Site icon Vistara News

Sullia Murder : ಎ.ಎಸ್‌ ರಾಮಕೃಷ್ಣ ಕೊಲೆ ; ಡಾ. ರೇಣುಕಾಪ್ರಸಾದ್‌ ಸಹಿತ ಆರು ಮಂದಿಗೆ ಜೀವಾವಧಿ ಶಿಕ್ಷೆ

Sullia Murder case

ಬೆಂಗಳೂರು: 12 ವರ್ಷದ ಹಿಂದೆ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸುಳ್ಯ ಕೆವಿಜಿ ಪಾಲಿಟೆಕ್ನಿಕ್‌ (Sullia KVG polytechnic) ಪ್ರಾಂಶುಪಾಲರಾಗಿದ್ದ ಎ.ಎಸ್‌ ರಾಮಕೃಷ್ಣ (AS Ramakrishna) ಅವರ ಕೊಲೆ ಪ್ರಕರಣಕ್ಕೆ (Sullia Murder) ಸಂಬಂಧಿಸಿ ಹೈಕೋರ್ಟ್‌ ಡಾ.ರೇಣುಕಾ ಪ್ರಸಾದ್‌ (Dr. Renuka prasad) ಸೇರಿದಂತೆ ಆರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಕರಣದಲ್ಲಿ ರೇಣುಕಾ ಪ್ರಸಾದ್‌ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಈ ಹಿಂದೆ ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು ಜಿ ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠವು ಇತ್ತೀಚೆಗೆ ಆರೋಪಿಗಳನ್ನು ದೋಷಿಗಳೆಂದು ಸಾರಿತ್ತು. ಗುರುವಾರ (ಅ.5) ಶಿಕ್ಷೆಯನ್ನು ಪ್ರಕಟಿಸಲಾಗಿದೆ.

ಪ್ರಕರಣದ ಒಟ್ಟು ಏಳು ಮಂದಿ ಆರೋಪಿಗಳ ಪೈಕಿ ಡಾ.ರೇಣುಕಾ ಪ್ರಸಾದ್‌, ಮನೋಜ್‌ ರೈ, ಎಚ್‌ ಆರ್ ನಾಗೇಶ್‌, ವಾಮನ ಪೂಜಾರಿ, ಶರಣ್‌ ಪೂಜಾರಿ  ಮತ್ತು ಶಂಕರ  ಅವರನ್ನು ಮೃತ ಎ ಎಸ್‌ ರಾಮಕೃಷ್ಣ ಅವರ ಹತ್ಯೆ ಮತ್ತು ಕೊಲೆಗೆ ಒಳಸಂಚು ರೂಪಿಸಿದ ಪ್ರಕರಣದಲ್ಲಿ ದೋಷಿಗಳು ಎಂದು ತೀರ್ಮಾನಿಸಿ 2023ರ ಸೆಪ್ಟೆಂಬರ್‌ 27ರಂದು ಹೈಕೋರ್ಟ್‌ ಆದೇಶಿಸಿತ್ತು. ಗುರುವಾರ ಶಿಕ್ಷೆ ವಿಧಿಸುವ ಕುರಿತು ದೋಷಿಗಳ ವಾದ ಆಲಿಸಿದ ಹೈಕೋರ್ಟ್‌, ಕೊಲೆ ಮತ್ತು ಅಪರಾಧಿಕ ಒಳಸಂಚು ಅಪರಾಧಕ್ಕೆ ಎಲ್ಲಾ ಆರು ಮಂದಿ ದೋಷಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 20 ಸಾವಿರ ರೂಪಾಯಿ ದಂಡ ವಿಧಿಸಿದೆ.

ಅಲ್ಲದೆ, ಕೊಲೆ ಮತ್ತು ಒಳಸಂಚಿಗೆ ರೇಣುಕಾ ಪ್ರಸಾದ್‌ ಅವರೇ ಮುಖ್ಯ ಕಾರಣವಾಗಿದ್ದಾರೆ. ಹೀಗಾಗಿ, ಅವರು ಮೃತ ರಾಮಕೃಷ್ಣ ಅವರ ಪತ್ನಿಗೆ 10 ಲಕ್ಷ ರೂಪಾಯಿ ಪರಿಹಾರ ಪಾವತಿಸಬೇಕು ಎಂದು ನಿರ್ದೇಶಿಸಿರುವ ಪೀಠವು ತಲೆ ಮರೆಸಿಕೊಂಡಿರುವ ಐದನೇ ಆರೋಪಿ ಶರಣ್‌ ಪೂಜಾರಿ ಬಂಧನಕ್ಕೆ ವಾರೆಂಟ್‌ ಹೊರಡಿಸುವಂತೆ ಪುತ್ತೂರು ಸತ್ರ ನ್ಯಾಯಾಲಯಕ್ಕೆ ಸೂಚಿಸಿದೆ.

ರೇಣುಕಾ ಪ್ರಸಾದ್‌ಗೆ ಆರೋಗ್ಯ ಸಮಸ್ಯೆ

 ಈ ನಡುವೆ ರೇಣುಕಾ ಪ್ರಸಾದ್‌ ಪರ ವಕೀಲರು, 63 ವರ್ಷದ ತಮ್ಮ ಕಕ್ಷಿದಾರರು ಪ್ರಕರಣದಲ್ಲಿ ದೋಷಿಯಾಗಿ ನ್ಯಾಯಾಲಯ ತೀರ್ಮಾನಿಸಿದ ನಂತರ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಅಧಿಕ ರಕ್ತದೊತ್ತಡ, ನಿದ್ರೆಯ ಅಸ್ವಸ್ಥತೆ ಸೇರಿದಂತೆ ಇನ್ನಿತರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಜೈಲಿನಲ್ಲಿ ಸೂಕ್ತ ಚಿಕಿತ್ಸೆ ಕಲ್ಪಿಸಲು ಆದೇಶಿಸಬೇಕು ಎಂದು ಕೋರಿದರು. ಈ ಮನವಿ ಪರಿಗಣಿಸಿದ ನ್ಯಾಯಾಲಯವು ರೇಣುಕಾ ಪ್ರಸಾದ್‌ಗೆ ಸೂಕ್ತ ಚಿಕಿತ್ಸೆ ಕಲ್ಪಿಸುವಂತೆ ಮಂಗಳೂರು ಜೈಲು ಅಧೀಕ್ಷಕರಿಗೆ ನಿರ್ದೇಶಿಸಿತು.

ಕುರುಂಜಿ ವೆಂಕಟರಮಣ ಗೌಡರು ಕಟ್ಟಿದ ಸಾಮ್ರಾಜ್ಯಕ್ಕಾಗಿ…

ಕುರುಂಜಿ ವೆಂಕಟರಮಣ ಗೌಡ ಅವರು ಸುಳ್ಯದ ಕುರುಂಜಿಯ ಬರಡು ನೆಲದಲ್ಲಿ ಶಿಕ್ಷಣದ ಬೀಜ ಬಿತ್ತಿ ರಾಜ್ಯಕ್ಕೆ ಮಾದರಿಯಾದವರು. ಕೆವಿಜಿ ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಷನ್‌ ಇನ್‌ಸ್ಟಿಟ್ಯೂಷನ್ಸ್‌ ಅನ್ನು ಸ್ಥಾಪಿಸಿದ್ದರು. ಪ್ರಾಥಮಿಕ ಶಾಲೆಯಿಂದ ಆರೋಪಿಸಿ ಕಾಲೇಜಿನವರೆಗೆ, ಸ್ನಾತಕೋತ್ತರ ತರಗತಿಗಳವರೆಗೆ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿದ್ದರು. ಹೆಚ್ಚೇನೂ ಅಕ್ಷರಾಭ್ಯಾಸ ಇಲ್ಲದ ಇವರು ಸುಮಾರು 40 ವರ್ಷಗಳ ಹಿಂದೆಯೇ ಎಂಜಿನಿಯರಿಂಗ್‌ ಕಾಲೇಜು ಕಟ್ಟಿದ್ದರು. ಕಾನೂನು ಕಾಲೇಜು, ಪಾಲಿಟೆಕ್ನಿಕ್‌, ಮೆಡಿಕಲ್‌, ನರ್ಸಿಂಗ್‌ ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಕಠಿಣ ಪರಿಶ್ರಮದಿಂದ ಕಟ್ಟಿ ನಿಲ್ಲಿಸಿದ್ದರು.

ವಯಸ್ಸಾದ ಮತ್ತು ಅನಾರೋಗ್ಯ ಕಾಡಿದ ಕಾರಣ ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆ ಹೊಣೆಯನ್ನು ಅವರು ಹಿರಿಯ ಪುತ್ರ ಕೆ ವಿ ಚಿದಾನಂದ ಮತ್ತು ಕಿರಿಯ ಪುತ್ರ ರೇಣುಕಾ ಪ್ರಸಾದ್‌ ಅವರಿಗೆ ವಿಭಜನೆ ಮಾಡಿ ಕೊಟ್ಟಿದ್ದರು. ಕುರುಂಜಿ ವೆಂಕಟರಮಣ ಗೌಡರ ಆಪ್ತರಾಗಿದ್ದು, ಆಡಳಿತಾಧಿಕಾರಿಯಾಗಿದ್ದ ಎಎಸ್‌ ರಾಮಕೃಷ್ಣ ಅವರು ಕೆವಿಜಿ ಪಾಲಿಟೆಕ್ನಿಕ್‌ ಕಾಲೇಜು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಆಸ್ತಿ, ಶೈಕ್ಷಣಿಕ ಸಂಸ್ಥೆಗಳ ಹೊಣೆಗಾರಿಕೆ ವಿಭಜನೆಯನ್ನು ರಾಮಕೃಷ್ಣ ಅವರ ಸಲಹೆ ಮೇರೆಗೆ ಮಾಡಲಾಗಿದೆ ಎಂದು ಭಾವಿಸಿದ್ದ ರೇಣುಕಾ ಪ್ರಸಾದ್, ಚಿದಾನಂದ ಅವರು ಸಿಟ್ಟಿಗೆದ್ದಿದ್ದರು. ಕೆವಿಜಿ ಮೆಡಿಕಲ್‌ ಕಾಲೇಜು ವ್ಯವಹಾರಗಳನ್ನು ಸಹ ರಾಮಕೃಷ್ಣ ಅವರೇ ನೋಡಿಕೊಳ್ಳುತ್ತಿದ್ದಾರೆ ಎಂದು ಭಾವಿಸಿ ರಾಮಕೃಷ್ಣ ಕೊಲೆಗೆ ಸುಪಾರಿ ನೀಡಲಾಗಿತ್ತು.

ಇದನ್ನೂ ಓದಿ: Sullia Murder : ಕೆವಿಜಿ ಪ್ರಿನ್ಸಿಪಾಲ್‌ ರಾಮಕೃಷ್ಣ ಕೊಲೆ ಕೇಸ್; ರೇಣುಕಾಪ್ರಸಾದ್‌ ಸೇರಿ 6 ಮಂದಿಗೆ ಮತ್ತೆ ಸಂಕಷ್ಟ

ಆವತ್ತು ಮುಂಜಾನೆ ನಡೆದಿತ್ತು ಕೊಲೆ

2011ರ ಏಪ್ರಿಲ್‌ 28ರಂದು ಬೆಳಗ್ಗೆ 7.45ರ ವೇಳೆಯಲ್ಲಿ ಅಂಬೆತಡ್ಕ ಬಳಿಯ ಶ್ರೀಕೃಷ್ಣ ಆಯುರ್ವೇದಿಕ್‌ ಥೆರಪಿ ಕ್ಲಿನಿಕ್‌ ರಸ್ತೆಯಲ್ಲಿ ವಾಕಿಂಗ್‌ ಮಾಡುತ್ತಿದ್ದ ರಾಮಕೃಷ್ಣ ಅವರ ಮೇಲೆ ಆರೋಪಿಗಳು ದಾಳಿ ನಡೆಸಿ, ಕೊಚ್ಚಿ ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಮೃತನ ಸಹೋದರ ರೇಣುಕಾ ಪ್ರಸಾದ್‌ ಮೊದಲ ಆರೋಪಿಯಾಗಿದ್ದು ಒಟ್ಟು ಏಳು ಆರೋಪಿಗಳಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದ ಅವರೆಲ್ಲರನ್ನೂ ಖುಲಾಸೆಗೊಳಿಸಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 2016ರ ಅಕ್ಟೋಬರ್‌ 21ರಂದು ಆದೇಶಿಸಿತ್ತು. ಇದೀಗ ಹೈಕೋರ್ಟ್‌ ಅದನ್ನು ರದ್ದುಪಡಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.

Exit mobile version