗಿದ್ದರೂ, ರಾಗಕ್ಕೆ ತನ್ನದೇ ಮೌಲ್ಯವಿದೆ. ಇದು ಕಲಾತಪಸ್ವಿಗಳಿಗೆ ಸಂಬಂಧಿಸಿದ ವಿಷಯ” ಎಂದು ಕೃಷ್ಣ ಎಸ್.‌ ದೀಕ್ಷಿತ್‌ ಸ್ಪಷ್ಟಪಡಿಸಿದರು.

ಮೈಸೂರು ಅನಂತ ಸ್ವಾಮಿ ಅವರಿಗೆ ಜೈ ಎಂದ ಬಿ.ಕೆ. ಸುಮಿತ್ರಾ

ಕಳೆದ ವಿಚಾರಣೆಯ ಸಂದರ್ಭದಲ್ಲಿ ಸಂಗೀತಜ್ಞರು ಮತ್ತು ವಿದ್ವಾಂಸರೊಬ್ಬರನ್ನು ಕರೆಸಿ ಅವರ ಅಭಿಪ್ರಾಯ ಕೇಳಬೇಕು ಎಂದು ತೀರ್ಮಾನಿಸಲಾಗಿತ್ತು. ಇದರಂತೆ ಕೋರ್ಟ್‌ ಗುರುವಾರ ಖ್ಯಾತ ಗಾಯಕಿ ಬಿ.ಕೆ ಸುಮಿತ್ರಾ ಅವರು ಆಗಮಿಸಿದ್ದರು. “ಯಾವುದೇ ರಾಗ ಸಂಯೋಜಕರು ಎರಡು ಮತ್ತು ಮೂರು ಚರಣಗಳಿಗೆ ಮಾತ್ರ ಸ್ವರ ಸಂಯೋಜನೆ ಮಾಡುತ್ತಾರೆ. ಉಳಿದ ಚರಣಗಳಿಗೆ ಈ ಸಂಯೋಜನೆ ಅರ್ಪಿಸುತ್ತಾರೆ. ಎಲ್ಲದಕ್ಕೂ ಸ್ವರ ಸಂಯೋಜನೆ ಮಾಡುವ ಅಗತ್ಯವಿಲ್ಲ” ಎಂದು ಸಂಕ್ಷಿಪ್ತವಾಗಿ ಪೀಠಕ್ಕೆ ವಿವರಿಸುವ ಮೂಲಕ ಮೈಸೂರು ಅನಂತಸ್ವಾಮಿ ಅವರ ರಾಗ ಸಂಯೋಜನೆಯನ್ನು ಅನುಮೋದಿಸಿದರು.

ಎರಡೂ ಕಡೆಯಿಂದ ಕೋರ್ಟ್‌ಗೆ ವಿವರಣೆ

ಅರ್ಜಿದಾರರ ಪರವಾಗಿ ಸಂಗೀತ ಸಂಯೋಜಕರು ಮತ್ತು ಹಾಡುಗಾರರಾದ ಕಿಕ್ಕೇರಿ ಕೃಷ್ಣಮೂರ್ತಿ, ಮುದ್ದು ಕೃಷ್ಣ, ವೈ ಕೆ ಕಾಳಿಂಗರಾವ್‌ ಹಾಗೂ ಪ್ರತಿವಾದಿಗಳ ಪರವಾಗಿ ಬಿ ಕೆ ಸುಮಿತ್ರಾ, ಮೃತ್ಯುಂಜಯ ದೊಡ್ಡವಾಡ, ಆನಂದ ಮಾದಲಗೆರೆ ಅವರು ನ್ಯಾಯಾಲಯಕ್ಕೆ ರಾಗ ಸಂಯೋಜನೆ, ರಾಗಗಳ ವ್ಯತ್ಯಾಸ ಸೇರಿದಂತೆ ಹಲವು ವಿಚಾರಗಳ ಕುರಿತು ಪೀಠಕ್ಕೆ ವಿವರಿಸಿದರು.

ಹಿಂದಿನ ಸುದ್ದಿ ಓದಿ: Naadageethe row: ನಾಡಗೀತೆಯ ಬೆನ್ನುಹತ್ತಿದ ಹೈಕೋರ್ಟ್‌; ಕಟಕಟೆಗೆ ಬರ್ತಾರಾ ಗಾಯಕಿ ಬಿ.ಕೆ ಸುಮಿತ್ರಾ?

ಕಿಕ್ಕೇರಿ ವಾದ ಸರಿಯಲ್ಲ: ಮಧ್ಯಪ್ರವೇಶ ಮಾಡಿದ ದೊಡ್ಡವಾಡ

ಈ ನಡುವೆ, ಕವಿ ಮೃತ್ಯುಂಜಯ ದೊಡ್ಡವಾಡ ಅವರು ಮಧ್ಯಂತರ ಅರ್ಜಿ ಮೂಲಕ ಈ ವಿವಾದಕ್ಕೆ ಹೊಸದಾಗಿ ಪ್ರವೇಶ ಪಡೆದಿದ್ದಾರೆ. ಮಧ್ಯಂತರ ಅರ್ಜಿ ಸಲ್ಲಿಸಿರುವ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ.ಎಚ್‌ ಹನುಮಂತರಾಯ ಅವರನ್ನು ಕುರಿತು ಪೀಠವು “ಹಾಡು ಅರ್ಥಪೂರ್ಣವಾಗಿದ್ದು, ಯಾರೇ ಹಾಡಿದರೂ ಅರ್ಥ ಮತ್ತು ಭಾವ ಹೊಮ್ಮುತ್ತದೆ. ಇದರಲ್ಲಿ ಎರಡು ಮಾತಿಲ್ಲ. ಆದರೆ, ಇದೇ ರಾಗದಲ್ಲಿ ಹಾಡಬೇಕು ಎಂಬ ನಿಬಂಧನೆ ಮಾಡಲು ಕಾನೂನಿನ ಬೆಂಬಲ ಏನಿದೆ? ನಾಡಗೀತೆಯನ್ನು ಇಂಥದ್ಧೇ ರಾಗ ಅಥವಾ ದಾಟಿಯಲ್ಲಿ ಇದೇ ಸಂದರ್ಭದಲ್ಲಿ ಹಾಡಬೇಕು ಎಂದು ಹೇಳಲು ರಾಜ್ಯ ಸರ್ಕಾರಕ್ಕೆ ಯಾವ ಅಧಿಕಾರವಿದೆ” ಎಂದು ತಿಳಿಸಿ ಎಂದಿತು.

ಕಿಕ್ಕೇರಿ ಕೃಷ್ಣಮೂರ್ತಿ ಅವರು ವಾಸ್ತವಿಕ ವಿಚಾರಗಳನ್ನು ಸಂಪೂರ್ಣವಾಗಿ ನ್ಯಾಯಾಲಯದ ಮುಂದೆ ಇಟ್ಟಿಲ್ಲ. ಕೆಲವು ತಪ್ಪು ವಿಚಾರಗಳನ್ನು ಸೇರಿಸಿದ್ದು, ಮೈಸೂರು ಅನಂತ ಸ್ವಾಮಿ ಅವರು ಸಂಪೂರ್ಣವಾಗಿ ಹಾಡಿಗೆ ಸ್ವರ ಸಂಯೋಜನೆ ಮಾಡಿಲ್ಲ ಎಂದು ಹೇಳಿದ್ದಾರೆ. ಭಾಗಶಃ ಸಂಯೋಜನೆಯಾಗಿದ್ದು, ಅದನ್ನು ಅನುಷ್ಠಾನಗೊಳಿಸುವುದು ಕಷ್ಟ ಎಂದು ಹೇಳಿದ್ದಾರೆ. ಇದು ಸರಿಯಲ್ಲ ಎಂದು ಮಧ್ಯಂತರ ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

“ಮೈಸೂರು ಅನಂತಸ್ವಾಮಿ ಅವರು ಸಂಪೂರ್ಣವಾಗಿ ಸ್ವರ ಸಂಯೋಜನೆ ಮಾಡಿದ್ದು, ಕ್ಯಾಸೆಟ್‌ನಲ್ಲಿ ಹೆಚ್ಚು ಸ್ಥಳಾವಕಾಶ ಇರಲಿಲ್ಲ. ಹೀಗಾಗಿ, ನಿರ್ದಿಷ್ಟ ಅವಧಿಗೆ ಮಾತ್ರ ರೆಕಾರ್ಡ್‌ ಮಾಡಲಾಗಿದೆ ಎಂದು ಲಹರಿ ಆಡಿಯೊ ಸಂಸ್ಥೆಯು ಲಿಖಿತ ಪತ್ರ ನೀಡಿದೆ. ಇಂದಿಗೂ ಪೂರ್ಣ ಪ್ರಮಾಣದ ಸಂಯೋಜನೆಯನ್ನೇ ಹಾಡುಗಾರರು ಬಳಕೆ ಮಾಡುತ್ತಿದ್ದಾರೆ” ಎಂದು ಮಧ್ಯಂತರ ಅರ್ಜಿಯಲ್ಲಿ ವಿವರಿಸಲಾಗಿದೆ.

ಎಲ್ಲ ವಾದ ವಿವಾದಗಳನ್ನು ಗಮನಿಸಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್‌ 1ಕ್ಕೆ ನಿಗದಿಪಡಿಸಿದೆ.

Exit mobile version