Site icon Vistara News

Puneeth Kerehalli : ಪುನೀತ್‌ ಕೆರೆಹಳ್ಳಿ ಮೇಲೆ ಗೂಂಡಾ ಕಾಯಿದೆ; ಕಾರಣ ಕೇಳಿದ ಹೈಕೋರ್ಟ್‌

Puneeth Kerehalli

ಬೆಂಗಳೂರು: ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ, ಸಾಮಾಜಿಕ ಹೋರಾಟಗಾರ ಪುನೀತ್ ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿ (Puneeth Kerehalli) ವಿರುದ್ಧ ಗೂಂಡಾ ಕಾಯಿದೆ (Goonda Act) ಜಾರಿ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿ ರಾಜ್ಯ ಹೈಕೋರ್ಟ್‌ (Karnataka High court) ರಾಜ್ಯ ಸರ್ಕಾರಕ್ಕೆ (Karnataka Government) ನೋಟಿಸ್‌ ಜಾರಿ (Notice to Government) ಮಾಡಿದೆ.

ಬೆಂಗಳೂರು ಪೊಲೀಸ್‌ ಆಯುಕ್ತರು ತನ್ನನ್ನು ವಶಕ್ಕೆ ಪಡೆಯಲು ಆಗಸ್ಟ್‌ 11ರಂದು ಮಾಡಿರುವ ಆದೇಶ ಮತ್ತು ಅದನ್ನು ಆಧರಿಸಿ ರಾಜ್ಯ ಸರ್ಕಾರವು ತನ್ನ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆಯಡಿ (ಕೋಕಾ- ಕೆಸಿಒಸಿಎ) ಆಗಸ್ಟ್‌ 17ರಂದು ಹೊರಡಿಸಿರುವ ಆದೇಶಗಳನ್ನು ವಜಾ ಮಾಡುವಂತೆ ಪುನೀತ್ ಕೆರೆಹಳ್ಳಿ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಪಿ ಎಸ್ ದಿನೇಶ್ ಕುಮಾರ್ ಮತ್ತು ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯವು ರಾಜ್ಯ ಸರ್ಕಾರ, ನಗರ ಪೊಲೀಸ್ ಆಯುಕ್ತರು ಒಳಗೊಂಡು ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.

ರಾಜಕೀಯ ದ್ವೇಷವೇ ಕಾರಣ ಎಂದ ವಕೀಲರು

ಹಿರಿಯ ವಕೀಲ ಅರುಣ್ ಶ್ಯಾಮ್ ಅವರು ಪುನೀತ್‌ ಕೆರೆಹಳ್ಳಿ ಪರ ವಾದ ಮಾಡಿದ್ದು ಇದೊಂದು ರಾಜಕೀಯ ದ್ವೇಷದಿಂದ ಮಾಡಿದ ಕ್ರಮ ಎಂದು ಆರೋಪಿಸಿದ್ದಾರೆ.

  1. ಪುನೀತ್‌ ಕೆರೆಹಳ್ಳಿ ಅವರು ಸಮಾಜ ಸೇವೆಯಲ್ಲಿ ತೊಡಗಿದ್ದು, ರಾಷ್ಟ್ರ ರಕ್ಷಣಾ ಪಡೆಯನ್ನು ಕಟ್ಟಿ ದೇಶಕ್ಕಾಗಿ ಹೋರಾಡುವ ಸಮಾನ ಮನಸ್ಕರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ.
  2. ಅವರ ವಿರುದ್ಧ ದುರುದ್ದೇಶ ಪೂರ್ವಕವಾಗಿ ಹಲವು ಪ್ರಕರಣಗಳನ್ನು ಹೂಡಿ ಇದೀಗ ರಾಜಕೀಯ ದ್ವೇಷದ ಕಾರಣಕ್ಕೆ ಅವರನ್ನು ಆಗಸ್ಟ್‌ 11ರಂದು ಅಕ್ರಮವಾಗಿ ಬಂಧಿಸಲಾಗಿದೆ.
  3. ಬೆಂಗಳೂರು ಪೊಲೀಸ್ ಆಯುಕ್ತರು ವಿವೇಚನೆ ಬಳಸಿ ವಶಕ್ಕೆ ಪಡೆಯುವ ಆದೇಶ ಮಾಡಿದ್ದಾರೆ. ಇದನ್ನು ಆಧರಿಸಿ ಗೂಂಡಾ ಕಾಯಿದೆಯಡಿ ಬಂಧನ ಆದೇಶ ಮಾಡಲಾಗಿದೆ.
  4. ಇದು ಏಕಪಕ್ಷೀಯ ನಡೆ. ಅರ್ಜಿದಾರರು ನೀಡಿರುವ ಮನವಿಯನ್ನು ಪರಿಗಣಿಸಿಲ್ಲ. ಹೀಗಾಗಿ ಅವರನ್ನು ಬಂಧಿಸಲು ಹೊರಡಿಸಿರುವ ಆದೇಶ ಅಕ್ರಮವಾಗಿದ್ದು, ಅವುಗಳನ್ನು ವಜಾ ಮಾಡಬೇಕು- ಇದು ಅರುಣ್‌ ಶ್ಯಾಂ ಅವರ ವಾದವಾಗಿತ್ತು.

ಪುನೀತ್‌ ಕೆರೆಹಳ್ಳಿ ಮೇಲಿರುವ ಆರೋಪಗಳೇನು?

ಪುನೀತ್‌ ಕೆರೆಹಳ್ಳಿ ಮೇಲೆ ಈಗ ಪ್ರಮುಖವಾಗಿರುವ ಆರೋಪವೆಂದರೆ ಸಾತನೂರಿನಲ್ಲಿ ಇತ್ತೀಚೆಗೆ ನಡೆದ ಮೊಹಮ್ಮದ್‌ ಇದ್ರಿಸ್‌ ಎಂಬಾತನ ಕೊಲೆ ಪ್ರಕರಣ. ಮಂಡ್ಯದಿಂದ ಗೋಸಾಗಾಟ ಮಾಡುತ್ತಿದ್ದ ವಾಹನವನ್ನು ಸಾತನೂರು ಪೊಲೀಸ್‌ ಠಾಣೆಯ ಎದುರು ಭಾಗದಲ್ಲಿ ಪುನೀತ್‌ ಕೆರೆಹಳ್ಳಿ ತಂಡ ತಡೆ ಹಿಡಿದಿತ್ತು. ಈ ಘಟನೆಯಲ್ಲಿ ಮಹಮ್ಮದ್‌ ಇದ್ರಿಸ್‌ ಮೃತಪಟ್ಟಿದ್ದ. ಈ ಪ್ರಕರಣದಲ್ಲಿ ಪುನೀತ್‌ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ.

ಮೂಲತಃ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಕೆರೆಹಳ್ಳಿಯ ಪುನೀತ್, ಬೆಂಗಳೂರಿನ ಜೆ ಪಿ ನಗರ 7ನೇ ಹಂತದಲ್ಲಿ ವಾಸವಾಗಿದ್ದಾರೆ. ರಾಷ್ಟ್ರ ರಕ್ಷಣಾ ಪಡೆ ಎಂಬ ಅನಧಿಕೃತ ಸಂಘಟನೆ ಕಟ್ಟಿಕೊಂಡು ಜನರನ್ನು ಬೆದರಿಸುವ, ಸಮಾಜದ ಶಾಂತಿ ಕದಡುವ, ಗೋ ರಕ್ಷಣೆ ಹೆಸರಿನಲ್ಲಿ ವ್ಯಾಪಾರಿಗಳನ್ನು ಬೆದರಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನುವುದು ಅವರ ಮೇಲೆ ಇರುವ ಗಂಭೀರ ಆರೋಪ.

ಸಮಾಜದ ಸಾಮರಸ್ಯ ಕದಡಿದ ಆರೋಪ, ಸಮಾಜ ವಿರೋಧಿ ಕೃತ್ಯಗಳು, ಅಪರಾಧ ಚಟುವಟಿಕೆಗಳನ್ನು ಆಧರಿಸಿ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: Cow slaughter : ಜಾನುವಾರು ಸಾಗಾಟಗಾರನ ಸಾವು; ಪುನೀತ್‌ ಕೆರೆಹಳ್ಳಿ ಸೇರಿ ಐವರು ರಾಜಸ್ಥಾನದಲ್ಲಿ ಸೆರೆ

ಪುನೀತ್‌ ಕೆರೆಹಳ್ಳಿ ಮೇಲೆ 10 ಪ್ರಕರಣಗಳು

ಅಪರಾಧ ಹಿನ್ನೆಲೆಯುಳ್ಳ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರಿನ ಚಾಮರಾಜಪೇಟೆ, ಎಲೆಕ್ಟ್ರಾನಿಕ್‌ ಸಿಟಿ, ಡಿ ಜೆ ಹಳ್ಳಿ, ಬೇಗೂರು, ಕಗ್ಗಲೀಪುರ, ಹಲಸೂರು ಗೇಟ್, ಮಂಡ್ಯ ಜಿಲ್ಲೆಯ ಮಳವಳ್ಳಿ, ರಾಮನಗರ ಜಿಲ್ಲೆಯ ಸಾತನೂರು ಠಾಣೆ, ವಿಜಯನಗರ ಜಿಲ್ಲೆಯ ಹಂಪಿ ಟೂರಿಸಂ ಪೊಲೀಸ್ ಠಾಣೆಯಲ್ಲಿ ಕೊಲೆ, ಹಲ್ಲೆ, ಜೀವ ಬೆದರಿಕೆ, ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ, ಜಾತಿ ನಿಂದನೆ, ದೊಂಬಿ ಸೇರಿದಂತೆ ಹತ್ತು ಪ್ರಕರಣ ದಾಖಲಾಗಿವೆ ಎಂದು ಕೋರ್ಟ್‌ಗೆ ತಿಳಿಸಲಾಗಿದೆ.

Exit mobile version